ಚಾಮರಾಜನಗರ

ಬೆಟ್ಟಳ್ಳಿ ಮಾರಮ್ಮ ಜಾತ್ರಾ ವಿಶೇಷ: ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಕಂಬ ಪ್ರತಿಷ್ಠಾಪನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಬಂಧ ಮಂಗಳವಾರ ರಾತ್ರಿ ಕಂಬ ಪ್ರತಿಷ್ಠಾಪನೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ ಮಾರ್ಚ್ 9 ರಿಂದ 13ರವರೆಗೆ ಐದು ದಿನಗಳ ಕಾಲ ನಡೆಯಲಿದೆ.

ಮಾರ್ಚ್.9ರಂದು ರ ಸೋಮವಾರ ಜಾಗರ ಸಮರ್ಪಣೆ, 10 ರ ಮಂಗಳವಾರ ಮಧ್ಯಾಹ್ನ ರಥೋತ್ಸವ ಹಾಗೂ ತಂಪು ಜ್ಯೋತಿ, 11ರಂದು ದೊಡ್ಡ ಬಾಯಿ ಬೀಗ, 12 ರಂದು ಅಗ್ನಿಕುಂಡ ದರ್ಶನ,13 ರಂದು ಆರ್ ಎಸ್ ದೊಡ್ಡಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಫೆಬ್ರವರಿ 24ರಂದು ಚಾಲನೆ ನೀಡಲಾಗಿದೆ.

ಇದಾದ ಎಂಟು ದಿನಗಳ ನಂತರ ಮಾರ್ಚ್ 3 ರ ಮಂಗಳವಾರ ಬೆಟ್ಟಳ್ಳಿ ಮಾರಮ್ಮನ ಪತಿ ಎಂಬ ಪ್ರತೀತಿ ಇರುವ ಮೂರು ಕವಲಿನ ಕಂಬವನ್ನು ದೇವಸ್ಥಾನದ ಮುಂಭಾಗದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಕಂಬ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಪಟ್ಟಣದ ರಾಘು ಹರೀಶ್, ಪಾರ್ಥ, ಪ್ರದೀಪ್ ಸೇರಿದಂತೆ ಇನ್ನಿತರ ಯುವಕರ ತಂಡ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಬಗೆಯ ಫಲ-ಪುಷ್ಪಗಳು ಹಾಗೂ ತೆಂಗಿನ ಮರದ ಗರಿಗಳಿಂದ ಅಲಂಕಾರ ಮಾಡಿದ್ದರು. ಇದಲ್ಲದೆ ದೇವಾಲಯದ ವತಿಯಿಂದ ದೇವಸ್ಥಾನದ ಹೊರಾಂಗಣದಲ್ಲಿ ವಿಶೇಷವಾದ ಹಸಿರು ಚಪ್ಪರ, ದೇವಸ್ಥಾನದ ಹೊರ ಆವರಣ, ಗೋಪುರಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.

ಕಂಬ ಪ್ರತಿಷ್ಠಾಪನೆ: ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೋತ್ಸವಕ್ಕೆ ಚಾಲನೆ ನೀಡಿದ ಎಂಟು ದಿನಗಳ ನಂತರ ಸರಿಯಾಗಿ ಮೂರು ಕವಲಿನ ಕಂಬ ಪ್ರತಿಷ್ಠಾಪನೆ ಮಾಡುವುದು ಸಂಪ್ರದಾಯ. ಅದರಂತೆ ಮಂಗಳವಾರ ವಾದ್ಯ ಮೇಳಗ ಳೊಂದಿಗೆ ಪಟ್ಟಣದ ಆಂಜನೇಯ ದೇವಸ್ಥಾನದ ಸಮೀಪ ಸಿದ್ದಪಡಿಸಿದ್ದ ಕಂಬವನ್ನು ಮೆರವಣಿಗೆಯ ಮೂಲಕ ತಂದು ದೇವ ಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು.

ಮಂಗಳವಾರ ಮುಂಜಾನೆಯಿಂದಲೇ ದೇವಿಗೆ ಎಳನೀರು, ಜೇನುತುಪ್ಪ, ಹಾಲು, ಮೊಸರು, ಅರಿಶಿನ ಕುಂಕುಮದಲ್ಲಿ ವಿಶೇಷ ಪೂಜೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ರಾವ್, ಶೇಖರ್ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು.

ಮಂಗಳವಾರ ರಾತ್ರಿ ನಡೆದ ಕಂಬ ಪ್ರತಿಷ್ಠಾನೆ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ವಾರ್ಡ್ಗಳ ವಿವಿಧ ಸಮುದಾಯಗಳ ಮಕ್ಕಳು, ಮಹಿಳೆಯರು, ಪುರುಷರು ಸಮುದಾಯದ ಯಜಮಾನರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹನೂರು ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ ಸಂಬಂಧ ಮಂಗಳವಾರ ಕಂಬ ಪ್ರತಿಷ್ಠಾಪನೆ ಮಾಡಿದ ನಂತರ ಎಂಟು ದಿನಗಳ ಕಾಲ ಯಾವುದೇ ಮಾಂಸ ಮಾರಾಟ ಇರುವುದಿಲ್ಲ. ಎಂಟು ದಿನಗಳ ಕಾಲ ಒಗ್ಗರಣೆಯೂ ಇಲ್ಲದೆ ಅಡುಗೆ ಮಾಡುವುದು ವಿಶೇಷ.

ಹಿಂದೂ- ಮುಸ್ಲಿಂ ಸಾಮರಸ್ಯದ ಹಬ್ಬ: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರೆ ಮಹೋತ್ಸವವನ್ನು ಎಲ್ಲಾ ಸಮುದಾಯದವರು ಆಚರಣೆ ಮಾಡುವುದು ಸಂಪ್ರದಾಯ. ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದ ಎಂಟು ದಿನಗಳ ನಂತರ ಕಂಬ ಪ್ರತಿಷ್ಠಾಪನೆ ಮಾಡಲಾಗುವುದು. ಇದಾದ ನಂತರ ಮುಸ್ಲಿಂ ಸಮುದಾಯದವರು ಹಲವಾರು ವರ್ಷಗಳಿಂದ ಎಂಟು ದಿನಗಳ ಕಾಲ ಮಾಂಸ ಮಾರಾಟ ಮಾಡುವುದನ್ನು ನಿಲ್ಲಿಸಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿಗಳಲ್ಲಿ ಸ್ವತಃ ಬಂದ್ ಮಾಡಿ ಶಾಂತಿ ಸೌಹಾರ್ದತೆಯಿಂದ ಸಹಕಾರ ನೀಡುವುದಲ್ಲದೆ ಜಾತ್ರಾ ಮಹೋತ್ಸವಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಜೊತೆಗೆ ಅವರು ಸಹ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. ರಾಜ್ಯಾದ್ಯಂತ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಗಲಾಟೆ ನಡೆಯುತ್ತಿದ್ದರೆ ಹನೂರು ಪಟ್ಟಣದಲ್ಲಿ ಮಾತ್ರ ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಪ್ರೀತಿ ವಿಶ್ವಾಸದಿಂದ ಪ್ರತಿ ಹಬ್ಬಗಳನ್ನು ಯಶಸ್ವಿಯಾಗಿ ಆಚರಣೆ ಮಾಡುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

10 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

10 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

10 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

10 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

10 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

10 hours ago