ಅಂಕಣಗಳು

ಸಾಮಾಜಿಕ ವ್ಯಾಧಿಯಾಗುತ್ತಿರುವ ಕ್ರೌರ್ಯ-ಹಿಂಸೆ

ನಾ.ದಿವಾಕರ

ಸಮಾಜದ ಗರ್ಭದಲ್ಲೇ ಮೊಳೆಯುವ ಕ್ರೌರ್ಯ ಸಾಪೇಕ್ಷವಾದಾಗ ಹಿಂಸೆ ಸ್ವಿಕೃತವಾಗುತ್ತದೆ

ಕಳೆದ ಮೂರುನಾಲ್ಕು ದಶಕಗಳಲ್ಲಿ ಭಾರತ ಕಂಡಿರುವಷ್ಟು ಕ್ರೌರ್ಯ ಮತ್ತು ಹಿಂಸೆ ಪ್ರಾಚೀನ ಸಮಾಜವನ್ನೂ ನಾಚಿಸುತ್ತದೆ. ಮನುಷ್ಯರಲ್ಲಿ ಇತರ ಅವಗುಣಗಳಂತೆಯೇ ಆಂತರ್ಯದಲ್ಲೇ ಸೃಷ್ಟಿಯಾಗುವ ಕ್ರೌರ್ಯ ಮತ್ತು ಹಿಂಸೆ ವ್ಯಕ್ತಿಗತ ನೆಲೆಯಲ್ಲಿ ಪಡೆದುಕೊಳ್ಳುವ ರೂಪಗಳು ವಿಶಾಲ ಸಮಾಜದಲ್ಲಿ ಭಿನ್ನ ರೀತಿಯಲ್ಲಿ ವ್ಯಕ್ತವಾಗುವುದು ಮಾನವನ ಇತಿಹಾಸದಲ್ಲಿ ಕಾಣಬಹುದಾದ ವಾಸ್ತವ. ಮಾನವ ಸಮಾಜವನ್ನು ಬೌದ್ಧಿಕವಾಗಿ ವಿಭಜಿಸುವ, ತನ್ಮೂಲಕ ಭೌತಿಕವಾಗಿ ವಿಘಟಿಸುವ ಯಾವುದೇ ಚಿಂತನಾಧಾರೆಗಳು ಈ ವಿಶಾಲ ಸಾಮಾಜಿಕ ನೆಲೆಯನ್ನು ಸಾಂಸ್ಥೀಕರಿಸುವ ಹಾದಿಗಳನ್ನು ಸದಾ ಅರಸುತ್ತಿರುತ್ತವೆ. ಈ ಸಾಂಸ್ಥೀಕರಣಗೊಂಡ ಹಿಂಸೆ ಮತ್ತು ಕ್ರೌರ್ಯವನ್ನೇ ನವ ಭಾರತದ ಆಧುನಿಕ ಸಮಾಜ ತನ್ನೊಡಲಲ್ಲಿ ಇರಿಸಿಕೊಂಡು ವಿಕಾಸದತ್ತ ಸಾಗುತ್ತಿರುವುದು ವರ್ತಮಾನದ ದುರಂತಗಳಲ್ಲೊಂದು. ನಾವು ಅತ್ಯಾಧುನಿಕ ಡಿಜಿಟಲ್ ಯುಗದಲ್ಲಿದ್ದೇವೋ ಅಥವಾ ಇನ್ನೂ ಶತಮಾನಗಳ ಹಿಂದಿನ ಬರ್ಬರಾವಸ್ಥೆಯಲ್ಲಿದ್ದೇವೋ ಎಂದು ಅನುಮಾನ ಮೂಡುವಂತೆ, ಕಳೆದ ದಶಕಗಳಲ್ಲಿ, ಅದರಲ್ಲೂ ೨೧ನೆಯ ಶತಮಾನದಲ್ಲಿ, ಹಿಂಸೆ ಮತ್ತು ಕ್ರೌರ್ಯವನ್ನು ಸಹನೀಯಗೊಳಿಸುತ್ತಿದ್ದೇವೆ.

ಹಾಗಾಗಿಯೇ ನಮ್ಮ ನಡುವೆ ಸಂಭವಿಸುತ್ತಲೇ ಇರುವ ದೌರ್ಜನ್ಯ, ತಾರತಮ್ಯ, ಕಿರುಕುಳ, ಅತ್ಯಾಚಾರ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಇವೆಲ್ಲವನ್ನೂ ನಾವು ವ್ಯಕ್ತಿ ಸ್ತರದಲ್ಲೇ ನೋಡುತ್ತಿದ್ದೇವೆ. ಬೌದ್ಧ ಧಮ್ಮ ಹೇಳಿದಂತಹ ಸಮ್ಯಕ್ ದೃಷ್ಟಿಕೋನವನ್ನು ನಮ್ಮ ಸಮಾಜ ತಲುಪಲು ಸಾಕಷ್ಟು ದೂರ ಕ್ರಮಿಸಬೇಕಿದೆ. ಇದಕ್ಕೆ ಅಡ್ಡಿಯಾಗುತ್ತಿರುವುದು ವ್ಯವಸ್ಥೆಯೊಳಗೇ ಬೇರೂರಿರುವ ಯಜಮಾನಿಕತೆಯ ಸಂಸ್ಕೃತಿ ಮತ್ತು ಅದನ್ನು ವ್ಯವಸ್ಥಿತವಾಗಿ ಪೋಷಿಸುತ್ತಿರುವ ಊಳಿಗಮಾನ್ಯ-ಪಿತೃಪ್ರಧಾನ ಧೋರಣೆ ಮತ್ತು ಇದಕ್ಕೆ ನೀರೆರೆಯುವ ಬಂಡವಾಳಶಾಹಿಯ ವೈರುಧ್ಯಗಳು. ನಮಗೆ ಸಮಾಜದಲ್ಲಿ ಮತ್ತು ಕೌಟುಂಬಿಕ ವಲಯದಲ್ಲಿ ನಡೆಯುವ ಹಿಂಸಾತ್ಮಕ ಘಟನೆಗಳು ಮತ್ತು  ಅಲ್ಲಿ ಪ್ರಕಟಗೊಳ್ಳುವ ಕ್ರೌರ್ಯ-ಹಿಂಸೆ ಒಂದು ಸಾಮಾಜಿಕ ಅಸ್ವಸ್ಥತೆ ಅಥವಾ ವ್ಯಸನ ಎನಿಸಿಲ್ಲ. ಈ ಕ್ರೌರ್ಯಕ್ಕೆ ಬಲಿಯಾಗುವ, ಹಿಂಸೆಯನ್ನು ಅನುಭವಿಸುವ ಜೀವಗಳು ಸಾಮಾನ್ಯವಾಗಿ ಮೇಲ್‌ಸ್ತರದ ಹಿತವಲಯಗಳಿಂದ ಹೊರಗಿರುವುದರ ಕಾರಣ, ಮುಂದುವರಿದ ಮೇಲ್ಪದರದ ಸಮಾಜವೊಂದು ಹಿಂಸೆ ಮತ್ತು ಕ್ರೌರ್ಯವನ್ನು ನೋಡುವ ವಿಧಾನವನ್ನೂ ಬದಲಿಸಿಕೊಂಡಿದೆ.

ತತ್ಪರಿಣಾಮವಾಗಿ ಭಾರತೀಯ ಸಮಾಜದ ಕಣ್ಣಿಗೆ ಅಪರಾಧಗಳು ಕಾಣುತ್ತಿಲ್ಲ ಬದಲಾಗಿ ಅಪರಾಽಗಳು ಕಾಣುತ್ತಿದ್ದಾರೆ. ಎಂತಹ ಘೋರ ಅಪರಾಧಗಳು ಸಂಭವಿಸುತ್ತಿದ್ದರೂ ಅದನ್ನು ವ್ಯಕ್ತಿಗತಗೊಳಿಸುವ ಒಂದು ಬೌದ್ಧಿಕ ವ್ಯವಸ್ಥೆಯನ್ನೇ ನಾವು ನಿರ್ಮಿಸಿಕೊಂಡಿದ್ದೇವೆ. ಇಲ್ಲಿ ಸಂಭವಿಸುವ ಹಿಂಸೆ ಮತ್ತು ಕ್ರೌರ್ಯ ಎರಡೂ ವ್ಯಕ್ತಿಗತ ನೆಲೆಯಲ್ಲಿ ನಿರ್ವಚಿಸಿ ನಿಷ್ಕರ್ಷಿಸಲ್ಪಡುತ್ತವೆ. ಸಹಜವಾಗಿಯೇ ಅಪರಾಧವೂ ಅದರೊಳಗಿನ ಹಿಂಸೆ-ಕ್ರೌರ್ಯವೂ ಸಾಪೇಕ್ಷವಾಗಿಬಿಡುತ್ತದೆ. ಹಾಗಾಗಿ ಅಪರಾಧಗಳು ನಮ್ಮ ನಿದ್ರೆಗೆಡಿಸುತ್ತಿಲ್ಲ, ಅಪರಾಧಿಗಳು ವಿಚಲಿತಗೊಳಿಸುತ್ತಿದ್ದಾರೆ.

ಅಸೂಕ್ಷ ತೆಯ ಆಕರಗಳು…ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಅದು ಪೋಷಿಸಿರುವ ಮೇಲ್ಪದರದ ಸಾಂಸ್ಥೀಕರಣಗೊಂಡ ಸಮಾಜದಲ್ಲಿ ಮನುಜ ಸಂವೇದನೆ, ಲಿಂಗ ಸೂಕ್ಷ ತೆ ಎರಡೂ ಹಿಂಬದಿಗೆ ಸರಿದುಬಿಡುತ್ತದೆ. ಹಾಗಾಗಿ ನಮಗೆ ಅಪರಾಧೀಗಳು/ಸಂತ್ರಸ್ತರು ವ್ಯಕ್ತಿಗಳಾಗಿ ಮಾತ್ರ ಕಾಣುತ್ತಿದ್ದಾರೆ. ಸಾಮಾಜಿಕವಾಗಿ ಪ್ರತಿನಿತ್ಯ ಸಂಭವಿಸುತ್ತಿರುವ ಅತ್ಯಾಚಾರ, ಹತ್ಯೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಹಿಂಸೆಗಳು ನಮಗೆ ಸಾಮಾಜಿಕ ರೋಗ/ವ್ಯಸನದಂತೆ ಕಾಣುತ್ತಿಲ್ಲ. ಇಂತಹ ಒಂದು ವಿಕೃತಿಗಳ ನಡುವೆ ಅಮಾಯಕ ಮೂಕ ಪಶು, ಒಂದು ಹಸು ತನ್ನ ಕೆಚ್ಚಲು ಕತ್ತರಿಸಿದವರು ಯಾರು ಎಂಬ ಅರಿವೇ ಇಲ್ಲದೆ ಮೌನ ವೇದನೆ ಅನುಭವಿಸುತ್ತದೆ.

ಆ ಮೂಕ ಪಶುವಿನ ಮೇಲೆ ಇಂತಹ ಕ್ರೌರ್ಯ ಎಸಗಿದ ವ್ಯಕ್ತಿಯನ್ನು ಅವನ ಮತೀಯ ಅಸ್ಮಿತೆಯ ಮೂಲಕ ಗುರುತಿಸುವ ಬಿಜೆಪಿ ನಾಯಕರಿಗೆ ಅಲ್ಲೊಂದು ‘ಜಿಹಾದ್’ ಅಥವಾ ‘ಭಯೋತ್ಪಾದನೆ’ಯ ಛಾಯೆ ಕಾಣುತ್ತದೆ. ಒಂದು ವೇಳೆ ಆತ ಮುಸ್ಲಿಂ ಆಗದೆ ಅನ್ಯನಾಗಿದ್ದಲ್ಲಿ, ಇದೂ ಒಂದು ರಸ್ತೆ ಅಪಘಾತದಂತೆ ವಿಸ್ಮತಿಗೆ ಜಾರಿಬಿಡುತ್ತಿತ್ತು. ಏಕೆಂದರೆ ಆರೋಪಿಯ ಕ್ರೌರ್ಯದ ಹಿಂದೆ ಅಡಗಿರುವ ಅಮಾನುಷ ಮನಸ್ಥಿತಿಯನ್ನು ಸಮಷ್ಟಿ ನೆಲೆಯಲ್ಲಿಟ್ಟು ನೋಡುವ ವ್ಯವಧಾನವನ್ನೇ ನಮ್ಮ ಸಮಾಜ, ರಾಜಕಾರಣ ಬೆಳೆಸಿಕೊಂಡಿಲ್ಲ. ಅಂದರೆ ನಾವು ನೋವು-ವೇದನೆ-ಯಾತನೆಗೆ ಮಾನವರಾಗಿ ಸ್ಪಂದಿಸುವುದನ್ನು ಮರೆತುಹೋಗಿದ್ದೇವೆ. ಹಸುವಿನ ಕೆಚ್ಚಲು ಕತ್ತರಿಸಿ ಬಿಸಾಡಿದ ವ್ಯಕ್ತಿಗೂ, ತಮ್ಮದಲ್ಲದ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಗಳನ್ನು ಕೊಲ್ಲುವ ಪೋಷಕರಿಗೂ, ತನ್ನಿಚ್ಛೆಯಂತೆ ಆಹಾರ ಸೇವಿಸುವ ವ್ಯಕ್ತಿಯನ್ನು ಹತ್ಯೆ ಮಾಡುವವರಿಗೂ, ಹಸುಗಂದನನ್ನು ಗೋಡೆಗೆ ಅಪ್ಪಳಿಸಿ ಕೊಲ್ಲುವ ದುರುಳರಿಗೂ (ಬಿಲ್ಕಿಸ್ ಬಾನೋ ಪ್ರಕರಣ) ಏನಾದರೂ ವ್ಯತ್ಯಾಸ ಕಾಣಲು ಸಾಧ್ಯವೇ?

ಆಂತರಿಕೀಕರಣದ ನೆಲೆಯಲ್ಲಿ: ಈ ಎಲ್ಲ ಘಟನೆಗಳಲ್ಲಿ ನಮಗೆ ಕಾಣಬೇಕಿರುವುದು ಮನುಷ್ಯ ಜೀವಿಯಲ್ಲಿರುವ ಕ್ರೌರ್ಯ ಮತ್ತು ಹಿಂಸೆ. ಕಳೆದ ಮೂರು ದಶಕಗಳ ಬೆಳವಣಿಗೆಗಳು ಏಕೆ ಅಪಾಯಕಾರಿಯಾಗಿದೆ ಎಂದರೆ ಈ ಅಮಾನುಷ ಅಪಸವ್ಯಗಳನ್ನು ಸಾಂಸ್ಥೀಕರಿಸಲಾಗಿದೆ. ಅರ್ಥಾತ್, ಇಂತಹ ಅಮಾನವೀಯ ಕೃತ್ಯಗಳನ್ನು ತಾತ್ವಿಕ-ಸೈದ್ಧಾಂತಿಕ-ರಾಜಕೀಯ ನೆಲೆಯಲ್ಲಿ ನಿಂತು ಸಮರ್ಥಿಸಿಕೊಳ್ಳುವ ಸಮಾಜವೊಂದು ನಮ್ಮೊಳಗೆಸೃಷ್ಟಿಯಾಗಿದೆ. ಈ ಸಮಾಜವನ್ನು ಪೋಷಿಸುವ ಸಲುವಾಗಿಯೇ ಸಾಂಸ್ಥಿಕ-ಸಾಂಕ ನೆಲೆಗಳನ್ನು ಬಲಪಡಿಸಲಾಗಿದೆ. ಇಲ್ಲಿ ಸಾವಿರಾರು ಜನರ ಸಾವನ್ನು ಅರಗಿಸಿಕೊಳ್ಳುವುದಷ್ಟೇ ಅಲ್ಲ, ಸಮರ್ಥಿಸಿ-ಸಂಭ್ರಮಿಸುವ ಮನಸ್ಥಿತಿಯನ್ನು ಸೃಷ್ಟಿಸಲಾಗಿದೆ. ಹಾಗೆಯೇ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರ-ದೌರ್ಜನ್ಯಗಳನ್ನು ಮೌನವಾಗಿ ಸಮ್ಮತಿಸುವ ಸಮಾಜವೊಂದನ್ನು ನಾವು ನಮ್ಮ ನಡುವೆಯೇ ಕಟ್ಟಿಕೊಂಡಿದ್ದೇವೆ.

ಅಧಿಕಾರ ರಾಜಕಾರಣದಲ್ಲಿ ಈ ಸಮಾಜವೇ ನಿರ್ಣಾಯಕವಾಗಿಬಿಡುತ್ತದೆ. ಕತ್ತರಿಸಿದ ಹಸುವಿನ ಕೆಚ್ಚಲು ರಾಜಕೀಯ ಸರಕು ಅಥವಾ ದಾಳವಾಗಿ ಬಿಡುತ್ತದೆ. ಕೆಚ್ಚಲು ಕಳೆದುಕೊಂಡ ಹಸುವಿನ ಆರ್ತನಾದ ಪಶುವೈದ್ಯರಿಗಲ್ಲದೆ ಮತ್ತಾರಿಗೂ ಕೇಳಿಸುವುದೇ ಇಲ್ಲ. ಈ ಸಮಾಜವನ್ನು ನಿರ್ದೇಶಿಸಿ, ನಿಯಂತ್ರಿಸಿ, ನಿರೂಪಿಸುವ ಒಂದು ಬೌದ್ಧಿಕ ವಲಯವನ್ನು ನವ ಉದಾರವಾದ ಡಿಜಿಟಲ್ ತಂತ್ರಜ್ಞಾನ ಸೃಷ್ಟಿಸಿದೆ. ದುರಂತ ಎಂದರೆ ಸಮಾಜಮುಖಿಯಾಗಿರಬೇಕಾದ ಮಾಧ್ಯಮಗಳೂ ಕೂಡ ಬಹುತೇಕವಾಗಿ ಈ ವಲಯವನ್ನೇ ಪ್ರತಿನಿಧಿಸುತ್ತವೆ. ಚುನಾಯಿತ/ಪರಾಜಿತ/ಪದಚ್ಯುತ ಜನಪ್ರತಿನಿಧಿಗಳು ಮನುಜ- ಲಿಂಗ- ಜೀವ ಸೂಕ್ಷ್ಮತೆಗಳನ್ನು ಸಂಪೂರ್ಣವಾಗಿ ಕಳೆದು ಕೊಂಡಿರುವುದರಿಂದ, ‘ಕೆಚ್ಚಲು ಕೊಯ್ದ’ ಪ್ರಕರಣದ ಸುತ್ತಲಿನ ರಾಜಕೀಯ ಸಂಕಥನದ ಸಂತೆಯಲ್ಲಿ, ಕೆಚ್ಚಲು ಕಳೆದುಕೊಂಡ ಹಸು ಮೂಲೆಗುಂಪಾಗುತ್ತದೆ.

ಇಲ್ಲಿ ನಮ್ಮ ಸಮಾಜದ ಅಸೂಕ್ಷ ತೆ ಢಾಳಾಗಿ ಗೋಚರಿಸುತ್ತದೆ. ಭಾವರಿದೇವಿ-ಸೌಜನ್ಯ ‘ನಿರ್ಭಯ ಳಿಂದ ಅಭಯಳವರೆಗೂ ನಡೆದಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳಲ್ಲೂ ಇದೇ ಅಸೂಕ್ಷ ತೆಯನ್ನು ಕಂಡಿದ್ದೇವೆ. ಅನ್ಯಾಯಕ್ಕೊಳಗಾದ ಜೀವದ ಅಸ್ಮಿತೆ ನಮ್ಮ ಪ್ರತಿಕ್ರಿಯೆ- ಪ್ರತಿರೋಧ ಎಲ್ಲವನ್ನೂ ನಿರ್ಧರಿಸುವುದರಿಂದಲೇ, ಯಾವುದೇ ಅಸ್ಮಿತೆಯಿಲ್ಲದ ಒಂದು ಮೂಕ ಪ್ರಾಣಿ ಅನಾಥವಾಗಿಬಿಡುತ್ತದೆ. ಅಮಾಯಕ ಮನುಷ್ಯ ಜೀವಗಳೂ ಅನಾಥವಾಗಿಬಿಡುತ್ತವೆ. ಸಮಾಜದ ಕಣ್ಣುಗಳಿಗೆ ಕವಿದಿರುವ ಈ ದಟ್ಟ ಪೊರೆಯನ್ನು ಕಳಚದೆ ಹೋದರೆ, ಸಮಾಜದ ಎಲ್ಲ ಸ್ತರಗಳಲ್ಲೂ ಅಂತರ್ಗತವಾಗಿರುವ ಮತ್ತು ಆಧುನಿಕ ಸಮಾಜ ಆಂತರಿಕೀಕರಿಸಿ ಕೊಂಡಿರುವ  ಕ್ರೌರ್ಯ ಮತ್ತು ಹಿಂಸೆ, ನಮಗೆ ಸಾಮಾಜಿಕ ವ್ಯಸನ ಅಥವಾ ಅಸ್ವಸ್ಥತೆಯಾಗಿ ಕಾಣಲು ಸಾಧ್ಯವಿಲ್ಲ.

ಬದಲಾಗದೆ ಹೋದರೆ?: ಹೀಗೆ ಕಾಣದೆ ಹೋದರೆ ನಮಗೆ ಈ ರೋಗ ಮತ್ತು ವ್ಯಸನಕ್ಕೆ ಮದ್ದು ಕಂಡುಹಿಡಿಯಲೂ ಸಾಧ್ಯವಾಗುವುದಿಲ್ಲ. ಏಕೆಂದರೆ ೨೧ನೆಯ ಶತಮಾನದಲ್ಲಿ ನಾವು ವಿಕಸಿತ ಭಾರತ ಆಗುವ ಹಾದಿಯಲ್ಲಿ ಧಾವಿಸುತ್ತಿದ್ದರೂ, ಆ ಹಾದಿಯಲ್ಲಿ ಇಂದಿಗೂ ಎದುರಾಗುತ್ತಿರುವ ಪ್ರಾಚೀನ ನಡವಳಿಕೆಗಳನ್ನು, ಆಚರಣೆಗಳನ್ನು ಹಾಗೂ ಮನಸ್ಥಿತಿಯನ್ನು ಹೋಗಲಾಡಿಸುವ ಸಮಕಾಲೀನ ಚಿಕಿತ್ಸಕ ಚಿಂತನಾವಾಹಿನಿಗಳು ಕಾಣುತ್ತಿಲ್ಲ. ಈ ಚಿಕಿತ್ಸಕಗುಣವುಳ್ಳ ದಾರ್ಶನಿಕರಿಗಾಗಿ  ಮತ್ತೊಮ್ಮೆ ಬುದ್ಧ, ಬಸವ, ಗಾಂಧೀ, ಅಂಬೇಡ್ಕರ್ ಮೊದಲಾದವರನ್ನೇ ಆಶ್ರಯಿಸಬೇಕಿದೆ. ಈ ಚಿಂತನಾಧಾರೆಗಳನ್ನೇ ಸಮಕಾಲೀನಗೊಳಿಸುವ ಮೂಲಕ ಯುವ ತಲೆಮಾರಿನ ನಡುವೆ ಮತ್ತು ವಿಶಾಲ ಸಮಾಜದಲ್ಲಿ ಮನುಜ-ಲಿಂಗ-ಜೀವ ಸೂಕ್ಷ್ಮತೆ-ಸಂವೇದನೆಗಳನ್ನು ಬೆಳೆಸಬೇಕಿದೆ. ಇದಕ್ಕೆ ಅಡ್ಡಿಯಾಗುವ ಎಲ್ಲ ರೀತಿಯ ಸಾಂಪ್ರದಾಯಿಕತೆ ಮತ್ತು ಪ್ರಾಚೀನ ಆಲೋಚನೆಗಳನ್ನೂ ಬುಡಸಮೇತ ಕಿತ್ತೊಗೆಯಬೇಕಿದೆ.

ಇದು ಪ್ರಗತಿ ಪರ ಎಂದು ಭಾವಿಸಲ್ಪಡುವ ಸಮಾಜದ ಮೇಲಿರುವ ಸಾಂಕ ಜವಾಬ್ದಾರಿ, ಸಾಂಸ್ಥಿಕ ಹೊಣೆಗಾರಿಕೆ. ಇದಕ್ಕೆ ಪ್ರತಿ ಕ್ರಿಯೆ-ಪ್ರತಿರೋಧ-ಪ್ರತಿಭಟನೆ ಮುಂತಾದ ತಕ್ಷಣದ ಅಭಿವ್ಯಕ್ತಿಗಳು ಪೂರಕ ವಾಗಬಹುದೇ ಹೊರತು ಸಾಕಾಗುವುದಿಲ್ಲ. ನಾವು ಸಮಾಜದ ಒಳಹೊಕ್ಕು ನೋಡಬೇಕಿದೆ. ಅಲ್ಲಿರಬಹುದಾದ ಪ್ರಾಚೀನ ಚಿಂತನೆಗಳನ್ನು ಬೇರುಸಮೇತ ಕಿತ್ತೊಗೆಯಬೇಕಿದೆ. ಅಡ್ಡದಾರಿಗಳನ್ನು ತೆರವುಗೊಳಿಸಬೇಕಿದೆ. ಜಾತಿ-ಮತ ಶ್ರೇಷ್ಠತೆ, ಧಾರ್ಮಿಕ ಪಾರಮ್ಯ, ಊಳಿಗಮಾನ್ಯ ಪಿತೃಪ್ರಧಾನತೆ, ಪುರುಷಾಧಿಪತ್ಯ, ಬಂಡವಾಳಶಾಹಿಯ ಮಾರುಕಟ್ಟೆ ಕ್ರೌರ್ಯ ಮತ್ತು ಅಸಮಾನತೆಯನ್ನು ಸೃಷ್ಟಿಸುವ ಎಲ್ಲ ಸಾಮಾಜಿಕ ನೆಲೆಗಳನ್ನೂ ಭೇದಿಸಬೇಕಿದೆ. ಈ ಹಾದಿಯಲ್ಲಿ ನಾವು ಅಳವಡಿಸಿಕೊಳ್ಳುವ ಒಳಗಣ್ಣಿಗೆ ಅಲ್ಲಿ ಹಿಂಸೆ ಮತ್ತು ಕ್ರೌರ್ಯ ಸಾಮಾಜಿಕ ವ್ಯಸನವಾಗಿ, ಅಸ್ವಸ್ಥತೆಯಾಗಿ, ಪಿಡುಗಾಗಿ ಕಾಣಲು ಸಾಧ್ಯ. ಈ ಒಳಗಣ್ಣು ತೆರೆಯಲು ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಮಾನವೀಯತೆಯೊಂದಿದ್ದರೆ ಸಾಕು.

” ಅಧಿಕಾರ ರಾಜಕಾರಣದಲ್ಲಿ ಈ ಸಮಾಜವೇ ನಿರ್ಣಾಯಕವಾಗಿಬಿಡುತ್ತದೆ. ಕತ್ತರಿಸಿದ ಹಸುವಿನ ಕೆಚ್ಚಲು ರಾಜಕೀಯ ಸರಕು ಅಥವಾ ದಾಳವಾಗಿಬಿಡುತ್ತದೆ. ಕೆಚ್ಚಲು ಕಳೆದುಕೊಂಡ ಹಸುವಿನ ಆರ್ತನಾದ ಪಶುವೈದ್ಯರಿಗಲ್ಲದೆ ಮತ್ತಾರಿಗೂ ಕೇಳಿಸುವುದೇ ಇಲ್ಲ. ಈ ಸಮಾಜವನ್ನು ನಿರ್ದೇಶಿಸಿ, ನಿಯಂತ್ರಿಸಿ, ನಿರೂಪಿಸುವ ಒಂದು ಬೌದ್ಧಿಕ ವಲಯವನ್ನು ನವ ಉದಾರವಾದ ಡಿಜಿಟಲ್ ತಂತ್ರಜ್ಞಾನ ಸೃಷ್ಟಿಸಿದೆ. ದುರಂತ ಎಂದರೆ ಸಮಾಜಮುಖಿಯಾಗಿರಬೇಕಾದ ಮಾಧ್ಯಮಗಳೂ ಕೂಡ ಬಹುತೇಕವಾಗಿ ಈ ವಲಯವನ್ನೇ ಪ್ರತಿನಿಧಿಸುತ್ತವೆ. ಚುನಾಯಿತ/ಪರಾಜಿತ/ಪದಚ್ಯುತ ಜನಪ್ರತಿನಿಧಿಗಳು ಮನುಜ-ಲಿಂಗ-ಜೀವ ಸೂಕ್ಷ್ಮತೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರಿಂದ, ‘ಕೆಚ್ಚಲು ಕೊಯ್ದ’ ಪ್ರಕರಣದ ಸುತ್ತಲಿನ ರಾಜಕೀಯ ಸಂಕಥನದ ಸಂತೆಯಲ್ಲಿ, ಕೆಚ್ಚಲು ಕಳೆದುಕೊಂಡ ಹಸು ಮೂಲೆಗುಂಪಾಗುತ್ತದೆ”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

11 mins ago

ನಂಜನಗೂಡು | ಚಲಿಸುತ್ತಿದ್ದ ಬಸ್‌ ಬೆಂಕಿಗಾಹುತಿ ; 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು

ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…

14 mins ago

ಓದುಗರ ಪತ್ರ: ನಂಜನಗೂಡಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ

ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…

17 mins ago

ಓದುಗರ ಪತ್ರ: ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ಆಟೋ ಸಂಚಾರ ನಿಯಂತ್ರಿಸಿ

ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…

49 mins ago

ಶತಾಯುಷಿ ಸುತಾರ್ ವಿಧಿವಶ ; ದೇಶ-ವಿದೇಶ ನಾಯಕರ ಪ್ರತಿಮೆ ಕೆತ್ತಿದ್ದ ಹೆಗ್ಗಳಿಕೆ

ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್‌ ಸುತಾರ್‌ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…

52 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಸದ್ದು ಮಾಡುತ್ತಿರುವ ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ

ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…

1 hour ago