ಭಾಗ -೧
ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೈಸೂರು ಸಂಸ್ಥಾನದಲೂ ಅದರ ಕಿಚ್ಚು ಹರಡಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ಉತ್ತಮ ಆಡಳಿತ ಇದ್ದಾಗಿಯೂ ಮೈಸೂರು ಸಂಸ್ಥಾನದಲ್ಲಿ ‘ಮೈಸೂರು ಕಾಂಗ್ರೆಸ್ ಸಮಿತಿ’ ಅಸ್ತಿತ್ವಕ್ಕೆ ಬಂದು ಅದರಡಿಯಲ್ಲಿ ಭಾರತವನ್ನು ಸ್ವಾತಂತ್ರ ದೇಶವನ್ನಾಗಿ ಮಾಡುವುದು ಹಾಗೂ ಇಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ಹೋರಾಟ ನಡೆಸುವ ಮೂಲಕ ತನ್ನ ಕೊಡುಗೆಯನ್ನು ನೀಡಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೫ ಸ್ಥಾಪಿತವಾಯಿತು. ಆಗ ಅದು ಕೆಲವೇ ವಿದ್ಯಾವಂತರಿಗೆ ಸೀಮಿತವಾಗಿತ್ತು. ನಂತರ ಬಾಲಗಂಗಾಧರ ತಿಲಕ್ ಅವರು ‘ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು’ ಅದನ್ನು ಪಡೆದೆ ತೀರುತ್ತೇನೆ ಎಂದು ಹೇಳಿ ಗಣೇಶ ಉತ್ಸವ ಮಾಡಲು ಯುವಕರಿಗೆ ಕರೆಕೊಟ್ಟು ಆ ಮೂಲಕ ಯುವಕರನ್ನು ಸಂಘಟಿಸಿ ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿದರು.
ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರದ ಹೋರಾಟದ ನೇತೃತ್ವದಲ್ಲಿ ದೇಶದ ಜನಸಾಮಾನ್ಯರು ಸಹ ಸಕ್ರಿಯವಾಗಿ ಪಾಲ್ಗೊಳ್ಳತೊಡಗಿದರು.
೧೯೨೪ರಲ್ಲಿ ಕನ್ನಡದ ನೆಲ ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ನಂತರ ಕನ್ನಡದ ನೆಲದಲ್ಲಿ ಕರ್ನಾಟಕದ ಏಕೀಕರಣ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟದ ಕಾವು ಜೊತೆ ಜೊತೆಗೆ ನಡೆಯಿತು.
೧೯೨೭ ರಲ್ಲಿ ಗಾಂಧೀಜಿ ಅವರು ವಿಶ್ರಾಂತಿ ಪಡೆಯಲು ನಂದಿ ಬೆಟ್ಟಕ್ಕೆ ಬಂದಿದ್ದರು.ಆ ಸಂದರ್ಭದಲ್ಲಿ ಗಾಂಧಿ ಅವರು ಮೈಸೂರಿಗೆ ಭೇಟಿ ನೀಡಿದ್ದರು. ಅಷ್ಟೆಯಲ್ಲ ಮಾರ್ಗದಲ್ಲಿ ಚನ್ನಪಟ್ಟಣ ,ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು ಅಲ್ಲದೆ ನಂಜನಗೂಡು ಸೇರಿದಂತೆ ತಗಡೂರು, ಬದನವಾಳ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಲ್ಲಿ ಭಾಷಣ ಮಾಡಿ ಇಲ್ಲಿನ ಜನತೆಯಲ್ಲಿ ಸ್ವಾತಂತ್ರದ ಅರಿವು ಮೂಡಿಸಿದರು. ಆ ವೇಳೆಯಲ್ಲಿ ಇಲ್ಲಿನ ಜನರು ಸ್ವಾತಂತ್ರ ಹೋರಾಟಕ್ಕೆ ಅನುಕೂಲವಾಗುವಂತೆ ಗಾಂಧೀಜಿ ಅವರಿಗೆ ನಿಧಿ ಅರ್ಪಿಸಿದ್ದರು. ಗಾಂಧೀಜಿ ಅವರ ಸರಳತೆ, ಭಾಷಣಗಳಿಂದ ಪ್ರಭಾವಿತರಾದ ನಂಜನಗೂಡು ಹಾಗೂ ಮಂಡ್ಯ ನೆಲದ ಹಳ್ಳಿ ಹಳ್ಳಿಗಳಲ್ಲಿ ಗಾಂಧಿ ಅನುಯಾಯಿಗಳು ಹುಟ್ಟಿಕೊಂಡರು.
ಮೈಸೂರು ಸಂಸ್ಥಾನದಲ್ಲಿ ಬೆಂಗಳೂರಿನ ಒಂದು ಚಿಕ್ಕ ಕೊಠಡಿಯಲ್ಲಿ ‘ಕಾಂಗ್ರೆಸ್ ಕಚೇರಿ’ ತಲೆಯೆತ್ತಿತ್ತು. ಆಗ ಒಂದು ಮೇಜು, ಒಂದು ಪೆಟ್ಟಿಗೆ, ಒಂದು ಟೈಪ್ರೈಟರ್, ಕೆಲವು ಪುಸ್ತಕ ಕಾಗದ ಪತ್ರಗಳು ಮಾತ್ರ ಆ ಕಚೇರಿಯಲ್ಲಿ ಇದ್ದವು. ೧೯೩೭ ರ ವೇಳೆಗೆ ಸಂಯುಕ್ತ ಪ್ರಜಾ ಪಕ್ಷವು ಮೈಸೂರು ಕಾಂಗ್ರೆಸ್ ಸಮಿತಿ ಜೊತೆ ಸೇರಿಕೊಂಡಿತು. ಪ್ರಸಿದ್ಧ ವ್ಯಕ್ತಿಗಳಾದ ಹೆಚ್.ಸಿ.ದಾಸಪ್ಪ, ಕೆ.ಸಿ.ರೆಡ್ಡಿ ಮೊದಲಾದವರು ಕಾಂಗ್ರೆಸ್ ಗೆ ಸೇರಿದರು, ಎಂ.ಎನ್.ಜೋಯಿಸ್, ತಗಡೂರು ರಾಮಚಂದ್ರರಾಯ, ಅಗರಂ ರಂಗಯ್ಯ, ಟಿ.ಸಿದ್ದಲಿಂಗಯ್ಯ, ಕೆ. ಟಿ. ಭಾಷ್ಯಮ್, ಶ್ರೀರಂಗಪಟ್ಟಣದ ವಕೀಲರಾದ ಎ. ಜಿ. ಬಂದಿಗೌಡ, ಮದ್ದೂರಿನ ಎಚ್.ಕೆ. ವೀರಣ್ಣಗೌಡ ಮೊದಲಾದ ಗಣ್ಯರು ಇದ್ದ ‘ಮೈಸೂರು ಕಾಂಗ್ರೆಸ್ ಸಮಿತಿ’ ಮೈಸೂರು ಸಂಸ್ಥಾದಲ್ಲಿ ಪ್ರಬಲ ಪಕ್ಷವಾಗಿ ತಲೆಯೇತ್ತಿತು.
೧೯೩೮ರ ಜನವರಿ ೨೬ ರಂದು ಮೈಸೂರಿನಲ್ಲಿ ಸುಬ್ಬಮ್ಮ ಜೋಯಿಸ್, ತಗಡೂರು ರಾಮಚಂದ್ರರಾಯ ಹಾಗೂ ಅಗರಂ ರಂಗಯ್ಯ ಇವರುಗಳು ತ್ರಿವರ್ಣ ಧ್ವಜಾರೋಹಣ ಮಾಡಲು ಯತ್ನಿಸಿದಾಗ ಅವರನ್ನು ದಸ್ತಗಿರಿ ಮಾಡಿದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರುಗಳು ಮೈಸೂರು ಬಿಟ್ಟು ಬೇರೆ ಕಡೆ ಧ್ವಜ ಹಾರಿಸಬೇಕೆಂದು ಯೋಚಿಸಿದರು.
ಈ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿಕೊಳ್ಳಲು ಶ್ರೀರಂಗಪಟ್ಟಣದ ವಕೀಲರಾಗಿದ್ದ ಎ. ಜಿ. ಬಂದಿಗೌಡರು ವಕೀಲ ವೃತ್ತಿಯನ್ನು ಒಂದೂವರೆ ತಿಂಗಳು ಬಿಟ್ಟು ಈ ಕೆಲಸವನ್ನು ಮಾಡಲು ಇಚ್ಛಿಸದೆ ಮುಂದೆ ಬರಲಿಲ್ಲ, ನಂಜನಗೂಡಿನ ಕೆ.ವಿಶ್ವೇಶ್ವರಗೌಡರು ತಮ್ಮಿಂದ ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದರು.
ಅಂತಹ ಸಂದರ್ಭದಲ್ಲಿ ೧೯೩೧-೩೨ ರಲ್ಲಿ ನಡೆದ ಇರ್ವಿನ್ ನಾಲಾ (ಈಗಿನ ವಿಶ್ವೇಶ್ವರಯ್ಯ ನಾಲಾ) ಚಳವಳಿಯ ನೇತೃತ್ವದಲ್ಲಿ ರೈತ ಸಂಘಟನೆ ಮಾಡಿ ಅನುಭವ ಪಡೆದಿದ್ದ ಮದ್ದೂರಿನ ಎಚ್.ಕೆ. ವೀರಣ್ಣಗೌಡ ಅವರು ಮದ್ದೂರಿನಲ್ಲಿ ನಡೆಸಲು ಅವಕಾಶ ನೀಡುವುದಾದರೆ ಆ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳಿದರು. ಮದ್ದೂರು ಪಟ್ಟಣ ಬೆಂಗಳೂರು- ಮೈಸೂರು ಹೆದ್ದಾರಿ ಮಧ್ಯೆ ಇರುವುದರಿಂದ ಹಾಗೂ ರೈಲ್ವೆ ನಿಲ್ದಾಣ ಅನುಕೂಲ ಮತ್ತು ಶಿಂಷಾ ನದಿಯ ಪರಿಸರ ಇದ್ದಿದ್ದರಿಂದ ಅಂತಿಮವಾಗಿ ಮದ್ದೂರು ರೈಲ್ವೆ ನಿಲ್ದಾಣ ಇದ್ದ ಶಿವಪುರದಲ್ಲಿ ಧ್ವಜ ಸತ್ಯಾಗ್ರಹ ನಡೆಸಲು ತೀರ್ಮಾನಕ್ಕೆ ಬಂದು ಅದಕ್ಕೆ ‘ರಾಷ್ಟ್ರಕೂಟ’ ಎಂದು ಹೆಸರು ಇಡಲಾಯಿತು.
ಮೈಸೂರು ಸಂಸ್ಥಾನದ ಇತಿಹಾಸದಲ್ಲೆ ರಾಷ್ಟ್ರಕೂಟ ಸಮಾವೇಶ ನಡೆಸುವುದು ಅಂದು ದೊಡ್ಡ ಸವಾಲು ಆಗಿತ್ತು. ಮಂಡ್ಯದ ಗೋಪಾಲ ಶೆಟ್ಟರ ಮನೆಯ ಮಹಡಿಯಲ್ಲಿ ಸಭೆ ಸೇರಿ ಶಿವಪುರದ ಅಧಿವೇಶನದ ಎಲ್ಲಾ ಜವಾಬ್ದಾರಿಯನ್ನು ಎಚ್.ಕೆ. ವೀರಣ್ಣಗೌಡರಿಗೆ ವಹಿಸಿದ್ದರು.
ಅಧಿವೇಶನ ನಡೆಸಲು ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಮಂಡ್ಯದ ಉಮ್ಮಡಹಳ್ಳಿ ಮೂಲದ ಮೈಸೂರಿನ ಸಾಹುಕಾರ ಚನ್ನಯ್ಯ ಅವರನ್ನು ರಾಷ್ಟ್ರಕೂಟದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಒಪ್ಪಿಸಲಾಯಿತು. ಉಪಾಧ್ಯಕ್ಷರುಗಳಾಗಿ ಎಚ್.ಸಿ.ದಾಸಪ್ಪ, ಎಸ್.ರಂಗರಾಮಯ್ಯ, ಶಿವಪುರದ ಪಿ. ತಿರುಮಲೇಗೌಡ ಅವರನ್ನು,ಕಾರ್ಯದರ್ಶಿಗಳಾಗಿ ಹೆಚ್.ಕೆ. ವೀರಣ್ಣಗೌಡ ಮತ್ತು ಎ. ಜಿ. ಬಂದಿಗೌಡರನ್ನು ಹಾಗೂ ಖಜಾಂಚಿಯಾಗಿ ಎಂ.ಎನ್.ಜೋಯಿಸ್ ಮತ್ತು ಕೊಪ್ಪದ ಜೋಗಿಗೌಡ ಅವರನ್ನು ಆಯ್ಕೆ ಮಾಡಲಾಯಿತ್ತು. ನೂರು ರೂಪಾಯಿ ಚಂದಾ ಕೊಟ್ಟವರನ್ನು ಸ್ವಾಗತ ಸಮಿತಿ ಸದಸ್ಯರುಗಳನ್ನಾಗಿ, ಐದು ರೂ ಕೊಟ್ಟವರನ್ನು ಪ್ರತಿನಿಧಿಗಳು ಎಂದು ಪರಿಗಣಿಸಲಾಯಿತು.ಶಿವಪುರದಲ್ಲಿ ಸ್ವಾಗತ ಸಮಿತಿಯ ಕಚೇರಿಯನ್ನು ಸ್ಥಾಪಿಸಲಾಯಿತು.
ಸ್ವಾಗತ ಸಮಿತಿಯು ರಾಷ್ಟ್ರಕೂಟ ಸಮಾವೇಶವನ್ನು ೧೯೩೮ ರ ದಿನಾಂಕ ೯ ರಿಂದ ೧೧ರ ವರಗೆ ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮ ನಡೆಸಲು ಶಿವಪುರದ ಪಿ. ತಿರುಮಲೇಗೌಡ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ ಅವಕಾಶ ನೀಡಲು ಒಪ್ಪಿಕೊಂಡರು. (ಮುಂದುವರೆಯುವುದು)
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…