ಜಿಲ್ಲೆಗಳು

ಗೋಪಾಲಸ್ವಾಮಿಗೆ ಯಾವತ್ತೂ ಒಂದೇಟು ಹೊಡೆಯುವ ಅಗತ್ಯ ಬಂದಿರಲಿಲ್ಲ…

ಮೈಸೂರು: ಆತ ಎಷ್ಟು ವಿಧೇಯ ಆಗಿದ್ದ ಎಂದರೆ, ಯಾವತ್ತೂ ಒಂದೇಟು ಹೊಡೆಯುವ ಅಗತ್ಯ ಬಂದಿರಲಿಲ್ಲ, ಗದರಿದ ಪ್ರಸಂಗವೂ ಇಲ್ಲ. ಹುಲಿ, ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಆತ ಯಾವತ್ತೂ ಮುಂದಿರುತ್ತಿದ್ದ. ನಾವು ಹೇಳುವುದನ್ನು ಸನ್ನೆ ಮೂಲಕವೇ ಅರ್ಥ ಮಾಡಿಕೊಂಡು ಇತರ ಆನೆಗಳನ್ನು ಜತೆಗೆ ಕರೆದೊಯ್ಯುತ್ತಿದ್ದ ಎಂದು ಕಣ್ಣೀರಾಗುತ್ತಾರೆ ಕಾವಾಡಿ ಮಂಜ.

ಅಭಿಮನ್ಯು ಆನೆಯ ಉತ್ತರಾಧಿಕಾರಿಯಾಗಿ ಮುಂದೊಂದು ದಿನ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಬೇಕಿದ್ದ ಗೋಪಾಲಸ್ವಾಮಿ ಆನೆ ಈಗ ನೆನಪು ಮಾತ್ರ. ಕಾಡಾನೆಯೊಂದಿಗಿನ ಕಾದಾಟದಲ್ಲಿ ದಾರುಣ ಸಾವು ಕಂಡ ಈ ಆನೆಯ ಗುಣ ವಿಶೇಷಗಳು ಒಂದೆರಡಲ್ಲ. ಗಾತ್ರದಲ್ಲಿ ದೈತ್ಯನಾದರೂ ತನ್ನ ಸೌಮ್ಯ ಮತ್ತು ಸ್ನೇಹಪೂರ್ಣ ನಡವಳಿಕೆಯಿಂದ ಮಾವುತರು ಕಾವಾಡಿಗರು ಮತ್ತು ಅಧಿಕಾರಿ ವರ್ಗದ ಪ್ರೀತಿಗೆ ಪಾತ್ರವಾಗಿದ್ದ ಆನೆಯಿದು.


ಪುಂಡಾನೆಯ ಜತೆಗಿನ ಕಾದಾಟದಲ್ಲಿ ಗೋಪಾಲಸ್ವಾಮಿಯ ಸಾವಿಗೆ ಈ ಸೌಮ್ಯ ಸ್ವಭಾವವೇ ಕಾರಣವಾಗಿರಬಹುದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ. ಆನೆಯ ಮಾವುತ ಮಂಜು ಮತ್ತು ಕಾವಾಡಿ ಮಂಜ ಗೋಪಾಲಸ್ವಾಮಿಯ ಸಾವಿನ ದು:ಖದಿಂದ ಇನ್ನೂ ಹೊರಗೆ ಬಂದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾವುತ ಮಂಜು ಅಂಬಾರಿ ಆನೆಯಾಗಿ ಗೋಪಾಲಸ್ವಾಮಿಯನ್ನು ಮುನ್ನಡೆಸಬೇಕಿತ್ತು.
“ ಆತ ಒಂದು ಆನೆ ಮಾತ್ರವಲ್ಲ, ನಮ್ಮ ಮನೆಯ ಸದಸ್ಯನಂತೆ ಇದ್ದ. ನಮ್ಮ ಜತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ. ವಾಲಿಬಾಲ್‌ ಆಟವಾಡುತ್ತಿದ್ದ. ಮಕ್ಕಳ ಜತೆ ತುಂಟಾಟವಾಡುತ್ತಿದ್ದʼʼ ಎಂದು ಗೋಪಾಲಸ್ವಾಮಿಯನ್ನು ನೆನಪಿಸಿಕೊಂಡು ಈಗಲೂ ದು:ಖಿಸುತ್ತಾರೆ ಮಾವುತ ಮಂಜು.

ಇತ್ತೀಚೆಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿಯನ್ನು ಮುಂದಿನ ಅಂಬಾರಿ ಆನೆ ಎಂದೇ ಪರಿಗಣಿಸಿ ವಿಶೇಷ ತರಬೇತಿ ನೀಡಲಾಗಿತ್ತು. ಮೈಸೂರಿನಲ್ಲಿ ದಸರಾ ಪೂರ್ವ ಕವಾಯತಿನಲ್ಲಿ ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ಕ್ಷಮತೆಯನ್ನು ಪರೀಕ್ಷಿಸಲಾಗಿತ್ತು.

ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲೂ ಈ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಇದೆಲ್ಲವನ್ನೂ ಯಶಸ್ವಿಯಾಗಿ ಪೂರೈಸಿದ್ದ ಗೋಪಾಲಸ್ವಾಮಿ ಇನ್ನು ಮೂರು ವರ್ಷಗಳಲ್ಲಿ ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಅಂಬಾರಿ ಹೊರಬೇಕಿತ್ತು. ಇದಕ್ಕೆ ಬೇಕಾದ ಎಲ್ಲ ಅರ್ಹತೆಗಳೂ ಗೋಪಾಲಸ್ವಾಮಿಗಿತ್ತು.

ದಸರಾ ಸಂದರ್ಭದಲ್ಲಿ ಅರ್ಜುನ ಬಿಟ್ಟರೆ ಅತಿ ಹೆಚ್ಚು ತೂಕದ ಆನೆಯಾಗಿ ಗುರುತಿಸಿಕೊಂಡಿದ್ದು ಗೋಪಾಲಸ್ವಾಮಿ. ಅಂಬಾರಿ ಆನೆಯಾಗಿದ್ದ ಅಭಿಮನ್ಯು 5000 ಕಿಲೋ ತೂಗಿದರೆ ಬರೋಬ್ಬರಿ 320 ಕಿಲೋ ಹೆಚ್ಚಿಸಿಕೊಂಡಿದ್ದ ಗೋಪಾಲಸ್ವಾಮಿ 5460 ಕಿಲೋ ತೂಕ ದಾಖಲಿಸಿ ಗಮನ ಸೆಳೆದಿದ್ದ.

ಸುಮಾರು ಮೂರು ಮೀಟರ್ ಎತ್ತರವಿದ್ದ ಗೋಪಾಲಸ್ವಾಮಿಗೆ ದಸರಾ ಗಜಪಡೆಯಲ್ಲಿ ಅತಿ ಎತ್ತರದ ಆನೆಯೆಂಬ ಹೆಗ್ಗಳಿಕೆಯೂ ಇತ್ತು. 41 ವರ್ಷದ ಗೋಪಾಲಸ್ವಾಮಿ ಅಂಬಾರಿ ಹೊರುವ ಅವಕಾಶ ಪಡೆದಿದ್ದರೆ ಸತತ 16 ವರ್ಷಗಳ ಕಾಲ ಜಂಬೂಸವಾರಿಗೆ ನಾಯಕನಾಗುವ ಅವಕಾಶವಿತ್ತು. ಆದರೆ ಹುಣಸೂರು ತಾಲ್ಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಕಾಲಿಕ ಸಾವು ಕಂಡಿದ್ದಾನೆ.

andolana

Recent Posts

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

4 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

4 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

4 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

4 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

4 hours ago

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…

4 hours ago