ಅಂಕಣಗಳು

ಸಮಾಜದ ಯಾವ ಬಂಧಕ್ಕೂ ನಿಲುಕದೇ ತಮ್ಮದೇ ಕಲಾ ಪ್ರಪಂಚದಲ್ಲಿ ಬದುಕಿದವರು ಇಸ್ರೋಜ್

ಚಿತ್ರಾ ವೆಂಕಟರಾಜು

2023ರ ಹಳೆಯ ವರ್ಷ ಮುಗಿದು ಹೊಸ ವರ್ಷದ ಆಗಮನವನ್ನು ಎದುರು ನೋಡುತ್ತಿರುವಾಗಲೇ ಹೊಸದಿಲ್ಲಿಯಲ್ಲಿ 97 ವರ್ಷದ ಇಸ್ರೋಜ್ ನಮ್ಮನ್ನು ಅಗಲಿದರು. ವಯೋಸಹಜ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ.

ಈ ಇಸ್ರೋಜ್ ಯಾರು? ಅವರು ಕವಿಯೇ? ಚಿತ್ರ ಕಲಾವಿದರೆ? ಪ್ರೇಮಿಯೇ? ಕೊನೆಗೂ ಅವರು ತೀರಿಕೊಂಡಾಗ ಅವರನ್ನು ಜನ ಕರೆದದ್ದು ಅಮೃತಾ ಪ್ರೀತಂ ಅವರ ಸಂಗಾತಿ ಇಸ್ರೋಜ್ ಎಂದೇ.

ಅವರೊಬ್ಬ ಚಿತ್ರ ಕಲಾವಿದರಾಗಿದ್ದರು. ಖ್ಯಾತ ಪಂಜಾಬಿ ಕವಿ, ಕಾದಂಬರಿಕಾರ್ತಿ ಅಮೃತಾ ಪ್ರೀತಂ ಅವರನ್ನು ಇಂದ್ರಜಿತ್ ಸಿಂಗ್ ಭೇಟಿಯಾದಾಗ ಅವರು ತಮ್ಮ ಪತಿ ಪ್ರೀತಂ ಸಿಂಗ್‌ರನ್ನು ಬಿಟ್ಟು ತಮ್ಮ ಮಕ್ಕಳು ನವರಾಜ್ ಹಾಗೂ ಕಂದಲಾರೊಂದಿಗೆ ಒಬ್ಬರೇ ಇರತೊಡಗಿದ್ದರು. ಇಂದ್ರಜಿತ್ ಅಮೃತಾರಿಗೆ ಹತ್ತಿರವಾದರು. ಅಮೃತಾರ ಸಹವಾಸದಲ್ಲಿ ಇಂದ್ರಜಿತ್ ‘ಇಸ್ರೋಜ್’ ಆದರು. ಇಸ್ರೋಜ್ ಎಂದರೆ ಇಂದು, ಇವತ್ತು ಎಂದರ್ಥ.

ಇಂದ್ರಜಿತ್ ಭೂತ, ಭವಿಷ್ಯಗಳ ಹಂಗಿಲ್ಲದೆ ಅಮೃತಾರ ‘ಇಂದಾ’ದರು. ಅವರಿಬ್ಬರ ಸಾಂಗತ್ಯ ಪದಗಳಿಗೆ ನಿಲುಕದ್ದು, ಸಮಾಜದ ಯಾವ ಬಂಧಕ್ಕೂ ನಿಲುಕದೇ ತಮ್ಮದೇ ಕಲಾ ಪ್ರಪಂಚದಲ್ಲಿ ಬದುಕಿದರು.

ಇಸ್ರೋಜ್‌ರಿಗೆ ಅಮೃತಾ ಎಂದರೆ ಪ್ರೀತಿ, ಆದರ, ಗೌರವ, ಒಂದು ರೀತಿಯ ಹುಚ್ಚು. ಅಮೃತಾರಿಗೆ ಸಾಹಿರ್ ಲುಧಿನಾವವಿ ಅವರ ಮೇಲೆ ಪ್ರೇಮ, ಸಾಹಿರ್‌ಗೂ ಅಮೃತಾ ಮೇಲೆ ಪ್ರೀತಿ. ಆದರೆ ಮದುವೆಯ ಬಂಧದಲ್ಲಿರಲು ಆಗಲಿಲ್ಲ. ಸಾಹಿರ್ ಏಕೆ ಅಮೃತಾರನ್ನು ಮದುವೆಯಾಗಲಿಲ್ಲ ಎನ್ನುವುದು ಬಹಳ ವರ್ಷಗಳ ಕಾಲ ಅವರನ್ನು ಕಾಡಿತು.

ಮದುವೆ ಎಂದರೆ ಏನು ಎಂದು ಅರ್ಥವಾಗುವ ಮೊದಲೇ ಪ್ರೀತಂ ಸಿಂಗ್‌ ಜತೆ ಮದುವೆಯಾಯಿತು. ನಂತರ, ಕವಿಗೋಷ್ಟಿಯಲ್ಲಿ ಸಾಹಿರ್‌ನನ್ನು ನೋಡಿದ ತಕ್ಷಣವೇ ಅವರಿಗೆ ಮರುಳಾದರು. ಆ ಹುಚ್ಚು ಜೀವನಪೂರ್ತಿ ಉಳಿದುಹೋಯಿತು. ಅಮೃತಾ ಸಾಹಿ‌ ಜತೆಗೆ ಇರುವುದಕ್ಕೆ ಆಗದ ಬೇಗೆಯನ್ನು ನೀಗಿಸಿಕೊಳ್ಳಲು ಸಾಹಿರ್ ಸೇದಿಬಿಟ್ಟ ಸಿಗರೇಟನ್ನು ಸೇದುತ್ತಿದ್ದರು. ಇಂತಹ ವ್ಯಾಮೋಹದ ಜತೆಯಲ್ಲಿರುವಾಗಲೇ ಇಸ್ರೋಜ್ ಪರಿಚಯವಾದರು. ಇಬ್ಬರೂ ಒಬ್ಬರನ್ನೊಬ್ಬರು ಇನ್ನಿರಲಾರದಂತೆ ಹಚ್ಚಿಕೊಂಡರು.

ಸಾಹಿರ್‌ನ ಮೇಲೆ ಅಮೃತಾರಿಗಿದ್ದ ಪ್ರೇಮದ ಜತೆಗೆ ಅವರನ್ನು ಒಪ್ಪಿಕೊಂಡರು. ಆ ಕಾಲದಲ್ಲಿ ಮದುವೆಯಾಗಿ ಮಕ್ಕಳಿರುವ ಒಂದು ಹೆಣ್ಣಿನ ಜತೆಗೆ ಒಬ್ಬ ಗಂಡಸು ಇರುವುದು ಊಹೆಗೂ ಮೀರಿದ್ದು. ಸಮಾಜದ ಚುಚ್ಚುವ ಕಣ್ಣುಗಳನ್ನು, ನೋಯಿಸುವ ಮಾತುಗಳನ್ನು ಇಬ್ಬರೂ ನಗುತ್ತಲೇ ಸ್ವೀಕರಿಸಿದರು.

ಅಮೃತಾ ಪುಸ್ತಕಗಳನ್ನು ಓದುತ್ತಿದ್ದರೆ, ಏನಾದರೂ ಬರೆಯುತ್ತಿದ್ದರೆ ಇಮೋಜ್ ಚಹ ಮಾಡಿ ತಂದುಕೊಡುತ್ತಿದ್ದರು. ಕಾರ್ಯಕ್ರಮಗಳಿಗೆ ಇಬ್ಬರನ್ನೂ ಆಹ್ವಾನಿಸಿದ್ದರೆ ಇಬ್ಬರೂ ಹೋಗುತ್ತಿದ್ದರು. ಅಮೃತಾರಿಗೆ ಮಾತ್ರ ಆಹ್ವಾನವಿದ್ದರೆ ಕಾರಿನಲ್ಲಿ ಅವರ ಜತೆ ಹೋಗಿ ಹೊರಗೆಲ್ಲಾದರೂ ಕುಳಿತಿರುತ್ತಿದ್ದರು. ಅಮೃತಾರಿಗೆ ಕಾರ್ಯಕ್ರಮದಲ್ಲೇ ಭೋಜನ ಏರ್ಪಾಡಾಗಿದ್ದರೆ, ಇನ್ನೊಜ್ ಡಬ್ಬಿ ಕಟ್ಟಿಕೊಂಡು ಕಾರಿನಲ್ಲೋ, ಎಲ್ಲಾದರೂ ಊಟ ಮಾಡುತ್ತಿದ್ದರು. “ನಿಮಗೆ ನಿಮ್ಮದೇ ಮಕ್ಕಳು ಬೇಕು ಅನಿಸಲಿಲ್ಲವೇ?’ ಎಂದು ಕೇಳಿದರೆ, ನಾವು ಭೇಟಿಯಾದಾಗ ಇಬ್ಬರು ಮಕ್ಕಳಿದ್ದರು. ಸಾಕು’ ಎಂದು ಹೇಳಿರುವುದನ್ನು ನೆನಪಿಸಿಕೊಂಡರೆ ಇಂಥ ಮನುಷ್ಯ ಇದ್ದಿರಲು ಸಾಧ್ಯವೇ ಅನಿಸುತ್ತದೆ.

ಕಂದಾ ಮತ್ತು ನವರಾಜ್‌ರನ್ನು ತಮ್ಮ ಮಕ್ಕಳಂತೆ ಬೆಳೆಸಿದರು. ಆದರೆ ಮಗಳೋ ಅಥವಾ ಮಗನ ಮದುವೆಯ ಸಂದರ್ಭದಲ್ಲಿ ಸಮಾಜ ಇವರನ್ನು ಅಮೃತಾರ ಸಂಗಾತಿ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಗೊತ್ತಿದ್ದು, ಮದುವೆಗೇ ಹೋಗಲಿಲ್ಲ. ಆ ಬಗ್ಗೆ ಕೇಳಿದರೆ, ಯಾವ ಬೇಸರವೂ ಇಲ್ಲದೆ, ‘ಒಳ್ಳೆಯದೆ ಆಯಿತು. ನಾನೂ ಹೋಗಿಬಿಟ್ಟಿದ್ದರೆ ಮದುಮಕ್ಕಳ ಕೋಣೆಯನ್ನು ಸಜ್ಜುಗೊಳಿಸಲು ಯಾರೂ ಇರುತ್ತಿರಲಿಲ್ಲ’ ಎಂದು ತಮಾಷೆ ಮಾಡುವಂಥ ಮನುಷ್ಯ ಇಸ್ರೋಜ್.

ಅದಕ್ಕೆ ಅಮೃತಾ ಇದ್ರೋಜ್ ಅವರ ಬಗ್ಗೆ ಹೀಗೆ ಬರೆಯಲು ಸಾಧ್ಯವಾಯಿತು.
‘ತಂದೆ, ಸೋದರ, ಗೆಳೆಯ, ಪತಿ
ಯಾವ ಶಬ್ದಕ್ಕೂ ಅರ್ಥವಿಲ್ಲ
ನಿನ್ನನ್ನು ನೋಡಿದಾಗ ಎಲ್ಲ ಶಬ್ದಗಳೂ ಅರ್ಥಪೂರ್ಣವಾದವು’ (ಅನು: ಹಸನ್ ನಯೀಮ್ ಸುರಕೋಡ್, ರಸೀದಿ ಟಿಕೆಟ್)

ಅವರೊಬ್ಬ ಕಲಾವಿದ. ಅಮೃತಾರೇ ಹೇಳುವಂತೆ ಅವರ ಕಲೆಯನ್ನು ಗುರುತಿಸಿದ್ದರೆ, ಇಸ್ರೋಜ್ ಭಾರತಕ್ಕೆ ಮತ್ತೊಬ್ಬ ಹೆಮ್ಮೆಯ ಕಲಾವಿದರಾಗ ಬಹುದಿತ್ತು. ವಾಚುಗಳ ಡೈಲ್ ವಿನ್ಯಾಸವನ್ನು ಮಾಡಿದ್ದರು. ಡೈಲ್ ಮೇಲೆ ಜಗತ್ತಿನ ಶ್ರೇಷ್ಠ ಕವಿಗಳ ಸಾಲುಗಳನ್ನು ಬರೆದಿದ್ದರು. ಅಮೃತಾರು ಒಮ್ಮೊಮ್ಮೆ ಕಪಾಟಿನ ಆ ಎಲ್ಲ ವಾಚುಗಳಿಗೂ ಕೀಲಿ ಕೊಟ್ಟು ಅದರ ಶಬ್ದವನ್ನು ಕೇಳುತ್ತಿದ್ದರಂತೆ. ಇಬ್ಬರೂ ಸೇರಿ ನಾಗಮಣಿ ಎಂಬ ಪತ್ರಿಕೆ ಹೊರತರುತ್ತಿದ್ದರು.

ಒಮ್ಮೆ, ಜ್ಯೋತಿಷಿಯೊಬ್ಬರು ಇಬ್ಬರ ಕೈಯೊಳಗಿನ ರೇಖೆಗಳನ್ನು ನೋಡಿ, ಅಮೃತಾರಿಗೆ ನಿಮ್ಮ ಬಳಿ ಹಣ ಉಳಿಯುತ್ತದೆ ಎಂದೂ, ಇಮ್ರಜರಿಗೆ ನಿಮ್ಮ ಬಳಿ ಹಣ ನಿಲ್ಲುವುದಿಲ್ಲ’ ಎಂದು ಹೇಳಿದಾಗ, ಇಸ್ರೋಜರು ಅಮೃತಾರ ಕೈ ಹಿಡಿದು ‘ಹಾಗಿದ್ದರೆ ನಾವು ಈ ಒಂದೇ ರೇಖೆಯಲ್ಲಿ ಜೀವನ ನಡೆಸುತ್ತೇವೆ’ ಎಂದು ಹೇಳಿದ್ದರು. ಅಮೃತಾರ ಮಗ ನವರಾಜ್ ಮದುವೆಗೆ ಹುಡುಗಿಯ ಮನೆಯವರು ಬಾರದೇ ಇದ್ದಾಗ, ಹುಡುಗಿಯ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದುಕೊಟ್ಟರು.

ಶಿವನ ಮದುವೆಗೆ ಬಂದ ಬೀಗರಂತೆ, ನಾನು ಹೆಣ್ಣಿನ ಕಡೆ -ನೀನು ಗಂಡಿನ ಕಡೆ ಎಂದು ಮಾಡಿಕೊಂಡ ತಮಾಷೆ ಆ ಕ್ಷಣದಲ್ಲಿ ನಿಜವೇ ಆಗಿತ್ತು. ಪ್ರೀತಂ ಸಿಂಗ್‌ ಕೊನೆಗಾಲದಲ್ಲಿ ಅವರನ್ನು ಅಮೃತಾ ಇದ್ರೋಜರೆ ನೋಡಿಕೊಂಡರು. ಇಷ್ಟು ನಿಷ್ಕಲ್ಮಶವಾಗಿ ಪ್ರೇಮಕ್ಕೆ ತಮ್ಮನ್ನು ತಾವೇ ಅರ್ಪಿಸಿಕೊಂಡ ಇನ್ನೊಬ್ಬರ ಬಗ್ಗೆ ಗೊತ್ತಿಲ್ಲ. ಆದ್ದರಿಂದಲೇ ಅಮೃತಾರ ಸಾವಿನ ನಂತರವೂ ಅವರು ಬದುಕಲು ಸಾಧ್ಯವಾದದ್ದು. ಅಮೃತಾ ತೀರಿಕೊಂಡ ನಂತರ ಕವಿತೆಗಳನ್ನು ಬರೆದರು. ಕೊನೆಯ ಉಸಿರಿನ ತನಕ ಅಮೃತಾರನ್ನು ಜೀವಂತವಾಗಿಟ್ಟು ಕೊಂಡಿದ್ದರು. ಅದಕ್ಕೆ ಇರಬೇಕು, ಅವರು ತೀರಿಕೊಂಡಾಗಲೂ’ ಅಮೃತಾ ರ ಸಂಗಾತಿ ಇಸ್ರೋಜ್’ ಆಗಿಯೇ ಇದ್ದರು.
@kavitaaayein

andolanait

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

5 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

5 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

5 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

5 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

5 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

5 hours ago