ಜಿಲ್ಲೆಗಳು

ಸಿದ್ದರಾಮಯ್ಯ ಸಿಎಂ ಆಗುವುದು ಶತಃಸಿದ್ಧ: ಪ್ರೊ.ರವಿವರ್ಮ ಕುಮಾರ್

ಮೈಸೂರು: ಬಡವರ ಪರ ಕಾಳಜಿ, ಜಾತ್ಯತೀತ ಮನೋಭಾವ, ಸೈದ್ಧಾಂತಿಕ ಬದ್ಧತೆ ಮತ್ತು ಹೋರಾಟದ ಹಿನ್ನೆಲೆಯಿರುವ ವ್ಯಕ್ತಿತ್ವದ ಸಿದ್ದರಾಮಯ್ಯ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಶತಃಸಿದ್ಧ ಎಂಬುದಾಗಿ ಹಿರಿಯ ನ್ಯಾಯವಾದಿ, ಸಾಮಾಜಿಕ ಚಿಂತಕ ಪ್ರೊ.ರವಿವರ್ಮ ಕುಮಾರ್ ಹೇಳಿದರು.

ನಗರದ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯ ರಮಾಗೋವಿಂದ ರಂಗಮಂದಿರ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಹರೀಶ್ ಕುಮಾರ ಅವರು ರಚಿಸಿರುವ ‘ಸಿದ್ದರಾಮಯ್ಯ-೭೫’ ಸಮಾಜವಾದಿ ಜನನಾಯಕನ ಜೀವನ-ಸಿದ್ಧಾಂತ- ಸಾಧನೆ’ ಕುರಿತ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯನವರಿಗೆ ರಾಷ್ಟ್ರ ನಾಯಕರಾಗುವ ಸಾಮರ್ಥ್ಯವಿದೆ. ವಿಶ್ವ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪ.ಮಲ್ಲೇಶ್ ಅವರಂತಹ ಸಮಾಜವಾದಿ ಚಿಂತಕರ ಮಾರ್ಗದರ್ಶನ ಸಿದ್ದರಾಮಯ್ಯ ಅವರಿಗೆ ಸಿಕ್ಕಿದೆ. ಸಿದ್ದರಾಮಯ್ಯ ಹಣದಿಂದ ಅಧಿಕಾರಕ್ಕೆ ಬಂದವರಲ್ಲ, ಸಮಾಜಪರ ಚಿಂತನೆಯ ಸೈದ್ಧಾಂತಿಕ ಹೋರಾಟದಿಂದ ಬಂದವರು. ಎಂತಹ ಸಂದರ್ಭದಲ್ಲೂ ಸಿದ್ಧಾಂತಕ್ಕೆ ಬದ್ಧತೆ ಇಟ್ಟುಕೊಂಡವರು. ಹಾಗಾಗಿ ಶೋಷಿತರು, ಬಡವರು, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ವರ್ಗದ ಜನರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಸದಾ ಮಂಚೂಣಿಯಲ್ಲಿರುವವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಬಗ್ಗೆ ಮೌಲ್ಯಮಾಪನವಾಗಬೇಕಿತ್ತು. ಏಕೆಂದರೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಜನರಿಗೆ ಹಸಿವು ಕಾಡುತ್ತಿತ್ತು. ನಮ್ಮ ರಾಜ್ಯದಲ್ಲಿ ಅನ್ನಭಾಗ ಬಡ ಜನರ ಹಸಿವು ನೀಗಿತಲ್ಲದೆ ಪ್ರಾಣವನ್ನೂ ಉಳಿಸಿತು. ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ ದೇಶಕ್ಕೆ ಮಾದರಿಯಾಯಿತು ಎಂದು ಬಣ್ಣಿಸಿದರು.

ಇವರ ಅವಧಿಯಲ್ಲಿ ಬಾಲ ಕಾರ್ಮಿಕ ಪ್ರವೃತ್ತಿ ಕ್ಷೀಣಿಸಿತು. ಸರ್ವ ಶಿಕ್ಷಣ ಅಭಿಯಾನ, ಅನ್ನಭಾಗ್ಯ ಯೋಜನೆಗಳು ಬಡತನದಿಂದಾಗಿ ದುಡಿಯಲು ಹೋಗುತ್ತಿದ್ದ ಬಾಲಕಾರ್ಮಿಕ ಮ್ಕಕಳನ್ನು ಶಾಲೆಯ ಕಡೆ ಪ್ರೇರೇಪಿಸಿ, ಶಿಕ್ಷಣದಿಂದ ವಂಚಿತರಾಗದಂತೆ ಮಾಡಿತು. ಹೆಣ್ಣು ಮಕ್ಕಳು ಶಾಲೆಗೆ ದಾಖಲಾಗುವಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಎಂಬ ವಿಷಯ ಪ್ರಸ್ತಾಪಿಸಿದಾಗ ಪ್ರತಿನಿತ್ಯ ಹೆಣ್ಣುಮ್ಕಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಸೇರಿಸಿದರು ಎಂದು ಸ್ಮರಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಸಮಾಜವಾದಿ ಚಿಂತಕ ಪ.ಮಲ್ಲೇಶ್ ಅವರು, ನರೇಂದ್ರ ಮೋದಿಯವರು ಆರ್.ಎಸ್.ಎಸ್. ಮತ್ತು ಬಿಜೆಪಿಯವರಿಗಷ್ಟೇ ಪ್ರಧಾನಿಯಾಗಿದ್ದಾರೆ. ಪ್ರಸ್ತುತ ರಾಜ್ಯ, ದೇಶದ ಆಡಳಿತ ಯಾವದಿಕ್ಕಿನಲ್ಲಿ ಸಾಗುತ್ತಿದೆ, ಯಾವ ದಿಕ್ಕಿನಲ್ಲಿ ಮೂಲಭೂತವಾದಿಗಳು ಸಮಾಜವನ್ನು ಕಟ್ಟುತ್ತಿದ್ದಾರೆ. ನಾವು ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೇವೆ ಎಂಬುದನ್ನು ಯುವಜನಾಂಗ ತಿಳಿದುಕೊಳ್ಳಬೇಕು. ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಯುವಜನತೆ ಎಚ್ಚರಗೊಳ್ಳದಿದ್ದರೆ ಸಮಾಜ ಇಂತಹ ದುಷ್ಪರಿಣಾಮಗಳಿಗೆ ಬಲಿಯಾಗಲಿದೆ ಎಂದು ಕಿವಿಮಾತು ಹೇಳಿದರು.

ರಾಜ್ಯ ಮತ್ತು ದೇಶಕ್ಕೆ ಬೇಕಾದ ಆಡಳಿತ ಪರಿಕಲ್ಪನೆ ಸಿದ್ದರಾಮಯ್ಯ ಅವರಲ್ಲಿದೆ. ಅವರು ಮುಖ್ಯಮಂತ್ರಿಯಾದರೆ ವ್ಯವಸ್ಥೆಯೊಳಗಿನ ಕಬಂದ ಬಾಹುಗಳ ವಿರುದ್ಧ ಸೆಣಸಬೇಕಿದೆ ಎಂದು ಹೇಳಿದರು.

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕೃತಿ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಟಿಆರ್‌ಪಿ ಇದೆ ಎಂಬ ಕಾರಣಕ್ಕೆ ಮಾಧ್ಯಮಗಳಲ್ಲಿ ಪರ-ವಿರೋಧ ಚರ್ಚೆಗಳು, ಸುದ್ದಿ ವಿಷಯಗಳು ಸರ್ವೆ ಸಾಮಾನ್ಯವಾಗಿವೆ. ಸಿದ್ದರಾಮಯ್ಯ ಅವರ ಕುರಿತು ಯಾವುದೇ ವಿಷಯ ಪ್ರಸ್ತಾಪಿಸದಿದ್ದರೆ ಮಾಧ್ಯಮಗಳಿಗೆ ಟಿಆರ್‌ಪಿ ಕಳೆದುಕೊಳ್ಳುವ ಆತಂಕವಿರಬಹುದು ಎಂದರು.

ರಾಜಕಾರಣದ ಬಗ್ಗೆ ಜನಸಾಮಾನ್ಯರಲ್ಲಿ ಹಲವು ಆರೋಪಗಳಿವೆ. ಆದರೆ ಸಿದ್ದರಾಮಯ್ಯ ಅವರಿಗೆ ಈ ಆರೋಪಗಳು ತಾಳೆಯಾಗುವುದಿಲ್ಲ. ಏಕೆಂದರೆ ಅವರದು ನುಡಿದಂತೆ ನಡೆವ ವ್ಯಕ್ತಿತ್ವ. ೧೬೫ ಭರವಸೆಗಳಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದರು ಎಂದು ಮೆಚ್ಚಗೆಯ ನುಡಿಗಳನ್ನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂವಿಧಾನ ಅಪಾಯದಲ್ಲಿದೆ. ಕೋಮುವಾದ ಸಮಾಜವಾದವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ. ಜಾತ್ಯತೀತ, ಸೈದ್ಧಾಂತಿಕ ಹೋರಾಟ ಗಟ್ಟಿಕೊಳ್ಳಬೇಕಿದೆ. ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಹೋರಾಟದ ಬೆಂಬಲಕ್ಕೆ ನಾವೆಲ್ಲರೂ ಕೈಜೋಡಿಸಬೇಕಾದ ಅವಶ್ಯಕತೆ ಇದೆ ಎಂದರು.

ಕೃತಿ ರಚನೆಕಾರ ಡಾ.ಹರೀಶ್ ಕುಮಾರ್ ಅನಿಸಿಕೆ ಹಂಚಿಕೊಂಡರು. ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು. ವಿಧಾನಪರಿಷತ್ ಸದಸ್ಯ ಡಾ.ಕೆ.ತಿಮ್ಮಯ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜನಮನ ಗೋಪಾಲಕೃಷ್ಣ ಹಾಜಜರಿದ್ದರು.

ಸಿದ್ದರಾಮಯ್ಯ ಅವರು ಜಾ.ದಳ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸೇಂದಿಮಾರಾಟ ನಿಷೇಧಿಸಿದರು. ಅಬಕಾರಿ ಕುಳಗಳು ವಾಪಸ್ ಪಡೆಯಲು ಎಷ್ಟೇ ಒತ್ತಡ ಹೇರಿದರೂ ಈಚಲು ಮರಗಳು ಈಗ ಎಲ್ಲಿವೆ? ನೀವು ಕ್ಲೋರಲ್ ಹೈಡ್ರೇಟ್ ಸಲ್ಯೂಷನ್ ಕೊಟ್ಟು ಬಡಜನರನ್ನು ಕೊಲ್ಲುತ್ತಿದ್ದೀರಿ ಎಂದು ಹೇಳಿ ತಮಗೆ ಎಷ್ಟೇ ಒತ್ತಡವಿದ್ದರೂ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಜನರ ಯೋಗಕ್ಷೇಮಕ್ಕೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಇಂತಹ ಕ್ಷಣಗಳು ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಮೌಲ್ಯ ಮತ್ತು ಗಟ್ಟಿತನಕ್ಕೆ ಹಿಡಿದ ಕನ್ನಡಿಯಂತಿವೆ. -ಪ್ರೊ.ರವಿವರ್ಮ ಕುಮಾರ್, ಹಿರಿಯ ನ್ಯಾಯವಾದಿ.

andolana

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

8 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

8 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

10 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

10 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

1 day ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago