Andolana originals

ಬಿಳಿಗಿರಿರಂಗನ ಬೆಟ್ಟದ ಮೆಟ್ಟಿಲುಗಳ ಕಾಮಗಾರಿ ನನೆಗುದಿಗೆ

 

4 ಕೋಟಿ ರೂ. ಕಾಮಗಾರಿ ಅಂದಾಜು ವೆಚ್ಚ
2.20 ಕೋಟಿ ರೂ. ಮೆಟ್ಟಿಲುಗಳು, ರೈಲಿಂಗ್ ಅಳವಡಿಕೆಗೆ
15 ಕೋಟಿ ರೂ. ತೇರಿನ ಬೀದಿ ಕಾಂಕ್ರಿಟೀಕರಣಕ್ಕೆ
3.25 ಕೋಟಿ ರೂ. ಜಿಎಸ್ ಟಿ ಕಳೆದು ಉಳಿದ ಅನುದಾನ

ಚಾಮರಾಜನಗರ: ಶ್ವೇತಾದ್ರಿಗಿರಿ ಎಂದೇ ಕರೆಯಲ್ಪಡುವ ಸುಪ್ರಸಿದ್ದ ಪ್ರವಾಸಿ ತಾಣ ಬಿಳಿಗಿರಿರಂಗನಬೆಟ್ಟದಲ್ಲಿ ಭಕ್ತರು ತೇರಿನ ಬೀದಿಯಿಂದ ರಂಗಸ್ವಾಮಿ ದೇವಾಲಯಕ್ಕೆ ತೆರಳಲು ಹೊಸ ಮೆಟ್ಟಿಲು ಅಳವಡಿಸಲು ಅನುದಾನ ಬಿಡುಗಡೆಯಾಗಿ 8 ತಿಂಗಳುಗಳಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ.

ಪ್ರವಾಸೋದ್ಯಮ ಇಲಾಖೆಯ ಅನುದಾನ 4 ಕೋಟಿ ರೂ. ವೆಚ್ಚದಲ್ಲಿ ಹಳೆಯ ಮೆಟ್ಟಲು ಅಳವಡಿಸುವ ಕಾಮಗಾರಿಯ ಉಸ್ತುವಾರಿಯನ್ನು ಲೋಕೋಪಯೋಗಿ ಇಲಾಖೆಯು ವಹಿಸಿಕೊಂಡಿದೆ. ಟೆಂಡರ್ ಕೂಡ ನೀಡ ಲಾಗಿದೆ. ಆದರೆ, ಕಾಮಗಾರಿಯನ್ನು ಆರಂಭಿಸಲು ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ.

ಬಿಳಿಗಿರಿರಂಗನಬೆಟ್ಟದಲ್ಲಿ ತೇರಿನ ಬೀದಿಯಿಂದ ರಂಗನಾಥಸ್ವಾಮಿ ಮೂರ್ತಿ ಸಮೇತ ಅಲಮೇಲಮ್ಮ ದೇವಾಲಯಕ್ಕೆ ತೆರಳಲು ಸುಮಾರು ಅರ್ಧ ಕಿ.ಮೀ. ದೂರ ಮೆಟ್ಟಿಲುಗಳ ಮೂಲಕ ಹೋಗಬಹುದು. 10 ವರ್ಷಗಳ ಹಿಂದೆ ಈ ಮಾರ್ಗದಲ್ಲೇ ಭಕ್ತರು ಕೂಡ ದೇವಾಲಯವನ್ನು ಪ್ರವೇಶಿಸುತ್ತಿದ್ದರು.

ದಿ.ಎಚ್.ಎಸ್.ಮಹದೇವಪ್ರಸಾದ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮತ್ತು ದಿ.ಆ‌ರ್. ಧ್ರುವನಾರಾಯಣ ಅವರು ಸಂಸದರಾಗಿದ್ದಾಗ ರಥದ ಬೀದಿಯಿಂದ ಎಡಕ್ಕೆ ತಿರುವುಗಳು ರಸ್ತೆಯನ್ನು ಡಾಂಬರೀಕರಣ ಮಾಡಿಸಿದರು. ಇದರ ಮೂಲಕ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ದೇವಾಲಯದ ಬಳಿಗೆ ಹೋಗಲು ಅನುಕೂಲವಾಯಿತು. ಮೆಟ್ಟಿಲು ಗಳ ಮೂಲಕ ನಡೆದುಕೊಂಡು ಬೆಟ್ಟಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಯಿತು.

ಕಳೆದ ಬಿಜೆಪಿ ಸರ್ಕಾರದಲ್ಲಿ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಟ್ಟದಲ್ಲಿ ಹಳೆಯ ಮೆಟ್ಟಿಲುಗಳನ್ನು ಬದಲಾಯಿಸಿ ಹೊಸ ಮೆಟ್ಟಿಲು ಅಳವಡಿಸಲು ಪ್ರವಾಸೋ ದ್ಯಮ ಇಲಾಖೆಯಿಂದ 4 ಕೋಟಿ ರೂ. ಘೋಷಿಸಿದ್ದರು. ಟೆಂಡ‌ರ್ ಕೂಡ ನೀಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಅನುದಾನ ಲಭ್ಯವಿಲ್ಲ ಎಂದು ಘೋಷಿಸಿ ಕಾಮಗಾರಿಯನ್ನೇ ರದ್ದು ಮಾಡಿತ್ತು. ಇದನ್ನು ಗಮನಿಸಿದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಭೇಟಿಯಾಗಿ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ಟಿಲುಗಳ ಅವಶ್ಯಕತೆಯಿದೆ ಎಂದು ಮನವರಿಕೆ ಮಾಡಿದ್ದರು. ಬಳಿಕ ಸಚಿವರು 4 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.

ಅಷ್ಟರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಕಾಮಗಾರಿ ಆರಂಭಕ್ಕೆ ಮತ್ತೆ ಅಡಚಣೆಯಾಯಿತು. ಕಳೆದ ತಿಂಗಳು ಸುರಿದ ಧಾರಾಕಾರ ಮಳೆ, ಕೊಳ್ಳೇಗಾಲ ತಾಲ್ಲೂಕಿನ 8 ಗ್ರಾಮಗಳಲ್ಲಿ ಪ್ರವಾಹದ ಭೀತಿ ಕಾರಣದಿಂದ ಮೆಟ್ಟಿಲು ಅಳವಡಿಕೆ ಕಾಮಗಾರಿ ಆರಂಭವಾಗಿಲ್ಲ. ಅತಿ ಶೀಘ್ರದಲ್ಲಿ ಆರಂಭಿಸಲಾಗುವುದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ಟಿಲುಗಳು ಹಳೆಯ ಕಾಲದವು: ಬಿಳಿಗಿರಿರಂಗನಬೆಟ್ಟದಲ್ಲಿ ಹಾಲಿ ಇರುವ ಕಲ್ಲಿನ ಮೆಟ್ಟಿಲುಗಳನ್ನು ಸಮನಾಂತರವಾಗಿ ಜೋಡಿಸಿಲ್ಲ. ಆಕಾರ ಕೂಡ ದೊಡ್ಡದಾಗಿ, ಚಿಕ್ಕದಾಗಿ ಹಾಗೂ ಅಗಲವಾಗಿವೆ. ಕಲ್ಲುಗಳೂ ಸಮತಟ್ಟಾಗಿಲ್ಲದೆ, ಜನರು ಹತ್ತುವುದಕ್ಕೆ, ಇಳಿಯುವುದಕ್ಕೆ ಕಷ್ಟಪಡಬೇಕಿದೆ. ಕಲ್ಲುಗಳು ಪಾದಗಳಿಗೂ ಒತ್ತುತ್ತಿದ್ದು, ವಯಸ್ಸಾದವರು, ಮಕ್ಕಳು ಮೆಟ್ಟಲು ಏರಲು ಬಹಳ ಕಷ್ಟಪಡುವಂತಾಗಿದೆ. ಇವು ಹಳೆಯ ಕಾಲದವು. ಆದ್ದರಿಂದಲೇ ಹೊಸದಾಗಿ ಕಲ್ಲಿನ ಮೆಟ್ಟಿಲುಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ.

ಕೋಟ್ಸ್‌))

ಸದ್ಯದಲ್ಲೇ ಕಾಮಗಾರಿ ಆರಂಭ: ಬೆಟ್ಟಕ್ಕೆ ಮೆಟ್ಟಿಲು ಅಳವಡಿಕೆ ಕಾಮಗಾರಿಯೇ ರದ್ದಾಗಿತ್ತು. ಪ್ರವಾಸೋದ್ಯಮ ಸಚಿವರಿಗೆ ಮನವರಿಕೆ ಮಾಡಿ, ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಟೆಂಡ‌ರ್ ಪ್ರಕ್ರಿಯೆ ಮುಗಿದಿದ್ದು ಸದ್ಯವೇ ಕಾಮಗಾರಿ ಆರಂಭವಾಗಲಿದೆ.
-ಎ.ಆರ್.ಕೃಷ್ಣಮೂರ್ತಿ, ಶಾಸಕರು

ಮಳೆಯಿಂದ ಕಾಮಗಾರಿ ಆರಂಭಿಸಿಲ್ಲ: ಲೋಕಸಭಾ ಚುನಾವಣೆ ಹಾಗೂ ನಿರಂತರ ಮಳೆಯಿಂದ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಟೆಂಡ‌ರ್ ಮುಗಿದಿದ್ದು, ಕೆಲಸ ಆರಂಭಕ್ಕೆ ಆದೇಶ ನೀಡಲಾಗಿದೆ. ಮಳೆಯ ಸನ್ನಿವೇಶವನ್ನು ಗಮನಿಸಿ, ಕೆಲಸ ಪ್ರಾರಂಭಿಸಲಾಗುವುದು.
-ಪುರುಷೋತ್ತಮ್‌, ಲೋಕೋಪಯೋಗಿ ಇಲಾಖೆ, ಕೊಳ್ಳೇಗಾಲ

ಪ್ರಸಾದ್‌ ಲಕ್ಕೂರು

ಚಾಮರಾಜನಗರ ಜಿಲ್ಲೆಯ ಲಕ್ಕೂರು ಗ್ರಾಮದವನಾದ ನಾನು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.ಪತ್ರಿಕೋದ್ಯಮ ಪದವಿ ಪಡೆದಿದ್ದು ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಮಟ್ಟದ ಉಷಾ ಕಿರಣ, ವಿಜಯ ಕರ್ನಾಟಕ, ವಿಜಯವಾಣಿ, ಜಿಲ್ಲಾ ಮಟ್ಟದ ಪ್ರಜಾನುಡಿ, ಜನಮಿತ್ರ ಪತ್ರಿಕೆಗಳಲ್ಲಿ ಚಾ.ನಗರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಕಳೆದ 2 ವರ್ಷಗಳಿಂದ ಆಂದೋಲನ ದಿನಪತ್ರಿಕೆಯಲ್ಲಿ ಚಾ.ನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ.

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

12 mins ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

15 mins ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

21 mins ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

27 mins ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

13 hours ago