ಹಾಡು ಪಾಡು

ಅಂಬಾರಿ ಮುಗಿದ ಮೇಲೆಯೇ ಮೈಸೂರಿಗರ ದಸರಾ ಸಂಭ್ರಮ

ಸಿರಿ ಮೈಸೂರು

ಮೈಸೂರು ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ವಿಶಾಲ ರಸ್ತೆಗಳು, ರಸ್ತೆಯ ಇಕ್ಕೆಲಗಳಲ್ಲಿನ ಬೃಹದಾಕಾರದ ಮರಗಳು, ಟ್ರಾಫಿಕ್ ಇಲ್ಲದ ಜೀವನ, ಶಾಂತಿ-ಸಮಾಧಾನ ತುಂಬಿದ ಬದುಕು. ಆದರೆ everyday is not Sunday ಎನ್ನುವ ಹಾಗೆ ವರ್ಷಪೂರ್ತಿ ಪರಿಸ್ಥಿತಿ ಇದೇ ರೀತಿ ಇರುವುದಿಲ್ಲ.

ದಸರಾ ಹಬ್ಬ ಬಂದರೆ ಮದುವಣಿಗಿತ್ತಿಯಂತೆ ಸಿಂಗಾರಗೊಳ್ಳುವ ಮೈಸೂರಿನಲ್ಲಿ ಹೆಚ್ಚೂಕಡಿಮೆ ಒಂದು ವಾರ ಜನಸಾಗರ. ಅರಮನೆ ಸುತ್ತಮುತ್ತ ಅಂತೂ ಕಾಲಿಡಲು ಸಹ ಜಾಗ ಇರುವುದಿಲ್ಲ. ದೀಪಾಲಂಕಾರ ನೋಡಲು ಒಮ್ಮೆ ಹೋದರೆ ಟ್ರಾಫಿಕ್‌ನಲ್ಲಿ ಸಿಲುಕಿ, ಉಸಿರಾಡಲೂ ಜಾಗವಿರದಂತಹ ಒಂದಷ್ಟು ರಸ್ತೆಗಳನ್ನು ನೋಡಿಕೊಂಡು, ಎಲ್ಲ ಒನ್ ವೇಗಳನ್ನೂ ದಾಟಿ ಮತ್ತೆ ಮನೆ ತಲುಪುವ ಹೊತ್ತಿಗೆ ಸರಿರಾತ್ರಿಯಾಗಿದ್ದರೂ ಆಶ್ಚರ್ಯವಿಲ್ಲ. ಮೂಲತಃ ಮೈಸೂರಿನವರೇ ಆಗಿರುವ ಜನರಲ್ಲಿ ಬಹುಪಾಲು ಜನರು ದಸರಾ ಸಮಯದಲ್ಲಿ ನಗರದ ಹೃದಯದ ಭಾಗದ ಬಳಿ ಸುಳಿಯುವುದೇ ಇಲ್ಲ ಎಂದರೆ ನೀವು ನಂಬಲೇಬೇಕು. ಆ ಪೈಕಿ ನಾನೂ ಒಬ್ಬಳು. ನಾವು ಮೈಸೂರಿನವರು. ಮೈಸೂರನ್ನು ಶಾಂತವಾಗಿ, ಪ್ರಶಾಂತವಾಗಿ, ಜಂಜಾಟವಿಲ್ಲದೆ ನೋಡುವುದು ಮಾತ್ರ ನಮಗೆ ಸಾಧ್ಯ. ಎಲ್ಲೆಲ್ಲೂ ಜನರು, ಟ್ರಾಫಿಕ್, ಗಲಾಟೆ, ಕಾಲಿಡಲು ಜಾಗವಿಲ್ಲದೆ ಅರಮನೆ ಅಂಗಳ, ಜನರೇ ತುಂಬಿದ ಆಹಾರ ಮೇಳ ಹಾಗೂ ಎಕ್ಸಿಬಿಷನ್ ನೋಡಲು ನಮ್ಮ ಮನಸ್ಸು ಒಪ್ಪುವುದಿಲ್ಲ. ದಸರಾ ಶುರುವಾಗುತ್ತಿದೆ ಎಂದರೆ ನಮ್ಮ ದಿನನಿತ್ಯದ ಅಗತ್ಯಗಳಿಗಷ್ಟೇ ಓಡಾಡುವ ನಾವು ಜನನಿಬಿಡ ಪ್ರದೇಶಗಳಿಂದ ಸಾಧ್ಯವಾದಷ್ಟು ಮಟ್ಟಕ್ಕೆ ದೂರವೇ ಉಳಿಯುತ್ತೇವೆ! ಹಾಗಿದ್ದರೆ ರಸ್ತೆಯ ತುಂಬೆಲ್ಲಾ ತುಂಬಿಕೊಂಡು ದಸರಾ ನೋಡುವ ಜನರು ಯಾರು? ಬಹುಪಾಲು ಹೊರಗಿನವರು. ನಾವೂ ಬೇರೆ ಊರಿಗೆ ಹೋದಾಗ ಹೀಗೆ ಜನರ ಮಧ್ಯೆ ಯಾವುದಾದರೂ ಉತ್ಸವ ನೋಡಿದರೆ ಖುಷಿ ಅನಿಸುತ್ತದೋ ಏನೋ. ಆದರೆ ನಮ್ಮ ಊರಿನಲ್ಲಿ, ನಮ್ಮ ಅನುಕೂಲದಲ್ಲಿ ಇರುವಾಗ ರಸ್ತೆಗಿಳಿದು ಇಲ್ಲದ ಗೋಜಲಿಗೆ ಸಿಕ್ಕಿಕೊಳ್ಳುವುದೇಕೆ? ಹೇಗೂ ದಸರಾ ಮುಗಿದ ಮೇಲೆ ಇನ್ನೊಂದಷ್ಟು ದಿನ ದೀಪಾಲಂಕಾರ ಇದ್ದೇ ಇರುತ್ತದೆ. ಎಕ್ಸಿಬಿಷನ್ ಕೂಡ ಇರುತ್ತದೆ. ಇನ್ನು ಅರಮನೆಯಂತೂ ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ವಾರ ತೆರೆದ ಬಾಹುವಿನಿಂದ ನಮ್ಮನ್ನು ಸ್ವಾಗತಿಸುತ್ತದೆ. ಇಷ್ಟೊಂದು ಅನುಕೂಲ ಇರುವಾಗ ಈ ಗಲಾಟೆಯಲ್ಲಿ ಹೋಗಿ ಸೊರಗುವುದೇಕೆ? ಇನ್ನು ವಿಜಯದಶಮಿ ಮೆರವಣಿಗೆಯಂತೂ ದಿನವೆಲ್ಲಾ ಕುಳಿತು ಟಿವಿಯಲ್ಲಿ ನೋಡುವುದೇ ಚೆಂದ. ಅಲ್ಲಿ ಹೋಗಿ ಎಲ್ಲರ ಮಧ್ಯೆ ಮೆರವಣಿಗೆ ನೋಡಿದರೆ ಯಾವ ರೀತಿಯಲ್ಲಿ ಖುಷಿಯಾಗುತ್ತದೆ ಎಂಬುದರ ಬಗ್ಗೆ ನನಗಂತೂ ಅರಿವು ಕಡಿಮೆ. ಮನೆಯಲ್ಲಿ ಕೂತು ಟಿವಿಯಲ್ಲಿ ಮೆರವಣಿಗೆ ನೋಡಿದರೂ ಧನ್ಯತಾಭಾವ ಮೂಡುತ್ತದೆ ಎಂಬುದು ಸುಳ್ಳಲ್ಲ. ಮೈಸೂರಿನ ಬಹುಪಾಲು ಜನರು ಹೀಗೇ ಯೋಚಿಸುತ್ತಾರೆ ಎಂಬುದು ನನ್ನ ಅನುಭವಕ್ಕೆ ಬಂದಿರುವ ಸಂಗತಿ. ನಾವೆಲ್ಲರೂ ಆರಾಮದಾಯಕ ದಿನಚರಿಗೆ ಒಗ್ಗಿರುವವರು. ತೀರಾ ಅವಶ್ಯವಿರುವಾಗ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಟ್ರಾಫಿಕ್‌ನಂತಹ ಗಲಾಟೆಯಲ್ಲಿ ಸಿಲುಕಿಕೊಳ್ಳ ದಿರುವವರು. ನಮ್ಮ ನಗರವನ್ನು ಪ್ರಶಾಂತವಾಗಿ ಮಾತ್ರ ನೋಡಲು ಇಚ್ಛಿಸುವವರು. ನಾನು ಕೇಳಿರುವವರ ಪೈಕಿ ಶೇ.೯೦ರಷ್ಟು ಮೈಸೂರಿನ ಜನರು ಈವರೆಗೂ ವಿಜಯದಶಮಿ ಮೆರವಣಿಗೆಗೆ ಹೋಗಿಲ್ಲ. ಆ ದಾರಿಯಲ್ಲಿ ಮನೆ ಇದ್ದರೆ ನೋಡಿರುತ್ತಾರಷ್ಟೇ. ಇನ್ನು ಬಹಳ ಹಿರಿಯರು ಚಿಕ್ಕ ವಯಸ್ಸಿನಲ್ಲಿ ಇಷ್ಟೆಲ್ಲಾ ಜನರು ಸೇರದ ಸಂದರ್ಭಗಳಲ್ಲಿ ಅಂಬಾರಿ ಕಣ್ತುಂಬಿಕೊಂಡಿರುತ್ತಾರೆ. ಯಾರ್ಯಾರೋ ಯಾಕೆ, ಸ್ವತಃ ನಾನೇ ಈವರೆಗೂ ಆಹಾರ ಮೇಳಕ್ಕೆ ಒಂದು ಬಾರಿಯೂ ಹೋಗಿಲ್ಲ. ಪತ್ರಕರ್ತೆಯಾಗಿದ್ದಾಗ ಸುದ್ದಿ ಮಾಡಲೇಬೇಕಾದ್ದರಿಂದ ವಿವಿಧ ಕಾರ್ಯಕ್ರಮಗಳಿಗೆ ಹೋಗುತ್ತಿದ್ದುದನ್ನು ಹೊರತುಪಡಿಸಿ, ಬೇರೆ ವರ್ಷಗಳಲ್ಲಿ ಒಂಬತ್ತು ದಿನಗಳೂ ಆ ಕಡೆ ಸುಳಿದಿಲ್ಲ. ನಾವೆಲ್ಲಾ ಮೈಸೂರಿನವರು. ನಮ್ಮ ಸಂಭ್ರಮ ಏನಿದ್ದರೂ ಪ್ರಶಾಂತತೆಯಲ್ಲಿ ಮಾತ್ರ. ಮೈಸೂರಿನವರ ದಸರಾ ಸಂಭ್ರಮ ಏನಿದ್ದರೂ ದಸರಾ ಮುಗಿದ ಮೇಲಷ್ಟೇ!

” ಮೂಲತಃ ಮೈಸೂರಿನವರೇ ಆಗಿರುವ ಜನರಲ್ಲಿ ಬಹುಪಾಲು ಜನರು ದಸರಾ ಸಮಯದಲ್ಲಿ ನಗರದ ಹೃದಯದ ಭಾಗದ ಬಳಿ ಸುಳಿಯುವುದೇ ಇಲ್ಲ ಎಂದರೆ ನೀವು ನಂಬಲೇಬೇಕು. ಆ ಪೈಕಿ ನಾನೂ ಒಬ್ಬಳು”

ಆಂದೋಲನ ಡೆಸ್ಕ್

Recent Posts

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…

7 hours ago

ಬಲೂಚಿಸ್ತಾನ | ಸೇನಾ ಸಿಬ್ಬಂದಿ ಇದ್ದ ರೈಲು ಗುರಿಯಾಗಿಸಿ ಸ್ಫೋಟ ; 24 ಸಾವು

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…

9 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

11 hours ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

11 hours ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

12 hours ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

12 hours ago