ಅಂಕಣಗಳು

ದಾರುಣವಾಗಿ ಕೊಲೆಯಾದ ನಟೋರಿಯಸ್ ರೌಡಿ; ಮೊದಲ ಕ್ರಿಮಿನಲ್ ಕೇಸ್‌ನಲ್ಲೇ ಸಿಕ್ಕಿದ ಜಯ

– ಜಿ.ವಿ.ರಾಮಮೂರ್ತಿ, ಮಾಜಿ ಅಧ್ಯಕ್ಷರು, ಮೈಸೂರು ವಕೀಲರ ಸಂಘ

ನಾನು ಈಗ ಹೇಳ ಹೊರಟಿರುವುದು ಸುಮಾರು 25 ವರ್ಷಗಳ ಹಿಂದಿನ ಘಟನೆ. ಆಗಿನ್ನು ನಾನು ವಕೀಲ ವೃತ್ತಿಗೆ ಹೊಸಬ. ಆದರೆ, ಏನಾದರೂ ಸಾಧಿಸಬೇಕೆಂಬ ದೊಡ್ಡ ಹಂಬಲ ಅದಾಗಲೇ ನನ್ನ ಎದೆಯಲ್ಲಿ
ಬಿದ್ದುಬಿಟ್ಟಿತ್ತು. ಹಾಗಾಗಿ ನಾನು ಸ್ವಲ್ಪ ಅಗ್ರೆಸ್ಸಿವ್ ಆಗಿ ಕೆಲಸ ಮಾಡಬೇಕಿತ್ತು. ನಾನು, ನಮ್ಮ ಸೀನಿಯರ್ ಆಫೀಸ್‌ನಲ್ಲಿ ಇದ್ದ ಸಮಯದಲ್ಲಿ ನನಗೆ ಸೆಷನ್ಸ್ ನ್ಯಾಯಾಲಯದ ಕೇಸುಗಳನ್ನು ನೋಡಿಕೊಳ್ಳಲು ಹೇಳಿದ್ದರು.

ಅವರ ಅನುಮತಿಯ ಮೇರೆಗೆ ಅವರ ಅನುಪಸ್ಥಿತಿಯಲ್ಲಿ ಕೆಲವು ಕೇಸುಗಳನ್ನು ನಾನೇ ನಡೆಸುತ್ತಿದ್ದೆ. ಅದನ್ನು ನೋಡಿದ್ದ ಒಬ್ಬ ವ್ಯಕ್ತಿ ಒಂದು ದಿನ ನನ್ನ ಬಳಿ ಬಂದು ಅವನ ತಮ್ಮನ ಕೇಸ್ ಅನ್ನು ನಡೆಸಿಕೊಡಬೇಕೆಂದು ನನ್ನನ್ನು ಕೇಳಿಕೊಂಡ. ಪೊಲೀಸರ ಕೇಸಿನ ಸಾರಾಂಶವೇನೆಂದರೆ, ಬೆಟ್ಟ ಗುಡ್ಡಗಳ ನಡುವಿನ ಅದೊಂದು ಕುಗ್ರಾಮದಲ್ಲಿ ಆ ರಾತ್ರಿ ಊರ ದೇವರ ಮೆರವಣಿಗೆ ನಡೆಯುತ್ತಿತ್ತು. ದೇವಿ ಆರಾಧನೆ ಉತ್ತುಂಗದಲ್ಲಿರುವ ನಡುರಾತ್ರಿಯಲ್ಲಿ, ಇಡೀ ಊರನ್ನೇ ನಡುಗಿಸುತ್ತಿದ್ದ ಒಬ್ಬ ನಟೋರಿಯಸ್ ರೌಡಿ ಬಿಸಿ ರಕ್ತದ ಯುವಕನೊಬ್ಬನ ಕೈಯಲ್ಲಿ ದಾರುಣವಾಗಿ ಕೊಲೆಯಾಗಿ ಹೋಗಿದ್ದ. ಆ ಕೊಲೆ ನಂತರ ಪೊಲೀಸರು ಕೊಲೆಗಾರನ ಮೇಲೆ ಐಪಿಸಿ ಸೆಕ್ಷನ್ 302 ಪ್ರಕಾರ ಕೇಸ್ ದಾಖಲಿಸಿ, ಬಂಧಿಸಿ ಜೈಲಿಗಟ್ಟಿದ್ದರು. ಎಲ್ಲಾ ನ್ಯಾಯಾಲಯಗಳು ಅವನ ಘೋರ ಕೃತ್ಯವನ್ನು ನೋಡಿದ ಮೇಲೆ ಜಾಮೀನು ಕೊಡಲು ಸಾರಾಸಗಟಾಗಿ ನಿರಾಕರಿಸಿ ಬಿಟ್ಟಿದ್ದವು.

ನಾನು ಹಿಂದು ಮುಂದು ನೋಡದೆ ಕೇಸ್ ತೆಗೆದುಕೊಂಡುಬಿಟ್ಟೆ. ನಂತರ ಕಚೇರಿಗೆ ಹೋಗಿ ಸೂಕ್ಷ್ಮವಾಗಿ ನೋಡಿದರೆ ಅದು ಭಯಾನಕವಾದ ಕೊಲೆ. ನನ್ನ ಬಳಿ ಬರುವಷ್ಟರಲ್ಲಿ ಆ ಕೇಸಿನ ಸಾಕ್ಷಿ ವಿಚಾರಣೆ ದಿನಾಂಕ ನಿಗದಿಯಾಗಿಬಿಟ್ಟಿತ್ತು. ವಿಚಾರಣೆಯ ದಿನ ಎಲ್ಲಾ ಸಾಕ್ಷಿದಾರರು ಕಣ್ಣಿಗೆ ಕಟ್ಟುವಂತೆ ಸಾಕ್ಷ್ಯ ನುಡಿದುಬಿಟ್ಟರು. ನಾನು ಆಗಷ್ಟೇ ಕೇಸ್‌ನಲ್ಲಿ ವಕಾಲತ್ತು ಸಲ್ಲಿಸಿದ್ದ ಕಾರಣ ಮುಂದಿನ ದಿನಾಂಕದಂದು ಪಾಟಿ ಸವಾಲು ಮಾಡಲು ನ್ಯಾಯಾಲಯದ ಅನುಮತಿ ಕೋರಿದೆ.

ನ್ಯಾಯಾಧೀಶರು ನನ್ನ ಮನವಿಯನ್ನು ಪುರಸ್ಕರಿಸಿ ಸಮಯ ನೀಡಿದರು. ನನಗೆ ಸುಮಾರು 20 ದಿನಗಳ ಸಮಯಾವಕಾಶ ಇತ್ತು. ನಾನು ಚಾರ್ಜ್‌ ಶೀಟ್ ಮತ್ತು ಸಾಕ್ಷಿಗಳು ಕೋರ್ಟಿನಲ್ಲಿ ನುಡಿದಿದ್ದ ಸಾಕ್ಷ್ಯವನ್ನು ತಾಳೆ ಹಾಕಿದಾಗ ಯಾವುದೇ ರೀತಿಯಾದ ಗುರುತರವಾದ ವ್ಯತ್ಯಾಸಗಳು ಕಂಡು ಬರಲಿಲ್ಲ. ಅವರೆಲ್ಲ ನ್ಯಾಚುರಲ್ ಎಟೆಸ್‌ಗಳು, ಹಾಗಾಗಿ ಅವರ ಸಾಕ್ಷ್ಯವನ್ನು ಕೋರ್ಟ್ ಒಪ್ಪಿಕೊಳ್ಳುವ ಸಾಧ್ಯತೆ ಬಹಳವಾಗಿತ್ತು. ಎರಡು ಮೂರು ದಿನಗಳು ಯೋಚನೆ ಮಾಡಿದ ಮೇಲೆ ಒಂದು ನಿರ್ಧಾರ ತೆಗೆದುಕೊಂಡೆ. ಅದು ಆರೋಪಿಗೆ ಬಹಳ ಅಪಾಯಕರವಾದ ನಿರ್ಧಾರ. ಆದರೆ ನನಗೆ ಬೇರೆ ದಾರಿಯೇ ಇರಲಿಲ್ಲ. ಆರೋಪಿಗೂ ಆ ವಿಷಯ ಹೇಳಿದೆ. ಅವನೂ ಒಪ್ಪಿಕೊಂಡ
ಪಾಟಿ ಸವಾಲಿನಲ್ಲಿ ನಾನು, ಆರೋಪಿ ಆ ದಿನ ಸ್ಥಳದಲ್ಲಿ ಇದ್ದಿದ್ದು ಹಾಗೂ ಮೃತ ವ್ಯಕ್ತಿಯನ್ನು ಲಾಂಗಿನಿಂದ ಹೊಡೆದಿದ್ದು ಒಪ್ಪಿಕೊಂಡೆ. ನ್ಯಾಯಾಲಯದಲ್ಲಿ ಕುಳಿತಿದ್ದ ಕೆಲವು ಹಿರಿಯ ವಕೀಲರ ಹುಬ್ಬು ಮೇಲೇರಿತ್ತು.

ನ್ಯಾಯಾಧೀಶರು ನನ್ನ ಕಡೆ ಒಮ್ಮೆ ದೀರ್ಘವಾಗಿ ನೋಡಿ ಏನೂ ಹೇಳಲಾಗದೆ ತಲೆ ಅಲ್ಲಾಡಿಸಿದರು. ನಾನು ಕೊನೆಯಲ್ಲಿ ನನ್ನ ಡಿಫೆನ್ಸ್ ಅನ್ನು ಸಾಕ್ಷಿಗಳಿಗೆ ಕೇಳಿ ನನ್ನ ಪಾಟಿ ಸವಾಲು ಮುಕ್ತಾಯಗೊಳಿಸಿದೆ. ಆರೋಪಿಯ ಹೇಳಿಕೆ ಆದ ನಂತರ, ಮುಂದಿನ ದಿನಾಂಕದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ತಮ್ಮ ವಾದ ಮಂಡಿಸಿ, ಆರೋಪಿ ಬಹಳ ಘೋರವಾಗಿ ಒಬ್ಬ ವ್ಯಕ್ತಿಯ ಕೊಲೆ ಮಾಡಿದ್ದಾನೆ ಹಾಗೂ ಅದಕ್ಕೆ ಪೂರಕವಾಗಿ ಪ್ರತ್ಯಕ್ಷ ಸಾಕ್ಷಿದಾರರು ನ್ಯಾಯಾಲಯದ ಮುಂದೆ ಬಲವಾದ ಸಾಕ್ಷ್ಯ ನೀಡಿದ್ದಾರೆ. ಮೇಲಾಗಿ ಆರೋಪಿಯೇ ತಾನು ಕೊಲೆಯಾದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು, ಅವನೇ ತನ್ನ ಕೃತ್ಯವನ್ನು ತಪ್ಪಲ್ಲವೆಂದು ಸಾಬೀತು ಮಾಡಬೇಕಾಗಿದೆ. ಆದ್ದರಿಂದ ಆರೋಪಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದಂತೆ ನಾನು ಸಾಬೀತು ಮಾಡಬೇಕಿದ್ದಿದ್ದು ಒಂದೇ ಒಂದು ವಿಷಯ. ಆರೋಪಿ ಕೊಲೆಯಾದ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡಿದ್ದು ಉದ್ದೇಶಪೂರ್ವಕವಾಗಿಯೋ ಅಥವಾ ಆತ್ಮ ರಕ್ಷಣೆಯ ಸಲುವಾಗಿಯೋ ಎಂದು. ಆ ದಿನ ರಾತ್ರಿ ಕೊಲೆಯಾದ ವ್ಯಕ್ತಿ ಕೈಯಲ್ಲಿ ಲಾಂಗ್ ಹಿಡಿದು ಆರೋಪಿಯ ತಂದೆಯ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದು, ಆ ಸಂದರ್ಭದಲ್ಲಿ ಆರೋಪಿ ಅವನನ್ನು ತಡೆಯಲು ಹೋದಾಗ ಆದ ಕಿತ್ತಾಟದಲ್ಲಿ ಮಚ್ಚು ಅವನಿಗೆ ಚುಚ್ಚಿ ಅವನು ಸತ್ತು ಹೋದನೆಂಬುದು ನನ್ನ ಡಿಫೆನ್ಸ್, ಅದನ್ನು ಬಹಳ ಸ್ಟ್ಯಾಂಗ್ ಆಗಿ ನ್ಯಾಯಾಧೀಶರ ಮುಂದಿಟ್ಟು, ಐಪಿಸಿ ಸೆಕ್ಷನ್ 96 ಮತ್ತು 97 ಪ್ರಕಾರ, ಯಾವುದೇ ವ್ಯಕ್ತಿ ತನ್ನ ಆತ್ಮ ರಕ್ಷಣೆ ಅಥವಾ ಬೇರೊಬ್ಬ ವ್ಯಕ್ತಿಯ ಜೀವ ರಕ್ಷಿಸುವ ಸಲುವಾಗಿ ಬಲಪ್ರಯೋಗ ಮಾಡಿದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ನನ್ನ ಪಾಟಿ ಸವಾಲಿನಲ್ಲಿ ಕೊಲೆಯಾದ ವ್ಯಕ್ತಿ ಆ ದಿನ ಕೈಯಲ್ಲಿ ಲಾಂಗ್ ಹಿಡಿದಿದ್ದನ್ನು ಕೆಲವು ಸಾಕ್ಷಿಗಳು ಒಪ್ಪಿಕೊಂಡಿದ್ದರು. ಮೇಲಾಗಿ ವೈದ್ಯರು ತಮ್ಮ ಸಾಕ್ಷ್ಯದಲ್ಲಿ ಆರೋಪಿಯ ತಂದೆಗೆ ಹರಿತವಾದ ಆಯುಧದಿಂದ ಗಾಯವಾಗಿತ್ತು ಹಾಗೂ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿಸಿದ್ದರು. ಹಾಗಾಗಿ ಆರೋಪಿ ತನ್ನ ತಂದೆಯ ಪ್ರಾಣ ರಕ್ಷಿಸುವ ಸಲುವಾಗಿ ಬೇರೆ ದಾರಿಯೇ ಇಲ್ಲದೆ ಬಲಪ್ರಯೋಗ ಮಾಡಿದ್ದ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇರುವುದರಿಂದ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಬೇಕೆಂದು ವಾದ ಮಾಡಿ ನಂತರ ನನ್ನ ವಾದಕ್ಕೆ ಸರಿ ಹೋಗುವಂತಹ ಕೆಲವು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಕೂಡ ನೀಡಿದೆ.

ನೋಡ ನೋಡುತ್ತಿದ್ದಂತೆ ತೀರ್ಪಿನ ದಿನ ಬಂದು ಬಿಟ್ಟಿತು. ನ್ಯಾಯಾಧೀಶರು ನನ್ನನ್ನು ಕರೆತರುವಂತೆ ಹೇಳಿ ಕಳುಹಿಸಿದರು. ನಾನು ಗಾಬರಿಯಿಂದಲೇ ನ್ಯಾಯಾಲಯಕ್ಕೆ ಹೋದೆ. ನ್ಯಾಯಾಧೀಶರು ತೀರ್ಪಿಗೆ ಸಹಿ ಹಾಕಿ ಆರೋಪಿಯನ್ನು ಬಿಡುಗಡೆ ಮಾಡಿದ್ದೇನೆ ಎಂದಾಗ ನನಗೆ ಶಾಕ್ ಆದಂತಾಯಿತು. ನನಗೆ ಆ ಕೇಸ್ ಗೆದ್ದಿದ್ದಕ್ಕಿಂತ ಹೆಚ್ಚಾಗಿ ನನ್ನ ನಿರ್ಧಾರ ಹಾಗೂ ನನ್ನ ಡಿಫೆನ್ಸ್ ಸಫಲವಾಗಿದ್ದು ಹೆಚ್ಚು ಎಕ್ಸೆಟ್‌ಮೆಂಟ್ ಕೊಟ್ಟಿದ್ದಂತೂ ನಿಜ.

andolana

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 24 ಬುಧವಾರ

3 hours ago

ವಡ್ಡರದೊಡ್ಡಿ ಮನೆಯೊಂದರಲ್ಲಿ ಕಳ್ಳತನ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…

17 hours ago

ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…

18 hours ago

ಕಾರು ಪಲ್ಟಿ: ಐವರಿಗೆ ಗಾಯ

ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಕಲ್ಯಾಣಿ ಕೊಳದ ಬಳಿ ಸೇತುವೆಯಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ…

19 hours ago

ಶಾಂತಳ್ಳಿ: ಮುಂದುವರೆದ ಕಾಡಾನೆ ಹಾವಳಿ

ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು…

19 hours ago

ಕರ್ನಾಟಕದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಕೆ

ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್.‌28ರವರೆಗೂ ಕರ್ನಾಟಕದಲ್ಲಿ ಮಳೆ…

20 hours ago