ಎಡಿಟೋರಿಯಲ್

ಸಂಪಾದಕೀಯ: ದೇವರು ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬಂತಾದ ಕೊಡಗು ಸಂತ್ರಸ್ತರ ಬದುಕು!

ಕೊಡಗಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಮಹಾಮಳೆಗೆ ಎಲ್ಲವನ್ನು ಕಳೆದುಕೊಂಡ ಸಂತ್ರಸ್ತರ ಬದುಕು ಈಗ ದೇವರು ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬಂತಾಗಿದೆ. ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಉದ್ಘಾಟನೆ ಹೆಸರಿನಲ್ಲಿ ದಿನವನ್ನು ಮುಂದೂಡಲಾಗುತ್ತಿದೆ. ಅದು ಕೂಡ ಒಂದೆರೆಡು ದಿನವಲ್ಲ. ಕಳೆದ ಎರಡು ತಿಂಗಳಿಂದ ಮುಖ್ಯಮಂತ್ರಿ, ಹಿರಿಯ ಸಚಿವರು ಬರುವ ದಿನಕ್ಕಾಗಿ ಉದ್ಘಾಟನಾ ದಿನವನ್ನು ಮುಂದೂಡಲಾಗುತ್ತಿದ್ದು, ವಿಳಂಬ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯಲ್ಲಿ ೨೦೧೮ರಿಂದ ಸತತ ಮೂರು ವರ್ಷಗಳ ಕಾಲ ಪ್ರಕೃತಿ ವಿಕೋಪ ಸಂಭವಿಸಿದೆ. ಪ್ರಾಕೃತಿಕ ವಿಕೋಪದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಅದರಲ್ಲೂ ೨೦೧೮ರಲ್ಲಿ ಮಡಿಕೇರಿ ತಾಲ್ಲೂಕಿನ ಹೆಮ್ಮೆತ್ತಾಳು, ಮೇಘತ್ತಾಳು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಸೂರ್ಲಬ್ಬಿ ವ್ಯಾಪಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಇಲ್ಲಿನ ಎಲ್ಲಾ ಸಂತ್ರಸ್ತರಿಗೆ ಸೂರು ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ.

೨೦೧೮ರಲ್ಲಿ ಮನೆ ಕಳೆದುಕೊಂಡ ೮೪೦ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಅಂದಿನ ಸರ್ಕಾರ ನಿರ್ಧರಿಸಿತ್ತು. ಅದರಂತೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಲಾಗಿದ್ದು, ೪೬೩ ಮನೆಗಳನ್ನು ಹಸ್ತಾಂತರಿಸಲಾಗಿದೆ. ಮಾದಾಪುರ ಸಮೀಪದ ಜಂಬೂರು, ಮಡಿಕೇರಿ ಸಮೀಪದ ಕರ್ಣಂಗೇರಿ ಹಾಗೂ ಗೋಳಿಕಟ್ಟೆಯ ಮನೆಗಳು ಹಸ್ತಾಂತರವಾಗಿದ್ದು, ಸಂತ್ರಸ್ತರು ನೂತನ ಮನೆಗಳಲ್ಲಿ ವಾಸವಾಗಿದ್ದಾರೆ.
ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್‌ಟಿಓ ಕಚೇರಿ ಬಳಿ ಸಂತ್ರಸ್ತರಿಗಾಗಿ ೭೦ ಮನೆಗಳ ನಿರ್ಮಿಸಲಾಗಿದೆ. ೬ ತಿಂಗಳ ಹಿಂದೆಯೇ ಲಾಟರಿ ಮೂಲಕ ಮನೆಗಳ ಹಂಚಿಕೆ ಕಾರ್ಯ ಕೂಡ ಮುಗಿದಿದೆ. ಆದರೆ, ಮನೆಗಳ ಹಸ್ತಾಂತರ ಕಾರ್ಯ ಆಗಿಲ್ಲ. ಅಧಿಕಾರಿಗಳು ಕಾಮಗಾರಿ ಮುಗಿದಿಲ್ಲ ಹೀಗಾಗಿ ಮನೆ ಹಸ್ತಾಂತರ ಮಾಡಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಕಾಮಗಾರಿ ಪೂರ್ಣಗೊಂಡಿದೆ ಎಂದು ಇಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ಅಸಮಾಧಾನ ಹೊರಹಾಕಿದ್ದಾರೆ.

ಇಲ್ಲಿನ ಬಹುತೇಕ ಎಲ್ಲಾ ಸಂತ್ರಸ್ತರೂ ಬಡವರಾಗಿದ್ದು, ಕೂಲಿ ನಾಲಿ ಮಾಡಿ ಬದುಕುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇರುವ ಮನೆಯನ್ನೂ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದುಡಿದ ಅರ್ಧದಷ್ಟು ಹಣವನ್ನು ಮಡಿಕೇರಿ ನಗರದಲ್ಲಿ ಮಾಡಿಕೊಂಡಿರುವ ಬಾಡಿಗೆ ಮನೆಗಾಗಿ ವ್ಯಯಿಸಬೇಕಾಗಿದೆ. ಇಲ್ಲಿಯವರೆಗೆ ಮನೆ ನಿರ್ಮಾಣವಾಗಿಲ್ಲ ಎಂದು ಸಂಕಷ್ಟದಲ್ಲೇ ದಿನದೂಡುತ್ತಿದ್ದ ಸಂತ್ರಸ್ತರು, ಈಗ ಮನೆ ನಿರ್ಮಾಣಗೊಂಡಿದ್ದರೂ ಹಸ್ತಾಂತರ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಮನೆ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನ ನಿಗಧಿಯಾಗಿಲ್ಲ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಥವಾ ಹಿರಿಯ ಸಚಿವರನ್ನು ಕರೆಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಸೂಕ್ತ ದಿನ ನಿಗದಿಯಾಗದಿರುವುದಕ್ಕೆ ಕಳೆದ ೨ ತಿಂಗಳಿನಿಂದ ಕಾಮಗಾರಿ ಪೂರ್ಣಗೊಂಡರೂ ತಮಗೆ ಇದೇ ಮನೆ ಎಂದು ತಿಳಿದಿದ್ದರೂ ಮನೆ ಸೇರಲು ಸಂತ್ರಸ್ತರಿಗೆ ಸಾಧ್ಯವಾಗುತ್ತಿಲ್ಲ. ದುಡಿದ ಹಣವನ್ನು ಬಾಡಿಗೆ ನೀಡುತ್ತಿರುವ ಸಂತ್ರಸ್ತರ ತಾಳ್ಮೆಯ ಕಟ್ಟೆ ಒಡೆಯಲಾರಂಭಿಸಿದ್ದು, ಶೀಘ್ರದಲ್ಲೇ ಮನೆ ಹಸ್ತಾಂತರ ಮಾಡದಿದ್ದಲ್ಲಿ ಉದ್ಘಾಟನೆಗೂ ಮುನ್ನ ನಮ್ಮ ಮನೆಗೆ ನಾವೇ ಸೇರುವುದಾಗಿ ಎಚ್ಚರಿಸಿದ್ದಾರೆ.

ಇದು ಆಡಳಿತ ವ್ಯವಸ್ಥೆಯೇ ತಲೆತಗ್ಗಿಸುವ ವಿಚಾರ ಎಂದರೂ ತಪ್ಪಾಗಲಾರದು. ತಾವು ಹುಟ್ಟಿ ಬೆಳೆದು ಬದುಕಿದ ಮನೆಯ ಜೊತೆಗೆ ದುಡಿದು ಕೂಡಿಟ್ಟ ಎಲ್ಲಾ ಸಾಮಾಗ್ರಿಗಳನ್ನು ಕಳೆದುಕೊಂಡರೂ ಮತ್ತೆ ಬದುಕಬೇಕೆಂಬ ಛಲದೊಂದಿಗೆ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಸೂಕ್ತ ಸೂರು ಕೊಡುವುದಾಗಿ ಹೇಳಿದ್ದ ಸರ್ಕಾರ ನಾಲ್ಕು ವರ್ಷ ಕಳೆದರೂ ಇನ್ನು ಮನೆ ನೀಡಿಲ್ಲ. ಸಿದ್ಧವಾದ ಮನೆ ನೀಡಲೂ ಮುಖ್ಯಮಂತ್ರಿ ಬರಬೇಕು, ಅಥವಾ ಹಿರಿಯ ಸಚಿವರೇ ಬರಬೇಕು, ಅಲ್ಲಿಯವರೆಗೆ ಮನೆ ನೀಡುವುದಿಲ್ಲ ಎನ್ನುವ ಆಡಳಿತವ ವ್ಯವಸ್ಥೆಯ ದೋರಣೆ ಎಷ್ಟರಮಟ್ಟಿಗೆ ಸರಿ?

ಸಂತ್ರಸ್ತರು ಕೂಡ ಸ್ವಾಭಿಮಾನಿಗಳು ಎಂಬುವುದನ್ನು ಸರ್ಕಾರ ಮರೆಯಬಾರದು. ಮನೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವೂ ಹೌದು, ಮನೆ ಪಡೆಯಬೇಕಾಗಿರುವುದು ಸಂತ್ರಸ್ತರ ಹಕ್ಕು ಕೂಡ ಹೌದು. ಹೀಗಾಗಿ ಹೀಗಾಗಲೇ ಸಿದ್ಧವಾಗಿರುವ ಮನೆಗಳನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ಹಸ್ತಾಂತರ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದಲ್ಲಿ ಸೂರಿಗಾಗಿ ಕಾದು ಬಸವಳಿದು ಈಗ ತಾವಾಗಿಯೇ ತಮ್ಮ ಮನೆ ಸೇರಲು ನಿರ್ಧರಿಸಿರುವ ಸಂತ್ರಸ್ತರಿಗೆ ಅವಕಾಶ ಕಲ್ಪಿಸಬೇಕು. ಜನಪ್ರತಿನಿಧಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡುವ ಉದ್ಘಾಟನಾ ಸಮಾರಂಭವನ್ನು ಯಾವಾಗ ಬೇಕಾದರೂ ಮಾಡಬಹುದು. ಅದಕ್ಕಾಗಿ ಈಗಾಗಲೇ ನೊಂದು ಬೆಂದಿರುವ ಸಂತ್ರಸ್ತರಿಗೆ ಮತ್ತೆ ನೋಯಿಸುವ ಕೆಲಸ ಮಾಡಬಾರದು.

andolana

Recent Posts

ನಾಳೆ ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

ಬೆಂಗಳೂರು: ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ನಾಳೆ(ಮೇ.1ರಂದು) ಬೆಂಗಳೂರು ನಗರದಾದ್ಯಂತ ಮಾಂಸ ಮಾರಾವನ್ನು ನಿಷೇಧಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆದೇಶ ಹೊರಡಿಸಿದೆ.…

32 mins ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಸಾಯಿಸಿ ಪೊಲೀಸರಿಗೆ ಶರಣಾದ ಪತಿ

ಮೈಸೂರು: ಸಣ್ಣ ವಿಚಾರಕ್ಕೆ ಆರಂಭವಾದ  ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಕೆಲಸ…

56 mins ago

ನಾಳೆಗೆ 60 ದಿನಗಳ ಡೆಡ್‌ಲೈನ್‌ ಅಂತ್ಯ: ಸಂಕಷ್ಟದಲ್ಲಿ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಅಮೇರಿಕಾ ಮತ್ತು ಇರಾನ್‌ ನಡುವಿನ ಮಿಲಿಟರಿ ಸಂಘರ್ಷ ಈಗ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌…

1 hour ago

ರಾಜ್ಯದಲ್ಲಿ ಮೂರು ದಿನ ಮಳೆ ಮುನ್ಸೂಚನೆ: ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ಮೂರು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ.1ರಂದು ರಾಯಚೂರು, ಕೊಪ್ಪಳ,…

3 hours ago

ಯಾಲಕ್ಕೂರು, ಸುತ್ತಲಿನ ಗ್ರಾಮಗಳಿಗೆ ಬಂತು ಸಾರಿಗೆ ಬಸ್ಸು!

ಚಾಮರಾಜನಗರ: ತಾಲ್ಲೂಕಿನ ಯಾಲಕ್ಕೂರು ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸಾರಿಗೆ ಬಸ್ಸೇ ಇಲ್ಲ ಎಂದು ‘ಆಂದೋಲನ ಪತ್ರಿಕೆ’ಯಲ್ಲಿ ಈಚೆಗೆ ಪ್ರಕಟವಾಗಿದ್ದ…

6 hours ago

ಓದುಗರ ಪತ್ರ: ಬಿಸಿಲಲ್ಲೋ ಅಣ್ಣಾ..!

ಬಿಸಿಲಲ್ಲೋ ಅಣ್ಣ ಇದು ಬರಿ ಬಿಸಿಲಲ್ಲೋ ! ಯಾರು ಹೆಸರಿಟ್ಟರೋ? ಇದಕ್ಕೆ ‘ನಿಲ್ಲೋ ಎಲ್ಲೋ’ ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು…

6 hours ago