Andolana originals

150 ವರ್ಷಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆ!

ಹೇಮಂತ್‌ಕುಮಾರ್

ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ ೧೫೦ ವಸಂತಗಳನ್ನು ಪೂರೈಸಿದ ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯೂ ಸೇರಿದೆ.

ನವೋದಯ ಕನ್ನಡದ ಸಾಹಿತ್ಯ ಪ್ರಕಾರದ ರತ್ನತ್ರಯರಲ್ಲಿ ಒಬ್ಬರಾದ ಪದ್ಮಶ್ರೀ ಡಾ.ಪು.ತಿ.ನ (ಇನ್ನಿಬ್ಬರು ಕುವೆಂಪು, ದ.ರಾ.ಬೇಂದ್ರೆ) ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ, ರಾಮಾಯಣವನ್ನು ಸಂಸ್ಕೃತದಿಂದ ಕನ್ನಡಕ್ಕೆ ಪ್ರಪ್ರಥ ಮವಾಗಿ ಭಾಷಾನುವಾದ ಮಾಡಿದ ದೇವಶಿಖಾಮಣಿ ಅಳಸಿಂಗಾಚಾರ್ ಮುಂತಾದ ಮಹನೀಯರು ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದಾರೆ.

ಕವಿ ಪು.ತಿ.ನರಿಗಿಂತ ೩೦-೪೦ ವರ್ಷ ಹಿರಿಯರಾದ ೪ನೇ ಸ್ಥಾನಿಕರಾದ ಶ್ರೀನಿವಾಸ ನರಸಿಂಹಾಚಾರ್, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದ ಬಾ.ವಂ.ನರಸಿಂಹಾಚಾರ್ ಅವರು ಕೂಡ ಈ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಮಾಹಿತಿ ಇದೆ. ಮೇಲುಕೋಟೆ ಪುರಸಭೆ ಮತ್ತು ಕಂದಾಯ ಇಲಾಖೆಯ ಸರ್ವೆ ನಂಬರ್‌ಗಳಲ್ಲಿ ಆಸ್ತಿ ದಾಖಲಾಗಿರುವ ಆಧಾರದಲ್ಲಿ ಶಾಲೆ ೧೮೭೫ರಲ್ಲಿ ಆರಂಭವಾಗಿದೆ ಎಂಬುದನ್ನು ಹಿಂದೆ ಇದ್ದ ಮುಖ್ಯ ಶಿಕ್ಷಕರು ದಾಖಲೆಗಳಲ್ಲಿ ನಮೂದಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದ ಕೂಲಿಮಠ, ೧೮೭೫ರಲ್ಲಿ ಶಾಲೆಯಾಗಿ ಪರಿವರ್ತನೆ ಯಾಯಿತು. ನಂತರ ಹಲವಾರು ಸ್ವಾತಂತ್ರ್ಯ ಹೋರಾಟ ಗಾರರನ್ನೂ ಕೊಡುಗೆಯಾಗಿ ನೀಡಿದ ಹಿರಿಮೆ ಈ ಶಾಲೆಯದ್ದಾಗಿದೆ. ಈ ಶಾಲೆಯಲ್ಲಿ ಕಲಿತ ಐದು ಮಂದಿ ವಿದ್ಯಾರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದು ಉಲ್ಲೇಖಾರ್ಹ.

ಪ್ರಸ್ತುತ ಈ ಶಾಲೆಯಲ್ಲಿ ಒಟ್ಟು ೯೨ ವಿದ್ಯಾರ್ಥಿಗಳಿದ್ದಾರೆ. ೧ರಿಂದ ೪ನೇ ತರಗತಿವರೆಗೆ ೬೨ ಮಕ್ಕಳು, ೫ರಿಂದ ೭ನೇ ತರಗತಿವರೆಗೆ ೩೦ ಮಂದಿ ಕಲಿಯುತ್ತಿದ್ದಾರೆ. ಇಲ್ಲಿ ಪ್ರಭಾರ ಮುಖ್ಯ ಶಿಕ್ಷಕ ಸೇರಿ ಒಟ್ಟು ನಾಲ್ವರು ಖಾಯಂ ಶಿಕ್ಷಕರಿದ್ದು, ಒಬ್ಬರು ಅತಿಥಿ ಶಿಕ್ಷಕ, ಇನ್ನೊಬ್ಬರು ಮಕ್ಕಳ ಮನೆಯ ಶಿಕ್ಷಕರಿದ್ದಾರೆ.

೧೯೮೬ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಾಲೆಯ ವಿಸ್ತೃತ ಕಟ್ಟಡವನ್ನು ಉದ್ಘಾಟಿಸಿದರು. ಇಡೀ ಕಟ್ಟಡಕ್ಕೆ ರೀಪ್ಲಾಸ್ಟಿಂಗ್, ಹೊಸಬಣ್ಣ, ಅಡುಗೆ ಮನೆ, ಊಟದ ಹಾಲ್ ನಿರ್ಮಾಣ, ಕೊಠಡಿಗಳ ನಿರ್ಮಾಣ, ಹಳೆಯ ಕಟ್ಟಡಕ್ಕೆ ಭದ್ರತೆ ನೀಡುವ ಕಾರ್ಯ ತುರ್ತಾಗಿ ಆಗಬೇಕಾಗಿದೆ.

ಶಾಲೆಗೆ ಚೈತನ್ಯ ಮುಖ್ಯ ಶಿಕ್ಷಕ: ಶಾಲೆಯು ೨೦೧೧- ೧೨ನೇ ಸಾಲಿನಲ್ಲಿ ೩೨ ವಿದ್ಯಾರ್ಥಿಗಳ ಹಾಜರಾತಿ ಯೊಂದಿಗೆ ಅಳಿವಿನ ಅಂಚಿನಲ್ಲಿದ್ದಾಗ ಸಂತಾನರಾಮನ್ ಪ್ರಭಾರ ಮುಖ್ಯ ಶಿಕ್ಷಕರಾಗಿ ಬಂದರು. ವಿದ್ಯಾರ್ಥಿಗಳ ಸಂಖ್ಯೆಯನ್ನು ೧೦೦ರ ಗಡಿದಾಟಿಸಲು ಶಕ್ತಿಮೀರಿ ಪ್ರಯತ್ನ ಮಾಡಿದ್ದಾರೆ. ಪೀಠೋಪಕರಣ, ಪಾಠೋಪಕರಣ, ಸಣ್ಣಪುಟ್ಟ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ, ಮುಖ್ಯ ಶಿಕ್ಷಕರ ಕೊಠಡಿ, ಕಾಂಪೌಂಡ್ ನಿರ್ಮಾಣ, ಕೋಟ್ಯಂತರ ರೂ. ಮೌಲ್ಯದ ಶಾಲಾ ಜಮೀನು ರಕ್ಷಣೆ… ಹೀಗೆ ಹಲವು ರೀತಿಯ ಸಾರ್ಥಕ ಕೆಲಸವನ್ನು ಮುಖ್ಯ ಶಿಕ್ಷಕರು ಮಾಡಿದ್ದಾರೆ.

ಮೊದಲೆ ರಡು ವರ್ಷ ಸ್ವತಃ ಮುಖ್ಯ ಶಿಕ್ಷಕರೇ ವಾರ್ಷಿಕ ಐವತ್ತು ಸಾವಿರ ರೂ. ನೀಡಿದ ಪರಿಣಾಮ ವಿವಿಧ ಹಳ್ಳಿಗಳಿಂದ ಬರುವ ಮಕ್ಕಳಿಗೆ ಉಚಿತ ವ್ಯಾನ್ ಮಾಡಿಕೊಳ್ಳಲು ಪೋಷಕರಿಗೆ ಧನಸಹಾಯ ಮಾಡಿದ ಕಾರಣ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗುವಂತಾಯಿತು.

ಶತಮಾನದ ಶಾಲೆಯಲ್ಲಿ ಎಲ್ಲವೂ ಉಚಿತ:  ೧೨ ವರ್ಷಗಳಿಂದ ಮೇಲುಕೋಟೆಯ ಶತಮಾನದ ಶಾಲೆಗೆ ಕಲಿಯಲು ದೂರದ ಕೆಲವು ಹಳ್ಳಿಗಳಿಂದ ಮಕ್ಕಳು ಬಂದು ಹೋಗಲು ಪೋಷಕರು ಮಾಡಿಕೊಳ್ಳುವ ವಾಹನ ವ್ಯವಸ್ಥೆಗೆ ವಾರ್ಷಿಕ ೧.೫೦ ಲಕ್ಷ ರೂ. ಕೊಡುಗೆ, ವರ್ಷದಲ್ಲಿ ೪ ದಿನಗಳ ಉಚಿತ ಶೈಕ್ಷಣಿಕ ಪ್ರವಾಸ, ಹೆಚ್ಚುವರಿ ಸ್ವಯಂ ಸೇವಕ ಶಿಕ್ಷಕರ ನೇಮಕ, ಪ್ರತಿ ವರ್ಷ ಬ್ಯಾಗ್, ಲೇಖನ ಸಾಮಗ್ರಿಗಳ ವಿತರಣೆ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ, ಕ್ರೀಡಾಕೂಟ, ಪ್ರತಿಭಾ ಕಾರಂಜಿ ಮತ್ತಿತರ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಲ್ಲಿ ಸಹಭಾಗಿತ್ವ … ಹೀಗೆ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನದಿಂದ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ದಾನಿಗಳ ಕೊಡುಗೆ:  ಬೆಂಗಳೂರು ಸೌಜನ್ಯ ಸೇವಾಶ್ರಮದ ಶ್ರೀರಂಗರಾಜನ್ ತಂಡ, ಶಿಕ್ಷಣ ಪ್ರೇಮಿ ವಕೀಲ ಅರವಿಂದ ರಾಘವನ್, ಬೆಂಗಳೂರು ಮಧು, ಮೈಸೂರಿನ ರೋಟರಿ ಕ್ಲಬ್… ಹೀಗೆ ಹಲವರು ಶಾಲಾಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ದಾನಿಗಳ ಸಹಕಾರ, ಮುಖ್ಯ ಶಿಕ್ಷಕರ ಕೊಡುಗೆಯಿಂದ ೨೦೨೫-೨೬ನೇ ಸಾಲಿನಲ್ಲಿ ಆರಂಭವಾದ ಮಕ್ಕಳ ಮನೆ ತಾಲ್ಲೂಕಿನ ಗಮನ ಸೆಳೆದಿದೆ.

ಶಾಲೆಯಲ್ಲಿರುವ ಸೌಲಭ್ಯಗಳು:  ಸ್ಮಾರ್ಟ ಕ್ಲಾಸ್/ ಪ್ರೊಜೆಕ್ಟರ್:  ವ್ಯವಸ್ಥಿತ ಗ್ರಂಥಾಲಯ ಕ್ರೀಡಾ ಕೊಠಡಿ, ವಿಜ್ಞಾನ ಪ್ರಯೋಗಾಲಯ ಮಕ್ಕಳ ಸುರಕ್ಷತೆಗೆ ಸಿಸಿ ಕ್ಯಾಮೆರಾ ಸ್ಪೋಕನ್ ಇಂಗ್ಲಿಷ್ ತರಬೇತಿ/ ರಂಗ ತರಬೇತಿ ದ್ವಿಭಾಷಾ ಆಂಗ್ಲಮಾಧ್ಯಮ ತರಗತಿಗಳು ಆಕರ್ಷಕ ಪರಿಸರ ಶಾಲೆಯ ಸುತ್ತ ಗಿಡಮರಗಳು

” ಶತಮಾನದ ಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರಭಾರ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸಿ ಮೇಲುಕೋಟೆ ಶತಮಾನದ ಸರ್ಕಾರಿ ಶಾಲೆ ಬಲವರ್ಧನೆ ಮಾಡುತ್ತಾ ಮಾದರಿ ಶಾಲೆಯಾಗಿ ರೂಪಿಸಲು ಶ್ರಮಿಸುತ್ತಿದ್ದೇನೆ. ಇಲ್ಲೇ ಸರ್ಕಾರಿ ಪ್ರೌಢಶಾಲೆಯನ್ನು ಆರಂಭಿಸುವ ಪ್ರಯತ್ನ ನಡೆದಿದೆ.”

-ಎಸ್.ಎನ್.ಸಂತಾನರಾಮನ್, ಪ್ರಭಾರ ಮುಖ್ಯ ಶಿಕ್ಷಕ

” ಶತಮಾನದ ಶಾಲೆಯ ಬಲವರ್ಧನೆಗೆ ಮುಖ್ಯ ಶಿಕ್ಷಕರು ಸಾಕಷ್ಟು ಶ್ರಮವಹಿಸಿದ್ದಾರೆ. ಶಾಲೆಯಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆ ಹಾಗೂ ದಾನಿಗಳ ಪ್ರೋತ್ಸಾಹ ಶಾಲೆಗಿದೆ. ಪೋಷಕರು ಸರ್ಕಾರಿ ಶಾಲಾ ಸೌಲಭ್ಯಗಳನ್ನು ಬಳಸಿಕೊಂಡು ಉಚಿತವಾಗಿ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕು.”

-ಬೆಟ್ಟಸ್ವಾಮಿಗೌಡ, ಸಿಆರ್‌ಪಿ, ಮೇಲುಕೋಟೆ

” ಶತಮಾನದ ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ಇವೆ. ಪೋಷಕರು ಖಾಸಗಿ ವಿದ್ಯಾಸಂಸ್ಥೆಗಳ ವ್ಯಾಮೋಹ ಬಿಟ್ಟು ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಶಾಲೆ ೧೫೦ ವರ್ಷಗಳನ್ನು ಪೂರೈಸಿದ್ದು ಐತಿಹಾಸಿಕ ಸಮಾರಂಭ ಆಯೋಜಿಸಿ ಶಾಲೆಯನ್ನು ಜಿಲ್ಲೆಗೇ ಮಾದರಿಯಾಗಿ ರೂಪಿಸುವ ಯೋಜನೆ ಹೊಂದಿದ್ದೇವೆ. ಈ ಮಹತ್ಕಾರ್ಯಕ್ಕೆ ಹಳೆಯವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡಬೇಕು.”

-ಮಹೇಶ್, ಅಧ್ಯಕ್ಷ, ಎಸ್‌ಡಿಎಂಸಿ

 

 

ಆಂದೋಲನ ಡೆಸ್ಕ್

Recent Posts

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್‌ ರಾಜ್‌ ಹೆಸರು: ನಟ ಏನಂದ್ರು ಗೊತ್ತಾ?

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…

2 hours ago

ನೀಟ್‌ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯಿತಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಲಕ್ನೋ: ಜೂನ್.‌21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್‌ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…

4 hours ago

ಮುಂಬೈನಲ್ಲಿ ನೀರಿಗೆ ಭಾರೀ ಬಿಕ್ಕಟ್ಟು: ಕಟ್ಟಡ ಕಾಮಗಾರಿಗಳಿಗೆ ನೀರು ಬಂದ್‌

ಮುಂಬೈ: ದೇಶದಲ್ಲಿ ಮುಂಗಾರು ಪ್ರವೇಶಿದರೂ ಮುಂಬೈನಲ್ಲಿ ಮಳೆಯ ಕೊರತೆ ಎದುರಾಗಿದೆ. ಮಳೆ ಕೊರತೆ ಎದುರಾದ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ…

5 hours ago

ಕೆಫೆ ‘ರೂಫ್ ಟಾಪ್’ಗೆ ಅನುಮತಿಯೇ ಇರಲಿಲ್ಲ!

ಎಚ್.ಎಸ್.ದಿನೇಶ್‌ಕುಮಾರ್ ಲಿಕ್ಕರ್ ಗ್ಯಾರೇಜ್, ಫಾಕ್ಸ್ ಡೆನ್‌ಗೆ ಮಾತ್ರ ಅನುಮತಿ; ನೋಟಿಸ್ ಜಾರಿ ಮಾಡಿ ಸುಮ್ಮನಾಗಿದ್ದ ಅಧಿಕಾರಿಗಳು?; ಅಬಕಾರಿ ಡಿಸಿ ಅಮಾನತ್ತಿಗೆ…

6 hours ago

ಓದುಗರ ಪತ್ರ: ದುಷ್ಕೃತ್ಯ ನಿಯಂತ್ರಿಸಲು ಕಾನೂನು ರೂಪಿಸಬೇಕು

ಚಾಮರಾಜನಗರ ತಾಲ್ಲೂಕಿನ ಮಸಾಣಪುರ ಗ್ರಾಮದಲ್ಲಿ ಬಾಬಾ ಸಾಹೇಬ ಡಾ.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಿಜಕ್ಕೂ ತಲೆತಗ್ಗಿಸುವಂಥ ಹೇಯ ಕೃತ್ಯವಾಗಿದೆ.ಈ…

10 hours ago

ಓದುಗರ ಪತ್ರ: ಯಶಸ್ಸಿಗೆ ಮೂಲ ಅಡಿಪಾಯವೇ ಸಮಯ ಪಾಲನೆ!

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದೆಯ ಮಾತು ನಿಜಕ್ಕೂ ಇಂದಿನ ಕಾಲಘಟ್ಟಕ್ಕೆ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ಸಮಯ ಪಾಲನೆ…

10 hours ago