Andolana originals

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್.

ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ ಬಂದಾಗ ಬೆಳ್ಳಿ ಪರದೆಗೆ ಜನ ಪೂಜೆ ಮಾಡಿದ್ದೂ ಉಂಟು. ಹೊಸ ಕಥಾ ಹಂದರದ ಚಿತ್ರಗಳು ನಾಯಕ ನಾಯಕಿಯರನ್ನು ಸೃಷ್ಟಿ ಮಾಡಿದಾಗ ಅಭಿಮಾನಿಗಳು ಹುಟ್ಟಿಕೊಂಡರು. ಪಿಚ್ಚರ್ ಎಂಬುದೇ ಕನಸು. ಅಂತಹ ಕನಸನ್ನು ಕಟ್ಟಿ ಕೊಡುವ ಟಾಕೀಸು ನಮಗೆ ರಮ್ಯ ತಾಣವಾಗಿತ್ತು.

ಅದರ ಎದುರಿಗಿನ ಅಂಗಡಿಗಳು ಅಲ್ಲಿ ಸಿಗುವ ತಿಂಡಿಗಳೂ, ಹೋಟೆಲ್‌ನ ಮಸಾಲೆ ದೋಸೆ, ಕಡ್ಲೆಪುರಿ ಹೀಗೆ ಹತ್ತು ತಿನಿಸುಗಳು ನಮಗೆ ಬಾಯಿ ನೀರು ಬರಿಸುತ್ತಿದ್ದವು. ಕುಟುಂಬ ಸಮೇತರಾಗಿ ಬಂದು ನೋಡುವ ಸಿನಿಮಾಗಳು ಬಂದಾಗ ಎತ್ತಿನ ಗಾಡಿಯಲ್ಲಿ ಕುಟುಂಬ ಸಮೇತರಾಗಿ ಬಂದು ಆ ಸಾಂಸಾರಿಕ ಚಿತ್ರವನ್ನು ತಮ್ಮದೇ ಕಥೆ ಎನ್ನುವಂತೆ ನೋಡುತ್ತಿದ್ದರು. ಕಣ್ಣೀರು ಬರಿಸುವುದು, ಆ ಚಿತ್ರದ ಕೇಡಿ ಪಾತ್ರಧಾರಿಯ ಕಂಡು ‘ಈ ಮಗ ಯಾವ ಪಿಚ್ಚರಲ್ಲೂ ಹಿಂಗೆ ಮಾಡುತ್ತಾನೆ’ ಎಂದು ಆ ಪಾತ್ರಕ್ಕೆ ಶಾಪ ಹಾಕುವುದು ಮತ್ತು ನಾಯಕ ನಾಯಕಿಯರ ಪಾತ್ರಕ್ಕೆ ಲೊಚಗುಟ್ಟುವುದು ಹೆಂಗಸರ ವಾಡಿಕೆಯಾಗಿತ್ತು.

ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಚಿತ್ರಗಳು ಬಂದಾಗ ಆ ನಾಯಕನ ವಿವಿಧ ಬಗೆಯ ಪಿಕ್ಚರ್, ಫೋಟೋಗಳನ್ನು ಕತ್ತರಿಸಿ ಅಂಟಿಸಿ ಮಾಡಿದ ಸ್ಟಾರ್‌ಗಳನ್ನು ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಮೆರವಣಿಗೆ ಮಾಡಿ ಚಿತ್ರಮಂದಿರದ ತುಂಬಾ ಕಟ್ಟುವುದು ಒಂದು ರೀತಿಯ ಸಂಭ್ರಮವಾಗಿತ್ತು. ಹಾಗೇ ಮೆರವಣಿಗೆ ಮಾಡಿಕೊಂಡು ಬಂದ ಗುಂಪುಗಳಿಗೆ ಕೇಳಿದ್ದಷ್ಟು ಟಿಕೆಟ್ ಕೊಡುವ ರೂಢಿ ಇತ್ತು. ಇತ್ತೀಚಿನ ದಿನಗಳಲ್ಲಿ ಫ್ಲೆಕ್ಸ್ ಗಳು ತುಂಬಿರುತ್ತವೆ. ತಮ್ಮ ನಾಯಕನ ಜೊತೆಗೆ ತಮ್ಮ ಫೋಟೋದೊಂದಿಗೆ ಹಾಗೆಯೇ ಕ್ಯೂ ನಿಂತು ಟಿಕೆಟ್ ಪಡೆಯುವುದು ಒಂದು ಸಾಹಸವಾಗಿತ್ತು. ಪರಿಚಯದ ಅಭಿಮಾನಿಗಳು ಟಿಕೆಟ್ ಕೊಡಿಸುತ್ತಿದ್ದರು ಮತ್ತು ಕ್ಯೂ ನಲ್ಲಿ ನಿಂತಾಗ ಪಿಚ್ಚರ್ ನೋಡಿದವರು ಹಾಡುಗಳ ಬಗ್ಗೆ ಪೈಟ್‌ಗಳ ಬಗ್ಗೆ, ಹೇಳುತ್ತಿದ್ದರು. ಆ ನೂಕಾಟದಲ್ಲಿ ಅಂಗಿ ಹರಿದು ಹೋಗಿದ್ದು, ಗಾಯವಾಗಿದ್ದು ಗೊತ್ತೇ ಆಗುತ್ತಿರಲ್ಲಿಲ್ಲ. ಟಾಕೀಸಿನ ಮುಂದೆ ಹಲವಾರು ಚಟುವಟಿಕೆಗಳು ನಮ್ಮ ನೆನಪಿಗೆ ಸಾಕ್ಷಿಯಾಗಿವೆ.

ಹುಡುಗರಾದ ನಮಗೆ ಟಿಕೆಟ್‌ಗೆ ಕಾಸು ಹೊಂದಿಸುವುದು ಸಾಕಾಗಿತ್ತು. ಯಾರದೋ ತೆಂಗಿನ ತೋಟದಲ್ಲಿ ಕಾಯಿ ಕದ್ದು ಮಾರಿ ಗಾಂಧಿ ಕ್ಲಾಸಿಗೆ ತಿಂಡಿಗೆ ಕಾಸನ್ನು ಸರಿ ಮಾಡಿಕೊಳ್ಳುತ್ತಿದ್ದೆವು. ಸಂಜೆ ಶೋಗೆ ಮೊದಲು ಬಂದು ಟಾಕೀಸಿನ ಎದುರಿಗೆ ನಿಂತು ರಾತ್ರಿಯ ನಿಶ್ಶಬ್ದದ ಸಮಯದಲ್ಲಿ ಕಥೆ ಕೇಳುತ್ತಿದ್ದೆವು. ಸಂಜೆ ಶೋ ಶುರುವಾದ ನಂತರ ಟಾಕೀಸಿನ ಬಾಗಿಲು ತೆಗೆಯುತ್ತಿದ್ದರು. ಇಂಟರ್ವಲ್‌ನಲ್ಲಿ ನಾವು ಹೇಗೋ ಟಾಕೀಸಿನ ಒಳಗೆ ಸೇರುತ್ತಿದ್ದೆವು, ಸೈಕಲ್ ಸ್ಟ್ಯಾಂಡ್ ನಮ್ಮ ಅಡಗುತಾಣವಾಗಿತ್ತು ಮತ್ತು ಆಚೆ ನಿಂತು ಡೈಲಾಗ್ ಕೇಳಿ ನಾವು ನಟರಂತೆ ನಾಟಕ ಮಾಡುತ್ತಿದ್ದೆವು. ಟಾಕೀಸು ಕೂಡ ಒಂದು ರೀತಿಯ ಕಲಿಕೆಯ ಶಾಲೆಯಾಗಿತ್ತು. ಪ್ರೇಮಿಗಳಿಗೆ ಅವರ ಭೇಟಿ ತಾಣವಾಗಿತ್ತು. ಆ ಪಿಚ್ಚರ್‌ನ ಜೋಡಿಯಂಗೆ ಇರಬೇಕು ಎಂದು ಆಣೆ ಭಾಷೆ ಮಾಡಿಕೊಳ್ಳುವುದಕ್ಕೆ ಈ ಟಾಕೀಸುಗಳು ಸಾಕ್ಷಿಯಾಗಿರುತ್ತಿದ್ದವು.

ನಾನು ಈ ಯಳಂದೂರಿಗೆ ಬಂದು ಸುಮಾರು ಹದಿನೆಂಟು ವರ್ಷಗಳಾಯಿತು. ಮುಚ್ಚಿರುವ ಮಹದೇಶ್ವರ ಚಿತ್ರ ಮಂದಿರ ನೋಡಿದಾಗ ನಮ್ಮೂರಿನ ಚಿತ್ರಮಂದಿರಗಳೇ ಕಣ್ಮುಂದೆ ಬರುತ್ತವೆ. ಹಲವಾರು ನೆನಪಿಗೆ ಸಾಕ್ಷಿಯಾದ ಟಾಕೀಸುಗಳ ಟಾಕ್ ನಿಂತಿದೆ. ಎಂದು ಮನಸ್ಸು ಯೋಚನೆ ಮಾಡುತ್ತ ಖಾಲಿಯಾದ ಟಿಕೆಟ್ ಕೌಂಟರ್‌ನೊಮ್ಮೆ ದಿಟ್ಟಿಸಿ ನೋಡಿದೆ

” ಯಳಂದೂರಿನ ಮಹದೇಶ್ವರ ಚಿತ್ರಮಂದಿರಕ್ಕೆ ಸುಮಾರು ೫೦ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಆದರೆ ಇಂದಿಗೂ ಕೂಡ ಯಾವುದೇ ಬಿರುಕಿಲ್ಲದೇ ನಿಂತಿರುವ ಈ ಟಾಕೀಸಿನ ಬಾಗಿಲು ಮಾತ್ರ ಖಾಯಮ್ಮಾಗಿ ಮುಚ್ಚಿದೆ”

 

 

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

3 mins ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

10 mins ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

14 mins ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

19 mins ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

23 mins ago

ಮಿರ್ಲೆ-ಭೇರ್ಯ-ಕೊಡಿಯಾಲ ರಸ್ತೆ ಅಭಿವೃದ್ಧಿ ಯಾವಾಗ?

ಭೇರ್ಯ ಮಹೇಶ್ ಪ್ರತಿನಿತ್ಯ ಈ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ; ಅಧಿಕಾರಿಗಳ ವಿರುದ್ಧ ಆಕ್ರೋಶ ಕೆ.ಆರ್.ನಗರ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ…

29 mins ago