ಎಡಿಟೋರಿಯಲ್

ಜೀವಂತವಾಗಿರುವುದು ‘ಕೀಪ್ ಕ್ವಾಯ್ಟ್ ಮೂವ್‌ಮೆಂಟ್’ ಮಾತ್ರ!

ಒಡನಾಡಿ ಸ್ಟ್ಯಾನ್ಲಿ, ಮೈಸೂರು

ಎಪ್ಪತ್ತೆ ದನೇ ಸ್ವಾತಂತ್ರ್ಯೋತ್ಸವದ ಹೆಬ್ಬಾಗಿಲಲ್ಲಿ ಅಖಂಡ ಭಾರತ ಬಂದು ನಿಂತಿದೆ. ಈ ಮಾಸದಲ್ಲಿ ಹಿಂದೆ ಆಚರಿಸಿದ್ದ ‘‘ಲೆಫ್ಟ್ ರೈಟ್’’ ಸ್ವಾತಂತ್ರ್ಯದ ಕೆಲವು ಸಿಹಿ ಸನ್ನಿವೇಶಗಳು ಕಣ್ಣಿಗೆ ಕಟ್ಟಿದಂತೆ ಹಾದು ಹೋಗುತ್ತವೆಯಾದರೂ ಇತ್ತೀಚಿನ ವರ್ಷಗಳಲ್ಲಿ ಆಗಸ್ಟ್ ಹದಿನೈದು ಬಂದಿತ್ತಾ ಎಂದು ಅನುಮಾನಿಸುವಷ್ಟು ಮನಸ್ಸು ಖಾಲಿ ಖಾಲಿ. ಪ್ರಳಯವನ್ನು ನೆನಪಿಸುವ ಕೊರೊನಾ, ಪ್ರವಾಹ, ರೈತರ ಸಂಕಷ್ಟ, ಬೆಲೆ ಏರಿಕೆ, ಕೋಮು ವೈಷಮ್ಯಗಳಲ್ಲಿ ಕೊಚ್ಚಿ ಹೋದ ಜೀವನಗಳು!! ದಿಢೀರನೆ ಅನಾಥರನ್ನಾಗಿಸಿ ಸಾವಿನ ಮನೆ ಸೇರಿದವರ ಪಟ್ಟಿ ಬದುಕುಳಿದವರ ನಡುವೆ ಸೃಷ್ಟಿಸಿದ ಅಭದ್ರತೆ, ಆತಂಕ. ಒಡಹುಟ್ಟಿದವರಿಗೂ ಒಂದು ಘನತೆಯ ವಿದಾಯ ಹೇಳಲು ಅವಕಾಶವಿರದೆ, ಅನಾಥರಾಗಿ, ಕೆಲಸ ಕಳೆದುಕೊಂಡು, ಅನ್ನಕ್ಕಾಗಿ ಕೈಯೊಡ್ಡುತ್ತಾ, ಸತ್ತ ಬದುಕಿಗೆ ಬೇಸರಿಸಿ ಜಂತಿಗೆ ಜೀವ ಬಿಗಿದವರು ಹಲವರು. ಹಣವಿದ್ದವರದ್ದೂ ಹೆಣದ ಬಾಳು. ಎಲ್ಲೂ ಹೋಗುವಂತಿಲ್ಲ, ಬೇರೆಯುವಂತಿಲ್ಲ, ಮುಖ ತೋರುವಂತಿಲ್ಲ. ಸ್ಮಶಾನ ವೈರಾಗ್ಯದ ಛೇ! ಅ್ಂಯೋ!! ಪಾಪದ, ಪುಣ್ಯದ ಮಾತುಗಳು. ಬಿಟ್ಟರೆ ಗೇಯುವ ಕೈಗಳ ಕೊರತೆ ಸೃಷ್ಟಿಸಿದ ನಿತ್ಯ ನರಕ, ಸಾಲದ ಶೂಲ, ಗೊಣಗಾಟ, ಮೂದಲಿಕೆ.. ಇತ್ಯಾದಿ. ಜಲ ಪ್ರಳಯದಲ್ಲಿ ಕೊಚ್ಚಿಹೋದ ಭವಿಷ್ಯ.

ಆದರೆ ಈ ಸ್ಥಿತಿ ಆಳುವವರನ್ನು, ಅಧಿಕಾರಿಗಳನ್ನು, ಜೀವ ಉಳಿಸಬೇಕಾದವರನ್ನು ಅಧೀರರನ್ನಾಗಿಸಲಿಲ್ಲ ಕೆಲವು ಸೂಕ್ಷ್ಮಜ್ಞರನ್ನು ಹೊರತಾಗಿಸಿ. ಪ್ರತಿೊಂಂದು ಹೆಣವೂ ಹಣವಾಗಿ ಮಾರ್ಪಾಡಾಯಿತು ಇವರ ಪಾಲಿಗೆ. ಕೆಲವರು ಅಂದುಕೊಂಡಂತೆ ಕೊರೊನಾ, ಜಲದಬ್ಬರಗಳು ಮನುಷ್ಯನನ್ನು ಮತ್ತಷ್ಟು ಮನುಷ್ಯನನ್ನಾಗಿಸಲಿಲ್ಲ. ಬದಲಾಗಿ ಈ ಮೊದಲು ಮನುಷ್ಯರಾಗಿದ್ದವರಷ್ಟೇ ಮತ್ತಷ್ಟು ಮನುಷ್ಯರಾದರು. ಉಳಿದವರು ಹದ್ದುಗಳಾಗಿ ಉಳಿದು ಬೇಟೆಯಾಡತೊಡಗಿದರು.

ಕೊರೊನಾ ಒಂದೇ ಅಲ್ಲ. ಹಿಂದೆಂದೂ ಕಂಡರಿಯದ, ಕೇಳರಿಯದ ಎಲ್ಲ ರೀತಿಯ ಭ್ರಷ್ಟತೆಯ ವೈರಸ್ ಗಳೂ, ತರಹೇವಾರಿ ಹಿಂಸೆಗಳು, ಜನ ಸಾಮಾನ್ಯರ ನೆಮ್ಮದಿಯನ್ನು ಹುರಿದು ಮುಕ್ಕುತ್ತಿರುವುದನ್ನು ನೋಡಿ ಬಹಳಷ್ಟು ಮನಗಳು ನೊಂದಿವೆ. ದೇವರಿಗೆ ಹತ್ತಿರವಿದ್ದೇವೆ ಎಂದು ಭ್ರಮಿಸುವ ಕೆಲವರು ತಮ್ಮ ಧರ್ಮ ಶ್ರೇಷ್ಠತೆಯನ್ನು ಮೆರೆಸುವ ಸಲುವಾಗಿ ರಕ್ತಕ್ಕಾಗಿ, ತಲೆಗಳಿಗಾಗಿ ಹಪಹಪಿಸತ್ತಿರುವುದು ಇಂದಿನ ಸ್ವಾತಂತ್ಯೋತ್ಸವದ ನಿಜವಾದ ಕಳವಳ!

ಜ್ಞಾನ, ಜೀವನಾನುಭವ, ಕೌಶಲ, ಸಾಮರ್ಥ್ಯ, ಬದ್ಧತೆ ಇತ್ಯಾದಿ ಮೌಲ್ಯಗಳನ್ನು ಅಪೇಕ್ಷಿಸುವ, ಗುರುತಿಸುವ, ಪುರಸ್ಕರಿಸಿ ಗೌರವಿಸುವ, ಬೆಳೆಸುವ ಸಂಸ್ಕಾರ… ಇವೆಲ್ಲವನ್ನೂ ಉಪೇಕ್ಷಿಸಿ, ಹಣ, ಅಧಿಕಾರ, ಅಹಂಕಾರ, ಅವಿವೇಕಗಳು ನಡೆಸುವ ಜೀವಾನಾಳ್ವಿಕೆಯಲ್ಲಿ ನಾವಿದ್ದೇವೆ. ಬಹುತೇಕ ಜನರು ಈ ಪರಿಸ್ಥಿತಿಗೆ ತಕ್ಕಂತೆ ಒಗ್ಗಿಕೊಂಡು ಬದುಕುವುದನ್ನು ಕಲಿತಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ಪಡೆಯುವ ದಾರಿಯಲ್ಲಿ ತಾವು ಭ್ರಷ್ಟರಾಗುತ್ತಾ, ತಮ್ಮ ಸುತ್ತಲನ್ನೂ ಕೊಳಕು ಮಾಡುತ್ತಾ ಅದನ್ನೇ ಸ್ವಚ್ಛವೆಂದು ಕಿರಿಯರಿಗೂ ಹೇಳುತ್ತಾ ಮಾದರಿಗಳಾಗಿ ಸಾಗುತ್ತಿದ್ದಾರೆ. ಮಿಥ್ಯೆ ಮೈದುಂಬಿಕೊಂಡು ಸಂಭ್ರಮಿಸುತ್ತಾ ಸತ್ಯ ಉಸುರಲಾಗದ ಭಯದ ವಾತಾವರಣದಲ್ಲಿ ‘‘ತಿಳಿದಿದ್ದರೂ ಹೇಳಬೇಡ’’ ಎನ್ನುವ ಬೋಧನೆೆುೀಂ ಎಲ್ಲೆಲ್ಲೂ. ಇದರಿಂದ ತಮ್ಮ ಜ್ಞಾನ, ಅನುಭವ, ಕೌಶಲಕ್ಕೆ ಒಂದಿಷ್ಟು ಮನ್ನಣೆ ಸಿಗಲಾರದೇನೋ ಎಂಬ ಮಾನವ ಸಹಜ ಆತಂಕದೊಡನೆ ಉತ್ತಮರೂ ಕೆಲವು ಸಮಜಾಯಿಷಿಗಳನ್ನು ನೀಡುತ್ತಾ ಸುಳ್ಳಿನ ಮೊರೆ ಹೋಗುತ್ತಿದ್ದಾರೆ. ಇಂದಿನ ಬಹುತೇಕ ಬೆಳವಣಿಗೆಗೆ ಅವರವರ ಜಾತಿ, ಧರ್ಮ, ಅವರವರ ಧರ್ಮ ಗುರುಗಳು, ಹಣ- ಅಧಿಕಾರದ ಮೊತ್ತ ಮೆಟ್ಟಿಲಾಗುತ್ತಿವೆ. ಅವಕಾಶಗಳ ಗಳಿಕೆಗೆ ತೀವ್ರ ಪೈಪೋಟಿ ಹಾಗೂ ನೂಕು ನುಗ್ಗಲು ಉಂಟಾಗಿರುವುದರಿಂದ ಕಬಳಿಕೆಯ, ಗೋರಿಕೊಳ್ಳುವ, ಆಯುವ, ಹಪಹಪಿಕೆಯ ಭ್ರಷ್ಟಾಚಾರದ ಸಂಸ್ಕೃತಿಯೊಂದು ವಿರಾಜಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಪದವಿ, ಪ್ರಶಸ್ತಿ, ಪುರಸ್ಕಾರಗಳು ಸಾಧಕರನ್ನರಸಿ ಬಂದು ಚಕಿತಗೊಳಿಸಿದರೆ ಅದು ನಿಜಕ್ಕೂ ಅವರ ಪೂರ್ವ ಜನ್ಮದ ಪುಣ್ಯ. ಸರ್ಕಾರಗಳ ಸಿದ್ಧಾಂತ ಪಾಲನೆೊಂಡನೆ ಮಂತ್ರಿಗಳ, ಕನಿಷ್ಠ ಪಕ್ಷ ಸ್ಥಳೀಯ ಪ್ರಭಾವಿ ನಾಯಕರ ಕೃಪಾ ಕಟಾಕ್ಷವಿದ್ದರೆ, ಬಂದ ಪ್ರಶಸ್ತಿಯ ಹಣ, ಚಿನ್ನದ ಬಿಲ್ಲೆ ಯಾ ಮುಂದೆ ಸಿಗಬಹುದಾದ ಸೈಟನ್ನು ನೀಡಿ ದಲ್ಲಾಳಿಗಳೊಡನೆ ರಾಜಿಯಾಗಲು ಸಿದ್ಧರಿದ್ದರೆ, ಅರ್ಜಿ ಲಗಾಯಿಸಿದ ಪುಣ್ಯಾತ್ಮರಿಗೆ ಪ್ರಶಸ್ತಿ ಸಿಕ್ಕರೂ ಸಿಗಬಹುದು. ಡಾಕ್ಟರೇಟು, ಡಿಲಿಟು ಇನ್ನಿತರ ಪದವಿಗಳೂ ಬೆವರಿಳಿಸದವರಿಗೆ ಮಾರುಕಟ್ಟೆಯಲ್ಲಿ ಲಭ್ಯ.

ದಕ್ಷ ಪೊಲೀಸ್ ಅಧಿಕಾರಿಯಾಗುವ ಯುವಕರ ಕನಸು ಛಿದ್ರವಾಗಿದೆ. ಯಾವುದೇ ಸರ್ಕಾರಿ ನೌಕರಿ ಸೇರಬೇಕಾದರೆ ಮೂವತ್ತರಿಂದ ನಲವತ್ತು ಲಕ್ಷ ರೂ. ಲಂಚ! ವರ್ಗಾವಣೆಗೆ ಹತ್ತರಿಂದ ಇಪ್ಪತೈದು ಲಕ್ಷ ರೂ.!! ಈ ಅಧಿಕಾರಿಗಳು ನಿಮ್ಮ ರಕ್ಷಣೆ ಮಾಡುವ ಕೆಲಸ ಮಾಡಬೇಕಾ? ಇಲ್ಲಾ ಚೆಲ್ಲಿದ ಹಣವನ್ನು ಮೂರ್ಮಡಿಯಾಗಿಸುವತ್ತ ಶ್ರಮಿಸಬೇಕಾ? ಇಂತಹ ಅಧಿಕಾರಿಗಳ ಆಪ್ತ ವಲಯ ಇವರನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಇವರು ತಮ್ಮ ಮನೆಯ ಎಳೆಯರಿಗೆ ಏನು ನೀತಿ ಬೋಧನೆ ಮಾಡಬಲ್ಲರು? ಗುತ್ತಿಗೆ ಕಾಮಗಾರಿಗಳಲ್ಲೂ ಶೇ.೩೦ -೪೦ ರಷ್ಟು ಕಮಿಷನ್! ಉಳಿದ ಅರವತ್ತರಲ್ಲಿ ಯಾವ ಗುಣಮಟ್ಟ ಅಪೇಕ್ಷಿಸುವುದು? ದರೋಡೆಕೋರರು ತಮ್ಮ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಕೊಡಿಸಲು ಕೋಟಿಗಟ್ಟಲೆ ಹಣ ಹೂಡುತ್ತಾರೆ. ಈ ರೀತಿ ಬಿತ್ತುವ ಭ್ರಷ್ಟಾಚಾರದ ಬೀಜಗಳಿಂದ ಒಳ್ಳೆಯದನ್ನು ಬಯಸುವುದಾದರೂ ಹೇಗೆ? ಯಾರನ್ನಂತ ಗುರಿಯಾಗಿಸುವುದು?

ವಿಶ್ವವಿದ್ಯಾನಿಲಯಗಳೂ ಈ ವ್ಯವಸ್ಥೆಗೆ ಹೊರತಾಗಿಲ್ಲ. ಜ್ಞಾನ ದೀವಿಗೆ ಹೊತ್ತಿಸಿ ಸದಾ ವಿದ್ಯಾರ್ಥಿಗಳನ್ನು ವಿವೇಕದ, ಸಾತ್ವಿಕ ಪಥದಲ್ಲಿ ನಡೆಸಬೇಕಾದ ಇವು, ಹಲವು ಕಸಗಳ ಆಗರವಾಗುತ್ತಿವೆ. ವಿಶ್ವವಿದ್ಯಾನಿಲಯಗಳಲ್ಲಿ ಭಾರಿ ಪ್ರಮಾಣದ ಅವ್ಯವಹಾರದ ಹೊಗೆಯಾಡುತ್ತಿದೆ. ಅಧ್ಯಯನಶೀಲರಾಗಿ ಉಳಿದು ಎಲ್ಲಾ ರೀತಿಯಲ್ಲೂ ಅಧ್ಯಾಪಕರಾಗುವ ಯೋಗ್ಯತೆ ಹೊಂದಿದ್ದ ಕೆಲವರು ವಾಮ ಮಾರ್ಗಿಗಳಿಂದಾಗಿ ಅವಕಾಶ ಕಳೆದುಕೊಂಡು ತಮ್ಮ ದುರಾದೃಷ್ಟಕ್ಕಾಗಿ ಅತ್ತಿದ್ದನ್ನು, ಅವಮಾನಕ್ಕೊಳಗಾಗಿ ಹೊರದಬ್ಬಲ್ಪಟ್ಟಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹುಡುಗರ ಎದೆಯಲ್ಲಿ ಚಳವಳಿಗಳ ಕಿಚ್ಚು ಹಚ್ಚುವ ನಿಜವಾದ ಮೇಷ್ಟ್ರುಗಳು ಕಣ್ಮರೆಯಾಗಿದ್ದಾರೆ. ಎಲ್ಲರಿಗೂ ಪಾಠ ಬಿಟ್ಟು ಆಡಳಿತ ನಡೆಸುವ ಹುಚ್ಚು ಅಮಲು ತಲೆಗೇರಿದೆ.

ಒಬ್ಬ ಕುಲಪತಿ ಅಥವಾ ಕುಲ ಸಚಿವನ ಮೇಲೆ ಬಂಡವಾಳ ಹಾಕಲು ಒಂದೊಂದು ಸಿಂಡಿಕೇಟ್ ತಯಾರಿದೆ. ಜೊತೆಗೆ ಜಾತಿ ರಾಜಕೀಯ ಬೇರೆ. ಇಷ್ಟೆಲ್ಲಾ ಸರ್ಕಸ್ ಮಾಡಿ ಸೀಟು ಹಿಡಿಯುವವರು ಯಾವ ಅನೈತಿಕ ಪುಢಾರಿಗಳಿಗಿಂತ ಭಿನ್ನ ಹೇಳಿ? ರಾಜಕಾರಣಿಗಳೂ, ಗುತ್ತಿಗೆದಾರರು ಇವರನ್ನು ಗದ್ದುಗೆಗೆ ಏರಿಸಿ, ವಿಶ್ವವಿದ್ಯಾನಿಲಯಗಳ ಮೇಲೆ ಹತೋಟಿ ಸಾಧಿಸುತ್ತಿದ್ದಾರೆ. ಹಣ ಬಿತ್ತಿ, ಹಣ ದೋಚುವ ಕುಲಪತಿಗಳ ಬಳಿ ವಿದ್ಯಾರ್ಥಿಗಳಿಗೆ ನೀಡಲು ಯಾವ ಮಾದರಿಗಳು ಇವೆ? ಹಾಗಾಗಿ ಇಂದು ಎಲ್ಲಾ ರೀತಿಯ ವಿದ್ಯಾರ್ಥಿ ಚಳವಳಿಗಳೂ ಮಕಾಡೆ ಮಲಗಿವೆ.

ಎಲ್ಲೂ ಹರಿಯದೇ, ಅತಿ ಶೀಘ್ರದಲ್ಲಿ ತಳ ಊರಬೇಕೆಂಬುದು ಯುವ ಸಮುದಾಯದ ಆಸೆ. ಪ್ರಜಾಪ್ರಭುತ್ವದ ಕುಡಿಗಳು ಕುಡುಮಿಗಳಾಗಿ, ಒಳ್ಳೆಯವರೆನಿಸಿಕೊಂಡು ಎಲ್ಲೋ ಕಳೆದು ಹೋಗುತ್ತಿದ್ದಾರೆ. ನಾವು ಈ ಫ್ಯಾಕ್ಟರಿಗಳಿಂದ ಹೊರಬರುತ್ತಿರುವ ಪ್ರಾಡಕ್ಟ್ಸ್‌ಗಳ ಬಗ್ಗೆ ಯೋಚಿಸಬೇಕಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸಂಕೋಲೆಗಳಿಂದ ಬಿಗಿಯಲ್ಪಟ್ಟ ಭಾರತೀಯನಿಗೆ ಸಿಗಬೇಕಾದ ನೈಜ ಸ್ವಾತಂತ್ರ್ಯದ ಆಶಯದೊಡನೆ ಇನ್ನಷ್ಟು ಕಾಯಬೇಕಿದೆ.

 

andolana

Recent Posts

ಓದುಗರ ಪತ್ರ: ಚುಟುಕು ಸಾಹಿತ್ಯ ಪ್ರಶಸ್ತಿ ಸೇರ್ಪಡೆ ಸ್ವಾಗತಾರ್ಹ

೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…

20 hours ago

ವೈಚಾರಿಕ ಕ್ರಾಂತಿಯ ವಚನಕಾರ ಹಡಪದ ಅಪ್ಪಣ್ಣ

ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…

20 hours ago

ಹವಾಮಾನ ಬದಲಾವಣೆ; ಹುಲಿಗಳಿಗೆ ಹೊಸ ಅಪಾಯ?

ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…

21 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಗೌರವ್ ಶುಕ್ಲಾ ಎಂಬ ‘ಸಮವಸ್ತ್ರವಿಲ್ಲದ ಸೈನಿಕ’

‘ಸಪೋರ‍್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ  ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…

21 hours ago

ಮಲ್ಲಳ್ಳಿ ಜಲಪಾತದ ರೋಪ್‌ವೇ ಯೋಜನೆಗೆ ವೇಗ

ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್‌ವೇ ಯೋಜನೆಗೆ ವೇಗ ದೊರೆತಿದೆ.…

21 hours ago

ಮೀನುಗಾರಿಕೆ ಉತ್ತೇಜನಕ್ಕೆ ಸಂಚಾರ ಮತ್ಸ್ಯ ವಾಹಿನಿ

ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…

21 hours ago