ಹಾಡು ಪಾಡು

ಏನಿದು ಹೀಗೊಂದು ಮೆಂಟಲ್ ಟ್ರ್ಯಾಪ್?‌

ಅಕ್ಷತಾ

ಬಣ್ಣಬಣ್ಣದ ಕನಸುಗಳು ಹೆಪ್ಪಿಡುವ ಹರೆಯ. ಸ್ವಚ್ಛಂದವಾಗಿ ಹಾರಬಯಸುವ ಚಿಟ್ಟೆಯಂತಿರುವ ವಯಸ್ಸು. ಉನ್ನತ ವಿದ್ಯಾಭ್ಯಾಸ ಮುಗಿಸಿದ್ದ ಹುಡುಗನ ಎದೆಯೊಳಗೆ ವಿದೇಶದಲ್ಲಿ ಉದ್ಯೋಗಸ್ಥನಾಗಬೇಕು, ಊರು ಸುತ್ತಬೇಕು… ಹೀಗೆ ನಾನಾ ಬಯಕೆಗಳು ಗರಿಗೆದರುವ ಹೊತ್ತಿಗೆ ಸಾವಿರಾರು ಮೈಲಿಗಳಾಚೆಗಿನ ದೇಶ ಕೈ ಬೀಸಿ ಕರೆದಿತ್ತು.

“ಅಮ್ಮಾ, ನಾನು ಕಲಿತು ಫಾರಿನ್ನಿಗೆ ಹೋಗಬೇಕು” ಎಂದು ಚಿಕ್ಕಂದಿನಿಂದ ಆಸೆಪಡುತ್ತಿದ್ದ ಮಗನೆದುರು ಅಂತಹ ದಿನ ಬಂದಾಗ ಅಮ್ಮನ ಎದೆಯೊಳಗೆ ಸಡಗರ. ಬೇಕುಬೇಕಾದ್ದೆಲ್ಲವನ್ನೂ ಪ್ಯಾಕ್ ಮಾಡಿ, ಲಗೇಜ್ ತುಂಬಿಸಿ ಏರ್‌ಪೋರ್ಟ್ ತನಕ ಹೋಗಿ ಕಳುಹಿಸಿಕೊಡುವಾಗ ಒಳಗಿನ ಮಾತೃಧ್ವನಿ ಒಂದರೆಕ್ಷಣ ನೋವುಂಡರೂ ಮಗನ ಆಸೆ, ಕನಸುಗಳ ಮುಂದೆ ಎಲ್ಲವೂ ಕ್ಷಣಕಾಲ! ಹೊಸ ದೇಶದಲ್ಲಿ ಮಗನ ಬದುಕಿನ ಬಗ್ಗೆ ಇಲ್ಲಿ ಕುಳಿತ ಹೆತ್ತವರ ಮನದೊಳಗೆ ಪುಳಕ. ಜೀವನದಲ್ಲಿ ಸೆಟಲ್ ಆದ ನೆಮ್ಮದಿ. ಕೂಡು ಕುಟುಂಬದೊಳಗೆ ಬೆಳೆದ ಮಗ ಸ್ವತಂತ್ರವಾಗಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ನಿಂತು, ತನ್ನ ಖರ್ಚುವೆಚ್ಚಗಳನ್ನು ತಾನೇ ನಿಭಾಯಿಸಲು ಸಮರ್ಥನೆಂದು ಹೇಳಿಕೊಂಡಾಗ ಅದಕ್ಕಿಂತ ಮಿಗಿಲಾದ ತೃಪ್ತಿ ಹೆತ್ತೊಡಲಿಗೇನಿದೆ?

ಇದನ್ನೂ ಓದಿ: ಮೈಸೂರು | ಕುಡಿಯಲು ಹಣ ನಿಡಲಿಲ್ಲವೆಂದು ಮನೆಗೆ ಬೆಂಕಿ ಹಚ್ಚಿದ ಭೂಪ

ಆರಂಭದ ಒಂದೆರಡು ತಿಂಗಳುಗಳು ಅಂದು ಕೊಂಡಂತೆಯೇ ಕಳೆಯಿತು. ಪ್ರತಿದಿನ ಮಾಡುತ್ತಿದ್ದ ಕರೆ, ಮೆಸೇಜುಗಳಲ್ಲಿ ತಾನಿದ್ದ ದೇಶದ ಅಂದಚೆಂದ, ಜೀವನಶೈಲಿ… ಹೀಗೆ ಎಲ್ಲವನ್ನೂ ವರ್ಣಿಸುತ್ತಿದ್ದಾಗ ಮಗ ಆ ದೇಶಕ್ಕೆ ಹೊಂದಿಕೊಂಡನೆಂಬ ಸಮಾಧಾನ ಬಹುಕಾಲ ಉಳಿಯಲಿಲ್ಲ. ಕರೆ, ಮೆಸೇಜ್ ಕ್ರಮೇಣ ಕಡಿಮೆಯಾಗತೊಡಗಿದಾಗ ‘ಬ್ಯುಸಿ ಇರಬೇಕು’ ಎಂದುಕೊಂಡವರಿಗೆ ಒಂದು ದಿನ ಆತ ದುಡಿಯುತ್ತಿದ್ದ ಕಂಪೆನಿಯಿಂದ “ದಯವಿಟ್ಟು ಅವನನ್ನೊಮ್ಮೆ ಊರಿಗೆ ಕರೆಸಿಕೊಳ್ಳಿ” ಕರೆ ಬಂದಾಗ ಮೊದಲ ಸಲ ಎಲ್ಲೋ ಏನೋ ಸರಿಯಿಲ್ಲ ಎಂದೆನಿಸಿತ್ತು.

“ಒಮ್ಮೆ ಬಂದು ಹೋಗು” ಹೆತ್ತವರ ಮಾತಿಗೆ ಬರಲು ಸುತರಾಂ ಒಪ್ಪದ ಮಗನ ವರ್ತನೆಗೆ ಇಲ್ಲಿ ಕುಳಿತು ಕಾರಣ ಹುಡುಕುವುದು ಕಷ್ಟವಾದರೂ ಕೈ ಕಟ್ಟಿ ಕುಳಿತರಾಗದೆಂದು ಮತ್ತಷ್ಟು ಒತ್ತಾಯಿಸಿದಾಗ ‘ಮಗನ ಅತಿಯಾದ ಸಹಾನುಭೂತಿ’ ಅವನನ್ನು ಯಾವುದೋ ಭ್ರಾಂತಿಯೊಳಗೆ ಸಿಲುಕಿಸುತ್ತಿದೆ ಎಂಬ ಸತ್ಯ ಅರಿವಾಯಿತು.

“ನಾನಿಲ್ಲೇ ಒಬ್ಬಾಕೆಯನ್ನು ಮದುವೆಯಾಗ ಬೇಕೆಂದಿದ್ದೇನೆ” ಅದೊಂದು ದಿನ ಮಗ ಹೇಳಿದಾಗ ಬೆಚ್ಚಿಬಿದ್ದ ಮನೆಯವರು ಮತ್ತಷ್ಟು ವಿಚಾರಿಸಿದರೆ ಪ್ರೀತಿಸುತ್ತಿದ್ದ ಹುಡುಗಿಯನ್ನು ಸ್ವತಃ ಆತನೇ ಭೇಟಿಯಾಗಿರಲಿಲ್ಲ. ಅಸಹಾಯಕ ಮೆಸೇಜ್ ಒಂದರ ಹಿಂದೆ ಬಿದ್ದವನ ಅನುಕಂಪವನ್ನೇ ದಾಳವನ್ನಾಗಿಸಿದ ಕಾಣದ ಚಳಕ ಆಟ ಆರಂಭಿಸಿತ್ತು. ವಿದೇಶೀ ಉದ್ಯೋಗದ ಬೆನ್ನು ಹತ್ತಿ ಹೋದವನ ಸೂಕ್ಷ್ಮ ಮನಸ್ಸನ್ನು, ಅಸಹಾಯಕ ಸ್ಥಿತಿಯೆಂದು ಬಿಂಬಿಸಿಕೊಂಡ ಸಂದೇಶಗಳು ಅದೆಷ್ಟು ಬಳಸಿಕೊಂಡವೆಂದರೆ ಮಾನಸಿಕವಾಗಿ ಕುಗ್ಗಿಹೋಗುವಷ್ಟು, ಭಾವನೆಗಳನ್ನು ಭ್ರಮೆಯಲ್ಲಿ ತೇಲಾಡಿಸುವಷ್ಟು!

ಇದುವರೆಗೆ ನೇರಾನೇರ ನೋಡದ ಹುಡುಗಿಯೊಡನೆ ಪ್ರೀತಿ, ಪ್ರೇಮ, ಮದುವೆ, ಸಂಸಾರ ಇತ್ಯಾದಿ ಕನಸು ಕಟ್ಟಿಕೊಂಡಿದ್ದ ಯುವಕ ಸಂದೇಶಗಳೊಳಗೆ ತನ್ನ ಜಗತ್ತನ್ನು ಕಟ್ಟಲಾರಂಭಿಸಿದ. ಆ ಲೋಕ ಎಷ್ಟು ಪ್ರಭಾವಿಯಾಗಿತ್ತು ಎಂದರೆ, ಎಲ್ಲೋ ಕುಳಿತು ಕಳುಹಿಸುತ್ತಿದ್ದ ಸಂದೇಶದ ಬೇಡಿಕೆಗೆ ತಾನು ದುಡಿದಿರುವುದೆಲ್ಲವನ್ನೂ ಕೊಡುವಷ್ಟರ ಮಟ್ಟಿಗೆ ಕಳೆದುಹೋದ. ಒಂದು ವೇಳೆ ಮತ್ತೆ ಸ್ವದೇಶಕ್ಕೆ ಮರಳಿದರೆ ಎಲ್ಲವನ್ನೂ ಕಳೆದುಕೊಂಡು ಬಿಡುವೆ ಎಂಬ ಭಯದೊಳಗಿನ ಭ್ರಮೆಯಲ್ಲಿ ಮನಸ್ಸು ಸ್ಥಿಮಿತತೆ ಕಳೆದುಕೊಳ್ಳತೊಡಗಿತು.

ವಾಸ್ತವದಿಂದ ವಿಮುಖನಾಗುತ್ತಿರುವುದನ್ನು ಗಮನಿಸಿದ ಕಂಪೆನಿ “ಅವನನ್ನು ತುರ್ತಾಗಿ ಒಮ್ಮೆ ಮನೆಗೆ ಕರೆಯಿಸಿಕೊಳ್ಳಿ” ಮತ್ತೆ ಸೂಚನೆ ಕೊಟ್ಟಿತು. ಬರಲೊಪ್ಪದ ಮಗನನ್ನು ಹರಸಾಹಸ ಪಟ್ಟು, ಪಟ್ಟುಬಿಡದೆ ಕರೆತಂದಾಗ ತಿಳಿದ ನಿಜಾಂಶ ಒಮ್ಮೆ ಹೆತ್ತವರನ್ನೇ ಬೆಚ್ಚಿಬೀಳಿಸಿತು. ಆತ ಸಂಪೂರ್ಣವಾಗಿ “ಮೆಂಟಲ್ ಟ್ರ್ಯಾಪ್” ಎಂಬ ಜಾಲದಲ್ಲಿ ಸಿಲುಕಿಹೋಗಿದ್ದ.

ಏನಿದು ಹೀಗೊಂದು ಮೆಂಟಲ್ ಟ್ರ್ಯಾಪ್?: ನಮ್ಮ ಮಕ್ಕಳು ಅವರು ಬಯಸಿದಂತೆ ಓದು ಮುಗಿಸಿ ವಿದೇಶದ ಉನ್ನತ ಕಂಪೆನಿಯಲ್ಲಿ ಆರಂಕಿ ಸಂಬಳದ ಕೆಲಸ ಗಿಟ್ಟಿಸಿಕೊಂಡರೆಂದು ಬೀಗುವ ಮುನ್ನ, ಆ ಊರಿಗೆ ಸೇರಿಕೊಂಡ ಯುವಕರ ಒಳತೋಟಿಗಳನ್ನು ಗಮನಿಸುವುದರಲ್ಲಿ ಎಡವಿದರೆ ಆಗುವ ಅನಾಹುತಕ್ಕೆ ಒಂದು ಕಾರಣವೇ ಈ ಮೆಂಟಲ್ ಟ್ರ್ಯಾಪ್. ಮಹತ್ವಾಕಾಂಕ್ಷೆ ಇಟ್ಟುಕೊಂಡು ದೇಶ ಬಿಟ್ಟು ಹಾರುವ ಸೂಕ್ಷ್ಮ ಮನಸ್ಥಿತಿಯ ಯುವ ಮನಸ್ಸುಗಳನ್ನು ಬಳಸಿಕೊಳ್ಳುವ ಒಂದು ರೀತಿಯ ಹೊಸ ಮೋಸದ ಜಾಲ ಇತ್ತೀಚೆಗೆ ವಿದೇಶಗಳಲ್ಲಿ ಸಕ್ರಿಯವಾಗಿದೆ. ಸೋಶಿಯಲ್ ಮೀಡಿಯಾ ಅಥವಾ ಜಾಲತಾಣಗಳನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳುವ ಈ ಟ್ರ್ಯಾಪ್ ಅಥವಾ ಜಾಲದ ಟಾರ್ಗೆಟ್ ಮನೆಯಿಂದ, ಕುಟುಂಬದಿಂದ ಉದ್ಯೋಗನಿಮಿತ್ತ ದೂರವಾಗಿರುವ ತರುಣ ತರುಣಿಯರು, ಸನಿಹವರ್ತಿಗಳೇ ಇಲ್ಲಿ ಟ್ರ್ಯಾಪರ್ ಗಳಾಗಿರುತ್ತಾರೆ ಅಥವಾ ಸ್ನೇಹಿತರಂತೆಯೇ ಇದ್ದು ಮನೋದೌರ್ಬಲ್ಯಗಳನ್ನು ಗಮನಿಸಿ ಖೆಡ್ಡಾ ತೋಡುತ್ತಾರೆ.

ತಾನು ಬೆಳೆದ, ತನ್ನ ಸಹವಾಸದ ಪರಿಸರಕ್ಕಿಂತ ವಿಭಿನ್ನ ಜಾಗದಲ್ಲಿ ತನ್ನನ್ನು ಪ್ರೀತಿಸುವ ಮನಸ್ಸೊಂದಿದೆ ಎಂಬ ಭ್ರಮಾಲೋಕದ ಸೃಷ್ಟಿಯೇ ಇಲ್ಲಿ ಮೋಸಗಾರರ ದಾಳ. ಭಾವನೆಗಳಿಗೆ ದಾಳಿಯಿಡುವ ಈ ಮೆಂಟಲ್ ಟ್ರ್ಯಾಪ್ ಎಂಬ ವೈರಸ್, ಸುತ್ತಲೂ ಒಂದು ವಿಷವರ್ತುಲವನ್ನು ಹೆಣೆದು ಭ್ರಮಾಧಿನರನ್ನಾಗಿಸುತ್ತಾ ಹೋಗುತ್ತದೆ. ಇಲ್ಲದ ವ್ಯಕ್ತಿಯೊಡನೆ ಕಾಲ್ಪನಿಕ ಲೋಕದಲ್ಲಿ ಸಂಬಂಧವನ್ನು ಕಲ್ಪಿಸಿಕೊಂಡು ಹೊಸ ಜಗತ್ತನ್ನು ಕಟ್ಟಿಕೊಳ್ಳುತ್ತಾನೆ. ಇಂತಹ ಟ್ರ್ಯಾಪ್‌ಗಳು ಹಣಕ್ಕಾಗಿ ನಡೆಯುತ್ತವೆಯಾದರೂ ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಸಂಪೂರ್ಣವಾಗಿ ಕೊಲ್ಲುತ್ತದೆ.  ಭಾವನೆಗಳನ್ನೇ ಉರುಳಾಗಿಸಿ ಮೋಸದ ಜಾಲ ಹೆಣೆಯುವ ಈ ಹೊಸ ಟ್ರ್ಯಾಪ್ ಕುರಿತು ಯುವ ಪೀಳಿಗೆಯಷ್ಟೇ ಅಲ್ಲದೆ ಹೆತ್ತವರೂ ಜಾಗ್ರತೆ ವಹಿಸಬೇಕಾಗಿದೆ.

“ಮಗ ಅಥವಾ ಮಗಳು ಏನ್ಮಾಡ್ತಿದ್ದಾರೆ?” ಸರೀಕರು, ಬಂಧುಗಳು ಕೇಳುವ ಪ್ರಶ್ನೆಗೆ “ವಿದೇಶದಲ್ಲಿ ಉನ್ನತ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹೆತ್ತವರೇ ತುಸು ಯೋಚಿಸಿ. ದೇಶ ತೊರೆದ ಮಕ್ಕಳು ಅಲ್ಲಿ ನಿಜವಾಗಿಯೂ ಖುಷಿಯಿಂದಿದ್ದಾರೆಯೇ? ಕಾಣದೂರಿನಲ್ಲಿ ಕಾಡುವ ಒಂಟಿತನಕ್ಕೆ ಬಲಿಯಾಗುವ ಬದಲಾಗಿ ಸ್ವದೇಶದಲ್ಲಿ, ನಮ್ಮದೇ ನೆಲದಲ್ಲಿ ದಕ್ಕುವ ಪ್ರೀತಿಯನ್ನು ಅನುಭವಿಸುವ ವಾತಾವರಣ ಯುವ ಪೀಳಿಗೆಗೆ ಸಿಗುವಂತಾಗಲಿ. “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ” ಎಂಬಂತೆ ದೂರ ಕುಳಿತು ನೋಡಿದಾಗ ಎಲ್ಲವೂಚೆಂದ. ಆದರೆ, ಹತ್ತಿರದಿಂದ ನೋಡಿದರೆ ಅಥವಾ ವ್ಯವಸ್ಥೆಯ ಭಾಗವಾದರೆ ಅಷ್ಟೇ ಒಳಗಿನ ಹುಳುಕು, ಕಷ್ಟನಷ್ಟಗಳು ಅರಿವಿಗೆ ಬರುವುದು. ವಿದೇಶಿ ಉದ್ಯೋಗ ಎಂಬ ಕನಸಿಗಿಂತಲೂ, ಅಂತಹ ಕನಸನ್ನು ಕಟ್ಟಿಕೊಳ್ಳುವ ಮನಸ್ಸನ್ನು ಮೊದಲು ಉಳಿಸಬೇಕಾಗಿದೆ.

ಹೊರದೇಶಕ್ಕೆ ಹೋದ ಮಗ ಬರುವಾಗ ನಲುಗಿ ಹೋಗಿದ್ದ: ತಾನು ಬೆಳೆದ, ತನ್ನ ಸಹವಾಸದ ಪರಿಸರಕ್ಕಿಂತ ವಿಭಿನ್ನ ಜಾಗದಲ್ಲಿ ತನ್ನನ್ನು ಪ್ರೀತಿಸುವ ಮನಸ್ಸೊಂದಿದೆ ಎಂಬ ಭ್ರಮಾಲೋಕದ ಸೃಷ್ಟಿಯೇ ಇಲ್ಲಿ ಮೋಸಗಾರರ ದಾಳ. ಭಾವನೆಗಳಿಗೆ ದಾಳಿಯಿಡುವ ಈ ಮೆಂಟಲ್ ಟ್ರ್ಯಾಪ್ ಎಂಬ ವೈರಸ್ ಸುತ್ತಲೂ ಒಂದು ವಿಷವರ್ತುಲವನ್ನು ಹೆಣೆದು ಭ್ರಮಾಧಿನರನ್ನಾಗಿಸುತ್ತಾ ಹೋಗುತ್ತದೆ.

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

2 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

14 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

15 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

15 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

15 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

15 hours ago