ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 05 ಶನಿವಾರ 2022

ದೊಡ್ಡಗಡಿಯಾರದ ಹೆಸರೇ ಇರಲಿ!

‘ಆಂದೋಲನ’ದಲ್ಲಿ (೦೩ ನವೆಂಬರ್, ಪುಟ-೨) ಚಿರಂಜೀವಿ ಸಿ. ಹುಲ್ಲಹಳ್ಳಿಯವರು ನಗರದ ಪಾರಂಪರಿಕ ಪ್ರತೀಕ ರಜತ ಮಹೋತ್ಸವ ಸ್ಮಾರಕ ದೊಡ್ಡ ಗಡಿಯಾರ ಕುರಿತು ನೀಡಿರುವ ಮಾಹಿತಿಯು ಅನನ್ಯ. ಈ ಸಿಲ್ವರ್ ಜುಬಿಲೀ ಗಡಿಯಾರದ ವೃತ್ತಕ್ಕೆ ಮಹಾವೀರ ವೃತ್ತವೆಂದು ಬಹುಹಿಂದೆಯೇ ಮರುನಾಮಕರಣ ಮಾಡಿರುವುದನ್ನು ಗಮನಿಸಿರಬಹುದು. ಈ ಪರಿಯ ಮರುನಾಮಕರಣ ಮಾಡುವುದು ಸಹಾ ಪರಂಪರೆಯನ್ನು ತಿರುಚಿದಂತೆಯೇ. ಆದ್ದರಿಂದ, ಸಂಬಂಧ ಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸಿ, ಹೆಸರು ಮೊದಲು ಇದ್ದಂತೆಯೇ ದೊಡ್ಡಗಡಿಯಾರ ವೃತ್ತ ಎಂದು ಹೆಸರಿಸಬೇಕು.

ಬೆಂಗಳೂರಿನ ಆಗ್ನೇಯ ವಿಭಾಗದ ವ್ಯಾಪ್ತಿಗೆ ಒಳಪಡುವ ಕೋರಮಂಗಲ, ಮೈಕೋ ಲೇಔಟ್, ಎಲೆಕ್ಟ್ರಾನಿಕ್ ಸಿಟಿಯ ಮೂರು ಫೋಲೀಸ್ ಠಾಣೆಗಳಲ್ಲಿ ಗ್ರಂಥಾಲಯಗಳು ಶುರುವಾಗಿರುವುದು ಸಂತಸವಾಗಿದೆ. ಇದಕ್ಕಾಗಿ ಶ್ರಮಿಸಿದ ಡಿಸಿಪಿ ಡಾ.ಸಿ.ಕೆ.ಬಾಬು ಅವರಿಗೆ ಧನ್ಯವಾದಗಳು. ಬಾಲ್ಯದಿಂದಲೇ ಓದುವ ಹವ್ಯಾಸವನ್ನು ರೂಢಿಸಿಕೊಂಡವರು ಮುಂದೆ ಓದಿ ಅನೇಕ ಸರ್ಕಾರಿ ಹಾಗೂ ಖಾಸಗಿ ಕೆಲಸಗಳನ್ನು ಪಡೆದುಕೊಳ್ಳುತ್ತಾರೆ. ಅದರಲ್ಲಿ ಪೋಲೀಸ್ ಇಲಾಖೆಯು ಸಹ ಒಂದು. ಇಂತಹ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಒಂದು ಗ್ರಂಥಾಲಯ ಇದ್ದರೆ ಬಹಳಷ್ಷು ಉಪಯೋಗವಾಗುತ್ತದೆ. ಜನರು ಫೋಲೀಸ್ ಠಾಣೆಗಳೆಂದರೆ ಭಯ ಭೀತಿ ಅನುಭವಿಸುತ್ತಾರೆ. ಪೋಲೀಸ್ ಠಾಣೆಗಳಲ್ಲಿ ಗ್ರಂಥಾಲಯ ಪ್ರರಂಭಿಸಿ ಓದುವ ಅಭಿರುಚಿಗೆ ಪ್ರೋತ್ಸಾಹ ನೀಡುವ ಮೂಲಕ ಜನರಲ್ಲಿನ ಭಯ ಭೀತಿಯನ್ನು ಹೋಗಲಾಡಿಸಲು ಸಾಧ್ಯ. ಪೋಲೀಸ್ ಠಾಣೆಗಳು ಜನಸ್ನೇಹಿಯಾಗಲು ರಾಜ್ಯದ ಪ್ರತಿಯೊಂದು ಫೋಲೀಸ್ ಠಾಣೆಗಳಲ್ಲಿ ಗ್ರಂಥಾಲಯ ತೆರೆಯುವ ಅಗತ್ಯವಿದೆ.

ನಾಗೇಶ್, ಮಾನಸಗಂಗೋತ್ರಿ, ಮೈಸೂರು.


ಉತ್ತೇಜನ ?!

ನಮಗೆ,

ನಾಡು-ನುಡಿಯ ಬಗ್ಗೆ

ಎಷ್ಟೊಂದು ಅಭಿಮಾನ..?!

ಮೊನ್ನೆ, ಅಲ್ಲೊಂದು

ಕನ್ನಡ ರಾಜ್ಯೋತ್ಸವ

ಸಮಾರಂಭದಲ್ಲಿ

ಭಾಗವಹಿಸಿದ್ದವರು

ಧ್ವನಿವರ್ಧಕದವನನ್ನೂ ಸೇರಿ

ಹತ್ತೇ ಜನ!!

ಮ.ಗು.ಬಸವಣ್ಣ, ಜೆ ಎಸ್ ಎಸ್ ಸಂಸ್ಥೆ, ಸುತ್ತೂರು.


ಕನ್ನಡ ನಿತ್ಯ ಸತ್ಯವಾಗಲಿ..

ಕನ್ನಡ ಭಾಷೆ ಬಳಕೆ ವ್ಯಾಪಕವಾಗಬೇಕಿರುವುದು ಇಂದಿನ ಅಗತ್ಯ. ಅಂತರ್ಜಾಲಗಳಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಬಳಸಬೇಕು, ನಮಗೆ ಬೇಕಾಗಿರುವ ಮಾಹಿತಿಯನ್ನು ಕನ್ನಡದಲ್ಲಿಯೇ ಅಂತರ್ಜಾಲದಲ್ಲಿ ಶೋಧಿಸಬೇಕು. ಆ ಮೂಲಕ ಅಂತರ್ಜಾಲದಲ್ಲಿ ಕನ್ನಡ ಬಳಕೆಯ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಬೇಕು, ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್, ಇಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನೇ ಬಳಸಬೇಕು. ಭಾಷಾ ಸಾಹಿತ್ಯವನ್ನು ಡಿಜಿಟಲೀಕರಣ ಗೊಳಿಸಿದಾಗ ಕನ್ನಡದಲ್ಲಿ ಬೇಕಾದ ಮಾಹಿತಿ ತಕ್ಷಣ ದೊರೆಯುತ್ತದೆ. ಆಗ ಇಂಗ್ಲೀಷಿನ ಮೇಲಿನ ಅವಲಂಬನೆ ಸಹಜವಾಗಿ ಕಡಿಮೆಯಾಗುತ್ತದೆ. ಆಗ ಮಾತ್ರ ಕನ್ನಡ ನಿತ್ಯ ಸತ್ಯವಾಗಲು ಸಾಧ್ಯ!

ಪರಶಿವಮೂರ್ತಿ ಎನ್.ಪಿ, ನಂಜೀಪುರ, ಸರಗೂರು ತಾಲ್ಲೂಕು.


ಒಣಮರ ತೆರವುಗೊಳಿಸಿ

ಮೈಸೂರು ನಗರದ ಸರಸ್ವತಿಪುರಂನ ಜಲಭವನದ ಸಮೀಪವಿರುವ ಒಣಗಿನಿಂತ ಬೋಳು ಮರವೊಂದು ಗೆದ್ದಿಲು ಹಿಡಿದು ಇಂದೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಮರದ ಪಕ್ಕದಲ್ಲಿಯೇ ಬಸ್ ನಿಲ್ದಾಣ ಹಾಗು ಆಟೋ ನಿಲ್ದಾಣಗಳಿವೆ. ಇದು ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿರುವುದರಿಂದ ಇಲ್ಲಿ ನೂರಾರು ಮಂದಿ ಓಡಾಡುತ್ತಿರುತ್ತಾರೆ. ಆದ್ದರಿಂದ ಮರ ತಾನಾಗಿಯೇ ಬಿದ್ದು ಸಾವು-ನೋವುಗಳಾಗುವ ಮೊದಲು ಸಂಭಂಧಪಟ್ಟವರು ಮರವನ್ನು ಬುಡಸಮೇತ ತುರ್ತಾಗಿ ತೆರವುಗೊಳಿಸಬೇಕಿದೆ.

ಬಿ.ಗಣೇಶ, ಕೆ.ಜಿ.ಕೊಪ್ಪಲು ,ಮೈಸೂರು.

andolanait

Recent Posts

ಸಾಲ ಬಾಧೆ ; ದಂಪತಿ ಆತ್ಮಹತ್ಯೆ

ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…

6 hours ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

19 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

20 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

20 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

20 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

20 hours ago