ಮೈಸೂರು

ದೇಶದಲ್ಲಿ ಮೋದಿ ಅಲೆಯೇ ಇಲ್ಲ : ಸಿದ್ದರಾಮಯ್ಯ !

ಮೈಸೂರು: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯೇ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿ ಅವಲಂಬಿಸಿರುವುದರಿಂದ ಅವರ ಹೆಸರಿನಲ್ಲಿ ಮತ ಕೇಳುವ ಸ್ಥಿತಿ ಎದುರಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪರವಾದ ಅಲೆಯೇ ಇದೆ. ಎಲ್ಲಾ ಕಡೆ ಉತ್ತಮವಾದ ವಾತಾವರಣ ಇರುವ ಕಾರಣ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ ಎಂದರು.

ಕೊಟ್ಟ ಭರವಸೆಯನ್ನು ಈಡೇರಿಸದೆ ಖಾಲಿ ಚೊಂಬು ಕೊಟ್ಟಿದ್ದರಿಂದಲೇ ಜಾಹೀರಾತು ನೀಡಿದ್ದೇವೆಯೇ ಹೊರತು ರಾಜ್ಯದ ಖಜಾನೆ ಖಾಲಿ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಪ್ರಧಾನಿ ಮೋದಿ ಅಲೆ ಇಲ್ಲದಿದ್ದರೂ ಅಲೆ ಇದೆ ಎನ್ನುವ ಮಾತನ್ನಾಡುತ್ತಿದ್ದಾರೆ. ಖಾಲಿ ಚೊಂಬಿನ ಜಾಹೀರಾತು ನೀಡಿರುವುದು ಸರಿಯಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿಲ್ಲ.

ಅಭಿವೃದ್ಧಿಗೂ ಹಣ ಮೀಸಲಿಟ್ಟು ಅಭಿವೃದ್ಧಿಮಾಡುತ್ತಿದ್ದೇವೆ. ಹಳ್ಳಿಗಳಲ್ಲಿ ಕೈಗೆ ಚೊಂಬು ಕೊಟ್ಟರು ಅಂತಾರಲ್ಲ ಆ ರೀತಿ ಬಿಜೆಪಿ ಕಥೆಯಾಗಿದೆ ಎಂದು ಟೀಕಿಸಿದರು.

೧೫ ಲಕ್ಷ ರೂ. ಕೊಡುತ್ತೇವೆಂದು ಹೇಳಿದ್ದ ಮೋದಿ ಅವರು ಜಮಾ ಮಾಡಿದ್ರಾ? ೨ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದ್ರು? ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದ್ರು? ಹೇಳಿದ್ದನ್ನ ಒಂದೂ ಮಾಡದೆ ಇರುವ ಕಾರಣ ಖಾಲಿ ಚೊಂಬು ಕೊಟ್ಟಿದ್ದಾರೆಂದು ಜಾಹೀರಾತು ಕೊಡಲಾಗಿದೆಯೇ ಹೊರತು ಬೇರೇನೂ ಇಲ್ಲ ಎಂದು ಸಮರ್ಥಿಸಿಕೊಂಡರು.

ನಾವು ವಿಧಾನಸಭಾ ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಆದರೆ, ಬಿಜೆಪಿಯವರು ಏನನ್ನೂ ಮಾಡದೆ ಬರೀ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯವಾಗಿ ಬಳಕೆ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಒಂದು ಹೆಣ್ಣಿನ ಕೊಲೆಯ ವಿಚಾರವನ್ನು ಬಳಸಿಕೊಂಡು ರಾಜಕಾರಣಮಾಡುವುದು ದುರ್ದೈವದ ಸಂಗತಿ. ವೈಯಕ್ತಿಕ ಕಾರಣಕ್ಕಾಗಿ ಕೊಲೆ ಆಗಿದೆ. ಈ ಕೊಲೆ ಪ್ರಕರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದರೂ ಬಿಜೆಪಿಯವರು ರಾಜಕೀಯವಾಗಿ ಲಾಭ ಪಡೆಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದವರು ಪ್ರತಿಭಟನೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಎಲ್ಲರ ಕಾಲದಲ್ಲೂ ಕೊಲೆಗಳು ಆಗಿವೆ. ಹಾಗೆಂದ ಮಾತ್ರಕ್ಕೆ ನಾವು ಕಾನೂನು ಸುವ್ಯವಸ್ಥೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುವ ಅರ್ಥವಲ್ಲ.

ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ನಮ್ಮ ಸರ್ಕಾರ ಗಂಭೀರವಾಗಿದೆ. ವೈಯಕ್ತಿಕ ವಿಚಾರದಲ್ಲಿ ನಡೆದ ಹತ್ಯೆಗೂ-ಕಾನೂನು ಸುವ್ಯವಸ್ಥೆಗೂ ಸಂಬಂಧವಿಲ್ಲ ಎಂದು ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಎಂದಿಗೂ ಸರ್ವನಾಶವಾಗಲ್ಲ. ಸಿದ್ದರಾಮಯ್ಯ ಅವರೇ ನಾಶದ ಬಗ್ಗೆ ಹೇಳುತ್ತಾರೆಂದು ಹೇಳಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಜಾ.ದಳದವರಿಗೆ ಕಾಂಗ್ರೆಸ್ ಕಂಡರೆ ಭಯ ಹೊರತು ನನಗಲ್ಲ. ಅವರಿಗೆ ಭಯ ಇರುವ ಕಾರಣಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಜತೆ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಭಯ ಇಲ್ಲದಿದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸಬಹುದಾಗಿತ್ತು. ನಮಗೆ ಅವರನ್ನು ಕಂಡರೆ ಯಾವುದೇ ಭಯವಿಲ್ಲ. ನಾವು ಸ್ವಂತ ಶಕ್ತಿಯಿಂದ ಚುನಾವಣೆ ಎದುರಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ತಿಳಿಸಿದರು.

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ಕಾವೇರಿ ನದಿಯಲ್ಲಿ ಆರು ಜನ ಸಾವು ; ಸಾವಿಗೀಡಾದವರೆಲ್ಲರೂ ಒಂದೇ ಕುಟುಂಬದವರು

ಕೆ.ಆರ್.ನಗರ : ತಾಲ್ಲೂಕಿನ ಹೊರವಲಯದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಸಾವನ್ನಪ್ಪಿದ ಆರು ಮಂದಿಯೂ ಒಂದೇ…

7 hours ago

ಚಾ.ನಗರ ಆಕ್ಸಿಜನ್‌ ದುರಂತ : ಸಂತ್ರಸ್ಥರಿಗೆ ಕೊನೆಗೂ ಒಲಿದ ಸರ್ಕಾರಿ ನೌಕರಿ

ಚಾಮರಾಜನಗರ : ಕೋವಿಡ್ ವೇಳೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ (ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ) ಸಂಭವಿಸಿದ್ದ ಆಕ್ಸಿಜನ್ ದುರಂತದಲ್ಲಿ 36…

8 hours ago

ಏ.20, 21 ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.20 ಹಾಗೂ 21ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 20ರಂದು…

8 hours ago

6 ಮಂದಿ ಸಾವು ಪ್ರಕರಣ ; ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಮೈಸೂರು : ಜಿಲ್ಲೆಯ ಕೆ.ಆರ್.ನಗರದ ಅರ್ಕೇಶ್ವರ ದೇಗುಲದ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ…

8 hours ago

ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ : ಸಿಎಂ ಸಿದ್ದರಾಮಯ್ಯ ಕರೆ

ರಾಣೇಬೆನ್ನೂರ : ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಅವರು ಇಂದು ರಾಣಿಬೆನ್ನೂರಿನ ನಿಟ್ಟೂರು…

8 hours ago

IPL 2026 | ಸೋಲಿನ ಸರಪಳಿ ಕಳಚಿದ ಕೆಕೆಆರ್‌ ; ರಾಜಸ್ಥಾನ ವಿರುದ್ಧ ಜಯ

ಕೊಲ್ಕತ್ತಾ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ 28ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ರಾಜಸ್ಥಾನ…

8 hours ago