ಸುಕನ್ಯಾ ಕನಾರಳ್ಳಿ
ಸುಪ್ರಸಿದ್ಧ ಪರ್ಷಿಯನ್ ಕವಿ ರೂಮಿ ಅಫ್ಘಾನಿಸ್ತಾನದ ಬಾಲ್ಖ್ನಲ್ಲಿ ಕ್ರಿ.ಶ.೧೨೦೭ ರಲ್ಲಿ ಹುಟ್ಟಿದ. ಆತ ಒಬ್ಬ ಇಸ್ಲಾಮ್ ಧರ್ಮಶಾಸ್ತ್ರಜ್ಞ ಮತ್ತು ಬೋಧಕನಾಗಿ ಜನರ ಜೊತೆ ಗಾಢವಾಗಿ ಬೆರೆಯುತ್ತಿದ್ದವ.
೧೨೪೪ರಲ್ಲಿ ರೂಮಿ ಒಬ್ಬ ಅಲೆಮಾರಿಯನ್ನು ಹಾದಿಯಲ್ಲಿ ಭೇಟಿಯಾದ. ಆತನ ಹೆಸರು ಶಂಶುದ್ದೀನ್. ಶಮ್ಸ್ ಬುಟ್ಟಿಗಳನ್ನು ಹೆಣೆದು ಬದುಕುತ್ತಿದ್ದ ಗುಂಪಿಗೆ ಸೇರಿದವ. ತಬ್ರೀಜ್ ಪಟ್ಟಣದಲ್ಲಿದ್ದ ಸಂತನೊಬ್ಬನಿಂದ ಅನುಭಾವಿ ದರ್ಶನದಲ್ಲಿ ಆಸಕ್ತಿಯನ್ನು ತಳೆದ. ನಂತರ ಅಧ್ಯಾತ್ಮದ ಗುರುಗಳನ್ನು ಅರಸುತ್ತಾ ಅಲೆಯ ಹತ್ತಿದ. ಆತ ಜನರೊಂದಿಗೆ ಬೆರೆಯುತ್ತಿರಲಿಲ್ಲ.
ಧರ್ಮಶಾಸ್ತ್ರಜ್ಞರನ್ನಂತೂ ದೂರವೇ ಇಟ್ಟಿದ್ದ. ಊರಿನ ಹೊರಗೆಲ್ಲೊ ಮನೆ ಮಠವಿಲ್ಲದ ಯಾತ್ರಿಕರ ಗುಂಪಿನಲ್ಲಿರುತ್ತಿದ್ದ. ಒಟ್ಟಿನಲ್ಲಿ ಮಾಗಿದ್ದ, ಈಗ ತನ್ನ ಅನುಭವವನ್ನು ಹಂಚಿಕೊಳ್ಳುವ ಸಹಜೀವಕ್ಕೆ ಕಾಯುತ್ತಿದ್ದ. ರೂಮಿಯನ್ನು ಕಂಡಾಗ ಇವ ತನಗೆ ತಕ್ಕ ಸಖನಾಗಬಲ್ಲವ ಅಂತನ್ನಿಸಿರಬೇಕು.
ಅವರಿಬ್ಬರ ಭೇಟಿಯ ಬಗ್ಗೆ ಈ ಕತೆಯಿದೆ: ರೂಮಿ ಧರ್ಮಶಾಸ್ತ್ರಜ್ಞನಾಗಿದ್ದ ಮದ್ರಸಾಗೆ ಒಬ್ಬ ಅಪರಿಚಿತ ಬಂದನಂತೆ. ಎಂದಿನಂತೆ ರೂಮಿ ಬೋಧನೆಯಲ್ಲಿ ತಲ್ಲೀನನಾಗಿದ್ದ. ಅಲ್ಲೇ ಹತ್ತಿರದಲ್ಲಿ ಪುಸ್ತಕಗಳನ್ನು ಪೇರಿಸಿದ್ದ ಒಂದು ಗುಡ್ಡೆಯೇ ಇತ್ತು. ಯಾರೂ ಕರೆಯದೆ ಬಂದ ಅಪರಿಚಿತ, ಯಾರೂ ಹೇಳದಿದ್ದರೂ ಒಂದು ಮೂಲೆಯಲ್ಲಿ ಕೂತ. ಅತ್ತಿತ್ತ ನೋಡಿ ಪುಸ್ತಕಗಳ ಗುಡ್ಡೆಯತ್ತ ಬೆರಳು ತೋರಿಸುತ್ತಾ, ‘ಏನದು?’ ಅಂತ ಕೇಳಿದ. ಅವನ ಧಾಷ್ಟ ಕ್ಕೆ ಮೊದಲೇ ರೇಗಿದ್ದ ರೂಮಿ, ‘ಅದಾ? ನಿನಗೆ ಅರ್ಥವಾಗದ್ದು, ಬಿಡು’ ಅಂತ ಉಡಾಫೆಯಿಂದ ಉತ್ತರ ಕೊಟ್ಟ. ಹಾಗೆ ಹೇಳಿದ ತಕ್ಷಣವೇ ಗುಡ್ಡೆ ಹತ್ತಿ ಉರಿಯಲಾರಂಭಿಸಿತು. ಎಲ್ಲರೂ ಬೆಚ್ಚಿಬಿದ್ದರು.
“ಹೇ… ಹೇ… ಏನಿದು?” ಅಂತ ರೂಮಿ ಕಿರುಚಿದ. ‘ಅದಾ, ನಿನಗೆ ಅರ್ಥವಾಗದ್ದು, ಬಿಡು,’ ಎಂದು ಉತ್ತರ ಕೊಟ್ಟ ಅಪರಿಚಿತ, ಬಂದ ಹಾಗೆಯೇ ಎದ್ದು ಹೋದ. ದಡಬಡಿಸಿ ಓಡಿದ ರೂಮಿ ಅವನನ್ನು ಎಲ್ಲಾ ಕಡೆ ಹುಡುಕಿ ಮನೆಗೆ ಕರೆತಂದನಂತೆ.
ಶಮ್ಸ್ ಎಂದರೆ ಸೂರ್ಯ. ರೂಮಿಯ ಮೂವತ್ತೇಳನೆಯ ವಯಸ್ಸಿನಲ್ಲಿ ದಮಸ್ಕಸಿನಲ್ಲಿ ಭೇಟಿಯಾದ ಶಮ್ಸನಿಗೆ ಆಗ ಐವತ್ತೊ ಅರವತ್ತೊ ಇದ್ದಿರಬಹುದು. ಸುಮಾರು ನಲ್ವತ್ತು ದಿನಗಳ ಕಾಲ ಎಡಬಿಡದೆ ಒಟ್ಟಿಗಿದ್ದು ಶಮ್ಸ್ ಅವನಿಗೆ ಅನುಭಾವಿ ಪ್ರೇಮದ ನಲ್ವತ್ತು ಸತ್ಯಗಳನ್ನು ಬೋಧಿಸಿದ ಎಂಬ ಮಾಹಿತಿಯಿದೆ.
ಅನುಭಾವಿ ದರ್ಶನದಲ್ಲಿ ರೂಮಿ-ಶಮ್ಸ್ ಸ್ನೇಹ ಒಂದು ಮಹತ್ತರ ಪ್ರತಿಮೆಯಾಗಿ ಒದಗಿ ಬಂದಿದೆ. ಗುರು-ಶಿಷ್ಯ; ಪ್ರೇಮಿ-ಪ್ರೀತಿಪಾತ್ರ; ಅಸ್ತಿತ್ವ-ನಾಸ್ತಿತ್ವ; ಬೆಳಕು-ಮೂಲ; ಇತ್ಯಾದಿ ಎಲ್ಲ ಗುರುತುಗಳೂ ಅಳಿದು ಪರಸ್ಪರರಲ್ಲಿ ಲೀನವಾಗಬಲ್ಲ ಅನುಭಾವಿ ಸಖ್ಯ (ಸೊಹಬೆತ್) ಅವರದು.
ರೂಮಿಯ ಕಡು ಪ್ರೇಮದ ಕಾವ್ಯ ಬಿದಿರ ಮೆಳೆಯನ್ನು ತೊರೆದು ಬಂದಿರುವ ಜೊಂಡುಗೊಳಲಿನ ವಿರಹ ಕಾವ್ಯವೂ ಹೌದು, ಅನುಭಾವಿ ದರ್ಶನವೂ ಹೌದು. (ಸದ್ಯದಲ್ಲೇ ಪ್ರಕಟವಾಗಲಿರುವ ಲೇಖಕಿಯ ‘ದಿವ್ಯ ದಲ್ಲಿ ಹಿಸ್ಸೆಯಿಲ್ಲ: ಮೌಲಾನಾ ಜಲಾಲುದ್ದೀನ್ ರೂಮಿಯ ಪ್ರೇಮಕಾವ್ಯ’ ಕೃತಿಯ ಪ್ರಸ್ತಾವನೆಯಿಂದ ಆಯ್ದ ಭಾಗ)
” ಅನುಭಾವಿ ದರ್ಶನದಲ್ಲಿ ರೂಮಿ-ಶಮ್ಸ್ ಸ್ನೇಹ ಒಂದು ಮಹತ್ತರ ಪ್ರತಿಮೆಯಾಗಿ ಒದಗಿ ಬಂದಿದೆ”
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…