ಮಧ್ಯ ಪ್ರದೇಶ: ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಸರಣಿ ಸಾವು ಮುಂದುವರೆದಿದೆ. ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಗಂಡು ಚೀತಾ ಇದೀಗ ಸಾವನ್ನಪ್ಪಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಮೃತಪಟ್ಟ 8ನೇ ಚೀತಾ ಇದಾಗಿದೆ.
ಗುರುವಾರ ಬೆಳಗ್ಗೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸೂರಜ್ ಎಂಬ ಹೆಸರಿನ ಆಫ್ರಿಕಾ ಮೂಲದ ಚೀತಾದ ಮೃತ ದೇಹ ಪತ್ತೆಯಾಗಿದೆ. ಕುನೋ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಸೂರಜ್ ಚೀತಾ ಸಾವಿಗೆ ನಿಖರ ಕಾರಣವೇನು ಎಂದು ಪತ್ತೆ ಹಚ್ಚಲು ತನಿಖೆ ಶುರು ಮಾಡಿದ್ದಾರೆ. ಚೀತಾದ ಮರಣೋತ್ತರ ಪರೀಕ್ಷಾ ವರದಿಯು ಇದರ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲಿದೆ.
ಕಳೆದ ಮಂಗಳವಾರ ಕೂಡಾ ತೇಜಸ್ ಹೆಸರಿನ ಗಂಡು ಚೀತಾ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿತ್ತು. ಹೆಣ್ಣು ಚೀತಾ ಜೊತೆಗಿನ ಕಾದಾಟದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ಚೀತಾ ಚೇತರಿಕೆ ಕಾಣದೆ ಸಾವನ್ನಪ್ಪಿತ್ತು. ಮರಣೋತ್ತರ ಪರೀಕ್ಷಾ ವರದಿ ಕೂಡಾ ಇದೇ ಅಂಶವನ್ನು ಬಹಿರಂಗಪಡಿಸಿತ್ತು.
ಕಳೆದ ಮಾರ್ಚ್ 27 ರಂದು ಸಾಶಾ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿತ್ತು. ಕಿಡ್ನಿ ವೈಫಲ್ಯದಿಂದ ಈ ಚೀತಾ ಕೊನೆಯುಸಿರೆಳೆದಿತ್ತು. ಏಪ್ರಿಲ್ 23 ರಂದು ಉದಯ್ ಹೆಸರಿನ ಗಂಡು ಚೀತಾ ಹೃದಯ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಇನ್ನು ಮೇ 9 ರಂದು ದಿಶಾ ಎಂಬ ಹೆಣ್ಣು ಚೀತಾ ಕೂಡಾ ಸಾವನ್ನಪ್ಪಿತ್ತು. ಗಂಡು ಚೀತಾ ಜೊತೆ ಮಿಲನದ ವೇಳೆ ಕಾದಾಟ ನಡೆದು ಈ ಚೀತಾ ಕೊನೆಯುಸಿರೆಳೆದಿತ್ತು. ಇದಲ್ಲದೆ ಮೇ 25 ರಂದು ಹವಾಮಾನ ವೈಪರೀತ್ಯದಿಂದ ನಿರ್ಜಲೀಕರಣಕ್ಕೆ ಒಳಗಾಗಿ ಎರಡು ಚೀತಾ ಮರಿಗಳು ಸಾವನ್ನಪ್ಪಿದ್ದವು.
ಭಾರತದಲ್ಲಿ ಕಣ್ಮರೆಯಾದ ಚೀತಾ ಪ್ರಬೇಧಗಳನ್ನು ಪುನರ್ ಸ್ಥಾಪನೆ ಮಾಡಬೇಕೆಂಬುದು ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಆಫ್ರಿಕಾದಿಂದ ಚೀತಾಗಳನ್ನು ತರಿಸಲಾಗಿತ್ತು. ಆದರೆ ಈವರೆಗೆ 8 ಚೀತಾಗಳು ಸಾವನ್ನಪ್ಪಿದ್ದು, ಕೇಂದ್ರ ಸರ್ಕಾರದ ಯೋಜನೆಗೆ ಭಾರೀ ಹಿನ್ನಡೆಯಾಗಿದೆ.
ಈ ಹಿಂದೆ 6 ಚೀತಾಗಳು ಸಾವನ್ನಪ್ಪಿದ್ದ ವೇಳೆ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ವಹಣಾ ಲೋಪ ಇದೆಯೇ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದ್ರೆ, ಕೇಂದ್ರ ಸರ್ಕಾರ ಈ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಚೀತಾಗಳ ಸಾವಿಗೆ ನಿರ್ವಹಣಾ ಲೋಪ ಕಾರಣವಲ್ಲ ಎಂದು ಹೇಳಿತ್ತು. ಇನ್ನು ಮೂರು ಚೀತಾ ಮರಿಗಳ ಸಾವಿನ ವಿಚಾರದಲ್ಲೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿತ್ತು. ಜಾಗತಿಕ ವನ್ಯಜೀವಿ ಅಂಕಿ ಅಂಶಗಳ ಪ್ರಕಾರ ನವಜಾತ ಚೀತಾ ಮರಿಗಳ ಮರಣ ಪ್ರಮಾಣ ಶೇ. 90ರಷ್ಟು ಇದೆ ಎಂದು ಮಾಹಿತಿ ನೀಡಿತ್ತು.
ಭಾರತಕ್ಕೆ ಚೀತಾಗಳನ್ನು ತರುವ ವಿಚಾರ ಸಂಬಂಧ ಕಳೆದ ಮೇನಲ್ಲಿ ಪ್ರತಿಕ್ರಿಯೆ ನೀಡಿದ್ದ ದಕ್ಷಿಣ ಆಫ್ರಿಕಾ ವನ್ಯಜೀವಿ ತಜ್ಞ ವಿನ್ಸೆಂಟ್ ವಾನ್ ಡೆರ್ ಮರ್ವೆ, ಸಾಕಷ್ಟು ಚೀತಾಗಳು ಸಾವನ್ನಪ್ಪುತ್ತವೆ ಎಂದು ಭವಿಷ್ಯ ನುಡಿದಿದ್ದರು. ಚೀತಾಗಳು ತಮ್ಮ ಗಡಿಯನ್ನು ನಿಗದಿ ಮಾಡಿಕೊಳ್ಳುವ ವೇಳೆ ಅರಣ್ಯದಲ್ಲಿ ಚಿರತೆ ಹಾಗೂ ಹುಲಿಗಳ ಜೊತೆ ಕಾದಾಟ ನಡೆಸುವ ಸಾಧ್ಯತೆಗಳು ಇರುತ್ತವೆ ಎಂದೂ ಹೇಳಿದ್ದರು.
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…
ಲಕ್ನೋ: ಜೂನ್.21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…
ಮುಂಬೈ: ದೇಶದಲ್ಲಿ ಮುಂಗಾರು ಪ್ರವೇಶಿದರೂ ಮುಂಬೈನಲ್ಲಿ ಮಳೆಯ ಕೊರತೆ ಎದುರಾಗಿದೆ. ಮಳೆ ಕೊರತೆ ಎದುರಾದ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ…
ಎಚ್.ಎಸ್.ದಿನೇಶ್ಕುಮಾರ್ ಲಿಕ್ಕರ್ ಗ್ಯಾರೇಜ್, ಫಾಕ್ಸ್ ಡೆನ್ಗೆ ಮಾತ್ರ ಅನುಮತಿ; ನೋಟಿಸ್ ಜಾರಿ ಮಾಡಿ ಸುಮ್ಮನಾಗಿದ್ದ ಅಧಿಕಾರಿಗಳು?; ಅಬಕಾರಿ ಡಿಸಿ ಅಮಾನತ್ತಿಗೆ…
ಚಾಮರಾಜನಗರ ತಾಲ್ಲೂಕಿನ ಮಸಾಣಪುರ ಗ್ರಾಮದಲ್ಲಿ ಬಾಬಾ ಸಾಹೇಬ ಡಾ.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಿಜಕ್ಕೂ ತಲೆತಗ್ಗಿಸುವಂಥ ಹೇಯ ಕೃತ್ಯವಾಗಿದೆ.ಈ…
‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದೆಯ ಮಾತು ನಿಜಕ್ಕೂ ಇಂದಿನ ಕಾಲಘಟ್ಟಕ್ಕೆ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ಸಮಯ ಪಾಲನೆ…