ಆರ್. ಟಿ. ವಿಠ್ಠಲಮೂರ್ತಿ
ಅದು ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲ. ಆ ಸಂದರ್ಭದಲ್ಲಿ ಉಪ ಪ್ರಧಾನಿಯಾಗಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಕೇರಳಕ್ಕೆ ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಶದ ರಾಜಕಾರಣದ ಬಗ್ಗೆ ಮಾತನಾಡುತ್ತಾ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಟೀಕಾಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದರ ಸಾಧನೆ ಶೂನ್ಯ ಎಂದು ಅಬ್ಬರಿಸಿದರು. ದೇಶದ ಉಪಪ್ರಧಾನಿ ಈ ರೀತಿ ವಾಗ್ಧಾಳಿ ಮಾಡಿದರೆ ಮುಖ್ಯಮಂತ್ರಿಯಾಗಿದ್ದವರು ಸುಮ್ಮನೆ ಕೂರಲು ಸಾಧ್ಯವೇ? ಹಾಗಂತಲೇ ಆಪ್ತರೆನ್ನಿಸಿಕೊಂಡವರು ಕೃಷ್ಣ ಅವರ ಬಳಿ ಹೋದರು. ಸಾರ್, ಉಪಪ್ರಧಾನಿಗಳು ನಿಮ್ಮ ಮೇಲೆ ಒಂದೇ ಸಮನೆ ವಾಗ್ಧಾಳಿ ನಡೆಸುತ್ತಿದ್ದಾರೆ. ಅವರ ಆರೋಪಕ್ಕೆ ನೀವು ತಕ್ಕ ಉತ್ತರ ನೀಡದಿದ್ದರೆ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಯಾಕೆಂದರೆ ಇವತ್ತು ದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಶಕ್ತಿ ಅಂತಿರುವುದೇ ಕರ್ನಾಟಕದಲ್ಲಿ. ಹೀಗಾಗಿ ನೀವು ಅಡ್ವಾಣಿಯವರಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಸರಿ, ಕೃಷ್ಣ ಅವರೂ ಅಡ್ವಾಣಿ ಅವರಿಗೆ ಉತ್ತರ ನೀಡಲು ತಯಾರಾದರು. ಇದಕ್ಕಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸರ್ಕಾರದ ಸಾಧನೆ ಏನು ಅನ್ನುವುದರ ಇಂಚಿಂಚು ವಿವರ ನೀಡಿದರು. ಅಷ್ಟೇ ಅಲ್ಲ, ನನ್ನ ಸರ್ಕಾರದ ಸಾಧನೆ ಶೂನ್ಯವೇ ಅಂತ ನೀವೇ ನಿರ್ಧರಿಸಿ ಎಂದುಬಿಟ್ಟರು. ಆದರೆ ಇಷ್ಟೆಲ್ಲದರ ನಡುವೆ ಅವರು ತಪ್ಪಿಯೂ ಅಡ್ವಾಣಿ ಅವರ ವಿರುದ್ಧ ಟೀಕೆ ಮಾಡಲಿಲ್ಲ. ಕೇಳಿದರೆ, ಟೀಕೆಗೆ ಪ್ರತಿ ಟೀಕೆ ಉತ್ತರವಲ್ಲ ಎಂದು ಕೂಲ್ ಆಗಿ ಉತ್ತರಿಸಿದರು.
ಕೃಷ್ಣರ ಉತ್ತರದಿಂದ ಕೆಲವರಿಗೆ ನಿರಾಸೆ ಆಯಿತು. ಏಕೆಂದರೆ ಅಡ್ವಾಣಿ ಅವರ ವಿರುದ್ಧ ಕೃಷ್ಣ ಟೀಕಾಪ್ರಹಾರ ನಡೆಸಿದ್ದರೆ ಅದು ರಾಷ್ಟ್ರ ಮಟ್ಟದ ಸುದ್ದಿಯಾಗುತ್ತಿತ್ತು ಎಂಬುದು ಅವರ ಹಳಹಳಿಕೆ. ಅಂದ ಹಾಗೆ ಇದೊಂದು ಘಟನೆ ಅಂತಲ್ಲ, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ದಲ್ಲಿ ಎಸ್. ಎಂ. ಕೃಷ್ಣ ಅಗತ್ಯ ಮೀರಿ ಯಾವತ್ತೂ ಮಾತನಾಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಯಾವಾಗ ಮಾತನಾಡಬೇಕು? ಯಾವಾಗ ಮೌನ ಧರಿಸಬೇಕು ಎಂಬುದು ಗೊತ್ತಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಮಾತು ಜ್ಯೋತಿರ್ಲಿಂಗವಾಗುವುದು ಹೇಗೆ ಅಂತ ಅವರಿಗೆ ಗೊತ್ತಿತ್ತು. ಹೀಗಾಗಿ ಅವರು ಯಾವ ಸಂದರ್ಭದಲ್ಲೇ ಬಾಯಿ ತೆರೆಯಲಿ, ಅವರೇನು ಹೇಳುತ್ತಾರೆ? ಎಂಬ ಕುತೂಹಲ ಇದ್ದೇ ಇರುತ್ತಿತ್ತು.
ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…
ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…
ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್ಎನ್ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್ಎನ್ಎಲ್ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…
ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್ಗಳು ಈಗ ಇನ್ಸ್ಟಾಗ್ರಾಂ…