ರಜೆಯ ಅವಧಿಯಲ್ಲಿ ಮುಳ್ಳೂರು ಸರ್ಕಾರಿ ಶಾಲೆಯ ಶಿಕ್ಷಕ ಸತೀಶ್ರಿಂದ ಕಲಾಕೃತಿಗಳ ಸೃಷ್ಟಿ
ನವೀನ್ ಡಿಸೋಜ
ಮಡಿಕೇರಿ ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಕಾಲಿಟ್ಟರೆ ಅಲ್ಲಿ ಜಿಂಕೆ, ಜಿರಾಫೆ, ಡೈನೋಸಾರಸ್, ಹುಲಿ, ಸಿಂಹಗಳು ನಿಮ್ಮನ್ನು ಸ್ವಾಗತಿಸುತ್ತವೆ. ಭೂ ಮಂಡಲ, ಸೋಲಾರ್ ಪಾರ್ಕ್, ಜೈವಿಕ ಅನಿಲ ಘಟಕ, ವಿವಿಧ ಬಗೆಯ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ಅರರೇ…. ಸುಂದರ ಸರ್ಕಾರಿ ಶಾಲೆಯೇ ! ಎಂದು ಹುಬ್ಬೇರಿಸಿ ನೋಡಿ ಸಂತೋಷಪಡಬಹುದಾದ ಈ ಶಾಲೆಯ ಅಂದ, ಚೆಂದ ಹೆಚ್ಚಲು ಕಾರಣರಾದವರು ಇಲ್ಲಿನ ಶಿಕ್ಷಕ ಸಿ.ಎಸ್. ಸತೀಶ್. ಮಕ್ಕಳ ಕಲಿಕೆಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಶಾಲೆಯ ಆವರಣದಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಕಲಾಕೃತಿಗಳು, ವಿಜ್ಞಾನ, ಗಣಿತ, ಖಗೋಳ, ಕಲೆಗೆ ಸಂಬಂಧಿಸಿದ ರೂಪಕಗಳನ್ನು ನಿರ್ಮಾಣ ಮಾಡಿ ಮಕ್ಕಳಿಂದ, ಗ್ರಾಮಸ್ಥರಿಂದ ಮೆಚ್ಚುಗೆ ಗಳಿಸಿ ಮಾದರಿ ಶಿಕ್ಷಕ ಎನ್ನಿಸಿಕೊಂಡಿದ್ದಾರೆ.
ರಜೆ ಅವಧಿಯಲ್ಲಿ ಸೇವೆ
ಶಿಕ್ಷಕ ಸತೀಶ್ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಕಲಾಕೃತಿಗಳೆಲ್ಲವೂ ರಜೆಯ ಅವಧಿಯಲ್ಲಿಯೇ ಮೂಡಿದವು ಎನ್ನುವುದು ವಿಶೇಷ. ಶನಿವಾರ, ಭಾನುವಾರ, ಸರ್ಕಾರಿ ರಜೆ ದಿನಗಳು, ದಸರಾ, ಬೇಸಿಗೆ ರಜೆ ಸಮಯದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಾಲೆಯ ಮಕ್ಕಳ ಸಹಾಯ ಪಡೆದು ಸ್ವತಃ ತಾವೇ ದಿನಕ್ಕೊಂದು ಪ್ರಾಣಿ, ಪಕ್ಷಿಗಳ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಆ ಮೂಲಕ ಇಡೀ ಶಾಲೆಯ ಆವರಣವೇ ವಿಶೇಷ ಉದ್ಯಾನವನವಾಗಿದೆ. ಮಕ್ಕಳ ಕಲಿಗೆಗೂ ಪೂರಕವಾಗಿದೆ.
ನಿರುಪಯುಕ್ತ ವಸ್ತುಗಳ ಬಳಕೆ
ವಿಶೇಷವೆಂದರೆ ಇಲ್ಲಿ ಶಿಕ್ಷಕ ಸತೀಶ್ ಬಳಸಿರುವುದು ನಿರುಪಯುಕ್ತ ವಸ್ತುಗಳನ್ನು. ಹಳೆಯ ಪ್ಲಾಸ್ಟಿಕ್ ಬಾಟಲ್ಗಳು, ಪ್ಲಾಸ್ಟಿಕ್ ಕವರ್ಗಳು, ಹಳೆಯ ಬಟ್ಟೆ, ಗುಜುರಿ ಅಂಗಡಿಯಿಂದ ತಂದ ಒಂದಷ್ಟು ಹಳೆಯ ರಾಡ್ ಮತ್ತು ತಂತಿ ಜೊತೆಗೆ ಸಿಮೆಂಟ್ ಬಳಸಿ ಪ್ರಾಣಿಗಳ ಮಾದರಿಗಳನ್ನು ನಿರ್ಮಿಸಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ತನ್ವಿ, ದುಷ್ಯಂತ್, ಯುಗನ್, ಶ್ರೀಶ್ಮ, ಬೃಂದಾ ಮೊದಲಾದವರು ರಜೆಯಾದರೂ ಶಾಲೆಗೆ ಬಂದು ಶಿಕ್ಷಕರ ಕಾರ್ಯಕ್ಕೆ ಕೈ ಜೋಡಿಸುತ್ತಾರೆ. ಹಿಂದೊಮ್ಮೆ ಸತೀಶ್ ತಂತಿ ಮತ್ತು ಕಾಗದದ ರಟ್ಗಳನ್ನು ಬಳಸಿ ಹಲವಾರು ಕಲಾಕೃತಿಗಳನ್ನು ನಿರ್ಮಿಸಿದ್ದರು. ಆದರೆ ಕೊರೊನಾ ಅವಧಿಯಲ್ಲಿ ಇವುಗಳು ಕಳುವಾಗಿದ್ದವು.
15 ದಿನದಲ್ಲಿ 15 ಕಲಾಕೃತಿ
ಈ ಬಾರಿಯ ದಸರಾ ರಜೆಯಲ್ಲಿ ಶಿಕ್ಷಕ ಸತೀಶ್ ಅವರು ಕಾಂಕ್ರೀಟ್ ಬಳಸಿ ದಿನಕ್ಕೊಂದರಂತೆ 15 ದಿನಗಳ ರಜೆ ಅವಧಿಯಲ್ಲಿ ಜಿಂಕೆ, ಹುಲಿ, ಜಿರಾಫೆ, ಕುದುರೆ, ಕಾಂಗರೂ, ಡೈನೋಸಾರ್ ಡ್ರ್ಯಾಗನ್, ಚಿಂಪಾಂಜಿ, ಘೆಂಡಾಮೃಗ, ಆಸ್ಟ್ರಿಚ್ ಮೊಸಳೆ, ಫೆಲಿಕಾನ್, ಗ್ಲೋಬ್ನಂತಹ ಹದಿನೈದು ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ಶಿಕ್ಷಕರ ಮಾದರಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕೊಡಗಿನ ಮಾದರಿ ಶಿಕ್ಷಕ
ಸತೀಶ್ ಈ ಹಿಂದೆಯೂ ಇಂತಹ ಅನೇಕ ಚಟುವಟಿಕೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮಕ್ಕಳಿಗೆ ನೀರು ಕುಡಿಯಲು ದಿನಕ್ಕೆ 6 ಬಾರಿ ಬೆಲ್ ವ್ಯವಸ್ಥೆ, ಪರಿಸರ ಸ್ನೇಹಿ ದೀಪಾವಳಿ ಆಚರಣೆ, ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶಾಲಾ ಪ್ರಯೋಗಾಲಯದಲ್ಲಿ ನಭೋಮಂಡಲ ಸೃಷ್ಟಿ, ವಿಶ್ವ ಪರಿಸರ ದಿನದ ಅಂಗವಾಗಿ ಬೀಜದುಂಡೆ ಬಿತ್ತುವುದು, ಕೃತಕ ಬ್ಯಾಂಕ್ ಸ್ಥಾಪನೆ, ಆನ್ಲೈನ್ ತರಗತಿಗಾಗಿ ಮರದ ಅಟ್ಟಣಿಗೆ ಸ್ಥಾಪನೆ, ಗ್ರಹಣ ವೀಕ್ಷಣೆಗೆ ಅವಕಾಶ, ಜುರಾಸಿಕ್ ಪಾರ್ಕ್, ಕ್ರಿಯಾತ್ಮಕ ಗ್ರಂಥಾಲಯ, ಸೋಲಾರ್ ಪಾರ್ಕ್, ಜೈವಿಕ ಅನಿಲ ಘಟಕ, ರಂಗಕಲೆ ಮೂಲಕ ಪಾಠ ಭೋದನೆ ಮತ್ತಿತರ ವಿನೂತನ ಚಟುವಟಿಕೆಗಳ ಮೂಲಕ ಮಾದರಿ ಶಿಕ್ಷಕ ಎನಿಸಿಕೊಂಡಿದ್ದಾರೆ.
ಪ್ರತಿವರ್ಷ ಶಾಲೆುಂಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿತ್ತು. ಈ ಬಾರಿ ಶಾಲಾ ಪರಿಸರವನ್ನು ಆಕರ್ಷಣೀಯಗೊಳಿಸಿ ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರಬೇಕು, ಅವರ ಹಾಜರಾತಿ ಉತ್ತಮಗೊಳಿಸುವ ಉದ್ದೇಶವಿತ್ತು. ಅದಕ್ಕೆ ಪೂರಕವಾಗಿ ಈ ಯೋಜನೆ ಹಾಕಿಕೊಂಡಿದ್ದೇನೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ವಿ. ಸುರೇಶ್ ಸದಾ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವ ಮೂಲಕ ಅಗತ್ಯ ಸಹಕಾರ ನೀಡಿದ್ದಾರೆ.
-ಸಿ.ಎಸ್. ಸತೀಶ್, ಮುಳ್ಳೂರು ಸರ್ಕಾರಿ ಕಿರಿುಂ ಪ್ರಾಥಮಿಕ ಶಾಲೆ ಶಿಕ್ಷಕ
ಮಂಜು ಕೋಟೆ ಎಚ್.ಡಿ.ಕೋಟೆ: ನಾಯಕ ಸಮುದಾಯದ ಮುಖಂಡರಾದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಆ…
ಮದ್ದು ಅರೆಯಲಿ ಆಳುವವರು! ಬಗೆದಷ್ಟೂ ಬಯಲಾಗುತಿದೆ ಬ್ರಹ್ಮಾಂಡ ಭ್ರಷ್ಟಾಚಾರ ನೆಲದಾಳಕೂ ಬೇರೂರಿದೆ ಕೆಪಿಎಸ್ಸಿಯ ಕರ್ಮಕಾಂಡ! ಹಣವಂತರ ಆಡುಂಬಲವಿದು ಹರಣವಾಗುತಿದೆ ಬಡವನ…
ಮೈಸೂರಿನ ಕುವೆಂಪು ನಗರ ಕಾಂಪ್ಲೆಕ್ಸ್ ಹತ್ತಿರ ಇರುವ ಒಂದನೇ ಹಂತ (ಇಡಬ್ಲ್ಯು ಎಸ್) ೩ನೇ ಕ್ರಾಸ್ ಬಳಿ ರಸ್ತೆಯ ಒಂದು…
ಹೆಚ್. ಡಿ. ಕೋಟೆ ಮಿನಿ ವಿಧಾನಸೌಧ ಆಡಳಿತ ಕಚೇರಿ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಶೌಚಾಲಯವನ್ನು ನಿರ್ಮಾಣ…
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳು…
ಟಿ.ಕೆ.ಹರೀಶ್ ತಕ್ಷಣದ ಯಶಸ್ಸಿನ ಸಂಸ್ಕೃತಿಯಿಂದ ಅಪಾಯಕಾರಿ ; ಯುವಜನರಿಗೆ ಮನವರಿಕೆ ಅಗತ್ಯ ಇಂದು ಒಂದು ಮಗು ಹುಟ್ಟಿದಾಗ ಅದರ ಸುತ್ತಲೂ…