ಶುಭಾ ಖಟಾವಕರ ಮ್ಹೆತ್ರಸ್
ನೇಪಾಳದ ಕನಸುಗಣ್ಣಿನ ಯುವಜನಾಂಗದ ಈ ಹೊಸ ಸರ್ಕಾರ ಈಗ ಇಟ್ಟಿರುವ ಹೆಜ್ಜೆಗಳು ಯಶಸ್ವಿಯಾದರೆ ದಕ್ಷಿಣ ಏಷ್ಯಾದಲ್ಲಿ ಅಷ್ಟೇ ಏಕೆ ಇಡೀ ವಿಶ್ವದಲ್ಲೇ ಇದೊಂದು ಮಾದರಿ ಆಡಳಿತವಾಗಬಲ್ಲದು
ಕೆಲವು ಬಲಾಢ್ಯ ರಾಷ್ಟ್ರಗಳು ಯುದ್ಧೋನ್ಮಾದದಲ್ಲಿ ಇಡೀ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವಾಗ ಅದಕ್ಕೂ ತನಗೂ ಸಂಬಂಧವೇ ಇಲ್ಲವೆಂಬಂತೆ ಪುಟ್ಟ ರಾಷ್ಟ್ರವೊಂದರಲ್ಲಿ ಸದ್ದಿಲ್ಲದೆ ಕ್ರಾಂತಿ ನಡೆದಿದೆ. ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಎಂಐಟಿ) ಯಿಂದ ಸ್ಟ್ರಕ್ಚರಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಪ್ ಗಾಯಕನೊಬ್ಬ ನೇಪಾಳದ ರಾಜಕೀಯಕ್ಕೆ ಹೊಸ ಭಾಷ್ಯ ಬರೆದು ಜಗತ್ತಿನಾದ್ಯಂತ ಸುದ್ದಿ ಮಾಡಿದ್ದಾರೆ.
ಜೆನ್-ಝೀ ಪೀಳಿಗೆಯ ಯುವಕರು ಸೆಪ್ಟೆಂಬರ್ ೨೦೨೫ರಲ್ಲಿ ನೇಪಾಳದಲ್ಲಿ ದಂಗೆಯೆದ್ದು ಆ ದೇಶದ ಸರ್ಕಾರವನ್ನು ಬುಡಮೇಲು ಮಾಡಿದರು. ಈ ಜೆನ್-ಝೀ ಪೀಳಿಗೆಯ ಕ್ರಾಂತಿಯ ನಂತರ ನಡೆದ ಚುನಾವಣೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷವು ಭರ್ಜರಿ ಬಹುಮತ ಗಳಿಸಿತು. ಸ್ವತಂತ್ರ ಪಕ್ಷದ ನಾಯಕ, ೩೭ ವರ್ಷ ವಯಸ್ಸಿನ, ಬಲೇಂದ್ರ ಶಾಹ್ ಅವರು ಮಾರ್ಚ್ ೨೭, ೨೦೨೬ ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿಯಾದ ತಕ್ಷಣವೇ ಕಾರ್ಯಪ್ರವೃತ್ತರಾದ ಬಲೇಂದ್ರ ಶಾಹ್, ಭ್ರಷ್ಟಾಚಾರ ಮತ್ತು ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ತಡೆಗಟ್ಟಲು, ಆಡಳಿತಾತ್ಮಕ ಸಾಮರ್ಥ್ಯ ಮೇಲ್ಮಟ್ಟಕ್ಕೆ ತರಲು ಹಾಗೂ ಸಮಾಜದ ಯೋಗಕ್ಷೇಮವನ್ನು ಸುಧಾರಿಸಲು ೧೦೦ ಅಂಶಗಳ ಸುಧಾರಣಾ ಕಾರ್ಯಸೂಚಿಯನ್ನು ಏಪ್ರಿಲ್ ತಿಂಗಳಲ್ಲಿಯೇ ಜಾರಿಗೆ ತಂದಿದ್ದಾರೆ. ಈ ಕಾರ್ಯಸೂಚಿಗಳಿಂದ ಉಂಟಾಗುವ ಪರಿಣಾಮದ ಸದ್ದು ಜಗತ್ತಿನಾದ್ಯಂತ ತಲುಪಬಲ್ಲದು. ಇಂತಹ ದಿಟ್ಟ ಹೆಜ್ಜೆಯನ್ನು ದಕ್ಷಿಣ ಏಷ್ಯಾದ ಯಾವ ದೇಶಗಳಲ್ಲೂ ಇಲ್ಲಿಯವರೆಗೆ ಯಾರೂ ಇಟ್ಟಿರಲಿಲ್ಲ.
ಬಲೇಂದ್ರ ಶಾಹ್ ಅವರು ತಂದ ಸುಧಾರಣೆಗಳಲ್ಲಿ ಎಲ್ಲಕ್ಕಿಂತ ಪ್ರಮುಖವಾದದ್ದು ವಿಐಪಿ ಸಂಸ್ಕ ತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು. ಇಲ್ಲಿ ಎಲ್ಲರೂ ಸಮಾನರು. ರಾಜಕಾರಣಿಗಳ ಬೆಂಗಾವಲಿನ ವಾಹನಗಳು ಟ್ರಾಫಿಕ್ಗೆ ಅಡ್ಡಿ ಉಂಟು ಮಾಡುವಂತಿಲ್ಲ. ಪ್ರಧಾನಿಯ ವಾಹನವೂ ಜನಸಾಮಾನ್ಯರ ವಾಹನಗಳಂತೆ ಸಿಗ್ನಲ್ನಲ್ಲಿ ಕೆಂಪು ದೀಪ ಬಂದಾಗ ನಿಲ್ಲಲೇಬೇಕು. ಬಲೇಂದ್ರ ಶಾಹ್ ಸರ್ಕಾರ ಬರುವುದಕ್ಕೂ ಮುನ್ನ ನೇಪಾಳವು ಭ್ರಷ್ಟಾಚಾರದಿಂದ ತತ್ತರಿಸಿತ್ತು. ೧೯೯೦ರ ದಶಕದ ಜನರ ಎರಡನೇ ಚಳವಳಿಯ ನಂತರ ಸೇವೆ ಸಲ್ಲಿಸಿದ ಅನೇಕ ರಾಜಕಾರಣಿಗಳು ಮತ್ತು ಹಿರಿಯ ಶ್ರೇಣಿಯ ಅಧಿಕಾರಿಗಳು ವಿಪರೀತ ಭ್ರಷ್ಟಾಚಾರದಲ್ಲಿ ಮುಳುಗಿರುವ ಆರೋಪ ಎದುರಿಸುತ್ತಿದ್ದರು. ಈಗ ಅವರೆಲ್ಲರ ಆಸ್ತಿಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ೧೫ ದಿನಗಳಲ್ಲಿ ಸ್ಥಾಪಿಸುವುದು ಅವರು ಬೀಸಿದ ಮತ್ತೊಂದು ಬಲವಾದ ಚಾಟಿಯೇಟಾಗಿದೆ.
ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಕೆ.ಪಿ.ಶರ್ಮಾ ಓಲಿ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಅಂಥವೇ ಆರೋಪಗಳ ಮೇಲೆ ಮಾಜಿ ಗೃಹಮಂತ್ರಿ ರಮೇಶ್ ಲೇಖಕ್ ಅವರನ್ನು ಕೂಡ ಜೈಲಿಗೆ ಅಟ್ಟಲಾಗಿದೆ. ಬಲೇಂದ್ರ ಶಾಹ್ ಅವರ ಸಂದೇಶ ಬಹಳ ಸ್ಪಷ್ಟವಾಗಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ವಿದೇಶಗಳಲ್ಲಿರುವ ನೇಪಾಳದ ರಾಜಕಾರಣಿಗಳ ಕಪ್ಪು ಹಣವನ್ನು ದೇಶಕ್ಕೆ ತರಲು ಸಹ ದಿಟ್ಟ ಕ್ರಮವನ್ನು ಹೊಸ ಸರ್ಕಾರ ಕೈಗೊಂಡಿದೆ. ನೇಪಾಳದ ವಿದೇಶಾಂಗ ಸಚಿವರು ಸ್ವಿಜರ್ಲ್ಯಾಂಡ್ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ. ಆ ದೇಶದಲ್ಲಿ ನೇಪಾಳದ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಇಟ್ಟಿರುವ ಕಪ್ಪು ಹಣವನ್ನು ವಾಪಸ್ ನೇಪಾಳಕ್ಕೆ ತಂದು ಜನಪರ ಕಾರ್ಯಕ್ರಮಗಳಿಗಾಗಿ ಬಳಸುವ ಯೋಚನೆ ಬಲೇಂದ್ರ ಶಾಹ್ ಅವರ ಸರ್ಕಾರಕ್ಕಿದೆ. ಈ ಸಂಬಂಧ ಸ್ವಿಜರ್ಲ್ಯಾಂಡ್ ಎಲ್ಲ ವಿವರಗಳನ್ನು ತಕ್ಷಣ ನೇಪಾಳಕ್ಕೆ ಒದಗಿಸಬೇಕು ಎಂದೂ ನೇಪಾಳ ಸರ್ಕಾರ ಕೋರಿದೆ. ನೇಪಾಳದ ಈ ಕ್ರಮ ಭಾರತವೂ ಸೇರಿದಂತೆ ವಿದೇಶದಲ್ಲಿನ ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವುದಾಗಿ ಜನರಿಗೆ ಆಶ್ವಾಸನೆ ನೀಡಿ ಅಽಕಾರಕ್ಕೆ ಬಂದ ಎಲ್ಲ ಸರ್ಕಾರಗಳಿಗೂ ಒಂದು ಪಾಠವಾಗುವಂಥದು.
ನೇಪಾಳದ ಯಾವುದೇ ಸರ್ಕಾರಿ ಅಧಿಕಾರಿಗಳು, ನೌಕರರು, ಶಿಕ್ಷಕರು ಅಥವಾ ಪ್ರಾಧ್ಯಾಪಕರು ಯಾವುದೇ ರಾಜಕೀಯ ಪಕ್ಷ ಸೇರುವಂತಿಲ್ಲ. ರಾಜಕೀಯವನ್ನು ಸೇರುವುದೇ ಆದರೆ ಅವರು ತಮ್ಮ ಕೆಲಸವನ್ನು ಬಿಡಬೇಕಾಗುವುದು. ಅಷ್ಟೇ ಅಲ್ಲದೆ ಸರ್ಕಾರಿ ನೌಕರರ ಸಂಘಟನೆಗಳು ತಮ್ಮನ್ನು ತಾವೇ ಯಾವುದೇ ರಾಜಕೀಯ ಪಕ್ಷಗಳೊಡನೆ ಗುರುತಿಸಿಕೊಳ್ಳುವಂತಿಲ್ಲ. ರಾಜಕೀಯ ಪಕ್ಷಗಳು ಶಾಲಾ ಕಾಲೇಜುಗಳನ್ನು ತಮ್ಮ ಅಡ್ಡಾಗಳನ್ನಾಗಿ ಮಾಡಿಕೊಂಡು ವಿದ್ಯಾರ್ಥಿಗಳ ಮೇಲೆ ತಮ್ಮ ಹಿಡಿತವಿಟ್ಟುಕೊಂಡಿದ್ದವು. ಇನ್ನು ಮುಂದೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳೊಡನೆ ಸಂಬಂಧ ಹೊಂದುವಂತಿಲ್ಲ ಎಂಬ ನಿಯಮಗಳನ್ನು ಸಹ ಮಾಡಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ರಾಜಕಾರಣಿಗಳ ಚಿತ್ರಗಳು ಗೋಡೆಗಳನ್ನು ಅಲಂಕರಿಸುವಂತಿಲ್ಲ. ಎಲ್ಲ ಮಂತ್ರಿಗಳ, ಎಂಪಿಗಳ ಮತ್ತು ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಬೇಕೆಂಬುದು ಕಾರ್ಯಸೂಚಿಯಲ್ಲಿ ನಮೂದಿಸಲಾದ ನಿಯಮಗಳಲ್ಲಿ ಒಂದಾಗಿದೆ. ಹಾಗೆ ಮಾಡದಿದ್ದಲ್ಲಿ ಅವರು ತಮ್ಮ ಸರ್ಕಾರಿ ಹುದ್ದೆಯನ್ನು ಬಿಡಬೇಕಾಗಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.೧೦ರಷ್ಟು ಬೆಡ್ಗಳನ್ನು ಬಡವರಿಗಾಗಿ ಉಚಿತವಾಗಿ ಮೀಸಲಿಡಬೇಕಾಗುವುದು. ಮಹಿಳೆಯರಿಗಾಗಿ ಉಚಿತ ಬಸ್ ಸೇವೆ ಇರುವುದು. ಸಚಿವಾಲಯಗಳ ಸಂಖ್ಯೆಯನ್ನು ೨೨ ರಿಂದ ೧೭ಕ್ಕೆ ಕಡಿತಗೊಳಿಸಲಾಗಿದೆ, ಎಲ್ಲ ಸಚಿವಾಲಯಗಳಿಗೆ ತಮ್ಮ ಕೆಲಸಗಳನ್ನು ಪೂರೈಸಲು ನಿರ್ದಿಷ್ಟ ಸಮಯಾವಧಿಯನ್ನು ನೀಡಲಾಗುವುದು. ಆ ಇಲಾಖೆಗಳು ಈ ನಿರ್ದಿಷ್ಟ ಗಡುವಿನಲ್ಲಿ ತಮ್ಮ ಕಾರ್ಯಗಳನ್ನು ಪೂರೈಸಲೇಬೇಕು. ಯಾವುದೇ ಕಾರ್ಯ ನಿರ್ವಹಿಸದೇ ಕೇವಲ ಸರ್ಕಾರದ ಹಣವನ್ನು ನುಂಗುತ್ತಿದ್ದ ಕೆಲವು ಬೋರ್ಡ್ಗಳು ಮತ್ತು ಸಮೀತಿಗಳನ್ನು ಬರಖಾಸ್ತು ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರ ಸಣ್ಣದಾದರೂ ಕೆಲಸಗಳು ದೊಡ್ಡದಾಗಿರಬೇಕೆಂಬುದು ಬಲೇಂದ್ರ ಶಾಹ್ಅವರ ತತ್ವವಾಗಿದೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲೂ ಶಾಹ್ ಅವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಕೇವಲ ಒಂದು ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಣಯಿಸಲಾಗದು. ಐದನೇ ತರಗತಿಯವರೆಗಿನ ಮಕ್ಕಳಿಗೆ ಇನ್ನು ಪರೀಕ್ಷೆಗಳ ಕಾಟವಿಲ್ಲ. ಅದರ ಬದಲಾಗಿ ನಿರಂತರ ಮೌಲ್ಯನಿರ್ಧಾರಣ ವ್ಯವಸ್ಥೆಯನ್ನು ತರಲಾಗುವುದು. ಇದರಲ್ಲಿ ಪರೀಕ್ಷಾ ವ್ಯವಸ್ಥೆಗೆ ಮಹತ್ವವಿರದೇ ವಿದ್ಯಾರ್ಥಿಗಳ ನಿರಂತರ ಪ್ರಗತಿಗೆ ಒತ್ತು ನೀಡಲಾಗು ವುದು. ಮಕ್ಕಳ ಮನೋ ಸ್ಥೈರ್ಯ ಇದರಿಂದ ವೃದ್ಧಿಯಾಗಲಿದೆ. ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ನಾಗರಿಕತ್ವದ ಸರ್ಟಿಫಿಕೆಟ್ ಮಾಡಿಸಲು ಮುಂಚೆ ಸರ್ಕಾರಿ ಕಚೇರಿಗೆ ಅಲೆದು ಮೆಟ್ಟು ಸವೆಸಬೇಕಾಗುತ್ತಿತ್ತು. ಅಷ್ಟೇ ಅಲ್ಲದೆ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಚಿತ್ರಹಿಂಸೆ ಬೇರೆ. ಅದಕ್ಕೆ ಈಗ ಬಲೇಂದ್ರ ಶಾಹ್ ಅವರು ಪೂರ್ಣವಿರಾಮವನ್ನಿತ್ತಿದ್ದಾರೆ. ಈ ಎಲ್ಲ ದಸ್ತಾವೇಜುಗಳು ಇನ್ನು ಮುಂದೆ ೧೦೦ ದಿನಗಳಲ್ಲಿ ನೇಪಾಳದ ಪ್ರಜೆಗಳ ಮನೆಗೆ ತಲುಪಲಿವೆ.
ಜನಸಾಮಾನ್ಯರ ಕಾರ್ಯಗಳನ್ನು ಸುಗಮಗೊಳಿಸಲು ಮತ್ತು ಸರ್ಕಾರಿ ಕಾರ್ಯಾಚರಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಒಂದು ಡಿಜಿಟಲ್ ವೇದಿಕೆಯನ್ನು ಸೃಷ್ಟಿಸಲಾಗಿದೆ. ಇದರಲ್ಲಿ ಸರ್ಕಾರದಿಂದ ಯಾವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಅದರ ಯಾವ ಭರವಸೆಗಳು ಈಡೇರಿವೆ ಎಂಬುದು ಕಂಡು ಬರುತ್ತವೆ. ಜನರು ಆದ ಕೆಲಸಗಳು ಮತ್ತು ಚಾಲ್ತಿಯಲ್ಲಿರುವ ಕಾರ್ಯಗಳನ್ನು ನೇರವಾಗಿ ಈ ವೇದಿಕೆಗಳ ಮೇಲೆ ತಾವೇ ಟ್ರ್ಯಾಕ್ ಮಾಡಬಹುದಾಗಿದೆ.
ಇಂತಹ ಇನ್ನೂ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಬಲೇಂದ್ರಶಾಹ್ ಅವರು ಹಮ್ಮಿಕೊಂಡಿದ್ದಾರೆ. ಅವುಗಳಿಗಾಗಿ ನೇಪಾಳದ ಪ್ರಜೆಗಳು ಉತ್ಕಟತೆಯಿಂದ ಕಾಯುತ್ತಿದ್ದರು ಮತ್ತು ಜನರಲ್ಲಿ ಹೊಸ ಆಸೆಯ ಅಲೆಗಳು ಏಳುತ್ತಿವೆ ಎಂದು ಕೆಲವರು ಹೇಳುತ್ತಾರೆ. ಸವಾಲುಗಳೂ ಬೇಕಾದಷ್ಟಿವೆ!: ಬಲೇಂದ್ರ ಶಾಹ್ ಸರ್ಕಾರದ ಈ ಕ್ರಮಗಳ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಆದರೆ ಅವರ ಎದುರಿಗೆ ಅನೇಕ ಸವಾಲುಗಳಿವೆ. ವಿರೋಧ ಪಕ್ಷವೂ ಅಲ್ಲಿ ಬಲಹೀನವಾಗಿಲ್ಲ. ಇಷ್ಟು ವರ್ಷಗಳ ಕಾಲ ನೇಪಾಳದ ವ್ಯವಸ್ಥೆಯ ಮೇಲೆ ಬಲವಾದ ಹಿಡಿತ ಹೊಂದಿರುವ ಸ್ಥಾಪಿತ ಹಿತಾಸಕ್ತಿಗಳು ಅಷ್ಟು ಸುಲಭವಾಗಿ ಬಲೇಂದ್ರ ಶಾಹ್ ಯಶಸ್ವಿಯಾಗಲು ಬಿಡುವುದಿಲ್ಲ. ಕಲ್ಲು ಮುಳ್ಳುಗಳನ್ನು ಅವರ ಹಾದಿಯಲ್ಲಿ ಖಂಡಿತ ಎಸೆಯುತ್ತಾರೆ. ಮಹತ್ವಾಕಾಂಕ್ಷಿ ಬಲೇಂದ್ರ ಶಾಹ್ ರಾತೋರಾತ್ರಿಹೀರೋ ಆಗಲು ಹೊರಟಿದ್ದಾರೆ. ಆದರೆ, ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡುತ್ತಿಲ್ಲ, ಅತಿಯಾದ ಉತ್ಸಾಹ ಮತ್ತು ವೇಗ ಅಪಘಾತ ಉಂಟು ಮಾಡಬಹುದು ಎಂಬ ಅಭಿಪ್ರಾಯವನ್ನೂ ಈಗಾಗಲೇ ತೇಲಿ ಬಿಡತೊಡಗಿದ್ದಾರೆ. ಏನೇ ಇರಲಿ ವರ್ಷಾನುಗಟ್ಟಲೆಯ ಭ್ರಷ್ಟ ಸರ್ಕಾರಗಳಿಂದ ಬೇಸತ್ತಿದ್ದ ಜನರಿಗೆ ಬಲೇಂದ್ರ ಶಾಹ್ ಅವರ ಸರ್ಕಾರ ಭರವಸೆಯ ಆಶಾಕಿರಣವಾಗಿ ಕಂಡಿದ್ದಂತೂ ಸತ್ಯ.
ಹಾಸನ: ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಡೆದಿದೆ. ನೀಲಮ್ಮ ಎಂಬುವವರೇ ಸಿಡಿಲು ಬಡಿದು ಸಾವನ್ನಪ್ಪಿರುವ…
ನವದೆಹಲಿ: ಬೈಸರನ್ ವ್ಯಾಲಿಗೆ ಪ್ರವಾಸಕ್ಕೆಂದು ಹೋಗಿದ್ದಾಗ 26 ಜನರು ಸಾವನ್ನಪ್ಪಿದ್ದ ಭಯೋತ್ಪಾದಕ ದಾಳಿಗೆ ನಾಳೆ ಒಂದು ವರ್ಷ. ಭಾರತೀಯ ಸೇನೆ…
ಪಿರಿಯಾಪಟ್ಟಣ: ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ. ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ. ಜನ ನಮ್ಮ…
ಶ್ರೀರಂಗಪಟ್ಟಣ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಬೇಸಿಗೆ ಶಿಬಿರಗಳು ಅತ್ಯುತ್ತಮ ವೇದಿಕೆಯಾಗಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳ ವ್ಯಕ್ತಿತ್ವ…
ತಿರುವನಂತಪುರಂ: ಕೇರಳದ ತ್ರಿಶೂರ್ ಪುರಂ ಉತ್ಸವಕ್ಕೆ ಸಿಡಿಮದ್ದು ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರಾ…