ಜಿಲ್ಲೆಗಳು

ಬಾಡುತ್ತಿದೆ ಮೈವಿವಿ ತಾಯಿಬೇರು

ಪಾರಂಪರಿಕತೆ ಹೊಂದಿರುವ ಮಹಾರಾಜ ಕಾಲೇಜು ಕಟ್ಟಡಕ್ಕೆ ಶೀಘ್ರ ದುರಸ್ತಿ ಅಗತ್ಯವಿದೆ

ಬಿ.ಎನ್.ಧನಂಜಯಗೌಡ

ಮೈಸೂರು: ಶತಮಾನ ಪೂರೈಸಿರುವ ಮೈಸೂರಿನ ‘ಮಹಾರಾಜ ಕಾಲೇಜು’ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿರುವ ವಿಶೇಷ ಕಟ್ಟಡ. ಇಲ್ಲಿ ನೂರು ವರ್ಷಗಳ ಹಿಂದಿನಿಂದಲೂ ಜ್ಞಾನದಾಹಿಗಳಿಗೆ ನಿರಂತರ ಜ್ಞಾನ ದಾಸೋಹ ಉಣಬಡಿಸಲಾಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಸುಮಾರು ೩ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರು ೧೮೩೩ರಲ್ಲಿ ‘ರಾಜಾಸ್ ಇಂಗ್ಲಿಷ್ ಫ್ರೀ ಸ್ಕೂಲ್’ ಸ್ಥಾಪಿಸಿದರು. ಆನಂತರ ೧೮೯೭ರಲ್ಲಿ ಎರಡನೇ ಸ್ತರದ ಕಾಲೇಜನ್ನಾಗಿ ಮಾಡಲಾಯಿತು. ೧೦ನೇ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅಂದರೆ ೧೮೮೯ರಲ್ಲಿ ಈಗಿನ ಮಹಾರಾಜ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಯಿತು. ನಂತರ ೧೮೯೪ರಲ್ಲಿ ಇದನ್ನು ಪ್ರಥಮ ದರ್ಜೆ ಕಾಲೇಜನ್ನಾಗಿ ಮಾಡಲಾಯಿತು. ಹಾಗಾಗಿ ಈ ಕಾಲೇಜನ್ನು ಮೈಸೂರು ವಿಶ್ವವಿದ್ಯಾನಿಲಯದ ‘ತಾಯಿಬೇರು’ ಎಂದೇ ಹೇಳಲಾಗುತ್ತದೆ.
ಮಹಾರಾಜ ಕಾಲೇಜಿನ ಮುಖ್ಯ ಕಟ್ಟಡದ ಬಣ್ಣ ಮಾಸಿದೆ. ಇಲ್ಲಿನ ಆಡಳಿತ ವಿಭಾಗ ಮತ್ತು ನಗದು ವಿಭಾಗದ ಕೊಠಡಿಗಳ ಮೇಲ್ಚಾವಣಿ ಶಿಥಿಲವಾಗಿದ್ದು, ಮಳೆ ನೀರು ಸೋರಿಕೆಯಿಂದ ಗೋಡೆಯೆಲ್ಲಾ ವಸ್ತಿ ಹಿಡಿದಿದೆ. ಜೂನಿಯರ್ ಬಿ.ಎ. ಹಾಲ್ ಕಿಟಕಿಗಳಲ್ಲಿ ಪಾಚಿ ಬೆಳೆದಿದೆ.
ಪತ್ರಿಕೋದ್ಯಮ ತರಗತಿಗಳು ನಡೆಯುವ ಕಟ್ಟಡವನ್ನು ಯೂನಿಯನ್ ಕಟ್ಟಡ ಎನ್ನಲಾಗುತ್ತದೆ. ಇಲ್ಲಿಯೇ, ಕಂಪ್ಯೂಟರ್ ವಿಭಾಗ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ವಾಚನಾಲಯವೂ ಇದೆ. ಈ ಕಟ್ಟಡ ಹೆಚ್ಚಿನ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಕಟ್ಟಡದ ಮೇಲೆ ಗಿಡ-ಗಂಟಿಗಳು ಬೆಳೆದಿವೆ. ಮಳೆ ಬಂದಾಗ ನೀರು ಸೋರಿಕೆಯಾಗಿ ತರಗತಿಯ ಒಳಗೆಲ್ಲ ನೀರು ನಿಲ್ಲುತ್ತದೆ.

ಮೇಲ್ಚಾವಣಿ ಕುಸಿದಿತ್ತು : ಎರಡು ವರ್ಷದ ಹಿಂದೆ ಇದೇ ಕಾಲೇಜಿನ ಆವರಣದಲ್ಲಿ ಇರುವ ಕ್ರಿಮಿನಾಲಜಿ ತರಗತಿಗಳು ನಡೆಯುವ ಕೊಠಡಿಯೊಂದರ ಮೇಲ್ಚಾವಣಿ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಗಾಯಗಳಾಗಿತ್ತು.

ತಜ್ಞರ ಅಸಮಾಧಾನ: ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ಕುಸಿಯುತ್ತಿದ್ದಂತೆ ನಗರದ ಪಾರಂಪರಿಕ ಕಟ್ಟಡಗಳ ಪರಿಶೀಲನೆ ನಡೆಸಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ ಸದಸ್ಯರು ಮಹಾರಾಜ ಕಾಲೇಜಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಕಟ್ಟಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಮಹಾರಾಜ ಕಾಲೇಜು ಇತಿಹಾಸ:

* ಮುಮ್ಮಡಿ ಕೃಷ್ಣರಾಜ ಒಡೆಯರ್ ೧೮೩೩ರಲ್ಲಿ ಸ್ಥಾಪಿಸಿದ ‘ರಾಜಾಸ್ ಇಂಗ್ಲಿಷ್ ಫ್ರೀ ಸ್ಕೂಲ್’ ಈ ಕಾಲೇಜಿನ ಮೂಲ

*೧೦ನೇ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಈಗಿರುವ ಜಾಗದಲ್ಲಿ ೧೮೮೯ರಲ್ಲಿ ಈಗಿನ ಕಟ್ಟಡ ನಿರ್ಮಾಣ

* ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿರುವ ಕಟ್ಟಡ ಇದಾಗಿದೆ


ಕಾಲೇಜಿನಲ್ಲಿ ಓದಿದ ಪ್ರಸಿದ್ಧರು

ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಆರ್.ಕೆ.ನಾರಾಯಣ್, ಆರ್.ಕೆ.ಲಕ್ಷ್ಮಣ್, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇವನೂರು ಮಹಾದೇವ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಬಿ. ಪಿ.ಶೌರಿ, ಶ್ರೀಕೃಷ್ಣ ಆಲನಹಳ್ಳಿ, ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ ಹೀಗೆ ಇನ್ನು ಅನೇಕರು ಈ ಕಾಲೇಜಿನಲ್ಲಿ ಓದಿ ಪ್ರಸಿದ್ಧರಾಗಿದ್ದಾರೆ.



ಮುಮ್ಮಡಿ ಕೃಷ್ಣರಾಜ ಒಡೆಯರು ೧೮೩೩ರಲ್ಲಿ ‘ರಾಜಸ್ ಇಂಗ್ಲಿಷ್ ಫ್ರೀ ಸ್ಕೂಲ್’ ಆರಂಭಿಸಿದರು. ಆನಂತರದ ದಿನಗಳಲ್ಲಿ ಮಹಾರಾಜ ಕಾಲೇಜಾಗಿ ಆಗಿ ಬೆಳೆಯಿತು. ೧೮೮೯ರಲ್ಲಿ ಮಹಾರಾಜ ಕಾಲೇಜು ಕಟ್ಟಡವನ್ನು ಸ್ಥಾಪಿಸಲಾಯಿತು.

– ಈಚನೂರು ಕುಮಾರ್, ಇತಿಹಾಸ ತಜ್ಞ


ಮಹಾರಾಜ ಕಾಲೇಜು ಕಟ್ಟಡದಲ್ಲಿನ ಅನೇಕ ಕೊಠಡಿಗಳಲ್ಲಿ ಮಳೆ ಬಂದಾಗ ನೀರು ಸೋರುತ್ತದೆ. ಪತ್ರಿಕೋದ್ಯಮ ವಿಭಾಗದ ಕಟ್ಟಡವು ಹೆಚ್ಚಿನ ಪ್ರಮಾಣದಲ್ಲಿ ಶಿಥಿಲಗೊಂಡಿದೆ. ಈ ಬಗ್ಗೆ ದುರಸ್ತಿ ಮಾಡಿಸಲು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ.

-ಪ್ರೊ.ಅನಿತಾ ವಿಮ್ಲಾ ಬ್ರಾಗ್ಸ್, ಪ್ರಾಂಶುಪಾಲರು, ಮಹಾರಾಜ ಕಾಲೇಜು

andolanait

Recent Posts

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

3 hours ago

ಓದುಗರ ಪತ್ರ: ಕಠಿಣ ಕ್ರಮ ಅಗತ್ಯ

ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್‌ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…

11 hours ago

ಓದುಗರ ಪತ್ರ: ಕಸ ವಿಲೇವಾರಿಗೆ ವೈಜ್ಞಾನಿಕ ಪರಿಹಾರ ಅಗತ್ಯ

ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…

11 hours ago

ಕೇಂದ್ರ ಸರ್ಕಾರದ ಮೇಲೆ ಜೆನ್ ಝೀ ಚಳುವಳಿಯ ತೂಗುಗತ್ತಿ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…

11 hours ago

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

14 hours ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

14 hours ago