Andolana originals

ಕೋಟೆ ಪುರಸಭೆ ಪೌರಕಾರ್ಮಿಕರು, ನೌಕರರಿಗೆ ೫ ತಿಂಗಳಿಂದ ಸಂಬಳವಿಲ್ಲ

ಮಂಜು ಕೋಟೆ

ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ

ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು ನೌಕರರು, ಅಧಿಕಾರಿಗಳಿಗೆ ಕಳೆದ ೪-೫ ತಿಂಗಳುಗಳಿಂದ ವೇತನ ಪಾವತಿಯಾಗದೆ ಜೀವನ ನಡೆಸಲು ಪರದಾಡುತ್ತಿದ್ದರೂ ಮೇಲಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಒಂದು ತಿಂಗಳು ಸಂಬಳವಾಗದಿದ್ದರೇ ಜೀವನ ನಡೆಸುವುದು ಕಷ್ಟ ಎಂಬ ಈ ದಿನಮಾನದಲ್ಲಿ ೪-೫ ತಿಂಗಳುಗಳಿಂದ ಪುರಸಭೆಯಲ್ಲಿ ಕೆಲಸ ನಿರ್ವಹಿಸುವ ಯಾರಿಗೂ ವೇತನ ಆಗಿಲ್ಲ. ಅಧಿಕಾರಿ ವರ್ಗದವರಿಗೆ ಎರಡು ಮೂರು ತಿಂಗಳು ಪಾವತಿ ಆಗದಿದ್ದರೂ ಕಚೇರಿಯಲ್ಲಿ ಆಗುವ ಅನುಕೂಲದಿಂದ ಸ್ವಲ್ಪ ಮಟ್ಟಿಗಾದರೂ ಜೀವನ ನಡೆಸಬಹುದು. ಆದರೆ, ಉಳಿದ ಐವತ್ತಕ್ಕೂ ಹೆಚ್ಚು ಜನ ಪೌರಕಾರ್ಮಿಕರು ಮತ್ತು ನೌಕರರು ಪ್ರತಿನಿತ್ಯ ಮೇಲಧಿಕಾರಿಗಳ ಬಳಿಗೆ ವೇತನಕ್ಕಾಗಿ ಅಲೆದಾಡುತ್ತಿದ್ದಾರೆ.

ಪುರಸಭೆಯಲ್ಲಿ ಒಟ್ಟು ೫೬ ಮಂದಿ ಅಧಿಕಾರಿಗಳು, ನೌಕರರು, ಪೌರಕಾರ್ಮಿಕರು ಸೇರಿದ್ದು, ೧೫ ಮಂದಿ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಖಾಯಂ ನೌಕರರಿಗೆ ೩ ತಿಂಗಳುಗಳಿಂದ ವೇತನ ನೀಡಿಲ್ಲ. ೧೫ ಮಂದಿ ಪೌರಕಾರ್ಮಿಕರಿಗೆ ೫ ತಿಂಗಳುಗಳಿಂದ ವೇತನ ನೀಡಿಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ೧೫ ಜನ ಪೌರಕಾರ್ಮಿಕರ ಗುತ್ತಿಗೆ ಅವಧಿ ಪೂರ್ಣಗೊಂಡು ಐದು ತಿಂಗಳಾಗಿವೆ. ಅವರಿಂದ ಸ್ವಚ್ಛತಾ ಕೆಲಸ ಮಾಡಿಸಿಕೊಳ್ಳುತ್ತಿದ್ದರೂ ಟೆಂಡರ್ ಪ್ರಕ್ರಿಯೆ ಮೂಲಕ ಅವರಿಗೂ ವೇತನ ನೀಡಿಲ್ಲ.

ಪಟ್ಟಣದ ಪುರಸಭೆಯಲ್ಲಿ ಆಡಳಿತ ವ್ಯವಸ್ಥೆ ತೀವ್ರ ಕುಸಿತ ಕಂಡಿರುವುದರಿಂದ ಒಂದೆಡೆ ಪೌರನೌಕರರು ವೇತನವಿಲ್ಲದೆ ಸಂಕಷ್ಟದಲ್ಲಿದ್ದರೆ ಇನ್ನೊಂದು ಕಡೆ ಜನಸಾಮಾನ್ಯರಿಗೆ ಕಚೇರಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಪ್ರತಿನಿತ್ಯ ಕಚೇರಿಗೆ ಅಲೆದಾಡಿ ಮೇಲಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡು ತಿಂಗಳುಗಳು ಕಳೆದರೂ ಪುರಸಭೆಗೆ ಖಾಯಂ ಮುಖ್ಯಾಧಿಕಾರಿ ಮತ್ತು ಆಡಳಿತಾಧಿಕಾರಿಯನ್ನು ನೇಮಕ ಮಾಡದೇ ಇರುವುದರಿಂದ ಹಿಂದುಳಿದಿರುವ ಪುರಸಭೆ ಮತ್ತಷ್ಟು ಹಿಂದುಳಿದು ಅನೇಕ ಭ್ರಷ್ಟಾಚಾರ ಮತ್ತು ಅವ್ಯವಹಾರಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಅನೇಕ ಯೋಜನೆ ಮತ್ತು ಸವಲತ್ತುಗಳು, ಅನುದಾನವನ್ನು ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ನೀಡಲಾಗುತ್ತಿದ್ದರೂ ಅದನ್ನು ಸಮರ್ಪಕವಾಗಿ ನಿರ್ವಹಿಸುವ ಅಧಿಕಾರಿಗಳೇ ಇಲ್ಲದೆ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಮತ್ತು ಪೌರಕಾರ್ಮಿಕರು ನೌಕರರು, ಅಧಿಕಾರಿಗಳಿಗೆ ಸಂಬಳ ನೀಡದೆ ಸಮಸ್ಯೆ ಎದುರಾಗಿದೆ. ಈಗಲಾದರೂ ಜಿಲ್ಲಾಽಕಾರಿಗಳು, ಶಾಸಕರು, ಸಂಸದರು, ಸಚಿವರು ಇತ್ತ ಗಮನಹರಿಸಬೇಕಾಗಿದೆ.

” ಪೌರಕಾರ್ಮಿಕರಾಗಿ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು, ಇಲ್ಲಿ ನೀಡುವ ಸಂಬಳವನ್ನೇ ನಂಬಿ ಜೀವನ ಮಾಡುತ್ತಿದ್ದೇವೆ. ಐದು ತಿಂಗಳುಗಳಿಂದ ಸಂಬಳವೇ ಆಗಿಲ್ಲ. ನಿತ್ಯವೂ ಜೀವನ ನಡೆಸುವುದೇ ಕಷ್ಟವಾಗಿದೆ. ನಮ್ಮ ಕಷ್ಟದ ಕೂಗು ಜನಪ್ರತಿನಿಽಗಳಿಗೆ ಮತ್ತು ಅಽಕಾರಿಗಳಿಗೆ ತಲುಪುತ್ತಿಲ್ಲ.”

-ನೊಂದ ಪೌರಕಾರ್ಮಿಕ

” ಅನುದಾನದ ಕೊರತೆಯಿಂದ ೩ ತಿಂಗಳುಗಳಿಂದ ಖಾಯಂ ನೌಕರರಿಗೆ ವೇತನ ಪಾವತಿಯಾಗಿರಲಿಲ್ಲ. ಖಾಯಂ ಪೌರಕಾರ್ಮಿಕರು, ನೌಕರರು ಮತ್ತು ಅಧಿಕಾರಿಗಳಿಗೆ ಎರಡು ತಿಂಗಳುಗಳ ಸಂಬಳವನ್ನು ನೀಡಲು ಕ್ರಮಕೈಗೊಂಡಿದ್ದೇನೆ. ೫ ತಿಂಗಳುಗಳಿಂದ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ನೀಡಲಾಗಿಲ್ಲ. ಹೀಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ಐದು ತಿಂಗಳುಗಳ ಸಂಬಳ ನೀಡಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದೇನೆ. ನಾನು ಪ್ರಭಾರ ಮುಖ್ಯಾಧಿಕಾರಿಯಾಗಿರುವುದರಿಂದ ನನ್ನ ವ್ಯಾಪ್ತಿಗೆ ಬರುವಷ್ಟೇ ಕೆಲಸವನ್ನು ಮಾತ್ರ ನಿರ್ವಹಿಸಲು ಸಾಧ್ಯ.”

-ಸಂತೋಷ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ

ಆಂದೋಲನ ಡೆಸ್ಕ್

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

51 mins ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

1 hour ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

1 hour ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

2 hours ago

ಒಬ್ಬ ಹುಡುಗ ಯಾವ ಕಾರಣಕ್ಕೆ ʼಗೇʼ ಆಗುತ್ತಾನೆ?

ವಸುಧೇಂದ್ರ ಹುಡುಗನೊಬ್ಬನಿಗೆ ಮತ್ತೊಬ್ಬ ಹುಡುಗನ ಮೇಲೆ ಅದು ಹೇಗೆ ಆಕರ್ಷಣೆ ಮೂಡುತ್ತದೆ? ಅದು ಅವನ ಆಯ್ಕೆಯೆ? ಕಲಿತ ದುಶ್ಚಟವೆ? ವಿಷಮ…

2 hours ago

ಮ.ಬೆಟ್ಟ | ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

ಹನೂರು : ಶ್ರೀ ಕ್ಷೇತ್ರ ನಾಗಮಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ…

3 hours ago