ಜಿಲ್ಲೆಗಳು

ನಗರಪಾಲಿಕೆ: ಬಿಜೆಪಿ- ಜಾ.ದಳ ಹಗ್ಗಜಗ್ಗಾಟ : ಅಧ್ಯಕ್ಷರಿಲ್ಲದ ಸ್ಥಾಯಿ ಸಮಿತಿಗಳು

ಉಪ ಮಹಾಪೌರ ಪಟ್ಟಕಳೆದುಕೊಂಡ ಜಾ.ದಳದಿಂದ ನಾಲ್ಕು ಸ್ಥಾನಗಳಿಗೂ ಪಟ್ಟು

ವರದಿ: ಕೆ.ಬಿ.ರಮೇಶನಾಯಕ

ಮೈಸೂರು: ಕಾಂಗ್ರೆಸನ್ನು ಅಧಿಕಾರದಿಂದ ದೂರವಿಡಲು ಆಂತರಿಕವಾಗಿ ಅಧಿಕಾರದ ಹೊಂದಾಣಿಕೆ ಮಾಡಿಕೊಂಡಿದ್ದ ಬಿಜೆಪಿ-ಜಾ.ದಳವು ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳ ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಪರಸ್ಪರ ಹಗ್ಗ-ಜಗ್ಗಾಟದಲ್ಲಿ ತೊಡಗಿರುವುದರಿಂದ ಚುನಾವಣೆಯು ನನೆಗುದಿಗೆ ಬಿದ್ದಿದೆ. ಮಹಾಪೌರ ಹಾಗೂ ಉಪ ಮಹಾಪೌರರ ಚುನಾವಣೆ ನಡೆದು ಐವತ್ತು ದಿನಗಳು ಕಳೆಯುತ್ತಿದ್ದರೂ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆ ನಡೆಯದಿರುವುದು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎರಡೂ ಪಕ್ಷಗಳ ಸದಸ್ಯರಲ್ಲಿ ಅಸಮಾಧಾನ ಮೂಡಿಸಿದೆ.

ಇದರಿಂದಾಗಿ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಎರಡೂ ಪಕ್ಷಗಳ ನಾಯಕರು ಒಟ್ಟಿಗೆ ಕುಳಿತು ಅಧಿಕಾರ ಹಂಚಿಕೊಳ್ಳುವ ಕುರಿತು ಸಮಾಲೋಚನೆ ನಡೆಸಬೇಕೆಂಬ ಒತ್ತಡವು ಉಭಯ ಪಕ್ಷಗಳ ಸದಸ್ಯರಲ್ಲಿ ಜೋರಾಗಿದೆ. ಸೆ.೬ ರಂದು ನಡೆದ ಮೈಸೂರು ಮಹಾನಗರಪಾಲಿಕೆ ಮಹಾಪೌರ ಹಾಗೂ ಉಪ ಮಹಾಪೌರರ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರದಿಂದ ದೂರವಿಡುವ ಜತೆಗೆ ಮಹಾಪೌರ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿ ಕೊನೆಯ ಕ್ಷಣದಲ್ಲಿ ಜಾ.ದಳವು ಬಿಜೆಪಿಯೊಂದಿಗೆ ಕೊಡುಕೊಳ್ಳುವಿಕೆಯ ಜಾಣ ನಡೆಯನ್ನು ಅನುಸರಿಸಿತ್ತು. ಉಪ ಮಹಾಪೌರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಜಾ.ದಳ ಅಭ್ಯರ್ಥಿ ರೇಷ್ಮಾಬಾನು ಪರ ಕೈಎತ್ತಬೇಕಾಗಿತ್ತಾದರೂ ಅಭ್ಯರ್ಥಿ ನಾಮಪತ್ರವೇ ತಿರಸ್ಕೃತಗೊಂಡಿದ್ದರಿಂದ ಉಪ ಮಹಾಪೌರ ಸ್ಥಾನವು ಬಿಜೆಪಿ ಪಾಲಾಗುವಂತಾಯಿತು. ಇದರಿಂದಾಗಿ ತೀವ್ರ ನಿರಾಶೆ, ಮುಜುಗರ ಅನುಭವಿಸಿದ್ದ ಜಾ.ದಳದ ಮುಖಂಡರು ಸ್ಥಾಯಿ ಸಮಿತಿ ಸ್ಥಾನಕ್ಕೆ ಬೇಡಿಕೆ ಇಟ್ಟು, ಉಪಮಹಾಪೌರರ ಆಯ್ಕೆಗೆ ಬಿಜೆಪಿಗೆ ಬೆಂಬಲ ನೀಡಿದ್ದರು. ಹೀಗಾಗಿಯೇ, ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಜಾ.ದಳದ ಮುಖಂಡರು ಪಟ್ಟು ಹಾಕಿದ್ದರೆ, ಬಿಜೆಪಿ ಎರಡು ಸ್ಥಾನಗಳನ್ನು ಮಾತ್ರ ಕೊಡುವುದಾಗಿ ಪ್ರತಿಪಟ್ಟು ಹಿಡಿದು ಕುಳಿತಿರುವ ಕಾರಣದಿಂದಾಗಿ ಚುನಾವಣೆ ನನೆಗುದಿಗೆ ಬೀಳಲು ಕಾರಣವಾಗಿದೆ.

ಹಣಕಾಸು ಸ್ಥಾಯಿ ಸಮಿತಿ ಬಿಡದಿರಲು ಬಿಜೆಪಿ ನಿರ್ಧಾರ: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗಳು ಇವೆ. ನಾಲ್ಕು ಸ್ಥಾನಗಳನ್ನೂ ಬಿಟ್ಟುಕೊಡಲು ಕೆಲವು ನಾಯಕರು ಒಲವು ತೋರಿದರೂ ಪಕ್ಷದ ಪ್ರಮುಖರು ಮಾತ್ರ ಎರಡನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಮಹಾಪೌರ, ಉಪ ಮಹಾಪೌರ ಸ್ಥಾನ ಬಿಜೆಪಿಗೆ ಇರುವ ಕಾರಣ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಯನ್ನು ತನ್ನ ಬಳಿಯೇ ಇಟ್ಟುಕೊಂಡರೆ ಒಂದಿಷ್ಟು ಜನಪರವಾದ ನಿಲುವುಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನುವ ಲೆಕ್ಕಾಚಾರ ಹೊಂದಲಾಗಿದೆ. ವಿಶೇಷವಾಗಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಎಂ.ಯು.ಸುಬ್ಬಯ್ಯ, ಮ.ವಿ.ರಾಮಪ್ರಸಾದ್ ಕಣ್ಣಿಟ್ಟಿದ್ದಾರೆ.

ದೀಪಾವಳಿ ಹಬ್ಬದ ನಂತರ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ದಿನಾಂಕ ಪ್ರಕಟ ಮಾಡುತ್ತೇವೆ ಅಂತ ಹೇಳಿದ್ದಾರೆ. ಜಾ.ದಳಕ್ಕೆ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ಬಿಟ್ಟುಕೊಡಲು ಅವರೇ(ಬಿಜೆಪಿ) ಒಪ್ಪಿಕೊಂಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡು ನಮಗೆ ಬಿಡುವ ವಿಶ್ವಾಸವಿದೆ.
-ಕೆ.ಟಿ.ಚೆಲುವೇಗೌಡ, ನಗರಾಧ್ಯಕ್ಷ, ಜಾ.ದಳ.

ನಗರಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳನ್ನು ಜಾ.ದಳಕ್ಕೆ ಬಿಟ್ಟುಕೊಡಬೇಕೆಂಬ ತೀರ್ಮಾನವಾಗಲಿ, ಚರ್ಚೆಯಾಗಲೀ ನಡೆದಿಲ್ಲ. ನಾಲ್ಕರಲ್ಲಿ ತಲಾ ಎರಡು ಅಧ್ಯಕ್ಷ ಸ್ಥಾನಗಳನ್ನು ಹಂಚಿಕೊಳ್ಳುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ಮಾಡದೆ ನಿರ್ಧರಿಸಲಾಗದು. -ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ, ಬಿಜೆಪಿ.

ದಸರಾ ಮಹೋತ್ಸವ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಸ್ಥಾಯಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ದೀಪಾವಳಿ ಹಬ್ಬ ಮುಗಿದ ಬಳಿಕ ಆಯುಕ್ತರೊಂದಿಗೆ ಸಮಾಲೋಚಿಸಿ ದಿನಾಂಕ ಪ್ರಕಟಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. -ಶಿವಕುಮಾರ್, ಮಹಾಪೌರರು.

 

 

andolana

Recent Posts

ಪತ್ನಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…

45 mins ago

ಓದುಗರ ಪತ್ರ: ಜಾಗೃತಿ

ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…

53 mins ago

ಓದುಗರ ಪತ್ರ: ಅಶ್ಲೀಲ ಹಾಡು ನಿಷೇಧ ಸ್ವಾಗತಾರ್ಹ

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…

54 mins ago

ಓದುಗರ ಪತ್ರ: ರೈಲು ಟಿಕೆಟ್ ಕಾಯ್ದಿರಿಸುವ ಸ್ಥಳದಲ್ಲಿ ಕೆಲಸ ಮಾಡದ ಎಸಿ

ಮೈಸೂರು ರೈಲ್ವೆ ನಿಲ್ದಾಣದ ಟಿಕೆಟ್ ಕಾಯ್ದಿರಿಸುವ ವಿಭಾಗದಲ್ಲಿ ಫ್ಯಾನ್ ಹಾಗೂ ಎಸಿ ಯಾವುದೂ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಟಿಕೆಟ್ ಮುಂಗಡವಾಗಿ…

56 mins ago

ಓದುಗರ ಪತ್ರ: ಅಸಂಘಟಿತ ಕಾರ್ಮಿಕರಿಗೆ ರಕ್ಷಣೆ ನೀಡಿ

ಜೀವನ ನಿರ್ವಹಣೆಗಾಗಿ ಪ್ರತಿಯೊಬ್ಬರೂ ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಅಸಂಘಟಿತ ಕಾರ್ಮಿ ಕರು ಅದರಲ್ಲೂ ಮುಖ್ಯವಾಗಿ ಕಟ್ಟಡ ನಿರ್ಮಾಣ, ಎಲೆಕ್ಟ್ರಿಕ್ ಕೆಲಸ,…

59 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಚಿತ್ರಮಂದಿರಗಳನ್ನು ಉಳಿಸಲು ಚಿತ್ರೋದ್ಯಮ ಹುಡುಕುತ್ತಿದೆ ದಾರಿ

ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಅಟ್ಟುತ್ತಿರುವ ಪ್ರದರ್ಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಮಿಳುನಾಡು ಸರ್ಕಾರಕ್ಕೆ ಕಳೆದ ವರ್ಷ ತಮಿಳುನಾಡಿನ ಹೈಕೋರ್ಟ್ ಆದೇಶ…

1 hour ago