ಕೊಲ್ಕತ್ತಾ: ಕೊಲ್ಕತ್ತಾ ನೈಟ್ರೈಡರ್ಸ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1ರನ್ ಗಳ ಹೀನಾಯ ಸೋಲು ಕಂಡಿದೆ. ಇದು ಆರ್ಸಿಬಿಗೆ ಟೂರ್ನಿಯಲ್ಲಿ 6ನೇ ಸೋಲಾಗಿದ್ದು, ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗದ್ದರೂ ಸಹಾ ಆರ್ಸಿಬಿ ಈ ಸೀಸನ್ನಿಂದ ಬಹುತೇಕ ಹೊರಬಿದ್ದಂತೆ ಆಗಿದೆ.
ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಐಪಿಎಲ್ ಸೀಸನ್ 17ರ ಆವೃತ್ತಿಯ ಲೀಗ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 222ರನ್ ಕಲೆಹಾಕಿ 223 ರನ್ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ ಆಲ್ಔಟ್ ಆಗುವ ಮೂಲಕ 221 ರನ್ ಗಳಿಸಿತು.
ಕೆಕೆಆರ್ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನರೈನ್ ಕೇವಲ 10ರನ್ ಗಳಿಗೆ ಸುಸ್ತಾದರು. ಇನ್ನು ಇವರಿಗೆ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ್ದ ಪಿಲಿಪ್ ಸಾಲ್ಟ್ 14 ಎಸೆತ ಎದುರಿಸಿ 7 ಬೌಂಡರಿ, 3ಸಿಕ್ಸರ್ ಸಹಿತ 48 ರನ್ ಬಾರಿಸಿ ನಿರ್ಗಮಿಸಿದರು. ನಂತರ ಬಂದ ರಘುವಂಶಿ 3, ವೆಂಕಟೇಶ್ ಅಯ್ಯರ್ 16ರನ್ ಗಳಿಸಿ ಔಟಾದರು.
ಒಂದೆಡೆ ಭದ್ರವಾಗಿ ನಿಂತು ಇನ್ನಿಂಗ್ಸ್ ಕಟ್ಟಿದ ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 7ಬೌಂಡರಿ ಹಾಗೂ 1ಸಿಕ್ಸರ್ ಸಹಿತ 50ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ರಿಂಕು ಸಿಂಗ್ 24, ರಸೆಲ್ 27 ಹಾಗೂ ರಮಣ್ದೀಪ್ ಸಿಂಗ್ 24 ರನ್ ಗಳಿಸಿ ತಂಡದ ಮೊತ್ತ 200 ಗಡಿ ದಾಟಲು ಸಹಕರಿಸಿದರು.
ಆರ್ಸಿಬಿ ಪರ ಕ್ಯಾಮರೋನ್ ಗ್ರೀನ್, ಯಶ್ ದಯಾಳ್ ತಲಾ ಎರಡೆರೆಡು ವಿಕೆಟ್ ಪಡೆದರು. ಸಿರಾಜ್ ಹಾಗೂ ಫರ್ಗೂಸನ್ ಒಂದೊಂದು ವಿಕೆಟ್ ಪಡೆದರು.
ಆರ್ಸಿಬಿ ಇನ್ನಿಂಗ್ಸ್: ಇನ್ನು ಈ ಬೃಹತ್ ಮೊತ್ತ ಬೆನ್ನತ್ತಿದ ಆರ್ಸಿಬಿಗೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಫಾಫ್ ಕೇವಲ 7 ಹಾಗೂ ವಿರಾಟ್ 18 ರನ್ ಕಲೆಹಾಕಿ ಬೇಗನೇ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಜತೆಯಾದ ವಿಲ್ ಜಾಕ್ ಹಾಗೂ ರಜತ್ ಪಟಿದರ್ ಕೆಕೆಆರ್ ಬೌಲರ್ಗಳನ್ನು ಕಾಡಿದರು. ವಿಲ್ ಜಾಕ್ 55(32) ಪಟಿದರ್ 52(23) ರನ್ ಬಾರಿಸಿ ನಿರ್ಗಮಿಸಿದರು.
ಈ ಇಬ್ಬರ ನಂತರ ಬಂದ ಬೇರಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ. ಕ್ಯಾಮರೋನ್ ಗ್ರೀನ್ 6, ಪ್ರಭುದೇಸಾಯ್ 24, ಲೋಮರೋರ್ 4, ದಿನೇಶ್ ಕಾರ್ತಿಕ್ 25, ಕೊನೆಯ ಓವರ್ನಲ್ಲಿ 21 ಬೇಕಿದ್ದಾಗ ಮಿಚೆಲ್ ಸ್ಟಾರ್ಕ್ಗೆ ಮೂರು ಸಿಕ್ಸರ್ ಬಾರಿಸಿದ ಕರಣ್ ಶರ್ಮಾ 20 ರನ್ ಗಳಿಸಿ ಹೋರಾಟ ತೋರಿದರು ಗೆಲ್ಲಲು ಆಗಲಿಲ್ಲ. ಅಂತಿಮವಾಗಿ ಕೆಕೆಆರ್ ಕೇವಲ 1 ರನ್ ಗಳಿಂದ ಆರ್ಸಿಬಿ ವಿರುದ್ಧ ಗೆದ್ದು ಬೀಗಿತು.
ಕೆಕೆಆರ್ ಪರ ರಸೆಲ್ 3 ವಿಕೆಟ್, ನರೈನ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್, ಸ್ಟಾರ್ಕ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು
ಬೆಳ್ಳಿ ಖಡ್ಗ, ದೇವಿಗೆ ರೇಷ್ಮೆ ಸೀರೆ ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್…
ಹಿಂದಿನ ವರ್ಷದ ಶುಲ್ಕವೇ ಈ ವರ್ಷಕ್ಕೂ ಅನ್ವಯ ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ, ದಂತ ವೈದ್ಯಕೀಯ,…
ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…
ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…
ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…