ಹಾಡು ಪಾಡು

ಭಾನುವಾರದ ಹಾಡುಪಾಡು | ಶಾಲೆಯೆಂಬ ಕಟ್ಟಡಗಳಿಗೆ ಜೀವ ಬರುವ ಹೊತ್ತು…..

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ.

ಸುಧಾ ಆಡುಕಳ

 

ಶಾಲೆಗಳು ಪ್ರಾರಂಭವಾಗುವ ವಾರದ ಮೊದಲೇ ಪಿ.ಯು. ಕಾಲೇಜುಗಳು ಆರಂಭಗೊಂಡಿವೆ. ವರ್ಷದ ರಜೆಯನ್ನು ವ್ಯಾಪಿಸಿಕೊಂಡ ಜನಗಣತಿ ಕಾರ್ಯ ಹೊಸ ವರ್ಷಾರಂಭದ ಉತ್ಸಾಹವನ್ನು ಚೂರು ಮಂಕಾಗಿಸಿದೆ. ಕಳೆದ ವರ್ಷದ ಶೈಕ್ಷಣಿಕ ಕೆಲಸ ಮುಗಿಯುವ ಮೊದಲೇ ನಿಗದಿಗೊಂಡ ಗಡಿ ಗುರುತಿಸುವಿಕೆ ಮತ್ತು ಮನೆಪಟ್ಟಿಯ ಕಾರ್ಯದಲ್ಲಿ ಇಡಿಯ ರಜೆ ಸರಸರನೆ ಕಳೆದುಹೋಗಿದೆ.

ವರ್ಷವಿಡೀ ಉಡುವ ಕಾಟನ್ ಸೀರೆಯನ್ನು ತೊಳೆದು ಗಂಜಿ ಹಾಕಿ ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರಿ ಮಾಡಿ ಜೋಡಿಸುವಷ್ಟೂ ಸಮಯ ಸಿಗದಿರುವ ಬಗ್ಗೆ ಅಸಮಾಧಾನ ಹೆಪ್ಪುಗಟ್ಟಿದೆ. ಸೀರೆಯ ಬದಲು ಬಿರುಬೇಸಿಗೆಯಲ್ಲಿ ನಾವೇ ಒಣಗಿದ ಕಾರಣ ದೈಹಿಕ ಸುಸ್ತು ಕಾಡುತ್ತಿದೆ. ಕಾಲೆಳೆದುಕೊಂಡು ಕಾಲೇಜಿಗೆ ಪ್ರವೇಶಿದ ಗಳಿಗೆಯಲ್ಲೇ ಪ್ರವೇಶದ್ವಾರದಲ್ಲಿ ರಾರಾಜಿಸುತ್ತಿದ್ದ ವಿಶಿಷ್ಟ ಶ್ರೇಣಿ ಪಡೆದ ನೂರರಷ್ಟು ಮಕ್ಕಳ ಫೋಟೋ ನಡಿಗೆಗೆ ಚೂರು ಹುರುಪನ್ನು ತುಂಬಿದೆ.

ಕಾಲೇಜಿನ ಮುಂಬಾಗಿಲಲ್ಲೇ ನಮ್ಮ ಬರವನ್ನು ಕಾಯುತ್ತಿದ್ದ ಆ ಕನಸುಗಂಗಳ ಹುಡುಗಿ, “ಮೇಡಂ, ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ನಾ ಪಾಸಾದೆ. ಇನ್ಮುಂದೆ ಚಂದ ಓದ್ತೇನೆ.” ಎಂದು ಕಣ್ಣರಳಿಸಿದಾಗ ತಲೆ ನೇವರಿಸುತ್ತೇನೆ. ತಾಯಿಯಿಲ್ಲದ ಆ ಹುಡುಗಿ ಮದರ್ಸ್ ಡೇಗೆ ನನಗೆ ಸಂದೇಶ ಕಳಿಸಿದ್ದಾಳೆ. ಮನೆಯ ಏಕಮಾತ್ರ ದುಡಿಯುವ ಜೀವವಾದ ಅವಳ ತಂದೆ ಡಯಾಲಿಸೀಸ್ ಪೇಶಂಟ್, ತಮ್ಮ, ತಂಗಿಯರಿನ್ನೂ ಚಿಕ್ಕವರು. ಅವರೆಲ್ಲರಿಗೂ ತಾಯಿಯಾಗಿರುವ ಈ ಹುಡುಗಿ ಚೈತನ್ಯದ ಚಿಲುಮೆಯಂತೆ ಸದಾ ಚಿಮ್ಮುತ್ತಿರುತ್ತಾಳೆ.

ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಳಾದರೂ ಮತ್ತೆ ಹಠದಿಂದ ಪರೀಕ್ಷೆ ಬರೆದು ಪಾಸಾಗಿ ನಿಂತು ನಗುವ ಅವಳೆದುರು ನಮ್ಮೊಳಗಿನ ಜಡತ್ವ ಕರಗಿಹೋಗುತ್ತದೆ. ಅಟೆಂಡೆನ್ಸ್ ಶೀಟನ್ನು ಅವಳ ಕೈಗಿಟ್ಟು ಯಾರೆಲ್ಲ ಬಂದಿದ್ದಾರೆ ನೋಡಿ ಬಾ ಎಂದು ಕಳಿಸುತ್ತೇನೆ. ಕಾಲೇಜಿನ ಎದುರೆಲ್ಲಾ ಸಾಲು, ಸಾಲು ಬಟ್ಟೆಯ ಬ್ಯಾಗುಗಳು, ಅದನ್ನು ಕಾಯುತ್ತ ಕುಳಿತ ಅಮ್ಮಂದಿರು, ಅವರ ಸೆರಗು ಹಿಡಿದೆಳೆವ ಪುಟ್ಟ ಕೂಸುಗಳು, ಪಕ್ಕದಲ್ಲೇ ಅರಿವೆಯಲ್ಲಿ ಕಟ್ಟಿತಂದ ಬುತ್ತಿಯ ಗಂಟುಗಳು… ಯಾವುದೇ ಜಾಹೀರಾತುಗಳ ಹಂಗಿಲ್ಲದೇ ರಾಜ್ಯದ ಹತ್ತೆಂಟು ಜಿಲ್ಲೆಗಳಿಂದ ಈ ತಾಯಂದಿರು ಅವರ ಸಂಬಂಽಕರು ಯಾರೋ ಹೇಳಿದರೆಂದು ನಮ್ಮ ಕಾಲೇಜಿಗೆ ಮಗಳನ್ನು ಸೇರಿಸಲು ಸಾಲುಗಟ್ಟುತ್ತಾರೆ.

ಸರಕಾರ ನೀಡಿದ ಉಚಿತ ಸಾರಿಗೆ ಸೌಲಭ್ಯವನ್ನು ಉಪಯೋಗಿಸಿಕೊಂಡು ಊರಿನಿಂದ ನೇರವಾಗಿ ಕಾಲೇಜಿನ ಅಂಗಳಕ್ಕೆ ಬಂದಿಳಿಯುತ್ತಾರೆ. ಹಾಸ್ಟೆಲ್ಲುಗಳು ಪ್ರಾರಂಭವಾಗಲು ತಡವಿರುವುದರಿಂದ ರಾತ್ರಿಯಿಳಿಯುವ ಮುನ್ನ ಹತ್ತಿರದ ಯಾವುದಾದರೂ ಪಿ.ಜಿ.ಯಲ್ಲಿ ಮಗಳನ್ನು ಬಿಟ್ಟು ಊರಿನ ಬಸ್ ಹತ್ತುವ ಧಾವಂತದಲ್ಲಿರುತ್ತಾರೆ. ಕೆಲವೇ ನೂರು ರೂಪಾಯಿಗಳ ಫೀಸುಗಳಿಗಾಗಿ ತಮ್ಮ ಸೆರಗಿನಂಚಿನಲ್ಲಿ ಕಟ್ಟಿರುವ ಪುಡಿಗಾಸನ್ನು ತಡಕಾಡುತ್ತಾರೆ. ಕಡಿಮೆಯಾದ ಹತ್ತೊ, ಇಪ್ಪತ್ತನ್ನು ಅಲ್ಲಿರುವ ಶಿಕ್ಷಕರೇ ಭರಿಸಿದಾಗ ಅವರನ್ನು ಕೃತಜ್ಞತೆಯ ನೋಟದಲ್ಲಿ ಮುಳುಗಿಸುತ್ತಾರೆ. ಹನಿಗಣ್ಣಾಗುತ್ತ ಕರುಳಕುಡಿಯನ್ನು ತರಗತಿಯೊಳಗೆ ಬೀಳ್ಕೊಡುತ್ತಾರೆ.

ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ. ಅವರ ನಗೆಬುಗ್ಗೆಯ ಮೇರುಗಿಗೆ ಬಾನಂಚಿನ ಮೋಡ ಕೆಳಗಿಳಿದು ಬಿರುಮಳೆಯಾಗತೊಡಗುತ್ತದೆ. ಎರಡು ವರ್ಷಗಳ ಕಾಲ ಈ ಕಾವುಗೂಡಿನಲ್ಲಿ ತಮ್ಮ ಕನಸುಗಳ ಮೊಟ್ಟೆಯನ್ನು ಕಾಪಿಡುವ ಹುಡುಗಿಯರು ಪಿ.ಯು. ಮುಗಿಯುವ ಹೊತ್ತಿಗಾಗಲೇ ಬೇಗನೆ ಕೆಲಸ ಸಿಗುವ, ನಾವಿನ್ನೂ ಕೇಳಿಯೇ ಇರದ ಥರಾವರಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸುತ್ತಾರೆ. ಶೈಕ್ಷಣಿಕ ಸಾಲದ ನೆರವಿನಿಂದ ಓದಿ ಮನೆಗೆ ಊರುಗೋಲಾಗಿ ನಿಲ್ಲುತ್ತಾರೆ.

ಟೆಂಟ್ ಹೌಸಿನಿಂದ ಚಂದದ ಮನೆಗೆ ಕುಟುಂಬವೊಂದು ವರ್ಗಾವಣೆಯಾಗುವ ಈ ಪವಾಡವನ್ನು ನಾವೆಲ್ಲರೂ ಕಣ್ತುಂಬಿಸಿಕೊಳ್ಳುತ್ತಲೇ ನಮ್ಮೊಳಗಿನ ಶಿಕ್ಷಕರನ್ನು ಪುನಶ್ಚೇತನಗೊಳಿಸಿಕೊಳ್ಳುತ್ತೇವೆ.
preesugathu@gmail.com

ಆಂದೋಲನ ಡೆಸ್ಕ್

Recent Posts

ಮಂಡ್ಯ | ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಬಂದಿದ್ದ ಕೈದಿ ಜನರ ಕೈಗೆ ಸಿಕ್ಕಿಬಿದ್ದ

ಮಂಡ್ಯ : ಕೈಯ್ಯಲ್ಲಿ ಬೇಡಿ ಹಾಕಿ ಕೊಂಡಿರುವಾಗಲೇ ಠಾಣೆಯಿಂದ ತಪ್ಪಿಸಿಕೊಂಡು ಬಂದ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಇಲ್ಲಿನ…

9 hours ago

ದಸರಾ ಗಜಪಡೆ ವೀಕ್ಷಣೆ ಟಿಕೆಟ್‌ ರದ್ದು

ಮೈಸೂರು: ಮೊನ್ನೆಯಷ್ಟೇ ಲಿಂಗಾಂಬುಧಿ ಉದ್ಯಾನ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅರಮನೆ ಅಂಗಳದಲ್ಲಿ…

10 hours ago

ನೇಪಾಳ ದುರಂತ | ಮೃತದೇಹದ ಮೇಲಿದ್ದ ಚಿನ್ನ ಕಳವು ; ಇಬ್ಬರು ಆರೋಪಿಗಳ ಬಂಧನ

ಎಚ್ಚೆತ್ತ ಪೊಲೀಸ್ ಆಡಳಿತ ; ಇಬ್ಬರು ಆರೋಪಿಗಳ ಬಂಧನ ಕಠ್ಮಂಡು : ನೇಪಾಳದಲ್ಲಿ ಸಂಭವಿಸಿರುವ ಭೀಕರ ಮಹಾಪೂರ ಹಾಗೂ ಭೂಕುಸಿತದಿಂದಾಗಿ…

10 hours ago

ಸೋನಿಯಾ ಗಾಂಧಿ ಆತ್ಮಚರಿತ್ರೆ ; ರಾಜಕೀಯ, ಸಾಹಿತ್ಯಿಕ ವಲಯದಲ್ಲಿ ಕೋಲಾಹಲ

ಹೊಸದಿಲ್ಲಿ : ಯುಪಿಎ ಒಕ್ಕೂಟದ ಹಿರಿಯ ನಾಯಕಿ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ…

11 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಈ ಬಾರಿ ಮೆರವಣಿಗೆಗೆ ಸೇನೆಗೆ ಆಹ್ವಾನ ಎಂದ ಸಿಎಂ ಡಿಕೆಶಿ

ಮೈಸೂರು: ಈ ಬಾರಿಯ ಮೈಸೂರು ದಸರಾ ಮೆರವಣಿಗೆಗೆ ಸೇನೆ ಹಾಗೂ ವಾಯುಸೇನೆಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌…

15 hours ago

ಮೈಕ್ರೋ ಫೈನಾನ್ಸ್‌ ಕಿರುಕುಳ: ವ್ಯಕ್ತಿ ಆತ್ಮಹತ್ಯೆ

ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ…

19 hours ago