ಇಂದು ಜಗತ್ತಿಗೆ ಗಾಂಧಿ ಚಿಂತನೆ ಹೆಚ್ಚು ಪ್ರಸ್ತುತ:
ಗಾಂಧಿ ಎಂದರೆ ಕೇವಲ ಇತಿಹಾಸದ ಪುಟಗಳಲ್ಲಿ ಉಳಿದಿರುವ ಸ್ವಾತಂತ್ರ್ಯ ಹೋರಾಟಗಾರ ಮಾತ್ರ ಅಲ್ಲ. ಸದಾ ಜಗನ್ಮೋಹಕವಾಗಿರುವ ಒಂದು ಸಿದ್ಧಾಂತ. ಮಾನವೀಯತೆಯ ಪ್ರತೀಕ. ಪ್ರತಿ ತಲೆಮಾರಿಗೂ ದಾರದೀಪವಾಗಬಲ್ಲ ಜಾಗೃತ ಶಕ್ತಿ. ಭಾರತದ ನೆಲದಲ್ಲಿ ಜನಿಸಿ ಇಡೀ ಜಗತ್ತನ್ನೇ ತನ್ನ ಅಹಿಂಸೆಯಮಂತ್ರದಿಂದ ಸೆಳೆದ ಸತ್ಯ ಮತ್ತು ಸರಳತೆಯ ಸಾಕಾರ ರೂಪ. ಇಂದು ಜಗತ್ತು ಯುದ್ಧ, ದ್ವೇಷ ಮತ್ತು ಅಸೂಯೆಯಿಂದ ನಲುಗುತ್ತಿರುವಾಗ ಗಾಂಧಿಜಿ ಅವರ ಚಿಂತನೆಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಇಂದಿನ ತಂತ್ರಜ್ಞಾನ ಮತ್ತು ಆಡಂಬರದ ಯುಗದಲ್ಲಿ ಗಾಂಧಿಜಿ ಹೆಚ್ಚು ಬೇಕಾಗಿದ್ದಾರೆ. ಇಂದಿನ ರಾಜಕೀಯ ನಾಯಕರಲ್ಲಿ ನೈತಿಕತೆ ಮೌಲ್ಯ ಕುಸಿಯುತ್ತಿರುವಾಗ ನುಡಿದಂತೆ ನಡೆದ ಗಾಂಧಿಜಿ ಅವರ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಘೋಷಣೆ ನಮ್ಮೆಲ್ಲರಿಗೂ ಆದರ್ಶವಾಗಿದೆ. ಗಾಂಧಿ ಎಂದರೆ ಕೇವಲ ನೋಟಿನ ಮೇಲೆ ಮುದ್ರಿತವಾಗಿರುವ ಚಿತ್ರವಲ್ಲ. ಪ್ರತಿಯೊಬ್ಬರ ಆಂತರ್ಯದಲ್ಲಿ ಜಾಗೃತವಾಗಿರಬೇಕಾದ ಸಾಕ್ಷಿ ಪ್ರಜ್ಞೆ. ಗಾಂಧಿಜಿ ಎಂದರೆ ನೈತಿಕತೆ ಮತ್ತು ಸತ್ಯದ ಧ್ವನಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪ್ರತಿಯೊಂದು ಸತ್ಯದ ಧ್ವನಿಯಲ್ಲೂ ಮಹಾತ್ಮ ಗಾಂಧಿ ಅವರ ಸತ್ಯದ ಕಿಡಿ ಉರಿಯುತ್ತಿರುವುದನ್ನು ಇಂದಿಗೂ ನಾನು ಕಾಣಬಲ್ಲೆ. ಗಾಂಧಿಜಿ ಸದಾ ಪ್ರೀತಿ ಮತ್ತು ನ್ಯಾಯದ ಬೆಳಕಾಗಿ ಬೆಳಗುತಿರುತ್ತಾರೆ.
-ಸುದೀಕ್ಷಾ ಆರ್, ೮ನೇತರಗತಿ, ಐಡಿಯಲ್ ಜಾವಾ ರೋಟರಿ ಶಾಲೆ, ಮೈಸೂರು
ಭಾರತೀಯರೆಲ್ಲರ ಮನದಲ್ಲೂ ಶಾಶ್ವತವಾಗಿ ಉಳಿದ ಗಾಂಧಿ:
ಭಾರತೀಯರೆಲ್ಲರೂ ಯಾವಾಗಲೂ ಸ್ಮರಿಸುವ ವ್ಯಕ್ತಿ ಗಾಂಧಿಯಾಗಿದ್ದಾರೆ. ಗಾಂಧಿಜಿ ಅವರು ಚಿಕ್ಕ ವಯಸ್ಸಿನಿಂದಲೇ ತುಂಬಾ ಕಷ್ಟಗಳನ್ನು ಅನುಭವಿಸಿದರು. ಇದರ ನಡುವೆಯೂ ತಮ್ಮ ಗುರಿ ಮತ್ತು ದಾರಿಯನ್ನು ಕಂಡುಕೊಂಡರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ರಿಟಿಷರ ಗುಂಡಿನ ದಾಳಿಯಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸಾವನಪ್ಪುತ್ತಾರೆ. ಈ ಘಟನೆ ಗಾಂಧಿಜಿ ಅವರ ಮನಸ್ಸಿನಲ್ಲಿ ಬಹಳ ನೋವನ್ನುಂಟು ಮಾಡುತ್ತದೆ. ಹಾಗಾಗಿಯೇ ಗಾಂಧೀಜಿ ಅವರು ಅಹಿಂಸೆ ಮತ್ತು ಅಸಹಕಾರ ಚಳವಳಿಯನ್ನು ನಡೆಸುತ್ತಾರೆ. ಗಾಂಧೀಜಿ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು. ಅಲ್ಲದೆ ಗಾಂಧೀಜಿ ಒಳೆಯ ಬರಹಗಾರರಾಗಿದ್ದರು. ಅವರ ಪುಸ್ತಕಗಳು ಹಲವರ ಮೇಲೆ ಗಾಢ ಪ್ರಭಾವ ಬೀರಿವೆ. ಗಾಂಧೀಜಿ ಅವರ ಸಾಧನೆಗಳು ಭಾರತ ದೇಶದಲ್ಲಿ ಬಹಳ ಪ್ರಾಮುಖ್ಯತೆ ಹೊಂದಿವೆ ಮತ್ತು ಎಲ್ಲರ ಮನದಲ್ಲೂ ಶಾಶ್ವತವಾಗಿ ಉಳಿದಿದ್ದಾರೆ.
ತೇಜು ಎನ್., ೧೦ನೇ ತರಗತಿ ಜೆಎಸ್ಎಸ್ ಬಾಲಕಿಯರ ಪ್ರೌಢಶಾಲೆ, ಚಾಮರಾಜನಗರ
ಮಾನವೀಯತೆ ಜಾಗೃತಗೊಳಿಸುವ ಶಕ್ತಿ:
ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ತಮ್ಮ ಬದುಕಿನ ಮೌಲ್ಯವನ್ನಾಗಿ ಹಾಗೂ ಮಾರ್ಗಗಳಾಗಿ ಅಳವಡಿಸಿಕೊಂಡು ಜೀವನದುದ್ದಕ್ಕೂ ಪಾಲಿಸಿದರು. ಖಾದಿ ಮತ್ತು ಸ್ವಾವಲಂಬನೆಯ ವಿಚಾರಗಳನ್ನು ಉತ್ತೇಜಿಸಿದರು. ಗಾಂಧಿಜಿ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಆದರ್ಶಗಳು ಮತ್ತು ತತ್ವಗಳು ಸದಾ ಜೀವಂತವಾಗಿವೆ. ಗಾಂಧಿ ಎಂದರೆ ಭರವಸೆ, ಶಾಂತಿ ಮತ್ತು ಬದಲಾವಣೆಯ ಸಂಕೇತ. ಅವರ ಜೀವನ ಮತ್ತು ಸಂದೇಶಗಳು ನಮಗೆ ಉತ್ತಮ ಮನುಷ್ಯರಾಗಿ ಬದುಕಲು ಮತ್ತು ಶಾಂತಿಯುತ ಜಗತ್ತು ನಿರ್ಮಿಸಲು ಸದಾ ಸೂರ್ತಿ ನೀಡುತ್ತವೆ. ಗಾಂಧಿಜಿ ಅವರ ಜೀವನ ಶೈಲಿಯು ಅವರ ತತ್ವಗಳಿಗೆ ಕನ್ನಡಿಯಂತಿತ್ತು. ಭಾರತದ ಇತಿಹಾಸದಲ್ಲಿ ಮಾತ್ರವಲ್ಲ, ವಿಶ್ವದ ಇತಿಹಾಸದಲ್ಲಿಯೇ ಅಳಿಸಲಾಗದ ಛಾಪು ಮೂಡಿಸಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ. ಇವರು ಕೇವಲ ಒಬ್ಬ ಸ್ವಾತಂತ್ರ್ಯ ಹೋರಟಗಾರಲ್ಲ. ಅವರೊಂದು ಜೀವನ ಶೈಲಿ, ಒಂದು ತತ್ವ ಮತ್ತು ಪ್ರತಿಯೊಬ್ಬ ವ್ಯಕ್ತಿಯೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸುವ ಶಕ್ತಿ.
ಸಹನ, ೮ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಗರಗನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು
ಇಂದು ಗಾಂಧಿಜಿ ಅಗತ್ಯ ಇನ್ನಷ್ಟು ಹೆಚ್ಚಾಗಿದೆ:
ಸತ್ಯವೇ ದೇವರು, ಅಹಿಂಸೆಯೇ ನನ್ನ ಧರ್ಮ ಎಂದು ಜೀವನದುದ್ದಕ್ಕೂ ಸಾರಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿಜಿ. ಅವರ ಭಾವಚಿತ್ರ, ಜೀವನ ಚರಿತ್ರೆ, ಪುಸ್ತಕಗಳು ಮತ್ತು ಶಿಕ್ಷಕರ ಮಾತುಗಳ ಮೂಲಕ ಗಾಂಧಿಜಿ ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಆದ್ದರಿಂದ ನನ್ನ ಮನಸ್ಸಿನಲ್ಲಿ ಮೂಡಿರುವ ಗಾಂಧಿಜಿಯ ರೂಪವೇ ಬೇರೆ. ನನ್ನ ದೃಷ್ಟಿಯಲ್ಲಿ ಗಾಂಧಿಜಿ ಕೇವಲ ಸ್ವಾತಂತ್ರ ಹೋರಾಟಗಾರರಲ್ಲ. ಅವರು ಒಬ್ಬ ಆದರ್ಶ ವ್ಯಕ್ತಿತ್ವ. ಅವರ ಸರಳ ಜೀವನ, ಉನ್ನತ ಚಿಂತನೆ, ಅಚಲವಾದ ನಂಬಿಕೆಗಳು ಇಂದಿಗೂ ಪ್ರತಿಯೊಬ್ಬರಿಗೂ ದಾರಿ ದೀಪವಾಗಿವೆ. ಗಾಂಧಿಜಿ ಅವರ ಸರಳ ರೂಪವೇ ಜಗತ್ತಿನಾದ್ಯಂತ ಲಕ್ಷಾಂತರ ಜನರ ಮನಸ್ಸಗಳನ್ನು ಗೆದ್ದಿದೆ. ಗಾಂಧಿಜಿ ಬಾಲ್ಯದಿಂದಲೇ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಪ್ರೀತಿಸುತ್ತಿದ್ದರು. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸುಳ್ಳಿನ ದಾರಿಯನ್ನು ಹಿಡಿಯಲಿಲ್ಲ. ಇದೇ ಕಾರಣದಿಂದ ಅವರನ್ನು ವಿಶ್ವದಾದ್ಯಂತ ‘ಸತ್ಯದ ಪ್ರತೀಕ’ ಎಂದು ಗುರುತಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನು ನೀಡಿದ ಗಾಂಧಿ ಎಂದಿಗೂ ಹಿಂಸೆ ಅಥವಾ ದ್ವೇಷವನ್ನು ಬೆಂಬಲಿಸಲಿಲ್ಲ. ಅಹಿಂಸೆಯೇ ಅತ್ಯಂತ ದೊಡ್ಡ ಶಕ್ತಿ ಎಂಬ ನಂಬಿಕೆಯಿಂದ ಹೋರಾಟ ನಡೆಸಿದರು. ಆಯುಧಗಳಿಂದ ನಡೆಯುವ ಯುದ್ಧಕ್ಕಿಂತ ಸತ್ಯಾಗ್ರಹವೇ ಹೆಚ್ಚು ಶಕ್ತಿಶಾಲಿ ಎಂದು ಸಾಬೀತುಪಡಿಸಿದರು. ಗಾಂಽಜಿ ಕೇವಲ ಇತಿಹಾಸ ಪುಟಗಳಲ್ಲಿರುವ ವ್ಯಕ್ತಿಯಲ್ಲ. ಅವರು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಇರಬೇಕಾದ ಆದರ್ಶ. ಇಂದಿನ ಕಾಲದಲ್ಲಿ ಗಾಂಧಿಜಿಯವರ ಆದರ್ಶಗಳ ಅಗತ್ಯ ಇನ್ನಷ್ಟು ಹೆಚ್ಚಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸೋದರತ್ವವನ್ನು ಬೆಳೆಸಲು ಅವರ ಚಿಂತನೆಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿವೆ.
ಸಾನ್ವಿ ಟಿ., ೯ನೇ ತರಗತಿ ರೋಟರಿ ಪಶ್ಚಿಮ ಶಾಲೆ ಮೈಸೂರು
ಡಾ.ರಹಮತ್ ತರೀಕೆರೆ ಕರ್ನಾಟಕದಲ್ಲಿ ಗಾಂಧಿಗೆ ಸಂಬಂಧಿಸಿದಂತೆ ಪರಸ್ಪರ ವಿರುದ್ಧವೆನಿಸುವ ವಿದ್ಯಮಾನಗಳು ಜರುಗುತ್ತಿವೆ. ಉದಾ ಹರಣೆಗೆ- ೧. ಗಾಂಧಿ ಹಂತಕ ಗೋಡ್ಸೆ ಮತ್ತು…
ಗಾಂಧಿ ಅಭಿಯಾನ ಅರಿವಿನ ಯಾನ ನಾನು ಮೊದಲೇ ಹೇಳಿರುವಂತೆ, ನಮ್ಮ ತಂದೆ ಭಗಂದರ ರೋಗದಿಂದ ನರಳುತ್ತಿದ್ದರು. ಅವರ ಶುಶ್ರೂಷೆಯ ಅಧಿಕಾಂಶದ ಹೊರೆ…
ದೇವನೂರ ಮಹಾದೇವ ‘ಹಾಡುಪಾಡು ರಾಮು’ ಎಂದೇ ಖ್ಯಾತರಾಗಿದ್ದ ಟಿ.ಎಸ್.ರಾಮಸ್ವಾಮಿಯವರು ನೆಲಗನ್ನಡಕ್ಕೆ ಅನುವಾದಿಸಿರುವ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯ ಲೋಕಾರ್ಪಣೆ ಶನಿವಾರ ಸಂಜೆ…
ನವೀನ್ ಡಿಸೋಜ ೪ ತಿಂಗಳಿನಿಂದ ಬಂದ್ ಆಗಿದ್ದ ಮುಗಿಲುಪೇಟೆ ಖ್ಯಾತಿಯ ಪ್ರವಾಸಿ ತಾಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ…
ಕೆ.ಬಿ.ರಮೇಶನಾಯಕ ಮೈಸೂರು: ತವರಿನವರೇ ಮುಖ್ಯಮಂತ್ರಿಯಾಗಿದ್ದಾಗ ಹತ್ತಾರು ಯೋಜನೆಗಳು ಮಂಜೂರಾಗಿದ್ದರೆ, ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ…
ಕೆ.ಪಿ.ಮದನ್ ಮೈಸೂರು: ಹಲವೆಡೆ ಬೀದಿ ನಾಯಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವರದಿಗಳು ಪ್ರಕಟವಾಗುತ್ತಿವೆ. ಇತ್ತ ನಗರದ ಆಸುಪಾಸಿನಲ್ಲಿರುವ ಕೆಲ ಬಡಾವಣೆಗಳ…