ಆಂದೋಲನ ಪುರವಣಿ

ಬರಹ-ಬದುಕು : ಬರೆದುದನು ಯಾರಿಗೂ ತೋರಿಸುವ ಧೈರ್ಯ ಮಾತ್ರ ಇರಲಿಲ್ಲ…

 

ಫಾತಿಮಾ ರಲಿಯಾ
imraliya101@gmail.com

ನಾನು ಓದುತ್ತಿದ್ದ ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತೆ ಆಗಲೇ ವಿಶಿಷ್ಟ ಆಸ್ಥೆ ವಹಿಸಲಾಗುತ್ತಿತ್ತು. ಹಾಗೆಂದೇ ನಮ್ಮಲ್ಲಿ ಕೆಲವರನ್ನು ಆಯ್ಕೆ ಮಾಡಿ ನಮ್ಮ ಮೇಷ್ಟ್ರು ಅಂತರ್ ಶಾಲೆ ನಾಟಕ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು. ನನಗೂ ಒಂದು ಪಾತ್ರ ಕೊಟ್ಟಿದ್ದರು, ತುಂಬಾ ಒಳ್ಳೆಯ ಪಾತ್ರವೇ. ಆಡಿಷನ್ ತರ ಮಾಡಿ ಪಾತ್ರಧಾರಿಗಳನ್ನು ಆಯ್ಕೆ ಮಾಡಿದ್ದರಿಂದ ತಲೆಯಲ್ಲಿ ನಾವೇನೋ ದೊಡ್ಡ ಸಾಧನೆ ಮಾಡುತ್ತಿದ್ದೇವೆ ಎನ್ನುವ ಭಾವ.

ಹೋದಲ್ಲಿ ಬಂದಲೆಲ್ಲಾ ನಾಟಕದ್ದೇ ಧ್ಯಾನ. ಜೊತೆಗೆ ಸ್ಪರ್ಧೆಗೆ ಆಯ್ಕೆಯಾಗದವರ ಎದೆಯಲ್ಲಿ ಒಂದು ಸಣ್ಣ ಈರ್ಷ್ಯೆಯ ಭಾವ. ಆ ಟೀಚರ್‌ಗೆ ಅವರಿಷ್ಟ, ಈ ಟೀಚರ್‌ಗೆ ಇವರಿಷ್ಟ ಹಾಗಾಗಿಯೇ ಆಯ್ಕೆಯಾಗಿದ್ದಾರೆ ಎನ್ನುವ ಮಾತುಗಳೂ ನಮ್ಮ ನಡುವಿಂದಲೇ ಕೇಳಿ ಬರುತ್ತಿತ್ತು. ಆದ್ರೆ ಹೊರಗಡೆ ಮಾತ್ರ ಇದ್ಯಾವುದೂ ಗೊತ್ತೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದೆವು.

ಆದರೆ ನನ್ನ ಸಂಭ್ರಮ, ಸಣ್ಣ ಅಹಂ ಮುರಿಯಲು ಮನೆಯವರ ಒಂದು ನಿರಾಕರಣೆ ಸಾಕಾಯ್ತು. ಸ್ಪರ್ಧೆಗೆ ಅಂತ ಹೋದವರು ಅಲ್ಲೇ ಒಂದು ದಿನ ತಂಗಬೇಕು ಎನ್ನುವ ಷರತ್ತಿಗೆ ನನ್ನ ಮನೆುಂವರು ಒಪ್ಪಲೇ ಇಲ್ಲ. ‘‘ಬೇಕಿದ್ದರೆ ಸ್ಪರ್ಧೆಗೆ ಹೋಗು, ಭಾಗವಹಿಸು, ಸಂಜೆಯ ಹೊತ್ತಿಗೆ ವಾಪಾಸು ಬಾ. ಮರುದಿನ ಬೆಳಿಗ್ಗೆ ನಾವೇ ನಿನ್ನ ಕರೆದುಕೊಂಡು ಹೋಗಿ ಸ್ಪರ್ಧೆ ನಡೆಯುವಲ್ಲಿಗೆ ಬಿಡುತ್ತೇವೆ’’ ಎಂದು ಬಿಟ್ಟರು ಮಾವ.

ನಾನು ವಾದಕ್ಕಿಳಿದೆ, ಜಗಳ ವಾಡಿದೆ, ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಬೆದರಿಕೆ ಹಾಕಿದೆ, ಮನೆಯೊಳಗೆ ಬರುವುದಿಲ್ಲ ಎಂದು ಗಂಟೆಗಟ್ಟಲೆ ಮನೆಯ ಗೇಟಿನ ಹೊರಗೆ ನಿಂತೆ… ಊಹೂಂ, ಇವ್ಯಾವುವೂ ಅವರ ನಿರ್ಧಾರವನ್ನು ಬದಲಿಸಲಿಲ್ಲ. ಮಾವ ‘‘ಸಂಜೆ ಮರಳಿ ಬಾ, ಮರುದಿನ ಬೆಳಿಗ್ಗೆ ಮತ್ತೆ ಹೋಗುವಿಯಂತೆ‘ ಎಂದು ಪದೇ ಪದೇ ಹೇಳಿದರು, ನನ್ನನ್ನು ಸಮಾಧಾನಪಡಿಸಲು ಯತ್ನಿಸಿದರು. ‘‘ನಾನೇ ನಿನ್ನ ಕರೆದುಕೊಂಡು ಹೋಗಿ ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಬಿಡುತ್ತೇನೆ’’ ಎಂದು ಭರವಸೆ ಕೊಟ್ಟರು.
ಆದರೆ ಅಂತಹ ಯಾವುದೇ ‘ಷರತ್ತು ಬದ್ಧ ಭರವಸೆ’ಗಳನ್ನು ಒಪ್ಪಲು ನಾನು ತಯಾರಿರಲಿಲ್ಲ. ಫ್ರೆಂಡ್ಸ್ ಜೊತೆ ರಾತ್ರಿ ತಂಗುವ ಅಪರೂಪದ ಅವಕಾಶವನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಲು ನನಗೆ ಮನಸ್ಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬಳೇ ಸಂಜೆ ವಾಪಾಸು ಬರುವುದು, ಮರುದಿನ ಮತ್ತೆ ಅವರೆಲ್ಲರನ್ನು ಸೇರಿಕೊಳ್ಳುವುದು ನನಗೆ ಅವಮಾನಕರ ಅನ್ನಿಸುತ್ತಿತ್ತು. ನನ್ನ ಯಾವ ಪ್ರತಿಭಟನೆಗಳೂ ಫಲ ಕಾಣದಿದ್ದಾಗ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಬೇಡ ಎಂದು ತೀರ್ಮಾನಿಸಿದೆ.

ಆದರೆ, ಅದರ ನಿಜವಾದ ಸಂಕಟ ಏನೆಂದು ಅರಿವಿಗೆ ಬಂದದ್ದು ನನ್ನ ಸಹಪಾಠಿಗಳೆಲ್ಲಾ ಸ್ಪರ್ಧೆಗೆಂದು ಹೊರಟು ನಿಂತಾಗ. ಸ್ಪರ್ಧಿಗಳ ಆಯ್ಕೆ, ಆಮೇಲಿನ ಅಭ್ಯಾಸ, ಮನೆಯಲ್ಲಿ ಒಪ್ಪಿಗೆ ಸಿಗದೇ ಇದ್ದದ್ದು ಎಲ್ಲಾ ಸೇರಿ ಆವತ್ತು ನನ್ನೊಳಗೆ ಒಂದು ಅಸಹಾಯಕ ಭಾವವನ್ನು ಸೃಷ್ಟಿಸಿತ್ತಾ ಗೊತ್ತಿಲ್ಲ, ಪ್ರತಿಭಟನಾತ್ಮಕವಾಗಿ ‘ನಾನೊಂದು ಬೋನ್ಸಾಯಿ ಗಿಡ’ ಎಂಬ ಕವಿತೆ ಬರೆದೆ. ನಾನು ಬರೆದ ಮೊದಲ ಸೃಜನಶೀಲ ಬರವಣಿಗೆಯದು. ಅದಕ್ಕಿಂತ ಮೊದಲು ‘ಪರಿಸರ ಸಂರಕ್ಷಣೆ’ ಎನ್ನುವ ವಿಷಯದ ಮೇಲೆ ಪ್ರಬಂಧ ಬರೆದಿದ್ದರೂ ಅದು ಸೃಜನಶೀಲ ಬರವಣಿಗೆಯಾಗಿರಲಿಲ್ಲ. ಈ ಘಟನೆ ನಡೆದ ಮರುವರ್ಷವೇ ‘ಗೈಡ್ಸ್’ ದಳದ ಭಾಗವಾಗಿ ರ‍್ಯಾಲಿಗೆ ಹೋದವಳು ಮೂರು ದಿನಗಳ ಕಾಲ ಬೇರೆ ಶಾಲೆಯಲ್ಲಿ ತಂಗಬೇಕಾಗಿ ಬಂದಿತ್ತು. ಆಗ ನಮ್ಮನೆಯಲ್ಲಿ ಯಾವ ವಿರೋಧವೂ ಬರಲಿಲ್ಲ. ಆದರೆ ಅಷ್ಟು ಹೊತ್ತಿಗಾಗುವಾಗಲೇ ಬರವಣಿಗೆಯ ರುಚಿ ನನಗೆ ಹತ್ತಿತ್ತು. ಡೈರಿ ಬರೆಯಲು, ಸಣ್ಣ ಪುಟ್ಟ ಕವಿತೆ ಬರೆಯಲು ಪ್ರಾರಂಭಿಸಿದ್ದೆ. ಆದರೆ ಅದನ್ನು ಯಾರಿಗೂ ತೋರಿಸುವ ಧೈರ್ಯ ಮಾತ್ರ ಇರಲಿಲ್ಲ.

andolana

Recent Posts

ಭಾರತಿರಾಜ್‌ ಅಂತಿಮ ದರ್ಶನ ಪಡೆದ ರಜನಿ, ಕಮಲ್‌, ಸಿ.ಎಂ.ವಿಜಯ್‌

ಚೆನ್ನೈ : ತಮಿಳಿನ ಖ್ಯಾತ ನಿರ್ದೇಶಕ, ಪದ್ಮಶ್ರೀ ಭಾರತಿರಾಜ್ ನಿಧನಕ್ಕೆ ಹೆಸರಾಂತ ನಟರು ಕಂಬನಿ ಮಿಡಿದಿದ್ದಾರೆ. ಅವರ ಅಂತಿಮ ದರ್ಶನಕ್ಕೆ…

30 mins ago

ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನಕ್ಕೆ ದಲಿತ ಸಂಘಟನೆಗಳ ಆಗ್ರಹ

ವರುಣ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಲಿತ ಸಂಘಟನೆಗಳ…

38 mins ago

ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಬಿಟ್ಟು ಬೇರೇನೂ ಮಾಡಲಿಲ್ಲ ಸಿದ್ದರಾಮಯ್ಯ: ಟೀಕೆ

ಮೈಸೂರು : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದದಿಂದ ಸಂಪರ್ಕ ಸಾಧಿಸಿ ರಾಜ್ಯದ ಅಭಿವೃದ್ಧಿ…

52 mins ago

ರಾಜ್ಯಸಭಾ ಸ್ಥಾನ ಕೇಳಿಲ್ಲ, ಚರ್ಚೆಯೂ ನಡೆಸಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ರಾಜ್ಯಸಭಾ ಸ್ಥಾನಕ್ಕೆ ಟಿಕೆಟ್‌ ತಪ್ಪಿದೆ ಎಂಬ ಕಾರಣದಿಂದ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಸಂಬಂಧ…

4 hours ago

ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ನಿಧನ

ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ತಮಿಳು ನಿರ್ದೇಶಕ, ನಟ ಭಾರತಿರಾಜ ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕೆಲ…

7 hours ago

ನೆಹರು ದಾಖಲೆ ಮುರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ…

7 hours ago