ಬಹುತೇಕ ವಾಟ್ಸ್ಯಾಪ್ ಯೂನಿವರ್ಸಿಟಿ ಫ್ಯಾಕ್ಟರಿಗಳು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳು ಆಕ್ರಮಣಕಾರಿ ಹಿಂದುತ್ವದ ಆಕ್ರೋಶವನ್ನು ಉತ್ಪಾದಿಸಿ ಮುಖ್ಯಧಾರೆಯ ಟಿವಿ ಸುದ್ದಿ ವಾಹಿನಿಗಳಿಗೆ ಉಣಬಡಿಸುತ್ತವೆ. ಸುದ್ದಿವಾಹಿನಿಗಳು ಉತ್ಪಾದಿಸಿ ಬಡಿಸಿದ ಆಕ್ರೋಶವನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳು ಮತ್ತೊಮ್ಮೆ ಉಂಡು ಘರ್ಜಿಸುತ್ತವೆ. ಈ ಎರಡೂ ಮಾಧ್ಯಮಗಳ ನಡುವೆ ನಿರಂತರ ನಡೆಯುತ್ತಿರುವ ಆಕ್ರೋಶದ ಭರ್ಜರಿ ವಿನಿಮಯವಿದು. ಆಕ್ರಮಣಕಾರಿ ಹಿಂದುತ್ವದ ಪ್ರಯೋಗಶಾಲೆಯಲ್ಲಿ ತಯಾರಿಸಿದ ವಿಷಪಾಕ. ಆಳುವ ಪಕ್ಷದ ವಿಷಯಸೂಚಿಗೆ ನಾಲಗೆಗಳು ನೂರು ಸಾವಿರ ಆಗುವ, ಸಾವಿರಗಳು ಲಕ್ಷಗಳಾಗುವ, ಲಕ್ಷಗಳು ದಶಲಕ್ಷಗಳಾಗುವ ವಿನಿಮಯದ ಆಟವಿದು. ಈ ಅಪಾಯಕಾರಿ ಆಟದಿಂದ ದೂರ ಉಳಿವ ಮುಖ್ಯಧಾರೆಯ ಸುದ್ದಿ ವಾಹಿನಿಗಳನ್ನು ಬೆರಳಲ್ಲಿ ಎಣಿಸಬಹುದೇನೋ.
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಮತ್ತು ಅಲ್ಲಿನ ಶಿಕ್ಷಕ–ವಿದ್ಯಾರ್ಥಿ ಸಮೂಹಕ್ಕೆ ದೇಶದ್ರೋಹಿ ಪಟ್ಟ ಕಟ್ಟಿದ್ದು ಇಂತಹುದೇ ಒಂದು ನಿರ್ಮಿತಿ. ಉಮರ್ ಖಾಲಿದ್ ದೇಶದ್ರೋಹಿ ಲವ್ ಜಿಹಾದ್, ಜಮೀನು ಜಿಹಾದ್ ಎಂಬ ಮಿಥ್ಯೆಗಳು ಕೂಡ ಇದೇ ಸಾಲಿಗೆ ಸೇರಿದಂಥವು. ಆಳುವವರ ಮಡಿಲಲ್ಲಿ ಆಡುವ ಜನವಿರೋಧಿ ಮೀಡಿಯಾ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಅಪಪ್ರಚಾರದ ಹೆದ್ದೆರೆಗಳನ್ನು ಎಬ್ಬಿಸುವ ಬಿಜೆಪಿಯ ಐ.ಟಿ.ಸೆಲ್ ಪಾತ್ರ ಈ ನಿರ್ಮಿತಿಯಲ್ಲಿ ಬಹು ದೊಡ್ಡದು.
ಸಾಮಾಜಿಕ, ರಾಜಕೀಯ ಹೋರಾಟಗಾರ ಉಮರ್ ಖಾಲಿದ್ ಅವರನ್ನು ತಿಹಾರ್ ಜೈಲಿಗೆ ಕಳಿಸಿ ಸಾವಿರಕ್ಕೂ ಹೆಚ್ಚು ದಿನಗಳು ಉರುಳಿವೆ. ಕಪೋಲ ಕಲ್ಪಿತ ಆಪಾದನೆಗಳನ್ನು ಹೊರಿಸಿ, ವಿಚಾರಣೆಯೇ ಇಲ್ಲದೆ ಸಾವಿರ ದಿನಗಳ ಕಾಲ ವ್ಯಕ್ತಿಯೊಬ್ಬನನ್ನು ಜೈಲಿನಲ್ಲಿ ಕೊಳೆಯಿಸುವ ಈ ಕ್ರೌರ್ಯ ಎಣೆಯಿಲ್ಲದ್ದು.
ಉಮರ್ ಖಾಲಿದ್ ಅವರನ್ನು ಬಂಧಿಸಿದ್ದು 2020ರ ಸೆಪ್ಟೆಂಬರ್ 13ರಂದು. 1967ರ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳ ನಿಗ್ರಹ ಕಾಯಿದೆಯನ್ನು (ಯುಎಪಿಎ) ಅವರಿಗೆ ಅನ್ವಯಿಸಲಾಗಿತ್ತು. ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ಜರುಗಿದ್ದ ಕೋಮುಗಲಭೆಗಳ ಸಂಚನ್ನು ಹೂಡಿದರೆಂಬುದು ಈತನ ಮೇಲೆ ಹೊರಿಸಲಾದ ಆಪಾದನೆ. ಮೂರು ವರ್ಷಗಳು ಉರುಳಿದ ನಂತರವೂ ಈತ ವಿಚಾರಣಾಧೀನ ಬಂಧಿ. ಈತನ ಜಾಮೀನು ಅರ್ಜಿಯನ್ನು ಸತತವಾಗಿ ತಿರಸ್ಕರಿಸುತ್ತ ಬರಲಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಯ ಹೊತ್ತು. ಸಿಎಎ ವಿರೋಧಿಗಳನ್ನು ಉದ್ದೇಶಿಸಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಾರ್ವಜನಿಕ ಸಭೆಯಲ್ಲಿ ಹಾಕಿದ್ದ ಘೋಷಣೆ– ದೇಶ್ ಕೇ ಗದ್ದಾರೋಂ ಕೋ, ಗೋಲೀ ಮಾರೋ ಸಾಲೋಂಕೋ…ಗೋಲೀ ಮಾರೋ ಸಾಲೋಂಕೋ ಎಂಬ ಮೂರು ಪದಗಳನ್ನು ಸಭಿಕರಿಂದಲೂ ಕೂಗಿಸಿದ್ದರು ಕೇಂದ್ರ ಸಚಿವರು.
ಇಂತಹ ಪ್ರಚೋದನಕಾರಿ ಭಾಷಣ ಮಾಡಿದ ಸಚಿವ ಠಾಕೂರ್ ಅವರಿಗೆ ಮೋದಿ ಸಚಿವ ಸಂಪುಟದಲ್ಲಿ ರಾಜ್ಯ ಸಚಿವ ಪದವಿಯಿಂದ ಕ್ಯಾಬಿನೆಟ್ ದರ್ಜೆಗೆ ಬಡ್ತಿ ದೊರೆಯಿತು. ದೆಹಲಿ ಕೋಮು ಗಲಭೆಗಳನ್ನು ಪ್ರಚೋದಿಸಿದ ಮತ್ತೊಬ್ಬ ಬಿಜೆಪಿಗ ಕಪಿಲ್ ಮಿಶ್ರ ಅವರ ಕೂದಲೂ ಕೊಂಕಿಲ್ಲ. ಆದರೆ ಅಮಾಯಕ ಉಮರ್ ಖಾಲಿದ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ನೀತಿ ನಿರ್ಧಾರಗಳನ್ನು ಪ್ರಶ್ನಿಸಿದ್ದು, ಸಿ.ಎ.ಎ. ಮತ್ತು ಎನ್.ಆರ್.ಸಿ. ಕಾಯಿದೆಗಳನ್ನು ವಿರೋಧಿಸಿದ್ದು ಉಮರ್ ಖಾಲಿದ್ ‘ಮಹಾಪರಾಧ’.
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮನೋಹರ ಪರ್ವತ ಪಟ್ಟಣ ಪುರೋಲಾ. ಹಿಮದ ಹೊದಿಕೆ ಹೊದ್ದ ಪರ್ವತಗಳು, ದಟ್ಟ ದೇವದಾರು ಮತ್ತು ಶಂಕುಧಾರಿ ವೃಕ್ಷಗಳ ಅಡವಿಗಳ ಪ್ರಾಕೃತಿಕ ವಾತಾವರಣ. ಅಲ್ಲದೆ ಜನ ಪ್ರಿಯ ಪ್ರವಾಸಿ ತಾಣ. ಹಿಂದಿ ಮತ್ತು ಗಢವಾಲೀ ಇಲ್ಲಿ ಆಡುವ ಭಾಷೆಗಳು.
‘ದೇವಭೂಮಿಯನ್ನು ಉಳಿಸಿ, ಜಿಹಾದಿಗಳನ್ನು ಓಡಿಸಿ’ ಎಂಬ ಘೋಷಣೆಯ ರಣಕೇಕೆ ಇತ್ತೀಚಿನ ದಿನಗಳಲ್ಲಿ ಪುರೋಲಾದಿಂದ ಹೊರಟು ರಾಜ್ಯಾದ್ಯಂತ ಅನುರಣಿಸತೊಡಗಿದೆ. ‘ಮುಸಲ್ಮಾನ ಮುಕ್ತ ಉತ್ತರಾಖಂಡ’ದ ತಹತಹವನ್ನು ಬಡಿದು ಎಬ್ಬಿಸಲಾಗುತ್ತಿದೆ.
ಪುರೋಲಾದ ಈ ದ್ವೇಷಮಯ ವಿದ್ಯಮಾನದಲ್ಲಿ ನಿರ್ದಿಷ್ಟ ವಿನ್ಯಾಸವನ್ನು ಗುರುತಿಸಲಾಗಿದೆ. ಉತ್ತರಾಖಂಡದ ಉದ್ದಗಲಕ್ಕೆ ಹೆಣೆಯಲಾಗುತ್ತಿರುವ ಕೋಮುವಾದಿ ವಿನ್ಯಾಸವಿದು. 2021ರ ಡಿಸೆಂಬರ್ ತಿಂಗಳಲ್ಲಿ ಹರಿದ್ವಾರದಲ್ಲಿ ಜರುಗಿದ ಧರ್ಮ ಸಂಸತ್ತಿನಲ್ಲಿ ಜನಾಂಗೀಯ ಹತ್ಯೆಯ ಕರೆ ನೀಡಲಾಗಿತ್ತು. ಅಂದಿನಿಂದಲೂ ದೇವಭೂಮಿಯ ಸ್ಥಾಪನೆ ಮತ್ತು ಮುಸಲ್ಮಾನರ ಉಚ್ಚಾಟನೆಯ ಕೂಗುಗಳು ಕೇಳಿ ಬರುತ್ತಲೇ ಇವೆ.
ಕಳೆದ ಮೇ 26ರಂದು ಪುರೋಲಾದಲ್ಲಿ ಹಿಂದೂ ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳು ಇಬ್ಬರು ಹುಡುಗರೊಂದಿಗೆ ಇದ್ದದ್ದನ್ನು ಹಿಂದೂ ಗುಂಪೊಂದು ಕಂಡು ರೊಚ್ಚಿಗೆದ್ದಿತ್ತು. ಇಬ್ಬರು ಹುಡುಗರ ಪೈಕಿ ಒಬ್ಬನು ಮುಸಲ್ಮಾನನಾಗಿದ್ದುದೇ ಈ ಆಕ್ರೋಶಕ್ಕೆ ಕಾರಣ. ಲವ್ ಜಿಹಾದ್ ಬಣ್ಣ ಬಳಿಯಲಾಯಿತು. ಹುಡುಗಿಯನ್ನು ಅಪಹರಿಸಲಾಗಿದೆ ಎಂದು ವದಂತಿ ಹಬ್ಬಿಸಲಾಯಿತು. ಆದರೆ ಹುಡುಗಿ ತನ್ನ ಮನೆಯಲ್ಲಿದ್ದಾಳೆ. ಹುಡುಗರು ಪೊಲೀಸ್ ವಶದಲ್ಲಿದ್ದಾರೆ.
ಇಡೀ ಪ್ರಕರಣಕ್ಕೆ ಕೋಮುವಾದಿ ತಿರುವು ನೀಡಿ ಪುರೋಲಾದ ಮುಸಲ್ಮಾನರನ್ನು ಬೆದರಿಸಲಾಗಿದೆ. ಮುಸಲ್ಮಾನರ ಅಂಗಡಿಗಳು–ಮನೆಗಳನ್ನು ಖಾಲಿ ಮಾಡಿಸಿ ಊರು ಬಿಡಿಸಲಾಗುತ್ತಿದೆ. ಜಿಲ್ಲಾಡಳಿತ ಮೂಕಪ್ರೇಕ್ಷಕನಾಗಿದೆ. ಮೇ 28ರಂದು ಹಿಂದೂ ರಕ್ಷಾ ಅಭಿಯಾನವು ಪುರೋಲಾದಲ್ಲಿ ಪ್ರದರ್ಶನವೊಂದನ್ನು ನಡೆಸಿತು. ‘ಮುಸಲ್ಮಾನಮುಕ್ತ ಉತ್ತರಾಖಂಡ’ದ ಘೋಷಣೆಗಳನ್ನು ಕೂಗಲಾಯಿತು. ಪ್ರತಿಭಟನಾಕಾರರು ಮುಸಲ್ಮಾನರ ಅಂಗಡಿಗಳ ನಾಮಫಲಕಗಳನ್ನು ಒಡೆದು ಹಾಕಿದರು. ಹಲವು ಅಂಗಡಿಗಳ ಮೇಲೆ ಹಿಟ್ಲರನ ಕಾಲದ ಜರ್ಮನಿಯಲ್ಲಿ ಯಹೂದಿಗಳ ಮನೆಗಳು ಮತ್ತು ಅಂಗಡಿಗಳ ಮೇಲೆ ಬರೆದಂತೆಯೇ ಕಪ್ಪು ಬಣ್ಣದ ಕ್ರಾಸ್ (x) ಬರೆಯಲಾಯಿತು.
‘ಲವ್ ಜಿಹಾದ್’ ಜೊತೆ ಜೊತೆಗೆ ಹಿಂದೂಗಳ ಜಮೀನನ್ನು ಕಬಳಿಸುವ ‘ಜಮೀನು ಜಿಹಾದ್’ನಲ್ಲೂ ಮುಸಲ್ಮಾನರು ತೊಡಗಿದ್ದಾರೆ ಎಂಬ ಮತ್ತೊಂದು ಗುಮ್ಮನನ್ನು ಬಡಿದೆಬ್ಬಿಸಲಾಗಿದೆ. ಉತ್ತರಾಖಂಡದ ಬಿಜೆಪಿ ಸರ್ಕಾರವೇ ಈ ಅಪಪ್ರಚಾರದ ಮುಂಚೂಣಿಯಲ್ಲಿದೆ. ‘ದಿ ವೈರ್’ ಅಂತರ್ಜಾಲ ಸುದ್ದಿತಾಣ ಮಾಹಿತಿ ಹಕ್ಕಿನ ಮೇರೆಗೆ ಇತ್ತೀಚೆಗೆ ಉತ್ತರಾಖಂಡ ಸರ್ಕಾರಕ್ಕೆ ಕೇಳಿ ಪಡೆದ ಮಾಹಿತಿ ಈ ಜಿಹಾದ್ಗಳ ಮಿಥ್ಯೆಯ ಟೊಳ್ಳನ್ನು ಬಯಲಿಗೆಳೆದಿದೆ.
ಪ್ರಶ್ನೆ– ‘ಜಮೀನು ಜಿಹಾದ್’ ಪದಪುಂಜವನ್ನು ಉತ್ತರಾಖಂಡ ಸರ್ಕಾರ ಹೇಗೆ ವ್ಯಾಖ್ಯಾನಿಸುತ್ತದೆ?
ಉತ್ತರ–ಮಾಹಿತಿ ಲಭ್ಯವಿಲ್ಲ.
ಪ್ರಶ್ನೆ–ಕಳೆದ ಐದು ವರ್ಷಗಳಲ್ಲಿ ‘ಜಮೀನು ಜಿಹಾದ್’ನ ಎಷ್ಟು ಪ್ರಕರಣಗಳು ಉತ್ತರಾಖಂಡದಲ್ಲಿ ವರದಿಯಾಗಿವೆ?
ಉತ್ತರ–ಮಾಹಿತಿ ಲಭ್ಯವಿಲ್ಲ.
ಪ್ರಶ್ನೆ–ಮಾರಾಟಗಾರರು ಮತ್ತು ಖರೀದಿದಾರರ ಧರ್ಮಗಳನ್ನು ಆಧರಿಸಿ ಜಮೀನು ಮಾರಾಟ–ಖರೀದಿಯ ಮಾಹಿತಿಯನ್ನು ಉತ್ತರಾಖಂಡ ಸರ್ಕಾರ ಹೊಂದಿದೆಯೇ?
ಉತ್ತರ– ಇಲ್ಲ.
ಪ್ರಶ್ನೆ–ಜಮೀನು ಜಿಹಾದ್ ಪ್ರಕರಣಗಳ ಜಿಲ್ಲಾವಾರು ಮತ್ತು ವರ್ಷವಾರು ಅಂಕಿ ಅಂಶಗಳು– ಮಾಹಿತಿಯನ್ನು ದಯವಿಟ್ಟು ಒದಗಿಸಿ.
ಉತ್ತರ– ಮಾಹಿತಿ ಲಭ್ಯವಿಲ್ಲ.
ಪ್ರಶ್ನೆ– ಜಮೀನು ಜಿಹಾದ್ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಮೇಲೆ ಯಾವ ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ?
ಉತ್ತರ– ಮಾಹಿತಿ ಲಭ್ಯವಿಲ್ಲ.
ಉತ್ತರಾಖಂಡದಲ್ಲಿ ಹಳೆಯ ಪಿಂಚಣಿ ಯೋಜನೆ ಮತ್ತು ಉದ್ಯೋಗಾವಕಾಶಗಳಿಗಾಗಿ ಹಾಹಾಕಾರ ಏಳುತ್ತಿದೆ. ಈ ಹಾಹಾಕಾರವನ್ನು ಅಡಗಿಸಿ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲೆಂದೇ ‘ಲವ್ ಜಿಹಾದ್’ ಮತ್ತು ‘ಜಮೀನು ಜಿಹಾದ್’ ಕೂಗುಗಳನ್ನು ತಾರಕಕ್ಕೆ ಏರಿಸಲಾಗುತ್ತಿದೆ ಎಂಬ ಗುಮಾನಿಯಿದೆ.
ಉತ್ತರಾಖಂಡದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ನಡೆದಿದೆ. ಪುರೋಲಾ ಕೋಮುವಾದಿ ಪ್ರಕರಣವನ್ನು ಆಧರಿಸಿ ಕೋಮುವಾದಿ ಸಂಘಟನೆಗಳು ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿವೆ.
ದ್ವೇಷ ಭಾಷಣಗಳಲ್ಲಿ ತೊಡಗಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಉತ್ತರಾಖಂಡ, ದೆಹಲಿ ಹಾಗೂ ಹಿಮಾಚಲ ಪ್ರದೇಶಕ್ಕೆ ಸುಪ್ರೀಂ ಕೋರ್ಟು 2022ರ ಡಿಸೆಂಬರ್ ತಿಂಗಳಿನಲ್ಲೇ ನಿರ್ದೇಶನ ನೀಡಿತ್ತು. ಆದರೆ ಪುರೋಲಾದಲ್ಲಿ ಕಳೆದ ಎರಡು ವಾರಗಳಿಂದ ಅನಾವರಣಗೊಳ್ಳುತ್ತಿರುವ ಕಳವಳಕಾರಿ ವಿದ್ಯಮಾನವು ಉತ್ತರಾಖಂಡ ರಾಜ್ಯ ಸರ್ಕಾರ ಮತ್ತು ಪೊಲೀಸರು ಈ ದೇಶದ ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ ಎಂಬ ಅಂಶವನ್ನು ಸಾರಿ ಹೇಳಿದೆ. ದ್ವೇಷವನ್ನು ಬಿತ್ತಿ ಬೆಳೆ ತೆಗೆದು ಅದರ ವ್ಯಾಪಾರ ಮಾಡುವುದು ಆತ್ಮಘಾತಕ ಮತ್ತು ಸಮಾಜಘಾತಕ.
ಬೆಂಗಳೂರು : ಕೃಷಿ ಕ್ಷೇತ್ರದ ಅಭಿವೃದ್ಧಿ-ರೈತರ ಕಲ್ಯಾಣದಲ್ಲಿ ಕರ್ನಾಟಕ ದೇಶದಲ್ಲೆ ಅತಿ ಹೆಚ್ಚಿನ ಸಾಧನೆ ಮಾಡಿದ ರಾಜ್ಯವಾಗಿದ್ದು, ಬೆಳೆ ವಿಮೆಯಲ್ಲಿ…
ಮೈಸೂರು : ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಕೆರಳ ಮೂಲದ ಇಬ್ಬರು ದುಷ್ಕರ್ಮಿಗಳು ನಗರದ ವಿದ್ಯಾರ್ಥಿಯೋರ್ವನಿಗೆ 1.80 ಕೋಟಿ…
ಕೊಲಂಬೊ : ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಹತ್ತನೇ ಆವೃತ್ತಿ ನಾಳೆ (ಫೆಬ್ರವರಿ 7) ಭಾರತ ಮತ್ತು ಶ್ರೀಲಂಕಾ…
ಚಾಮರಾಜನಗರ : ಅರಣ್ಯ ಭೂಮಿಯಲ್ಲಿ ನಿಯಮಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು…
ಬೆಂಗಳೂರು : ವಿಆರ್ ಗ್ರೂಪ್ನ ಸಂಸ್ಥಾಪಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಕೊಲೆ ಬೆದರಿಕೆ…
ಮಂಗಳೂರು : ಯತೀಂದ್ರ ಸಿದ್ದರಾಮಯ್ಯ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು. ಈ ಬಗ್ಗೆ ನನಗೆ…