ಚೆನ್ನೈ: ‘ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ’ ಎನ್ನುವುದು ಗಾದೆ ಮಾತು. ಆದರೆ ಕೆಲವೊಂದು ಯುದ್ಧಗಳು ಊಟದ ಬಳಿಕವೂ ಮುಂದುವರಿಯುತ್ತವೆ. ಇಲ್ಲೊಬ್ಬ ಕುಡುಕ ಮತ್ತು ಹೆಂಡತಿಯ ಜಗಳ, ಆತ ಕೋಪದ ಭರದಲ್ಲಿ ಹೈಟೆನ್ಷನ್ ವೈರ್ ಅನ್ನು ಕಡಿಯುವವರೆಗೂ ಹೋಗಿದೆ.
ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಟ್ರಾನ್ಸ್ಫಾರ್ಮರ್ ಮೇಲೆ ಹತ್ತಿ, ಹೈಟೆನ್ಷನ್ ವೈರ್ ಅನ್ನು ಕಚ್ಚಿದ್ದಾನೆ. ಇದರ ಪರಿಣಾಮ ಆತನ ಮುಖದಲ್ಲಿ ತೀವ್ರ ಸುಟ್ಟ ಗಾಯಗಳಾಗಿವೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಹೆಂಡತಿ ಜಗಳದ ನಂತರ ತನ್ನ ತವರು ಗ್ರಾಮ ರೆಡ್ಡಿಪಾಳಯಂಗೆ ತನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಬೇಸರಗೊಂಡಿದ್ದ ಚಿನ್ನಮಂಗೋಡು ಗ್ರಾಮದ ನಿವಾಸಿ, 33 ವರ್ಷದ ಧರ್ಮದೊರೈ, ಹರಿಯುವ ಕರೆಂಟ್ಗೆ ಬಾಯಿಟ್ಟಿದ್ದಾನೆ. ಹೆಂಡತಿ ಜತೆಗಿನ ಜಗಳಕ್ಕಿಂತಲೂ ವಿದ್ಯುತ್ ಶಾಕ್ ಪ್ರಭಾವ ಕಡಿಮೆ ಇರಬಹುದು ಎಂದು ಆತ ಭಾವಿಸಿರಬಹುದು. ಜತೆಗೆ ಆತನೊಳಗಿದ್ದ ಎಣ್ಣೆಯ ಕಿಕ್ ಆತನಿಗೆ ಮತ್ತಷ್ಟು ಉತ್ತೇಜನ ನೀಡಿತ್ತು.
ತನ್ನ ಹೆಂಡತಿಯನ್ನು ತವರು ಮನೆಯಿಂದ ಮರಳಿ ಕರೆತರಲು ಸಹಾಯ ಮಾಡಬೇಕು ಎಂದು ಕೋರಿ ಧರ್ಮದೊರೈ, ಪತ್ನಿಯ ಸಹೋದರರ ವಿರುದ್ಧ ದೂರು ನೀಡಲು ಅರಂಬಕ್ಕಂ ಪೊಲೀಸ್ ಠಾಣೆಯನ್ನು ಹಲವು ಬಾರಿ ಸಂಪರ್ಕಿಸಿದ್ದ ಎಂದು ಮೂಲಗಳು ತಿಳಿಸಿವೆ.
ಕುಡಿತ ಅಮಲಿನಲ್ಲಿ ತೂರಾಡುತ್ತಿದ್ದ ಧರ್ಮದೊರೈ, ಬುಧವಾರ ಕೂಡ ಪೊಲೀಸ್ ಠಾಣೆಗೆ ಬಂದಿದ್ದ. ಆತನನ್ನು ಸ್ವಲ್ಪ ಕಾಲ ಕಾಯುವಂತೆ ಪೊಲೀಸರು ಸೂಚಿಸಿದ್ದರು. ಸ್ವಲ್ಪ ಹೊತ್ತು ಕುಳಿತಿದ್ದ ಧರ್ಮದೊರೈ, ಇದ್ದಕ್ಕಿದ್ದಂತೆ ಎದ್ದು ನಡೆದಿದ್ದಾನೆ. ಪೊಲೀಸ್ ಠಾಣೆ ಆವರಣದಿಂದ ಹೊರಗೆ ಎದುರಿನ ಕಟ್ಟಡದ ಸಮೀಪವಿದ್ದ ಟ್ರಾನ್ಸ್ಫಾರ್ಮರ್ ಕಂಬವನ್ನು ಏರಿದ್ದಾನೆ.
ಇದನ್ನು ಕಂಡ ಪೊಲೀಸರು ಹಾಗೂ ಸ್ಥಳೀಯರು ಗಾಬರಿಗೊಂಡಿದ್ದಾರೆ. ನಿನ್ನ ಸಮಸ್ಯೆಯನ್ನು ಪರಿಹರಿಸುತ್ತೇವೆ, ಕೆಳಗೆ ಇಳಿದು ಬಾ ಎಂದು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆತ ಅನಾಹುತಕಾರಿ ಹೆಜ್ಜೆ ಇರಿಸುತ್ತಾನೆ ಎಂಬ ಭಯ ಉಂಟಾಗಿತ್ತು. ಕೆಳಗಿನಿಂದ ಎಷ್ಟೇ ಕೂಗಿ ಕರೆದರೂ ಆತ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಒಂದು ಹೈ ಟೆನ್ಷನ್ ವೈರ್ ಅನ್ನು ಕಚ್ಚಿದ್ದಾನೆ. ಆಗ ಒಮ್ಮೆಲೆ ಬೆಂಕಿ ಹೊತ್ತಿಕೊಂಡು ಆರಿದೆ. ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ನಿಂತಿದ್ದು, ಆಗ ಮತ್ತೊಮ್ಮೆ ತಂತಿಗೆ ಆತನ ದೇಹ ತಾಗಿದೆ. ಇದರಿಂದ ಜೋರಾಗಿ ಬೆಂಕಿ ಉರಿದಿದ್ದು, ವಿದ್ಯುತ್ ಆಘಾತಕ್ಕೆ ಆತ ಕೆಳಗೆ ಬಿದ್ದಿದ್ದಾನೆ. ಸುಮಾರು ಐದು- ಆರು ಅಡಿ ಎತ್ತರದಿಂದ ಆತ ನೆಲದ ಮೇಲೆ ಬಿದ್ದಿದ್ದಾನೆ.
ಕೂಡಲೇ ಪೊಲೀಸರು ಧರ್ಮದೊರೈನನ್ನು ಎಳವೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅಲ್ಲಿಂದ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆತನ ಮುಖ ಹಾಗೂ ವಿವಿಧ ಭಾಗಗಳಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆತನಿಗೆ ಎಷ್ಟು ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿಲ್ಲ.
ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್ಬಾರ್) ನಲ್ಲಿ ಸಂಭವಿಸಿದ ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…
ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…
೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…