Andolana originals

ಹೊಸ ವರ್ಷಾಚರಣೆಗೆ ಕೊಡಗು ಸಜ್ಜು

ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಮುನ್ನೆಚ್ಚರಿಕೆ

ಮಡಿಕೇರಿ: ಹೊಸ ವರ್ಷಾಚರಣೆಗೆ ಕೊಡಗು ಜಿಲ್ಲೆ ಸಜ್ಜಾಗಿದೆ. ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಸಿಗರ ಪ್ರವಾಹವೇ ಜಿಲ್ಲೆಗೆ ಹರಿದುಬಂದಿದೆ. ಈ ನಡುವೆ ಹೊಸ ವರ್ಷಾಚರಣೆಯಲ್ಲಿ ಅಕ್ರಮ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸುತ್ತಿದೆ.

ಹೊಸ ವರ್ಷಾಚರಣೆ ಎಂದರೆ ಪಾರ್ಟಿ ಮಾಡುವುದು, ಗೌಜು ಗದ್ದಲ ಮಾಡುವುದೇ ಇತ್ತೀಚೆಗಿನ ಸಂಸ್ಕೃತಿಯಾಗಿದೆ. ಇದಕ್ಕಾಗಿ ಕಾದಿರುವ ಯುವ ಸಮೂಹ ಹಲವು ದಿನ ಗಳಿಂದಲೇ ಪ್ಲಾನ್ ಮಾಡಿಕೊಂಡು ತಮ್ಮೂರಿನಲ್ಲಿ ಅಥವಾ ದೂರದೂರಿಗೆ ನ್ಯೂ ಇಯರ್ ಪಾರ್ಟಿ ಮಾಡಲು ತೆರಳುತ್ತಾರೆ. ಹೀಗೆ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಬಳಕೆ ಆಗಿರುವ ಬಗ್ಗೆಯೂ ರಾಜ್ಯ, ದೇಶದ ಹಲವೆಡೆ ಸುದ್ದಿಯಾಗುತ್ತಲೇ ಇದೆ. ಹೀಗಾಗಿ ಎಲ್ಲೆಡೆ ಈಗ ನ್ಯೂ ಇಯರ್ ಪಾರ್ಟಿ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಕೊಡಗಿನಲ್ಲಿಯೂ ಹೆಚ್ಚು ಪ್ರವಾಸಿಗರು ಹೊಸ ವರ್ಷಾಚರಣೆ ಮಾಡುವುದರಿಂದ ಇಲ್ಲಿಯೂ ಅಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರ ವಹಿಸಲಾಗುತ್ತಿದೆ.

ಜಿಲ್ಲೆಯ ಬಾರ್, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವ ಸಮಯವನ್ನು ಡಿ. ೩೧ರಂದು ವಿಸ್ತರಿಸಬೇಕೆಂದು ಈ ಹಿಂದಿನ ವರ್ಷಗಳಲ್ಲಿ ಹೋಟೆಲ್, ಬಾರ್‌ಗಳ ಮಾಲೀಕರು ಕೋರಿಕೆ ಇಟ್ಟಿದ್ದರು. ಆದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಯಾವುದೇ ಸಮಯ ವಿಸ್ತರಣೆ ನೀಡಿರಲಿಲ್ಲ. ಈ ಬಾರಿಯೂ ಅದೇ ನಿಯಮ ಪಾಲನೆಯಾಗಲಿದ್ದು, ಮಡಿಕೇರಿ ನಗರ ಸೇರಿದಂತೆ ಎಲ್ಲೆಡೆ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಎಂದಿನಂತೆ ಸಮಯಕ್ಕೆ ಸರಿಯಾಗಿ ಬಂದ್ ಆಗಲಿವೆ. ಬೆಂಗಳೂರಿನಂತೆ ರಾತ್ರಿ ೧ ಗಂಟೆ, ೨ಗಂಟೆಯ ವರೆಗೆ ವ್ಯಾಪಾರ ನಡೆಸಲು ಅವಕಾಶ ಇರುವುದಿಲ್ಲ.

ಜಿಲ್ಲೆಯ ನಾನಾ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ನ್ಯೂ ಇಯರ್ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿಯೂ ರಾತ್ರಿ ೧೦ ಗಂಟೆಯ ನಂತರ ಡಿ. ಜೆ ಬಳಕೆಗೆ ಅವಕಾಶವಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ಕೇಕ್ ಕತ್ತರಿಸುವುದು, ಪಾರ್ಟಿ ಮಾಡುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ನಡೆಸುವುದು, ಅಕ್ಕ ಪಕ್ಕದವರಿಗೆ ಕಿರಿಕಿರಿ ಉಂಟು ಮಾಡುವುದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಾರ್, ವೈನ್ ಶಾಪ್‌ಗಳಲ್ಲದೇ ಇತರೆ ಸ್ಥಳಗಳಲ್ಲಿ ಮದ್ಯದ ವಿತರಣೆಗೂ ಅವಕಾಶವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಯಾವುದೇ ಪಾರ್ಟಿಗಳಲ್ಲಿ ಮದ್ಯದ ಬಳಕೆ ಅಬಕಾರಿ ನಿಯಮದಂತೆ ಇರಬೇಕು. ಹೆಚ್ಚುವರಿ ಮದ್ಯದ ದಾಸ್ತಾನು ಮಾಡುವುದು ಹಾಗೂ ವಿತರಿಸುವುದಕ್ಕೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕಾಗಿದ್ದು, ಅನುಮತಿ ಇಲ್ಲದೇ ಪಾರ್ಟಿಗಳಲ್ಲಿ ನಿಗದಿಗಿಂತ ಹೆಚ್ಚಿನ ಮದ್ಯದ ಬಳಕೆ ಕಂಡುಬಂದರೆ ಆಯೋಜಕರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಈಗಾಗಲೇ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟದ ವಿರುದ್ಧ ಸಮರ ಸಾರಿರುವ ಪೊಲೀಸ್ ಇಲಾಖೆ, ಹೊಸ ವರ್ಷಾಚರಣೆಗೆ ಹೆಚ್ಚಾಗಿ ಹೊರ ರಾಜ್ಯದ ಪ್ರವಾಸಿಗರು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟದಂತಹ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ಜಿಲ್ಲೆಯ ಹೋಂಸ್ಟೇ, ಹೋಟೆಲ್‌ಗಳ ಮಾಲೀಕರು ಅತಿಥಿಗಳ ಮೇಲೆ ಕಣ್ಣಿಡಬೇಕು ಪ್ರವಾಸಿಗರ ಚಟುವಟಿಕೆ ಅನುಮಾನಾಸ್ಪದವಾಗಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.

 

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 27 ಶನಿವಾರ

3 hours ago

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

19 hours ago

ವೆನಿಜುವೆಲಾ ಭೂಕಂಪ ; ಮೃತರ ಸಂಖ್ಯೆ 235ಕ್ಕೆ ಏರಿಕೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ…

19 hours ago

ಡಿಕೆಶಿ ಜೊತೆಗಿನ ಬಾಂಧ್ಯವ : ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದಿಷ್ಟು

ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ…

22 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 26, ಶುಕ್ರವಾರ  

1 day ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಕನ್ನಡಕ್ಕೊಂದು ಒಟಿಟಿ, ʼಗರುಡ ಪುರಾಣʼ ಇತ್ಯಾದಿ

‘ವೆನ್ ಯು ವಾಂಟ್ ಟು ಡು ಸಮ್‌ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್‌ಇಟ್’ ಇದು ಅತ್ಯಂತ ಪ್ರಚಲಿತವಿರುವ…

1 day ago