ಅಂಜಲಿ ರಾಮಣ್ಣ
ಕೋರ್ಟಿನ ದಾಖಲೆಯೊಂದಕ್ಕೆ ತುರ್ತಾಗಿ ರೇವತಿಯ ಸಹಿ ಬೇಕಾಗಿತ್ತು. ಇಂದು ನಾಳೆ ಎನ್ನುತ್ತಲೇ ಎರಡು ತಿಂಗಳಾದರೂ ಬರದವಳಿಗೆ ಗಟ್ಟಿಯಾಗಿ ಹೇಳೋಣವೆನ್ನಿಸಿ ಫೋನ್ ಮಾಡಿದಾಗ ಅವಳೆಂದಳು ‘ಒಂದೂವರೆ ತಿಂಗಳಿನಿಂದ ಮುಟ್ಟು ನಿಲ್ಲುತ್ತಲೇ ಇಲ್ಲ, ಹಾಗಾಗಿ ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ’. ಸುಸ್ತಾಗಿ ಮಲಗಿ ಬಿಟ್ಟಿದ್ದಳು. ಅವಳತ್ತೆ ಮನೆಯೌಷಧಿ ಮಾಡಿದರೂ ಸರಿಯಾಗುತ್ತಿಲ್ಲ. ಡಾಕ್ಟರ್ ಬಳಿ ತೋರಿಸಲು ಹೇಳಿದರೆ ‘ಅತ್ತೆ ಬಿಡುವುದಿಲ್ಲ. ನೆಂಟರ ಹುಡುಗಿಯೊಬ್ಬಳಿಗೆ ಹೊಟ್ಟೆ ನೋವು ಅಂತ ಹೋಗಿದ್ದಕ್ಕೆ ಗರ್ಭಾಶಯವನ್ನೇ ತೆಗೆದುಬಿಟ್ಟರಂತೆ’ ಎಂದಳು.
ಆಗತಾನೆ ನಲ್ವತ್ತಕ್ಕೆ ಹೊರಳಿದ್ದ ರತ್ನಾಳಿಗೂ ಈಇ ಮಾಡಬೇಕು ಎಂದಿದ್ದ ಡಾಕ್ಟರ್ ಏಕಾಏಕೀ ಗರ್ಭಕೋಶವನ್ನು ತೆಗೆದು ಹಾಕಬೇಕೆಂದು ಹೇಳಿದಾಗ ಮನೆಯವರೆಲ್ಲಾ ಹೌಹಾರಿದ್ದರು. ಗರ್ಭಾಶಯವೆಂದರೆ ಕೇವಲ ಮಕ್ಕಳನ್ನು ಹೆರಲು ಇರುವ ಯಂತ್ರವಲ್ಲ. ಸ್ತ್ರೀಯ ಒಟ್ಟಾರೆ ಆರೋಗ್ಯವನ್ನು ಸಮತೋಲನದಲ್ಲಿಡಲು ಸಾಮಾನ್ಯ ಪರಿಸ್ಥಿತಿಯಲ್ಲಿ ಆವಶ್ಯಕವಾದ ಒಂದು ಅಂಗವೆಂದು ಎಲ್ಲರಿಗೂ ತಿಳಿದಿದೆ.
ಸಾಲಾಗಿ ಹೆಣ್ಣು ಮಕ್ಕಳು ಹುಟ್ಟಿದವು ಅಂತಲೋ, ಮುಟ್ಟು ಬಂದರೆ ಹೊಟ್ಟೆನೋವು ಕಿರಿಕಿರಿ ಕೆಲಸಕ್ಕೆ ರಜೆ ಹಾಕಲಾಗುವುದಿಲ್ಲ … ಇಂತಹ ಹಲವಾರು ಕಾರಣಗಳಿಗೆ ಗರ್ಭಕೋಶವನ್ನೇ ತೆಗೆಸಿಕೊಂಡ ಮಹಿಳೆಯರು ಇದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಯುವತಿಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಂತಹ ಶಸ್ತ್ರಚಿಕಿತ್ಸೆ ಪಡೆದುಕೊಂಡ ಉದಾಹರಣೆಗಳಿವೆ.
೨೦೧೫ರಲ್ಲಿ ನಮ್ಮ ರಾಜ್ಯದಲ್ಲಿ ಅನಾವಶ್ಯಕವಾಗಿ ಮಾಹಿತಿಯನ್ನೂ ನೀಡದೆ ಗರ್ಭಾಶಯವನ್ನು ಕಿತ್ತು ಕೈಗಿಡುತ್ತಿದ್ದ ದಂಧೆ ನಡೆದದ್ದು ಮರೆಯುವ ಹಾಗಿಲ್ಲ. ೨೦೦೮ರಲ್ಲಿ ಸಮೀರಾ ಕೋಹ್ಲಿ o ಡಾ.ಪ್ರಭಾ ಮನ್ಚಂದಾ ಮತ್ತು ರಿಟ್ ದಾವೆ ಸಂಖ್ಯೆ ೧೩೧/೨೦೧೩ ಡಾ. ನರೇಂದ್ರ ಗುಪ್ತ o ಭಾರತ ಸರ್ಕಾರ ಎನ್ನುವ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಗರ್ಭಕೋಶವನ್ನು ಎಂತಹ ವಿಪತ್ತಿನ ಸ್ಥಿತಿಯಲ್ಲಿಯೂ ಮಹಿಳೆಯ ‘ಒಪ್ಪಿಗೆ’ ಇಲ್ಲದೆಯೇ ತೆಗೆಯುವುದನ್ನು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇದ ೨೧, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳಡಿಯಲ್ಲಿ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.
ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರೂಪಿಸಿರುವ ನಿಯಮಾವಳಿಗಳಿಗೆ ಅನುಸಾರವಾಗಿ ಭಾರತೀಯ ವೈದ್ಯಕೀಯ ಮಂಡಳಿಯು ವೈದ್ಯರುಗಳಿಗೆ ನಿರ್ದೇಶನ ನೀಡಿದೆ. ಅದರ ಪ್ರಕಾರ ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೨೭ (ತಿದ್ದುಪಡಿ ೧೯೭೫) ಹಾಗೂ ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವ ಸಂದರ್ಭ ಬಂದರೆ ಗರ್ಭಿಣಿಯ ಅಥವಾ ಆ ಹೆಂಗಸಿನ ಒಪ್ಪಿಗೆಯನ್ನು ನಿಚ್ಛಳ, ನಿಖರ, ಸ್ಪಷ್ಟ ಮತ್ತು ಲಿಖಿತ ರೂಪದಲ್ಲಿ ಪಡೆದಿರಬೇಕಿರುತ್ತದೆ. ಕೊನೆಯ ಘಳಿಗೆಯಲ್ಲಿ ಇಂತಹ ಪರಿಸ್ಥಿತಿ ಎದುರಾದರೂ ಆ ಮಹಿಳೆಯ ಒಪ್ಪಿಗೆ ಇಲ್ಲದೆ ಅವಳ ಗರ್ಭಾಶಯವನ್ನು ತೆಗೆಯುವುದು ಅಪರಾಧವಾಗಿರುತ್ತದೆ. ಮಹಿಳೆಯು ೧೮ ವರ್ಷಕ್ಕೂ ಮೇಲ್ಪಟ್ಟವಳಾಗಿರಬೇಕು. ಬುದ್ಧಿ ಸ್ಥಿಮಿತವಾಗಿರಬೇಕು. ಯಾವುದೇ ಭಯ, ಒತ್ತಡ ಮತ್ತು ಆಮಿಷಕ್ಕೆ ಒಳಗಾಗಿ ಕೊಟ್ಟಿರಬಹುದಾದ ಒಪ್ಪಿಗೆಯನ್ನು ಕಾನೂನು ರೀತ್ಯದ ಒಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ವೈದ್ಯರು ಶಿಕ್ಷಾರ್ಹ ಅಪರಾಧಿಯಾಗುತ್ತಾರೆ.
ಘನತೆಯುಳ್ಳ ಬಾಳು ಮತ್ತು ದೈಹಿಕ ಸಮಗ್ರತೆಯನ್ನು ಉಳಿಸಿಕೊಳ್ಳುವ ಹಕ್ಕನ್ನು ಮಹಿಳೆಯ ಒಪ್ಪಿಗೆಯಿಲ್ಲದೇ ವೈದ್ಯರುಗಳು, ಯಾವುದೇ ಆಪತ್ಕಾಲದಲ್ಲೂ ಉಲ್ಲಂಘಿಸುವಂತಿಲ್ಲ. ಅಪರಾಧಕ್ಕೆ ೩ ರಿಂದ ೧೦ ವರ್ಷಗಳ ಕಾಲದ ಕಠಿಣ ಜೈಲು ಶಿಕ್ಷೆ ಇದೆ. ಮಹಿಳೆಯೇ ಕೇಳಿಕೊಂಡಳು ಎನ್ನುವ ಕಾರಣವನ್ನೂ ಮಾನ್ಯ ಮಾಡಲಾಗುವುದಿಲ್ಲ. ಯಾವುದೇ ವೈದ್ಯರು ಮಹಿಳೆಯ ಗರ್ಭಾಶಯವನ್ನು ತೆಗೆಯಲು ವೈದ್ಯಕೀಯ ಮೇಲ್ವಿಚಾರಣ ಮಂಡಳಿಯಿಂದ ಲೈಸೆನ್ಸ್ ಹೊಂದಿರುವುದು ಕಡ್ಡಾಯ.
(ಲೇಖಕರು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರು )
ಎಚ್.ಎಸ್.ದಿನೇಶ್ ಕುಮಾರ್ ಜಾಗತಿಕ ತಾಪಮಾನ ವಿಪರೀತ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡಿಕೊಳ್ಳದಿದ್ದರೆ ಇಡೀ ಮಾನವ ಕುಲವೇ ಸಂಕಷ್ಟಕ್ಕೀಡಾಗಬೇಕಾಗುತ್ತದೆ.…
ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಕಡೆಗೆ ವಾಲುವ ಆತಂಕ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಯಡಿಯೂರಪ್ಪ ಚಿಂತೆಯಲ್ಲಿದ್ದಾರೆ. ಅವರ ಚಿಂತೆಗೆ ಕಾರಣ…
ʻಬದುಕಿ ನಿರ್ಗಮಿಸುವುದಾದರೆ ಕೋಟಿಯವರಂತೆ ಬಾಳಿ ಹೊರಡಬೇಕುʼ ಕನ್ನಡದ ಪಾಪು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಸಂಪಾದಕರಾಗಿದ್ದ ಧಾರವಾಡದ ‘ವಿಶ್ವವಾಣಿ’ ಪತ್ರಿಕೆಯ…
ನಿಮ್ಮೆಲ್ಲರ ‘ಆಂದೋಲನ’ ದಿನಪತ್ರಿಕೆ ೫೪ನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ. ಹುಟ್ಟಿನಿಂದ ನಡೆದುಬಂದ ಮಾರ್ಗದಲ್ಲೇ, ರೂಢಿಸಿಕೊಂಡ ಸಿದ್ಧಾಂತಗಳ ನೆರಳಲ್ಲೇ ಸಹಸ್ರಾರು ಸವಾಲುಗಳ…
ಮೈಸೂರು : ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ…
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದ…