ಆಂದೋಲನ 50

ಸಿದ್ಧಾಂತಕ್ಕೆ ಬದ್ಧವಾಗಿ ಕೊನೆ ತನಕವೂ ರಾಜಿಯಾಗದ ಕೋಟಿ : ಪ್ರಸಾದ್‌

ತಿ.ನರಸೀಪುರದಲ್ಲಿ ನಡೆದ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಕಾರ್ಯಕ್ರಮ ಉದ್ಘಾಟಿಸಿದ ಸಂಸದರು

ತಿ.ನರಸೀಪುರ: ರಾಜಶೇಖರ ಕೋಟಿ ಅವರು ಸಿದ್ಧಾಂತವನ್ನು ಬದಿಗೊತ್ತಿ ಅವಕಾಶವಾದಿಯಾಗದೆ ಯಾರೊಂದಿಗೂ ರಾಜಿಯಾಗಲಿಲ್ಲ. ತಮ್ಮ ನಡೆ, ನುಡಿಯಂತೆ ಬದುಕುವ ಜೊತೆಗೆ ಸಮಾಜವಾದಿಯಾಗಿಯೇ ಉಳಿದು ಕೊನೆ ತನಕವೂ ಸಿದ್ಧಾಂತವನ್ನು ಉಳಿಸಿಕೊಂಡರು ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ವಿ.ಶ್ರೀನಿವಾಸಪ್ರಸಾದ್ ಬಣ್ಣಿಸಿದರು.

ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜವಾದಿಗಳಾಗಿದ್ದ ಜಯಪ್ರಕಾಶ್ ನಾರಾಯಣ್, ರಾಮ ಮನೋಹರ ಲೋಹಿಯಾ, ಜಾರ್ಜ್ ಫರ್ನಾಂಡೀಸ್ ಅವರಂತೆ ರಾಜಶೇಖರ ಕೋಟಿ ಅವರು ನಡೆದುಕೊಂಡವರು. ಆರಂಭದಿಂದ ಕೊನೆಯ ತನಕವೂ ತಮ್ಮ ಸಿದ್ಧಾಂತವನ್ನು ಬಿಟ್ಟುಕೊಡಲಿಲ್ಲ. ಪತ್ರಿಕೆಗಾಗಿ ಅವಕಾಶವಾದಿಯಾಗಲಿಲ್ಲ. ಯಾವುದಕ್ಕೂ ರಾಜಿಯಾಗದೆ ಗಟ್ಟಿಯಾಗಿ ನಿಂತವರು ಎಂದು ಗುಣಗಾನ ಮಾಡಿದರು.

ಈಗಾಗಲೇ 50 ವರ್ಷದ ಸಾರ್ಥಕ ಪಯಣ ಕಾರ್ಯಕ್ರಮ ಮೈಸೂರಿನಲ್ಲಿ ಚಾಲನೆಗೊಂಡಿತು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ನಂಜನಗೂಡು ತಾಲ್ಲೂಕಿನಲ್ಲೂ ‘ಆಂದೋಲನ’ ಪತ್ರಿಕೆಯ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆದಿದೆ. ನನ್ನ ಮತ್ತು ‘ಆಂದೋಲನ’ ಪತ್ರಿಕೆಯ ನಡುವಿನ ಸಂಬಂಧ, ಸಂಪರ್ಕ 47 ವರ್ಷಗಳಿಂದಲೂ ಇದೆ. ರಾಜಶೇಖರ ಕೋಟಿ ಅವರು ಅತ್ಯಂತ ಆತ್ಮೀಯರಾಗಿದ್ದರು. ಅವರೊಂದಿಗೆ ತುಂಬಾ ಒಡನಾಟ ಇತ್ತು ಎಂದು ಹೇಳಿದರು.

ರಾಜಶೇಖರ ಕೋಟಿ ಸಮಾಜವಾದಿ, ಲೋಹಿಯವಾದಿ ಚಿಂತಕರಾಗಿದ್ದರು. ಮಾನವೀಯ ಸಂಬಂಧ ಇಟ್ಟುಕೊಂಡು ಚಳವಳಿಯಲ್ಲಿ ಭಾಗಿಯಾಗುತ್ತಿದ್ದರು. ಸಮಾಜದಲ್ಲಿ ಪ್ರಪಾತಕ್ಕೆ ತುಳಿಯಲ್ಪಟ್ಟವರು ಮುಂದೆ ಬರಬೇಕು ಎನ್ನುವ ಕಾರಣಕ್ಕಾಗಿ ಶ್ರಮಿಸಿದರು. ಸಮಾಜವಾದಿ ಚಿಂತಕರ ಬಳಗವೇ ಮೈಸೂರಿನಲ್ಲಿ ಇತ್ತು. ಪಾಟೀಲ್ ಪುಟ್ಟಪ್ಪ ನಡೆಸುತ್ತಿದ್ದ ‘ಪ್ರಪಂಚ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ರಾಜಶೇಖರ ಕೋಟಿ ಅವರು ಬಹಳ ಅನುಭವ ಪಡೆದುಕೊಂಡು ಮೈಸೂರಿಗೆ ಬಂದು ಪತ್ರಿಕೆ ಶುರು ಮಾಡಿದ್ದರಿಂದ ಸ್ನೇಹಿತರ ಬಳಗದೊಂದಿಗೆ ಬೆಳೆಯಲು ಕಾರಣವಾಯಿತು ಎಂದು ತಿಳಿಸಿದರು.

ಯಾವುದೇ ಜಾತಿ, ಧರ್ಮ ಇಲ್ಲದೆ ಶೋಷಿತರ ಪರವಾಗಿ ಕೆಲಸ ಮಾಡಿಕೊಂಡು ಬಂದರು. ಹಣಕಾಸು ಇರಲಿಲ್ಲ. ಪತ್ರಿಕೆ ಓದುವರು ಇರಲಿಲ್ಲ. ಹೀಗಿದ್ದರೂ ತಮ್ಮ ಹೆಗಲ ಮೇಲೆ ಹಾಕಿದ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಕಷ್ಟಪಟ್ಟು ಪತ್ರಿಕೆ ಬೆಳೆಸಿದರು. ಪತ್ರಿಕೆ ನಡೆಸಲು ಸಾಧ್ಯವಾಗದೆ ವಾಪಸ್ ಹೋಗುವ ಮನಸ್ಸು ಮಾಡಿದಾಗ ದೇವನೂರ ಮಹಾದೇವ ಸೇರಿದಂತೆ ಅನೇಕರು ನೈತಿಕ ಸ್ಥೈರ್ಯ ತುಂಬಿ ಸಹಾಯ ಮಾಡಿದರು. ನಂತರ ಪತ್ರಿಕೆ ಓದುಗರನ್ನು ತಲುಪಿ ಜನಪ್ರಿಯತೆ ಗಳಿಸಿಕೊಂಡಿತು. ಕುಗ್ರಾಮದಲ್ಲಿ ‘ಆಂದೋಲನ’ ಓದುವ ಬಳಗವೇ ಹುಟ್ಟಿಕೊಂಡಿತು ಎಂದು ನುಡಿದರು.

ನಾನು ಕಾಂಗ್ರೆಸ್ ಪಕ್ಷ ಬಿಟ್ಟಾಗ ಬಹಳ ನೊಂದುಕೊಂಡಿದ್ದರು. ಸ್ವಲ್ಪ ದಿನಗಳ ಕಾಲ ಮಾತು ಬಿಟ್ಟಿದ್ದರು. ಆದರೆ, ನಾನು ಪಕ್ಷ ಬಿಟ್ಟರೂ ಸಿದ್ಧಾಂತ ಬಿಡಲಿಲ್ಲ ಎನ್ನುವುದು ಗೊತ್ತಾದ ಮೇಲೆ ಮತ್ತೆ ಮಾತನಾಡಿಸಲು ಶುರು ಮಾಡಿದರು. ಕೋಟಿ ಅವರು ನಮ್ಮಿಂದ ದೈಹಿಕವಾಗಿ ದೂರವಾದರೂ ಭೌತಿಕವಾಗಿ ಜೊತೆಗಿದ್ದಾರೆ ಎಂದರು.


‘ಆಂದೋಲನ’ ಅಂದರೆ ರಾಜಶೇಖರ ಕೋಟಿ, ಕೋಟಿ ಅಂದರೆ ‘ಆಂದೋಲನ’ವಾಗಿದೆ. ದೃಶ್ಯ ಮಾಧ್ಯಮದ ಮುಂದೆ ಸುದ್ದಿ ಮಾಧ್ಯಮಕ್ಕೆ ದಿನೇ ದಿನೇ ಬೆಲೆ ಜಾಸ್ತಿಯಾಗುತ್ತಿದೆೆಯೇ ಹೊರತು ಕಡಿಮೆಯಾಗಿಲ್ಲ. ಬದ್ಧತೆ ಮತ್ತು ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದರೆ ಪತ್ರಿಕಾ ಧರ್ಮದ ಬೆಲೆಯೂ ಹೆಚ್ಚಾಗಲಿದೆ. ನಾನಿನ್ನೂ ಮೊದಲು ‘ಆಂದೋಲನ’, ನಂತರ ಮೈಸೂರು ಮಿತ್ರ, ಆಮೇಲೆ ರಾಜ್ಯ ಮಟ್ಟದ ಪತ್ರಿಕೆಗಳನ್ನು ಓದುತ್ತಿದ್ದೇನೆ. ನಿಷ್ಪಕ್ಷಪಾತ ಸುದ್ದಿಗಳು ಬರಬೇಕು.

-ವಿ.ಶ್ರೀನಿವಾಸಪ್ರಸಾದ್, ಸಂಸದರು.

andolanait

Recent Posts

ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ಬೆಂಕಿ ಅವಘಡ ; 68 ಪ್ರಯಾಣಿಕರ ಸ್ಥಳಾಂತರ

ಇಂದೋರ್‌ : ಕೇರಳದ ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಭಾನುವಾರ…

2 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ : ದಕ್ಷಿಣ ರಾಜ್ಯಗಳಲ್ಲಿ ನಡೆಯದ ಬಿಜೆಪಿ ಆಟ

ಬದಲಾವಣೆ ಎನ್ನುವುದು ಜಗದ ನಿಯಮ ಎನ್ನುವ ನಾಣ್ಣುಡಿ ಈಗ ರಾಜಕೀಯ ರಂಗದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಪಶ್ಚಿಮ ಬಂಗಾಳ, ತಮಿಳುನಾಡು…

3 hours ago

ಚಹಾದ ಸುತ್ತಮುತ್ತ ಹೀಗೊಂದು ಮಾತುಕತೆ

ಚಂದ್ರಶೇಖರ್‌ ಮೂರ್ತಿ.ಕೆ.ಎಸ್‌ ಟೀ ಅಂದರೆ ಬೇರೆ, ಚಹ ಅಂದರೆ ಬೇರೆ ಎಂದು ಹೇಳಿ ಚಕಿತಗೊಳಿಸಿದವರು ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ…

3 hours ago

ಗುಲ್‌ಮೊಹರ್‌ ಮೋಹದಲ್ಲಿ ಮೋಹಕ ಮೈಸೂರು

ಸಿರಿ ಮೈಸೂರು ಇದು ಬೇಸಿಗೆ ಕಾಲ. ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್‌ನಲ್ಲಿ ಕ್ಯಾನ್ಸ್ ಫಿಲಂ ಫೆಸ್ಟಿವಲ್ ನಡೆಯಿತು. ಜಗತ್ತಿನಾದ್ಯಂತದಿಂದ ಸುರಸುಂದರ…

5 hours ago

ಬೇಸತ್ತ ಮನಸ್ಸುಗಳು ಸಿನೆಮಾ ನಾಯಕರಿಗೆ ಯಾಕೆ ಮಾರುಹೋಗುತ್ತವೆ?

ವಿಕ್ರಮ್ ಹತ್ವಾರ್ ಮೊನ್ನೆ ತಮಿಳುನಾಡಿನಲ್ಲಿ ಸಿನಿಮಾ ನಟ ವಿಜಯ್ ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಕುರಿತು ಅಲ್ಲಿ ಯಾವೆಲ್ಲ ಸಂಗತಿಗಳು ಪ್ರಭಾವ…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.18 ಭಾನುವಾರ

5 hours ago