ಹೆಚ್.ಎಸ್. ದಿನೇಶ್ಕುಮಾರ್
ಪಡಿತರ ವಿತರಣೆಯಲ್ಲಿ ರಾಜ್ಯದಲ್ಲೇ ೩ನೇ ಸ್ಥಾನದಲ್ಲಿರುವ ಮೈಸೂರಿನಲ್ಲೂ ಸಮಸ್ಯೆ
ಮೈಸೂರು: ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕ ಕಾಯ್ದುಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಬಯೊಮೆಟ್ರಿಕ್ ವ್ಯವಸ್ಥೆಗೆ ಸರ್ವರ್ ಸಮಸ್ಯೆಯಿಂದಾಗಿ ಪಡಿತರಚೀಟಿದಾರರು ಬಿರು ಬೇಸಿಗೆಯ ಬಿಸಿಲಿನಲ್ಲಿ ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾದು ನಿಲ್ಲುವಂತಾಗಿದೆ.
ತಿಂಗಳಿನಲ್ಲಿ ಕನಿಷ್ಠ ೭ ರಿಂದ ೮ ದಿನಗಳ ಕಾಲ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಕಾಡುತ್ತಿದೆ. ಇದರಿಂದಾಗಿ ಪಡಿತರಚೀಟಿದಾರರು ಕೆಲಸ ಕಾರ್ಯಗಳನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಮೈಸೂರು ನಗರದಲ್ಲಿ ೨೧೯, ಜಿಲ್ಲೆಯಲ್ಲಿ ೧,೬೯೦ ನ್ಯಾಯಬೆಲೆ ಅಂಗಡಿಗಳಿವೆ. ಈ ಹಿಂದೆ ಪಡಿತರ ಪಡೆಯಲು ಸರಳ ಹಾಗೂ ಜನಸ್ನೇಹಿ ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಆಧಾರಿತ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಕಾಲ ಕ್ರಮೇಣ ಒಟಿಪಿ ಆಧಾರಿತ ವ್ಯವಸ್ಥೆ ನಿಲ್ಲಿಸಿ, ಫಲಾನುಭವಿಗಳ ಬಯೊಮೆಟ್ರಿಕ್ ಪಡೆದು ಪಡಿತರ ವಿತರಿಸಲಾಗುತ್ತಿದೆ. ಬಯೊಮೆಟ್ರಿಕ್ ಕಡ್ಡಾಯದಿಂದಾಗಿ ಪಡಿತರ ಪಡೆಯುವುದೇ ಈಗ ಬಹುದೊಡ್ಡ ಸವಾಲಾಗಿದೆ.
ನಗರ ಪ್ರದೇಶದಲ್ಲಿ ಇಂಟರ್ನೆಟ್ ವ್ಯವಸ್ಥೆ ಸರಿ ಇದ್ದರೂ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇಂಟರ್ನೆಟ್ ಸಂಪರ್ಕ ಸರಿಯಾಗಿ ಲಭ್ಯವಿಲ್ಲ. ಇದರಿಂದ ಸರ್ವರ್ ಸಮಸ್ಯೆ ನಗರ ಪ್ರದೇಶಗಳಿಗಿಂತ ಹಳ್ಳಿಗಾಡು, ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಾಗಿದೆ. ಇದರ ಜೊತೆಗೆ ಇಲಾಖೆಯ ಅಂತರ್ಜಾಲ ತಾಣ ಸಹ ಸರಿಯಾಗಿ ಕಾರ್ಯರ್ವಹಿಸುತ್ತಿಲ್ಲ. ಇದರಿಂದ ಬಯೊಮೆಟ್ರಿಕ್ ಯಂತ್ರಗಳು ಕೆಲಸ ಮಾಡದೆ ಫಲಾನುಭವಿಗಳು ಪಡಿತರ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಿಂಗಳ ಕೊನೆಯಲ್ಲಿ ಹೆಚ್ಚು: ಸರ್ಕಾರದಿಂದ ಪ್ರತಿ ತಿಂಗಳು ೫ನೇ ತಾರೀಕಿನ ಒಳಗೆ ಆಯಾಯ ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಹಂಚಿಕೆ ಮಾಡಲಾಗುತ್ತದೆ. ಆದರೆ, ಪಡಿತರ ವಿತರಣೆ ಕೆಲವೆಡೆ ೧೦ನೇ ತಾರೀಕಿನ ನಂತರ ಆರಂಭವಾಗುತ್ತದೆ.
ಈ ಅವಧಿಯಲ್ಲಿ ಸರ್ವರ್ ಸಮಸ್ಯೆ ಎಂದಿಗೂ ಆಗಿಲ್ಲ. ಪಡಿತರಚೀಟಿದಾರರು ಇನ್ನು ಸಮಯವಿದೆಯಲ್ಲಾ ಎಂದು ಕಾಲ ದೂಡುತ್ತಾರೆ. ಅಂತಿಮವಾಗಿ ೨೦ನೇ ತಾರೀಕಿನ ನಂತರ ನ್ಯಾಯಬೆಲೆ ಅಂಗಡಿಗಳತ್ತ ಧಾವಿಸುತ್ತಾರೆ. ಹೀಗಾಗಿ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಎದುರಾಗುತ್ತಿದೆ.
ಅಲಾಟ್ಮೆಂಟ್ ಕೂಡ ಒಂದು: ಸರ್ವರ್ ಸಮಸ್ಯೆಗೆ ಮತ್ತೊಂದು ಕಾರಣವೆಂದರೆ ಆಹಾರ ಇಲಾಖೆಯಿಂದ ಪಡಿತರ ಅಲಾಟ್ಮೆಂಟ್ ಕಾರ್ಯ. ಸಾಮಾನ್ಯವಾಗಿ ಪ್ರತೀ ತಿಂಗಳು ೨೦ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪಡಿತರ ವಿತರಣೆಯ ಅಲಾಟ್ ಮೆಂಟ್ ಕೆಲಸ ನಡೆಯುತ್ತದೆ. ಈ ಅವಧಿಯಲ್ಲಿ ಕೂಡ ಸರ್ವರ್ ಸಮಸ್ಯೆ ಕಾಡುತ್ತದೆ.
” ಪಡಿತರವನ್ನು ಸಮರ್ಪಕವಾಗಿ ವಿತರಣೆ ಮಾಡುವಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿ ಇದೆ. ತಿಂಗಳಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಈ ತೊಂದರೆ ಎದುರಾಗುತ್ತದೆ. ಸಮಸ್ಯೆ ಪರಿಹರಿಸಲು ಮೇಲಽಕಾರಿಗಳು ಶ್ರಮಿಸುತ್ತಿದ್ದಾರೆ. ಪಡಿತರ ಪಡೆಯುವವರು ತಿಂಗಳ ಕೊನೆಯವರೆಗೆ ಕಾಯಬಾರದು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಆರಂಭವಾದಾಗಲೇ ರೇಷನ್ ಪಡೆದರೆ ಈ ಸಮಸ್ಯೆಅಷ್ಟಾಗಿ ಕಾಡುವುದಿಲ್ಲ.”
-ಮಂಟೇಸ್ವಾಮಿ, ಜಂಟಿ ನಿರ್ದೇಶಕರು, ಆಹಾರ,ನಾಗರಿಕ ಸರಬರಾಜು ಇಲಾಖೆ, ಮೈಸೂರು
” ರೇಷನ್ ಪಡೆಯಲು ಸರ್ವರ್ ಸಮಸ್ಯೆ ಇದ್ದು, ಕೂಲಿ ಬಿಟ್ಟು ದಿನಗಟ್ಟಲೆ ಕಾಯಬೇಕಿದೆ. ಒಂದು ಗಂಟೆ ಅವಧಿಯಲ್ಲಿ ಇಬ್ಬರು, ಮೂವರಿಂದ ಮಾತ್ರ ಬೆರಳಚ್ಚು ತೆಗೆದುಕೊಳ್ಳುತ್ತಿದ್ದು, ತುಂಬಾ ಸಮಸ್ಯೆ ಆಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಪರಿಹಾರ ನೀಡಬೇಕಿದೆ.”
-ಜವರೇಗೌಡ, ಫಲಾನುಭವಿ
” ಪ್ರತೀ ತಿಂಗಳು ೨೦ನೇ ತಾರೀಕಿನ ನಂತರ ಈ ಸಮಸ್ಯೆ ಎದುರಾಗುತ್ತದೆ. ಪಡಿತರ ಪಡೆಯದೆ ಇರುವವರು ತಿಂಗಳ ಕೊನೆಯಲ್ಲಿ ಒಟ್ಟೊಟ್ಟಿಗೆ ಬರುವುದರಿಂದ ಸರ್ವರ್ ಓವರ್ ಲೋಡ್ ಆಗುವ ಕಾರಣ ಸಮಸ್ಯೆ ಎದುರಾಗುತ್ತದೆ. ಉಳಿದಂತೆ ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದು ರಾಜ್ಯಮಟ್ಟದ ಸಮಸ್ಯೆ ಆದ್ದರಿಂದ ಯಾರಿಗೂ ದೂರು ನೀಡಿಲ್ಲ.”
– ಎನ್. ಮಂಜುನಾಥ್, ಕಾರ್ಯದರ್ಶಿ, ಮೈಸೂರು ಜಿಲ್ಲಾ ಪಡಿತರ ವಿತರಕರ ಸಂಘ
ಪಡಿತರ ವಿತರಣೆಯಲ್ಲಿ ಸ್ವಲ್ಪ ಸಮಸ್ಯೆ:
ಹುಣಸೂರು: ಪಡಿತರ ವಿತರಣೆಯಲ್ಲಿ ಕಳೆದ ತಿಂಗಳವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಈ ತಿಂಗಳು ಸ್ವಲ್ಪ ಸಮಸ್ಯೆ ಇದೆ. ಹಾಗಾಗಿ ನ್ಯಾಯಬೆಲೆ ಅಂಗಡಿಯ ಮಾಲೀಕರನ್ನು ಕರೆದು ಮಾತುಕತೆ ನಡೆಸಿ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧೨ರವರೆಗೆ ಮತ್ತು ಸಂಜೆ ೩ರಿಂದ ರಾತ್ರಿ ೯ರವರೆಗೆ ಪಡಿತರಮ ವಿತರಣೆ ಮಾಡುತ್ತಿದ್ದೇವೆ. ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಆಹಾರ ನಿರೀಕ್ಷಕ ಸರ್ವಣ್ಣ ತಿಳಿಸಿದ್ದಾರೆ .
ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ
ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಈಗಾಗಲೇ ಶೇ.೭೬ರಷ್ಟು ಪಡಿತರ ವಿತರಣೆಯಾಗಿದೆ. ಕಳೆದ ೩-೪ ದಿನಗಳಿಂದ ಸರ್ವರ್ ನಿಧಾನವಾಗಿದ್ದರಿಂದ ಪಡಿತರ ಅಂಗಡಿಗಳಲ್ಲಿ ವಿತರಣೆ ಮಾಡಲು ವಿಳಂಬವಾಗಿತ್ತು. ಎರಡು ದಿನಗಳಿಂದ ಎಂದಿನಂತೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಶೇ.೬೫ರಷ್ಟು ಪಡಿತರ ವಿತರಣೆ ’
ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಶೇ.೬೫ ಪಡಿತರ ಪದಾರ್ಥ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಮಾಡಲಾಗಿದೆ. ಕಳೆದ ಹತ್ತು ದಿನಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು, ಸೋಮವಾರದಿಂದ ಸುಧಾರಿಸಿದೆ. ಸರ್ವರ್ ಸಮಸ್ಯೆಯಿಂದಾಗಿ ಕಾರ್ಡ್ದಾರರಿಗೆ ಪಡಿತರ ವಿತರಣೆ ಮಾಡಲು ಬಹಳಷ್ಟು ಸಮಸ್ಯೆ ಉಂಟಾಗಿದೆ. ಪ್ರತಿದಿನ ೧೦೦ ಜನರಿಗೆ ವಿತರಿಸಬೇಕಾಗಿದ್ದ ಪದಾರ್ಥಗಳನ್ನು ಕೇವಲ ೧೫ ಜನವರಿಗೆ ಮಾತ್ರ ವಿತರಿಸಲಾಗುತ್ತದೆ ಎಂದು ನ್ಯಾಯಬೆಲೆ ಅಂಗಡಿ ಮಾಲೀಕ ಸಂತೋಷ್ ತಿಳಿಸಿದರು. ಸರ್ವರ್ ಸಮಸ್ಯೆ ಇರುವುದರಿಂದ ಎಲ್ಲಾ ನ್ಯಾಯಬೆಲೆ ಮಾಲೀಕರಿಗೆ ಬೆಳಗಿನ ವೇಳೆಯಲ್ಲಿ ಕಾರ್ಡ್ದಾರರ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅದರಂತೆ ಎಲ್ಲರೂ ಕೆಲಸ ನಿರ್ವಹಿಸುತ್ತಿದ್ದು, ಇಂತಹ ಸಮಸ್ಯೆಯಲ್ಲೂ ಜಿಲ್ಲೆಯಲ್ಲಿ ತಾಲ್ಲೂಕು ಪಡಿತರ ಪದಾರ್ಥ ವಿತರಣೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಸರ್ವರ್ ಸಮಸ್ಯೆ ವಿಚಾರವನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಆಹಾರ ನಿರೀಕ್ಷಕರಾದ ಭಾರತಿ ತಿಳಿಸಿದರು
” ಬೆಳಗಿನ ಸಮಯ ಜಮೀನಿಗೆ ಕೆಲಸಕ್ಕೆ ಹೋಗಬೇಕು. ಆದರೆ ರೇಷನ್ ಕೊಡಲು ಮಳಿಗೆಯಲ್ಲಿ ಸರ್ವರ್ ಸಮಸ್ಯೆ ಎಂದು ಹೇಳುತ್ತಾರೆ. ರೇಷನ್ ಪಡೆಯಲು ಪ್ರತಿದಿನ ದಿನವಿಡೀ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿಗೆ ಹೋಗದಿದ್ದರೆ ಹಣ ಸಿಗುವುದಿಲ್ಲ. ಹೀಗಾಗಿ ಉಚಿತ ಪಡಿತರ ಪಡೆದರೂ ದಿನದ ಕೂಲಿ ಕಳೆದುಕೊಳ್ಳುವಂತಾಗಿದೆ.”
-ಅಂಕಯ್ಯ, ಫಲಾನುಭವಿ
ಬೆಂಗಳೂರು: ಅಧಿಕಾರಿ ಮುಂದುವರಿಸಲು ಹಾಗೂ ಪದತ್ಯಾಗ ಮಾಡಲು ಸಿದ್ದರಾಮಯ್ಯನವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಮುಂದೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎನ್ನವುದು…
ಜಕಾರ್ತ: ಇಂಡೋನೇಷ್ಯಾದ ಜಕಾರ್ತಾ ಹೊರವಲಯದಲ್ಲಿ ಎರಡು ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 81…
ವಿಮಾ ಕಂಪೆನಿಗಳು ರೈತರ ಬೆಳೆನಷ್ಟ ಪರಿಹಾರದಲ್ಲಿ ವಂಚನೆ ಮಾಡುತ್ತಿವೆ. ಶೇ.೮೦ರಷ್ಟು ರೈತರು ವಿಮೆಯ ಕಂತು ಪಾವತಿಸಿದರೂ, ಬೆಳೆ ನಷ್ಟಕ್ಕೆ ಒಳಗಾದ…
ಬಿಸಿಲಿನ ತಾಪ ಹೆಚ್ಚಾಗಿದ್ದು, ರಾಜ್ಯರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಬಾಯಾರಿಕೆಯಿಂದ ಬಳಲುವಂತಾಗಿದೆ.…
ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಕನ್ನಡ ದಿನಪತ್ರಿಕೆಗಳನ್ನು…
ಬೆಂಗಳೂರಿನ ಯಶವಂತಪುರ, ಎಸ್ಎಂವಿಟಿ, ಕೆ.ಆರ್.ಪುರಂ, ರೈಲ್ವೆ ನಿಲ್ದಾಣಗಳಿಂದ ಚಾಮರಾಜನಗರ, ಮೈಸೂರು, ಶಿವಮೊಗ್ಗ, ಕಡೂರು, ತಾಳಗುಪ್ಪ , ಹಾಸನ , ಉಡುಪಿ,…