ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌ : ನಡು ರಸ್ತೆಯಲ್ಲಿ ಸಿಕ್ಕ ಗುರು

ಕೊರೋನಾ ಕಾಲದಲ್ಲಿ ಜೀವನ ಪಾಠ ಹೇಳಿದ್ದ ಅಜ್ಜ

ಶೀಲಾ ಎಚ್.ಎನ್., ಚಿನಕುರುಳಿ

ಅದು ಕೊರೊನಾ ಕಾಲ. ಎಲ್ಲೆಲ್ಲೂ ಮೌನ, ದುಗುಡ, ದುಮ್ಮಾನ, ಆತಂಕಗಳದ್ದೇ ಅಟ್ಟಹಾಸ. ನಿನ್ನೆಗೂ, ಇಂದಿಗೂ, ನಾಳೆಗೂ ವ್ಯತ್ಯಾಸಗಳೇ ಗೊತ್ತಾಗದೇ ಮನೆಯೊಳಗೆ ಬಂಧಿಯಾಗಿದ್ದ ನನಗೆ ಹೊರಗೆ ಹೋಗುವ ತವಕ. ಆದರೆ ಅದಕ್ಕೆ ಅವಕಾಶವಿಲ್ಲ. ಏನು ಮಾಡುವುದು ಹೋಗಲೊಂದು ದಾರಿ ಬೇಕು ಎಂಬುದಾಗಿ ಹಸಿದವರಿಗೆ ಊಟ ಹಂಚುವ ಕಾಯಕಕ್ಕೆ ಅಣ್ಣಂದಿರು, ಹಿರಿಯ ಸ್ನೇಹಿತರೊಂದಿಗೆ ಜೊತೆಯಾದೆ.

ನನಗೆ ನಿಜಕ್ಕೂ ಮನೆಯಿಂದ ಹೊರ ಬಂದು ಅಡ್ಡಾಡಬೇಕು, ಎಲ್ಲರನ್ನೂ ನೋಡಬೇಕು, ಏನೇನು ಆಗುತ್ತಿದೆ ಎಂಬುದನ್ನು ಕಣ್ಣಾರೆ ಕಾಣಬೇಕು ಎನ್ನುವ ತವಕ ಇತ್ತು. ಇದಕ್ಕೆ ದಾರಿಯಾಗಿದ್ದು ಊಟ ಹಂಚುವ ಕಾಯಕ ಮಾತ್ರ. ಮೊದ ಮೊದಲಿಗೆ ನಾನು ಹೊರಗೆ ಬಂದೆ, ರೆಕ್ಕೆ ಬಿಚ್ಚಿದ ಹಕ್ಕಿಯಾದೆ ಎನ್ನುವ ಸಂಭ್ರಮ ಇತ್ತಾದರೂ ಅದು ನಾಲ್ಕೇ ದಿನಕ್ಕೆ ನಿರ್ನಾಮ. ಮೌನ, ಖಾಲಿ ರಸ್ತೆಗಳು, ಅಲ್ಲೊಂದು ಇಲ್ಲೊಂದು ಕಾಣುವ ಮುಖ ಹೊಸ ಜಗತ್ತಿನ ಪರಿಚಯ ಮಾಡುತ್ತಿದ್ದರೂ ಅದು ಆ ಕ್ಷಣಕ್ಕೆ ಹೊಸದಾಗಿ ಕಂಡು ಮತ್ತೆ ಮುಂದಿನ ದಿನಗಳಲ್ಲಿ ಸ್ಮಶಾನದೊಳಗಣ ನಡಿಗೆಯಂತೆ ಕಾಣುತ್ತಿತ್ತು. ಬದುಕೇಕೆ ಹೀಗೆ ಎಂದು ಕಾಡುತ್ತಿತ್ತು.

ಕಾಲೇಜಿನ ಮುಂದೆ ನಿಂತು ಮತ್ತಿನ್ಯಾವಾಗ ಕಾಲೇಜು ಕೋಣೆ ಹೊಕ್ಕುವೆ, ಅಲ್ಲಿ ನನ್ನ ಸ್ನೇಹಿತರೊಂದಿಗೆ ಹರಟುವೆ ಎನ್ನುವತ್ತ ಮನಸ್ಸು ತವಕಿಸುತ್ತಿತ್ತು. ಆದರೆ ವಾಸ್ತವ? ಏನೇನೋ ಯೋಜನೆ ಮಾಡುವಾಗ ನಡುದಾರಿಯಲ್ಲೊಬ್ಬ ವ್ಯಕ್ತಿ ನಿಂತಿದ್ದ. ನಾನವನ ಬಳಿ ಹೋಗುವವರೆ, ಊಟದ ಬುತ್ತಿಯನ್ನು ಕೈಗಿಕ್ಕುವವರೆಗೆ ಅವನು ನನ್ನ ಪಾಲಿಗೆ ವ್ಯಕ್ತಿ. ನಂತರ ಅಲ್ಲಿಂದ ಹೊರ ಬರುವಷ್ಟರಲ್ಲಿ ಅವನು ನನ್ನ ಪಾಲಿಗೆ ಗುರುವಾಗಿದ್ದ. ಅದೂ ನಡು ದಾರಿಯಲ್ಲಿ ಸಿಕ್ಕ ಗುರು.

ನಾನು ಊಟದ ಬುತ್ತಿಯನ್ನು ಅವರ ಕೈಗಿತ್ತು, ಹೋಗಿ ಊಟ ಮಾಡಿ, ಹುಷಾರು, ಕೊರೋನಾ ಹೆಚ್ಚಾಗ್ತಿದೆ ಎಂದೆ. ಅದಕ್ಕವರು ತಕ್ಷಣ ನನ್ನ ತಲೆಯ ಮೇಲೆ ಕೈ ಇಟ್ಟು, ಪುಟ್ಟ ಹೆಚ್ಚುತ್ತಿರುವುದು ಕೊರೊನಾ ಅಲ್ಲ, ಭಯ, ನಮ್ಮೊಳಗಿನ ಶಕ್ತಿ ಎಂದರು. ತಲೆಯ ಮೇಲೆ ಕೈ ಇಟ್ಟು ಹತ್ತಿರ ಬಂದ ವ್ಯಕ್ತಿಯನ್ನು ನೋಡಿ ಹೆದರಿ ನಾನು ಹಿಂದೆ ಸರಿದು ನಿಂತಿದ್ದೆ. ಅವರೇ ಮಾತು ಮುಂದುವರಿಸಿ ನೋಡು ನಾನಾರು ಎಂದು ನಿನಗೆ ಗೊತ್ತಿಲ್ಲದೇ ಇದ್ದರೂ ಅನ್ನ ನೀಡಿದೆ. ಕಾಳಜಿ ತೋರಿದೆ. ಅದು ಪ್ರೀತಿ. ಮನುಷ್ಯ ಪ್ರೀತಿ. ಅದೇ ನಾನು ತಲೆಯ ಮೇಲೆ ಕೈ ಇಟ್ಟಾಗ ಹಿಂದೆ ಸರಿದೆ. ಅದು ಭಯ. ಕೊರೊನಾ ಭಯ. ಎಲ್ಲಿ ನನ್ನಿಂದ ನಿನಗೆ ಕೊರೊನಾ ಅಂಟುವುದೋ ಎನ್ನುವ ಭಯ ಅಲ್ಲವೇ ಎಂದು ಪ್ರಶ್ನೆ ಮಾಡಿ ನಕ್ಕರು. ನಾನು ಮೌನವಾದ ಉತ್ತರ ನೀಡಿದೆ.

ನೋಡು ಕಂದಾ, ಸೋಂಕು ಹೆಚ್ಚುತ್ತಿದೆ, ಭಯವನ್ನೂ ಹೆಚ್ಚಿಸುತ್ತಿದೆ. ಇದು ಹಲವರಿಗೆ ಬಂಡವಾಳವೂ ಆಗಿದೆ. ಆದರೆ ಧೈರ್ಯದ ಮದ್ದು ಅರೆಯಬೇಕು. ವಿಶ್ವಾಸದ ಅಸ್ತ್ರ ಬಳಸಬೇಕು. ಅದನ್ನು ಬಿಟ್ಟು ಬೇಲಿಗಳನ್ನು ಹಾಕುತ್ತಿದ್ದಾರೆ. ಬವಣೆಗೆ ನೂಕುತ್ತಿದ್ದಾರೆ. ಇದರಿಂದ ಹೆಚ್ಚುವ ಹಸಿವು, ಆಗುವ ಹಾನಿಯ ಅಂದಾಜು ಯಾರಿಗೂ ಇದ್ದಂತೆ ಇಲ್ಲ. ಆದರೂ ಮನುಷ್ಯ ಜೀವಕ್ಕೇ ಕುತ್ತು ಬರುತ್ತಿದೆ ಎನ್ನುವಾಗ ಏನು ಬೇಕಾದರೂ ಮಾಡಲು ಸೈ, ಸಹಿಸಿಕೊಳ್ಳಲೂ ಸೈ. ಅದಕ್ಕೆ ಈ ಲಾಕ್‌ಡೌನ್ ಎನ್ನುವುದೇ ಸಾಕ್ಷಿ. ಇದಕ್ಕೂ ಮೇಲಾಗಿ ಎಲ್ಲವೂ ಅನ್‌ಲಾಕ್ ಆದಾಗ ಈಗ ಉಳಿಸಿಕೊಂಡ ಜೀವವನ್ನು ಪೊರೆಯುವುದಕ್ಕಾಗಿ ಮನುಷ್ಯ ಮತ್ತೂ ಏನೂ ಬೇಕಾದರೂ ಮಾಡಲು ಸಿದ್ಧನಾಗಿರುತ್ತಾನೆ. ಇದೊಂದು ರೀತಿಯ ಉಳಿವಿಗಾಗಿನ ಹೋರಾಟ. ನಿರಂತರ ಹೋರಾಟ ಎಂದು ಹೇಳಿದ್ದರು.

ಎಲ್ಲವನ್ನೂ ಕೇಳಿ ಆ ಕ್ಷಣಕ್ಕೆ ಅಲ್ಲಿಂದ ಕದಲಿದ್ದ ನನಗೆ ಇಂದಿಗೆ ಅವರ ಮಾತುಗಳಲ್ಲಿ ಸತ್ಯವಿದೆ ಎನ್ನಿಸುತ್ತದೆ. ಕೊರೋನೋತ್ತರ ಕಾಲದಲ್ಲಿ ನಿಂತು ನೋಡಿದರೆ ಅವರ ಮಾತುಗಳಲ್ಲಿ ಅರ್ಥವಿದೆ ಅನ್ನಿಸುತ್ತದೆ. ಈಗಲೂ ಆ ವ್ಯಕ್ತಿ ಗುರುವಾಗಿ ಬದಲಾದ ಆ ರಸ್ತೆ, ಆ ಜಾಗಕ್ಕೆ ಹೋದಾದ ಅವರನ್ನು ಹುಡುಕುತ್ತೇನೆ. ಅವರು ಕಾಣರು. ಆದರೂ ಅವರ ಮಾತು ಈಗಲೂ ನನ್ನೊಳಗೆ ಉಸಿರಾಡುತ್ತಿದೆ.

andolana

Recent Posts

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

27 mins ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

1 hour ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

2 hours ago

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

10 hours ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

10 hours ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

10 hours ago