ಎಡಿಟೋರಿಯಲ್

ಆಂದೋಲನ ಓದುಗರ ಪತ್ರ :13 ಶನಿವಾರ 2022

ಪಲಾವ್ ಮತ್ತು ಪೊಲೀಸ್ ಲಾಠಿಯ ರುಚಿ!

ಭಾವೈಕ್ಯತೆ ಮತ್ತು ರಾಷ್ಟ್ರದ ಸಮಗ್ರತೆಯನ್ನು ಬಿತ್ತಬೇಕಾದ ರಾಷ್ಟ್ರೀಯ ದಿನಾಚರಣೆಗಳು ಮತ್ತು ಮಹನೀಯರ ಜಯಂತಿಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ವೇದಿಕೆ ಕಾರ್ಯಕ್ರಮದಂತೆ ನಡೆಸಲ್ಪಡುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೈವಿವಿಯ ಇಂಜಿನಿಯರಿಂಗ್ ವಿಭಾಗದ ಉದ್ಘಾಟನೆಯ ನೆಪದಲ್ಲಿ ಅಮೃತ ಮಹೋತ್ಸವ ಹಾಗೂ ಯುವಜನೋತ್ಸವವೆಂಬ ತ್ರಿವಳಿ ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಕಾರ್ಯಕ್ರಮ ಕುರಿತ ಮಾಹಿತಿಯಿರಲಿಲ್ಲ. ಭಾಷಣದುದ್ದಕ್ಕೂ ತಮ್ಮ ಪಕ್ಷದ ನಾಯಕರನ್ನು ಹೊಗಳುವ ಮಾತುಗಳನ್ನಾಡಿದರೇ ವಿನಃ ಕಾರ್ಯಕ್ರಮಕ್ಕಾಗಿ ತರಗತಿಗಳಿಗೆ ಗೈರಾಗಿ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರುಗಳಿಗೆ ದೇಶ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದೇ ಕೇಳಲಿಲ್ಲ. ವೇದಿಕೆ ನಿರ್ಮಾಣ, ಧ್ವನಿವರ್ಧಕ, ಕುರ್ಚಿಗಳ ವ್ಯವಸ್ಥೆ ಮಾಡುವುದಕ್ಕಾಗಿಯೇ ಕೋಟಿ ಕೋಟಿ ಲೆಕ್ಕ ಹೇಳುವ ಸಂಸದರು, ಉಸ್ತುವಾರಿ ಸಚಿವರು ಮತ್ತು ಪಾಲಿಕೆ ಅಧಿಕಾರಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗದಷ್ಟು ದರಿದ್ರ ಬಂದಿದೆಯೇ? ಒಂದಷ್ಟು ಜನರಿಗೆ ಅಂಗೈಯಗಲದ ಬಾಕ್ಸಿನಲ್ಲಿ ಪ್ರಸಾದದಷ್ಟು ‘ಪಲಾವ್’ ಸಿಕ್ಕಿದ್ದು ಬಿಟ್ಟರೆ ಬಹುತೇಕರಿಗೆ ಪೋಲೀಸರ ಲಾಠಿ ರುಚಿಯೇ ಹೊಟ್ಟೆ ತುಂಬಿಸಿತು!!
– ಮಲ್ಲಿಕಾರ್ಜುನಪ್ಪ ಪಿ. ಮಹಾರಾಜ ಕಾಲೇಜು, ಮೈಸೂರು.


ಕ್ರೀಡಾಸಚಿವರು ಗಮನ ಹರಿಸಲಿ

ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರ ಪದಕ ಬೇಟೆಯು ಉತ್ತಮ ಫಲಿತಾಂಶ ನೀಡಿದೆ. ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಚಿನ್ನದ ಪದಕ ೨೨, ಬೆಳ್ಳಿ ೧೬, ಕಂಚು ೨೩ ಸೇರಿದಂತೆ ೬೧ ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ. ಈ ಹಿಂದಿನ ಕ್ರೀಡಾಕೂಟಗಳಿಗೆ ಹೋಲಿಸಿದರೆ ಅಷ್ಟೇನೂ ಉತ್ತಮ ಬೆಳವಣಿಗೆ ಅಲ್ಲದಿದ್ದರೂ, ನಿರೀಕ್ಷಿತ ಪದಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿನ್ನದ ಬೇಟೆಯಲ್ಲಿ ಅಗ್ರಸ್ಥಾನಕ್ಕೆ ಏರಬೇಕಾದರೆ, ನಮ್ಮಲ್ಲಿ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ಹೆಚ್ಚಿಸಬೇಕು. ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ತರಬೇತಿ ಕೇಂದ್ರಗಳಿರಬೇಕು. ಚಿಕ್ಕ ವಯಸ್ಸಿನಲ್ಲೇ ಕ್ರೀಡಾತರಬೇತಿ ನೀಡಬೇಕು. ಆಗ ಮಾತ್ರ ನಾವು ಒಲಂಪಿಕ್ಸ್ ನಲ್ಲೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಕ್ರೀಡಾ ಇಲಾಖೆ ಗಮನ ಹರಿಸಬೇಕು.
-ಸಂತೋಷ್ ಕುಮಾರ್ ಬಿ ಎನ್ ಭೋಗಯ್ಯನ ಹುಂಡಿ, ನಂಜನಗೂಡು ತಾಲ್ಲೂಕು.


ಇದೂ ಕೃತಿಚೌರ್ಯವಲ್ಲವೇ?

ದಿನಾಂಕ ೧೦.೮.೨೨.ರ ರಾತ್ರಿ ೮ಗಂಟೆ ಸಮಯ ದಲ್ಲಿ ಚಂದನ ವಾಹಿನಿಯಲ್ಲಿ ಸಿನಿಮಾ ಗೀತೆ ಗಾಯನ ಕಾರ್ಯಕ್ರಮವೊಂದು ಪ್ರಸಾರ ವಾಗುತ್ತಿತ್ತು. ಅದರಲ್ಲಿ ಸಂಗೀತ ನಿರ್ದೇಶಕ ವಿ ಮನೋಹರ್ ತೀರ್ಪುಗಾರರಾಗಿದ್ದರು. ಗಾಯಕರೊಬ್ಬರು ಜನುಮದ ಜೋಡಿ ಚಿತ್ರದ ಜನಪ್ರಿಯ ಜಾನಪದ ಗೀತೆ ‘ಕೋಲುಮಂಡೆ ಮಾದೇವ….’ ಗೀತೆಯನ್ನು ಹಾಡಿದ್ದರು. ಇದನ್ನು ವಿಮರ್ಶೆ ಮಾಡುವ ಸಂದರ್ಭದಲ್ಲಿ ಮನೋಹರ್‌ರವರು ಸ್ವಾರಸ್ಯಕರ ಹಾಗೂ ವಿಷಾದಕರ ಸಂಗತಿಯೊಂದನ್ನು ಬಹಿರಂಗ ಪಡಿಸಿದರು! ಸದರಿ ಹಾಡಿಗೆ ಮೈಸೂರಿನ ಖ್ಯಾತ ಕಂಸಾಳೆ ಮಹಾದೇವಯ್ಯ ನವರ ತಂಡದಿಂದಲೇ ಸಂಗೀತ ಸಂಯೋಜಿಸಿದರೆ ಚೆನ್ನಾಗಿ ಇರುತ್ತದೆ ಎಂಬ ಕಾರಣದಿಂದ ಸದರಿ ತಂಡದವರನ್ನೇ ಕರೆಸಿದರಂತೆ. ಆದರೆ ರಾತ್ರಿ ೧೨ಗಂಟೆಯಾದರೂ ಹಾಡಿಗೆ ಸಂಗೀತ ಸಂಯೋಜನೆ ಸರಿಯಾಗಲಿಲ್ಲವಂತೆ. (ಅದಕ್ಕೆ ಕಾರಣ ಅವರಿಗೆ ಜಾನಪದ ಹಾಡಿಗೆ ಸಂಗೀತ ನುಡಿಸಿ ಅನುಭವವೇ ಹೊರತು ಸಿನಿಮಾ ಹಾಡಿಗೆ ಅಲ್ಲ.)೧೨ಗಂಟೆಯಾದ ಕಾರಣ ಅವರ ತಂಡದವರನ್ನು ಊಟ ಮಾಡಿಕೊಂಡು ಬರಲು ಹೊರಗಡೆ ಕಳುಹಿಸಿದರಂತೆ. ಇಲ್ಲಿಯವರೆಗೆ ಕಂಸಾಳೆ ಮಹದೇವಯ್ಯನವರ ತಂಡದ ಕಂಸಾಳೆ ಸೊಬಗನ್ನು ಸವಿದಿದ್ದ ವಿ ಮನೋಹರ್ ತಂಡದವರು ಕಂಸಾಳೆ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದರು! ಅವರು ಊಟ ಮಾಡಿಕೊಂಡು ಬರುವಷ್ಟರಲ್ಲಿ ಮನೋಹರ್ ತಂಡ ಸದರಿ ಹಾಡಿಗೆ ಸೊಗಸಾಗಿ ಸಂಗೀತ ಸಂಯೋಜನೆ ಮಾಡಿ ಮುಗಿಸಿದ್ದರಂತೆ! ಇದು ಮನೋಹರ್‌ರವರೇ ಹೇಳಿದ ಮಾತು. ಇಲ್ಲಿ ಮೂಡುವ ಪ್ರಶ್ನೆ ಎಂದರೆ ಆ ತಂಡದವರಿಗೇ ಈ ರೀತಿ ನುಡಿಸಿ ಎಂದು ಅಭ್ಯಾಸ ಮಾಡಿಸಿ ಅವರಿಂದಲೇ ಸಂಗೀತ ಸಂಯೋಜನೆ ಮಾಡಿಸ ಬಹುದಾಗಿತ್ತಲ್ಲವೇ? ಆ ತಂಡದವರಿಗೂ ತಾವು ಸಂಗೀತ ನೀಡಿದ ತೃಪ್ತಿ ಸಿಗುತ್ತಿತ್ತಲ್ಲವೇ? ಸಾಹಿತ್ಯದ ಕೃತಿ ಚೌರ್ಯದಂತೆ ಇದು ಕೂಡ ‘ಸಂಗೀತ ಕೃತಿಚೌರ್ಯ’ವಲ್ಲವೇ?!
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.

andolana

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

21 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

21 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

21 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

21 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

21 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

21 hours ago