ಯುವ ಡಾಟ್ ಕಾಂ

ಅಣ್ಣೂರಿನ ಮಗಳು ರಂಜಿತ ಈಗ ನ್ಯಾಯಾಧೀಶೆ

• ಅಣ್ಣೂರು ಸತೀಶ್

ಭಾರತೀನಗರ ಸಮೀಪದ ಅಣ್ಣೂರು ಗ್ರಾಮದ ಹೆಣ್ಣು ಮಗಳು ಎಸ್‌.ರಂಜಿತ ಕರ್ನಾಟಕ ನ್ಯಾಯಾಂಗ ಸೇವಾ ಪರೀಕ್ಷೆಯನ್ನು ತಮ್ಮ ಮೊದಲ ಪ್ರಯತ್ನದಲ್ಲಿಯೇ ಪಾಸ್ ಮಾಡುವ ಮೂಲಕ ಈಗ ಕರ್ನಾಟಕ ಸಿವಿಲ್ ಕೋರ್ಟ್ ನ ನ್ಯಾಯಾಧೀಶೆಯಾಗಿ ಆಯ್ಕೆಗೊಂಡಿದ್ದಾರೆ.

ಗ್ರಾಮದ ಪವಿತ್ರ ಮತ್ತು ಸ್ವಾಮಿ ಮೋಟಯ್ಯನವರ ಪುತ್ರಿ ರಂಜಿತರವರು ಬಡತನದಲ್ಲಿ ಬೆಳೆದರು. ತಂದೆಯ ಮರಣದ ನಂತರ ಜೀವನ ಮತ್ತಷ್ಟು ದುಸ್ತರವಾಗಿತ್ತು. ಆದರೂ ತಮ್ಮ ವಿದ್ಯಾಭ್ಯಾಸವನ್ನು ಬಿಡದೆ ರಂಜಿತ ಮುಂದುವರಿಸಿದರು. ಪ್ರತಿಫಲವಾಗಿ ಈಗ ನ್ಯಾಯಾಧೀಶೆಯಾಗಿ ಆಯ್ಕೆಗೊಳ್ಳುವ ಮೂಲಕ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಎಸ್.ರಂಜಿತರವರು ತೀರಾ ಬಡತನದಲ್ಲಿ ವಿದ್ಯಾಭ್ಯಾಸ ನಡೆಸುತ್ತಾ ಮುಂದೆ ತಾವೇನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. 2021ರಲ್ಲಿ ಕಾನೂನು ಪದವಿ ಪಡೆದ ಎಸ್.ರಂಜಿತ ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದರು. ಅವರ ದೃಢಸಂಕಲ್ಪದ ಫಲವಾಗಿ ತಮ್ಮ 30ನೇ ವಯಸ್ಸಿನಲ್ಲಿಯೇ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕರ್ನಾಟಕ ಸಿವಿಲ್ ಕೋರ್ಟ್‌ ನ್ಯಾಯಾಧೀಶೆಯಾಗಿ ಆಯ್ಕೆಗೊಂಡು ತಮ್ಮ ಗುರಿಯನ್ನು ಮುಟ್ಟಿದ್ದಾರೆ.

ರಂಜಿತರವರು ಬಡತನದಲ್ಲಿ ಬೆಳೆದು ಚಿಕ್ಕವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡರು. ಎಷ್ಟೆಲ್ಲಾ ನೋವುಗಳು ಬಂದರೂ ತಮ್ಮ ಛಲ ಬಿಡದೆ ನಿರಂತರವಾಗಿ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಅಣ್ಣೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ ಅದೇ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಮುಗಿಸಿ ಬಳಿಕ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ತೂಬಿನಕೆರೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತ್ತಕೋತ್ತರ ಕೇಂದ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು. ಅವರ ತಂದೆಯ ಆಸೆಯಂತೆ ನ್ಯಾಯಾಂಗ ಪದವಿ ಮಾಡಬೇಕೆಂಬ ಹಂಬಲ ಹೊಂದಿದ್ದ ಇವರು ಮಂಡ್ಯದ ಪಿಇಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು.

ನಂತರ ವಿರಾರ್ಡ್‌ ವಿಶ್ವ ಗ್ಲೋಬಲ್ ಸಂಸ್ಥೆ, ಅಖಿಲ ಭಾರತ ವಕೀಲರ ಸಂಘಟನೆ ಸಂಸ್ಥೆ ವತಿಯಿಂದ ಉಚಿತವಾಗಿ ತರಬೇತಿ ಪಡೆದರು. ತಮ್ಮ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ ಮತ್ತು ಸಹೋದರರ ಆಸರೆಯಲ್ಲಿ ಬೆಳೆದ ರಂಜಿತ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಿದರು. ಬಳಿಕ ಮಳವಳ್ಳಿಯ ಹಿರಿಯ ವಕೀಲರಾದ ಡಿ.ಎಂ.ಸುಂದರ್‌ ಅವರ ಬಳಿ ವಕೀಲಿ ವೃತ್ತಿಯನ್ನು ಆರಂಭಿಸಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ನ್ಯಾಯಾಂಗ ಸೇವಾಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿ ಈಗ ಸಿವಿಲ್ ಕೋರ್ಟ್ ನ್ಯಾಯಾಧೀಶೆಯಾಗುಲ್ಲಿ ಯಶಸ್ವಿಯಾಗಿದ್ದಾರೆ.

11 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡು ಹತಾಶರಾಗಿದ್ದ ರಂಜಿತ ನ್ಯಾಯಾಧೀಶೆಯಾಗಿ ಆಯ್ಕೆಗೊಂಡಿರುವುದರಿಂದ ನಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಿದಂತಾಗಿದೆ ಮತ್ತು ಅವರ ಆಸೆಯನ್ನು ನಾನು ಈಡೇರಿಸಿದಂತಾಯಿತು ಎನ್ನುತ್ತಾರೆ.

ಡಾ.ಬಿ.ಆರ್.ಅಂಬೇಡ್ಕರ್ ನನಗೆ ಸ್ಫೂರ್ತಿ: ನನಗೆ ತಂದೆ ಇಲ್ಲದಿದ್ದರೂ ತಂದೆಯ ಸ್ಥಾನದಲ್ಲಿ ನಮ್ಮ ತಾಯಿ ಪವಿತ್ರ, ಸಹೋದರರಾದ ರವಿಕುಮಾರ್, ಸಿದ್ದರಾಜು ಮತ್ತು ಹಿರಿಯ ವಕೀಲರಾದ ಡಿ.ಎಂ. ಸುಂದರ್ ಮತ್ತು ನನ್ನ ಸ್ನೇಹಿತರು ನಿಂತು ನನ್ನ ವಿದ್ಯಾಭ್ಯಾಸಕ್ಕೆ ಸಾಥ್ ನೀಡಿದ್ದಾರೆ. ಇವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ. ಇದರಿಂದಲೇ ಕರ್ನಾಟಕ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಗೊಳ್ಳಲು ಸಾಧ್ಯವಾಯಿತು ಎಂದು ಎಸ್.ರಂಜಿತರವರು ತಮ್ಮ ಮನದಾಳದ ಮಾತನ್ನು ಹಂಚಿಕೊಳ್ಳುತ್ತಾರೆ.

ಕರ್ನಾಟಕ ರಾಜ್ಯ ಉಚ್ಚನ್ಯಾಯಾಲವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಪರೀಕ್ಷೆ ನಡೆಸಿತು. ಆ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ನನ್ನ ಮಗಳು ಎಸ್.ರಂಜಿತ ನ್ಯಾಯಾಧೀಶೆಯಾಗಿರುವುದು ನನಗೆ ಖುಷಿ ತಂದಿದೆ. ಜೊತೆಗೆ ಹೆಮ್ಮೆ ಇದೆ. ಬಡತನದಲ್ಲೇ ವಿದ್ಯಾಭ್ಯಾಸ ಪಡೆದು ಇಂತಹ ಸ್ಥಾನ ಅಲಂಕರಿಸಿರುವುದು ಗ್ರಾಮಕ್ಕೂ ಗೌರವ ತಂದಂತಾಗಿದೆ. ಕಷ್ಟ ಪಟ್ಟು ಓದುವುದರಿಂದ ಯಾರಿಗೂ ಮೋಸವಾಗುವುದಿಲ್ಲ. ಸರಸ್ಪತಿ ಎಲ್ಲರಿಗೂ ಒಲಿಯುತ್ತಾಳೆ ಎಂಬುದಕ್ಕೆ ನನ್ನ ಮಗಳೇ ಉದಾಹರಣೆ ಎಂದು ರಂಜಿತ ಅವರ ತಾಯಿ ಪವಿತ್ರ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

andolana

Recent Posts

ಬಿಡದಿ ರೈತರ ಪರ ನನ್ನ ಹೋರಾಟ ಇಂದಿನಿಂದ ಆರಂಭ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಘೋಷಣೆ

ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ…

1 hour ago

ಪಿರಿಯಾಪಟ್ಟಣ: ಸಿಡಿಲು ಬಡಿದು ಎರಡು ಹಸುಗಳು ಹಾಗೂ ಓರ್ವ ಮಹಿಳೆ ಸಾವು

ನವೀನ್‌ ಕುಮಾರ್:‌ ಪಿರಿಯಾಪಟ್ಟಣ ತಾಲ್ಲೂಕು ವರದಿಗಾರರು ಪಿರಿಯಾಪಟ್ಟಣ: ಸಿಡಿಲು ಬಡಿದು ಎರಡು ಹಸುಗಳು ಹಾಗೂ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ…

1 hour ago

ಹನೂರು| ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದುಬಂದ ಭಕ್ತಸಾಗರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಬಾದಾಮಿ ಅಮಾವಾಸ್ಯೆ ಪ್ರಯುಕ್ತ…

2 hours ago

ಚಾ.ನಗರ ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಚಿವ ಕೆ.ವೆಂಕಟೇಶ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು:‌ ಚಾಮರಾಜನಗರ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕೆಂದು‌‌ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ…

2 hours ago

ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರೋಧ

ಬೆಂಗಳೂರು: ಕೇಂದ್ರ ಸರಕಾರದ ಉದ್ದೇಶಿತ 'ಒಂದು ರಾಷ್ಟ್ರ ಒಂದು ಚುನಾವಣೆ' ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ…

2 hours ago

ಶಾಸಕ ಜಿಟಿಡಿ ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಉಳಿದರೆ ಅಭ್ಯಂತರವಿಲ್ಲ: ಮಾಜಿ ಸಚಿವ ಸಾ.ರಾ.ಮಹೇಶ್‌

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಅವರು ತಮ್ಮ ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಉಳಿದರೇ ನಮ್ಮ ಅಭ್ಯಂತರವಿಲ್ಲ ಎಂದು ಮಾಜಿ ಶಾಸಕ ಸಾ.ರಾ.ಮಹೇಶ್‌…

3 hours ago