Andolana originals

ಕೊಡಗಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣ

ಜಿಲ್ಲೆಯಲ್ಲಿ 5ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ೨೨ ಸಾವಿರದಷ್ಟು ಇಳಿಕೆ; ಹೈನುಗಾರಿಕೆ ಆಸಕ್ತಿ ಕಳೆದುಕೊಳ್ಳುತ್ತಿರುವ ರೈತರು

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೈನುಗಾರಿಕೆಯ ಆಸಕ್ತಿ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಕಳೆದ ೫ ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ೨೨ ಸಾವಿರದಷ್ಟು ಕಡಿಮೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

6ನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ೨೦ನೇ ರಾಷ್ಟ್ರೀಯ ಜಾನುವಾರು ಗಣತಿಯ ಆಧಾರದಲ್ಲಿ ಜಿಲ್ಲೆಯಲ್ಲಿ ಒಟ್ಟು 76,920 ಜಾನುವಾರುಗಳಿವೆ ಎಂಬ ಮಾಹಿತಿ ಇತ್ತು. ಇತ್ತೀಚೆಗೆ ನಡೆದ ೨೧ನೇ ರಾಷ್ಟ್ರೀಯ ಜಾನುವಾರು ಗಣತಿ ಆಧಾರದ ಮೇಲೆ ಈ ಬಾರಿ ೮ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಜಿಲ್ಲೆಯಲ್ಲಿ ಒಟ್ಟು ೫೪,೮೮೩ ಜಾನುವಾರುಗಳಿವೆ ಎಂಬ ಅಂಶ ತಿಳಿದು ಬಂದಿದೆ. ಸದ್ಯ ಈ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಚುರುಕುಗೊಂಡಿದೆ. ಇದರಿಂದ ಜಿಲ್ಲೆಯಲ್ಲಿ ೨೦ ಮತ್ತು ೨೧ನೇ ರಾಷ್ಟ್ರೀಯ ಜಾನುವಾರು ಗಣತಿ ಪ್ರಕ್ರಿಯೆಯ ನಡುವೆ ಒಟ್ಟು 22,037ಜಾನುವಾರುಗಳು ಇಲ್ಲದಾಗಿರುವುದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಲು ಮುಖ್ಯವಾಗಿ ಕೃಷಿ ಪ್ರದೇಶಗಳು ಕಡಿಮೆಯಾಗುತ್ತಿರುವುದು ಕಾರಣವಾಗಿದೆ. ಭತ್ತದ ಗದ್ದೆಗಳು ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತನೆಯಾಗುತ್ತಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಇದರೊಂದಿಗೆ ಯುವಜನರಲ್ಲಿ ಹೈನುಗಾರಿಕೆಯಲ್ಲಿ ಆಸಕ್ತಿ ಇಲ್ಲದಿರುವುದು, ಕೃಷಿ ಕಾರ್ಮಿಕರ ಅಲಭ್ಯತೆಯೂ ಇದಕ್ಕೆ ಕಾರಣವಾಗಿದೆ.

ಇದನ್ನು ಓದಿ: ದಾನಿಗಳು ನೀಡಿದ ಉತ್ಸವಮೂರ್ತಿಗಳಿಗೆ ದಿಗ್ಬಂಧನ!

ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪೂರಕವಾಗಿ ಹಾಲು ಉತ್ಪಾದನಾ ಕೇಂದ್ರಗಳು ಇಲ್ಲದಿರುವುದೂ ಆಸಕ್ತಿ ಕಡಿಮೆಯಾಗಲು ಕಾರಣವಾಗಿದೆ. ಸದ್ಯ ಕುಶಾಲನಗರದಲ್ಲಿ ೧೩, ಸೋಮವಾರಪೇಟೆಯಲ್ಲಿ ೨೪, ಮಡಿಕೇರಿಯಲ್ಲಿ ೧ ಮತ್ತು ವಿರಾಜಪೇಟೆಯಲ್ಲಿ ೨ ಹಾಲಿನ ಕೇಂದ್ರಗಳಿದ್ದು, ಪೊನ್ನಂಪೇಟೆಯಲ್ಲಿ ಇಲ್ಲ.

ಸದ್ಯ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ರೋಗ ನಿಯಂತ್ರಣದ ೮ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಡಿ.೩ರವರೆಗೆ ನಡೆಯಲಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದಾರೆ.

ಕಾಲುಬಾಯಿ ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಲಸಿಕೆ ನೀಡುವುದು ಅತ್ಯಗತ್ಯವಾಗಿದ್ದು, ಈ ರೋಗದ ವಿರುದ್ಧ ಪ್ರತಿ ೬ ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಕೊಡಿಸಿ ರೋಗ ಬಾರದಂತೆ ತಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಪಶು ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದು, ರೈತರು, ಜಾನುವಾರು ಮಾಲೀಕರು ಜಾನುವಾರುಗಳಿಗೆ ಲಸಿಕೆ ನೀಡಲು ಸಹಕರಿಸಬೇಕೆಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮನವಿ ಮಾಡಿದ್ದಾರೆ.

” ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಲುಬಾಯಿ ಜ್ವರ ರೋಗ ಕಾಣಿಸಿ ಕೊಂಡಿಲ್ಲ. ಸರ್ಕಾರ ಕಾಲಕಾಲಕ್ಕೆ ಲಸಿಕೆ ನೀಡುತ್ತಲೇ ಬರುತ್ತಿದ್ದು, 2030ರ ವೇಳೆಗೆ ಕಾಲು ಬಾಯಿ ರೋಗ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪ್ರತಿ ೬ ತಿಂಗಳಿಗೊಮ್ಮೆ ಲಸಿಕೆ ಹಾಕುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿದೆ.”

-ಡಾ.ಲಿಂಗರಾಜು ದೊಡ್ಡಮನಿ, ಪಶುಪಾಲನಾ ಇಲಾಖೆ ಉಪನಿರ್ದೇಶಕರು

೫೭ ಸಾವಿರ ಲಸಿಕೆ…:

ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದ ಅಭಿಯಾನದಲ್ಲಿ ೮ನೇ ಸುತ್ತಿನಲ್ಲಿ ಲಸಿಕೆ ವಿತರಣೆಗಾಗಿ ಆರಂಭದಲ್ಲೇ ೫೭ ಸಾವಿರ ಲಸಿಕೆ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಂದಾಜು ೫೫ ಸಾವಿರ ಜಾನುವಾರುಗಳಿದ್ದು, ಪ್ರತಿ ಜಾನುವಾರುಗಳಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮಾಹಿತಿ ನೀಡಿದ್ದಾರೆ.

ನವೀನ್ ಡಿಸೋಜ

ಆಂದೋಲನ ಡೆಸ್ಕ್

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

2 hours ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.15  ಶುಕ್ರವಾರ

2 hours ago

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

15 hours ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

16 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

16 hours ago