Andolana originals

೩ ತಿಂಗಳಿಂದ ವಿತರಣೆಯಾಗದ ಪೌಷ್ಟಿಕ ಆಹಾರಗಳ ಕಿಟ್

ಕೃಷ್ಣ ಸಿದ್ದಾಪುರ

ಮಳೆಗಾಲದಲ್ಲಿ ಕಿಟ್ ದೊರಕದೆ ಬಡವರಿಗೆ ಸಂಕಷ್ಟ; ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದಲಿತಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ

ಸಿದ್ದಾಪುರ: ಪರಿಶಿಷ್ಟ ಪಂಗಡಗಳ ಜನಾಂಗದವರ ಹಸಿವು ಮುಕ್ತಗೊಳಿಸಿ, ಅವರು ಆರೋಗ್ಯ ಕಾಪಾಡಿಕೊಳ್ಳಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೂಲಕ ವಿತರಿಸುಲಾಗುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಕಳೆದ ಮೂರು ತಿಂಗಳುಗಳಿಂದ ವಿತರಣೆಯಾಗದಿರುವ ಆರೋಪ ಕೇಳಿ ಬಂದಿದೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಟ್ ಹಾಡಿ, ತಟ್ಟಳ್ಳಿ, ಹಣ್ಣಿನ ತೋಟ, ದಿಡ್ಡಳ್ಳಿ ಹಾಡಿಯ ಸುಮಾರು ೧೫೦ ಕುಟುಂಬಗಳು ತಮಗೆ ಕಳೆದ ಮೂರು ತಿಂಗಳುಗಳಿಂದ ಐ.ಟಿ. ಬಿ.ಟಿ ಇಲಾಖೆಯಿಂದ ಪೌಷ್ಟಿಕ ಆಹಾರ ಕಿಟ್ ದೊರಕದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಪಂಗಡಗಳ ಕುಟುಂಬವೊಂದಕ್ಕೆ ಇಲಾಖೆಯಿಂದ ಮಾಸಿಕ ೨,೨೫೮.೧೪ ರೂ. ಮೊತ್ತದ ೧೪ ವಿವಿಧ ಬಗೆಯ ಪೌಷ್ಟಿಕಾಂಶವುಳ್ಳ ಪಡಿತರಗಳನ್ನು ಒಳಗೊಂಡ ಕಿಟ್‌ನ್ನು ನೀಡಲಾಗುತ್ತಿದೆ. ರಾಜ್ಯದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ೧೧ ತಿಂಗಳವರೆಗೆ ಸರಬರಾಜು ಮಾಡಲು ೧,೧೮.೮೭ ಕೋಟಿ ರೂ. ಗುತ್ತಿಗೆಯ ಟೆಂಡರ್‌ನ್ನು ಆರ್.ಆರ್ ಎಂಟರ್ ಪ್ರೈಸಸ್‌ಗೆ ೧೮.೨.೨೦೨೫ ರಂದು ನೀಡಿ ಆದೇಶಿಸಲಾಗಿದೆ. ಅರಣ್ಯ ಹಾಗೂ ಅರಣ್ಯ ದಂಚಿನಲ್ಲಿ ವಾಸಿಸುವ ಮೂಲ ನಿವಾಸಿ ಪರಿಶಿಷ್ಟ ಪಂಗಡಗಳಾದ ಕೊರಗ, ಜೇನು ಕುರುಬ, ಕಾಡು ಕುರುಬ, ಸೋಲಿಗ, ಎರವ, ಮಲೆಕುಡಿಯ ಸಿದ್ದಿ, ಹಸಲರು, ಗೌಡಲು, ಗೊಂಡ ಹಾಗೂ ಬೆಟ್ಟ ಕುರುಬ ಜನಾಂಗದವರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಅಕ್ಕಿ, ರಾಗಿ, ಗೋಧಿ, ತೊಗರಿ ಬೇಳೆ, ಕಡಲೆಕಾಳು, ಕಡ್ಲೆಬೀಜ, ಅಲಸಂದೆ, ಹುರುಳಿ, ಹೆಸರುಕಾಳು, ಸಕ್ಕರೆ, ಬೆಲ್ಲ,ಮೊಟ್ಟೆ, ಸೂರ್ಯ ಕಾಂತಿ ಎಣ್ಣೆ, ನಂದಿನಿ ತುಪ್ಪ ಸೇರಿದಂತೆ ೧೪ ಬಗೆಯ ಪದಾರ್ಥಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗುತ್ತದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ೫೮೬, ಸೋಮವಾರಪೇಟೆ ತಾಲ್ಲೂಕಿನ ೧,೯೦೮ ಮತ್ತು ವಿರಾಜಪೇಟೆ ತಾಲ್ಲೂಕಿನ ೭,೧೩೭ ಕುಟುಂಬಗಳೂ ಸೇರಿದಂತೆ ಒಟ್ಟು ೯,೬೩೧ ಕುಟುಂಬದವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೆಲವೆಡೆ ಕೆಲಸವಿಲ್ಲದೆ ಸಂಕಷ್ಟ ಎದುರಾಗಿದೆ. ವೃದ್ಧರು, ಮಕ್ಕಳು, ಬಾಣಂತಿಯರು ಸೇರಿದಂತೆ ಹಾಡಿ ನಿವಾಸಿಗಳಿಗೆ ಈ ಯೋಜನೆ ದೊರೆತಲ್ಲಿ ಒಂದಷ್ಟು ಉಪಯೋಗವಾಗುತ್ತಿತ್ತು.

ಆದರೆ, ಕಳೆದ ೩ ತಿಂಗಳುಗಳಿಂದ ನಮಗೆ ಈ ಸೌಲಭ್ಯ ದೊರೆಯುತ್ತಿಲ್ಲ ಎಂದು ಸೌಲಭ್ಯಕ್ಕೆ ಆಯ್ಕೆಯಾಗಿರುವ ಫಲಾನುಭವಿಗಳು ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಆಹಾರ ಕಿಟ್ ದೊರಕಿಸಿಕೊಡಬೇಕೆಂದು ಹಾಡಿ ನಿವಾಸಿಗಳು ಆಗ್ರಹಿಸಿದ್ದಾರೆ.

” ಕೊಡಗು ಜಿಲ್ಲೆಯಲ್ಲಿ ವಾಸವಿರುವ ಪರಿಶಿಷ್ಟ ಪಂಗಡಗಳ ಸಮುದಾಯದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕೆಲೆವೆಡೆ ತಡವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”

-ಹೊನ್ನೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ

” ೪ ಹಾಡಿಗಳ ೧೫೦ ಕುಟುಂಬಗಳಿಗೆ ೩ ತಿಂಗಳುಗಳಿಂದ ಪೌಷ್ಟಿಕ ಆಹಾರ ನೀಡದೆ ವಂಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಸಮುದಾಯದ ಬಡ ಕುಟುಂಬಗಳ ಆಹಾರ ಕಿಟ್ಗೆ ವ್ಯಯಿಸಬೇಕಾದ ಹಣವನ್ನು ಅರ್ಹ ಫಲಾನುಭವಿಗಳ ಕುಟುಂಬದ ಖಾತೆಗೆ ಜಮಾ ಮಾಡದೇ ಇದ್ದಲ್ಲಿ ಸಂಘಟನೆ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಲಾಗುವುದು.”

-ರಮೇಶ್, ಜಿಲ್ಲಾಧ್ಯಕ್ಷರು, ದಲಿತ ರೈಟ್ಸ್ ಮೂಮೆಂಟ್

” ರಾಜ್ಯ ಸರ್ಕಾರವು ಬುಡಕಟ್ಟು ಜನಾಂಗದವರಿಗಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿತ್ತು. ಕೆಲಸವಿಲ್ಲದೇ ಬಡತನದಿಂದ ಬಳಲುವ ಹಾಡಿ ನಿವಾಸಿಗಳಿಗೆ ಆಹಾರ ಪದಾರ್ಥಗಳು ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದವು. ಆದರೆ ಕಳೆದ ಮೂರು ತಿಂಗಳುಗಳಿಂದ ಯಾವುದೇ ಪದಾರ್ಥಗಳು ಸಿಕ್ಕಿಲ್ಲ. ಆಹಾರ ಕಿಟ್ ಸರಬರಾಜು ಮಾಡುವ ಟೆಂಡರ್ ಅನ್ನು ಪ್ರಾಮಾಣಿಕ ಗುತ್ತಿಗೆದಾರರಿಗೆ ನೀಡಿದರೆ ಸಮಸ್ಯೆ ಬಗೆಹರಿಯಲಿದೆ.”

-ಇಂದಿರಾ, ಹಾಡಿ ನಿವಾಸಿ

” ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೌಲಭ್ಯ ವಿಸ್ತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಜನಪ್ರತಿನಿಧಿಗಳ ಕಡೆಗಣನೆಯಿಂದ ಕಲ್ಯಾಣ ಕಾರ್ಯಗಳಿಗೆ ಬಳಕೆಯಾಗ ಬೇಕಿದ್ದ ಹಣ ಈ ಸಮುದಾಯದ ಕೈ ತಪ್ಪುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.”

-ಕೆ.ವಿ ಸುನೀಲ್, ಪರಿಶಿಷ್ಟ ಜಾತಿ ಪಂಗಡಗಳ ಹಿತರಕ್ಷಣಾ ಸಮಿತಿ ಸದಸ್ಯ

ಆಂದೋಲನ ಡೆಸ್ಕ್

Recent Posts

ಹನೂರು| ಆಟೋ ಹಾಗೂ ಕಾರಿನ ನಡುವೆ ಡಿಕ್ಕಿ: ಮೂವರಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ‌ ಮಹದೇಶ್ವರಬೆಟ್ಟ ರಸ್ತೆಯ ತಾಳುಬೆಟ್ಟ–ಕೋಣನಕೆರೆ ಮಾರ್ಗದಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಆಟೋ…

6 hours ago

ನೀಟ್‌ ಪರೀಕ್ಷೆಯ ರದ್ದು, ಕೇಂದ್ರ ಸರ್ಕಾರದ ಬಹು ದೊಡ್ಡ ಹಗರಣ: ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ…

6 hours ago

ಪಾಕಿಸ್ತಾನದಲ್ಲಿ ಭೀಕರ ಬಾಂಬ್‌ ಸ್ಫೋಟ: 9 ಮಂದಿ ಸಾವು

ಪಾಕಿಸ್ತಾನ: ಇಲ್ಲಿನ ವಾಯುವ್ಯ ಭಾಗದ ಮಾರುಕಟ್ಟೆಯೊಂದರಲ್ಲಿ ರಿಕ್ಷಾಗೆ ಅಳವಡಿಸಿದ್ದ ಬಾಂಬ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ…

6 hours ago

ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಮೈಸೂರು ಪ್ರವಾಸ

ಮೈಸೂರು: ನಾಳೆಯಿಂದ ಎರಡು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಸಂಜೆ 5.30ಕ್ಕೆ ವಿಶೇಷ…

6 hours ago

ವನ್ಯಜೀವಿ ಸಂಚಾರವಿರುವ ಚಾರಣಪಥ, ಸಂಚಾರಪಥ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಸಂಚಾರ ಇರುವ ಎಲ್ಲ…

6 hours ago

ನಾಗಮಲೆ ಗ್ರಾಮದಲ್ಲಿ ಎರಡು ಮೇಕೆ ಹೊತ್ತೊಯ್ದ ಚಿರತೆ: ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ…

6 hours ago