ಒಪ್ಪಿಗೆ ಇಲ್ಲದೆ ಗರ್ಭಾಶಯ ತೆಗೆಯುವುದು ಅಪರಾಧ

ಅಂಜಲಿ ರಾಮಣ್ಣ

ಕೋರ್ಟಿನ ದಾಖಲೆಯೊಂದಕ್ಕೆ ತುರ್ತಾಗಿ ರೇವತಿಯ ಸಹಿ ಬೇಕಾಗಿತ್ತು. ಇಂದು ನಾಳೆ ಎನ್ನುತ್ತಲೇ ಎರಡು ತಿಂಗಳಾದರೂ ಬರದವಳಿಗೆ ಗಟ್ಟಿಯಾಗಿ ಹೇಳೋಣವೆನ್ನಿಸಿ ಫೋನ್ ಮಾಡಿದಾಗ ಅವಳೆಂದಳು ‘ಒಂದೂವರೆ ತಿಂಗಳಿನಿಂದ ಮುಟ್ಟು ನಿಲ್ಲುತ್ತಲೇ ಇಲ್ಲ, ಹಾಗಾಗಿ ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ’. ಸುಸ್ತಾಗಿ ಮಲಗಿ ಬಿಟ್ಟಿದ್ದಳು. ಅವಳತ್ತೆ ಮನೆಯೌಷಧಿ ಮಾಡಿದರೂ ಸರಿಯಾಗುತ್ತಿಲ್ಲ. ಡಾಕ್ಟರ್ ಬಳಿ ತೋರಿಸಲು ಹೇಳಿದರೆ ‘ಅತ್ತೆ ಬಿಡುವುದಿಲ್ಲ. ನೆಂಟರ ಹುಡುಗಿಯೊಬ್ಬಳಿಗೆ ಹೊಟ್ಟೆ ನೋವು ಅಂತ ಹೋಗಿದ್ದಕ್ಕೆ ಗರ್ಭಾಶಯವನ್ನೇ ತೆಗೆದುಬಿಟ್ಟರಂತೆ’ ಎಂದಳು.

ಆಗತಾನೆ ನಲ್ವತ್ತಕ್ಕೆ ಹೊರಳಿದ್ದ ರತ್ನಾಳಿಗೂ ಈಇ ಮಾಡಬೇಕು ಎಂದಿದ್ದ ಡಾಕ್ಟರ್ ಏಕಾಏಕೀ ಗರ್ಭಕೋಶವನ್ನು ತೆಗೆದು ಹಾಕಬೇಕೆಂದು ಹೇಳಿದಾಗ ಮನೆಯವರೆಲ್ಲಾ ಹೌಹಾರಿದ್ದರು. ಗರ್ಭಾಶಯವೆಂದರೆ ಕೇವಲ ಮಕ್ಕಳನ್ನು ಹೆರಲು ಇರುವ ಯಂತ್ರವಲ್ಲ. ಸ್ತ್ರೀಯ ಒಟ್ಟಾರೆ ಆರೋಗ್ಯವನ್ನು ಸಮತೋಲನದಲ್ಲಿಡಲು ಸಾಮಾನ್ಯ ಪರಿಸ್ಥಿತಿಯಲ್ಲಿ ಆವಶ್ಯಕವಾದ ಒಂದು ಅಂಗವೆಂದು ಎಲ್ಲರಿಗೂ ತಿಳಿದಿದೆ.

ಸಾಲಾಗಿ ಹೆಣ್ಣು ಮಕ್ಕಳು ಹುಟ್ಟಿದವು ಅಂತಲೋ, ಮುಟ್ಟು ಬಂದರೆ ಹೊಟ್ಟೆನೋವು ಕಿರಿಕಿರಿ ಕೆಲಸಕ್ಕೆ ರಜೆ ಹಾಕಲಾಗುವುದಿಲ್ಲ … ಇಂತಹ ಹಲವಾರು ಕಾರಣಗಳಿಗೆ ಗರ್ಭಕೋಶವನ್ನೇ ತೆಗೆಸಿಕೊಂಡ ಮಹಿಳೆಯರು ಇದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಯುವತಿಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಂತಹ ಶಸ್ತ್ರಚಿಕಿತ್ಸೆ ಪಡೆದುಕೊಂಡ ಉದಾಹರಣೆಗಳಿವೆ.

೨೦೧೫ರಲ್ಲಿ ನಮ್ಮ ರಾಜ್ಯದಲ್ಲಿ ಅನಾವಶ್ಯಕವಾಗಿ ಮಾಹಿತಿಯನ್ನೂ ನೀಡದೆ ಗರ್ಭಾಶಯವನ್ನು ಕಿತ್ತು ಕೈಗಿಡುತ್ತಿದ್ದ ದಂಧೆ ನಡೆದದ್ದು ಮರೆಯುವ ಹಾಗಿಲ್ಲ. ೨೦೦೮ರಲ್ಲಿ ಸಮೀರಾ ಕೋಹ್ಲಿ o ಡಾ.ಪ್ರಭಾ ಮನ್ಚಂದಾ ಮತ್ತು ರಿಟ್ ದಾವೆ ಸಂಖ್ಯೆ ೧೩೧/೨೦೧೩ ಡಾ. ನರೇಂದ್ರ ಗುಪ್ತ o ಭಾರತ ಸರ್ಕಾರ ಎನ್ನುವ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಗರ್ಭಕೋಶವನ್ನು ಎಂತಹ ವಿಪತ್ತಿನ ಸ್ಥಿತಿಯಲ್ಲಿಯೂ ಮಹಿಳೆಯ ‘ಒಪ್ಪಿಗೆ’ ಇಲ್ಲದೆಯೇ ತೆಗೆಯುವುದನ್ನು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇದ ೨೧, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳಡಿಯಲ್ಲಿ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.

ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರೂಪಿಸಿರುವ ನಿಯಮಾವಳಿಗಳಿಗೆ ಅನುಸಾರವಾಗಿ ಭಾರತೀಯ ವೈದ್ಯಕೀಯ ಮಂಡಳಿಯು ವೈದ್ಯರುಗಳಿಗೆ ನಿರ್ದೇಶನ ನೀಡಿದೆ. ಅದರ ಪ್ರಕಾರ ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೨೭ (ತಿದ್ದುಪಡಿ ೧೯೭೫) ಹಾಗೂ ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವ ಸಂದರ್ಭ ಬಂದರೆ ಗರ್ಭಿಣಿಯ ಅಥವಾ ಆ ಹೆಂಗಸಿನ ಒಪ್ಪಿಗೆಯನ್ನು ನಿಚ್ಛಳ, ನಿಖರ, ಸ್ಪಷ್ಟ ಮತ್ತು ಲಿಖಿತ ರೂಪದಲ್ಲಿ ಪಡೆದಿರಬೇಕಿರುತ್ತದೆ. ಕೊನೆಯ ಘಳಿಗೆಯಲ್ಲಿ ಇಂತಹ ಪರಿಸ್ಥಿತಿ ಎದುರಾದರೂ ಆ ಮಹಿಳೆಯ ಒಪ್ಪಿಗೆ ಇಲ್ಲದೆ ಅವಳ ಗರ್ಭಾಶಯವನ್ನು ತೆಗೆಯುವುದು ಅಪರಾಧವಾಗಿರುತ್ತದೆ. ಮಹಿಳೆಯು ೧೮ ವರ್ಷಕ್ಕೂ ಮೇಲ್ಪಟ್ಟವಳಾಗಿರಬೇಕು. ಬುದ್ಧಿ ಸ್ಥಿಮಿತವಾಗಿರಬೇಕು. ಯಾವುದೇ ಭಯ, ಒತ್ತಡ ಮತ್ತು ಆಮಿಷಕ್ಕೆ ಒಳಗಾಗಿ ಕೊಟ್ಟಿರಬಹುದಾದ ಒಪ್ಪಿಗೆಯನ್ನು ಕಾನೂನು ರೀತ್ಯದ ಒಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ವೈದ್ಯರು ಶಿಕ್ಷಾರ್ಹ ಅಪರಾಧಿಯಾಗುತ್ತಾರೆ.

ಘನತೆಯುಳ್ಳ ಬಾಳು ಮತ್ತು ದೈಹಿಕ ಸಮಗ್ರತೆಯನ್ನು ಉಳಿಸಿಕೊಳ್ಳುವ ಹಕ್ಕನ್ನು ಮಹಿಳೆಯ ಒಪ್ಪಿಗೆಯಿಲ್ಲದೇ ವೈದ್ಯರುಗಳು, ಯಾವುದೇ ಆಪತ್ಕಾಲದಲ್ಲೂ ಉಲ್ಲಂಘಿಸುವಂತಿಲ್ಲ. ಅಪರಾಧಕ್ಕೆ ೩ ರಿಂದ ೧೦ ವರ್ಷಗಳ ಕಾಲದ ಕಠಿಣ ಜೈಲು ಶಿಕ್ಷೆ ಇದೆ. ಮಹಿಳೆಯೇ ಕೇಳಿಕೊಂಡಳು ಎನ್ನುವ ಕಾರಣವನ್ನೂ ಮಾನ್ಯ ಮಾಡಲಾಗುವುದಿಲ್ಲ. ಯಾವುದೇ ವೈದ್ಯರು ಮಹಿಳೆಯ ಗರ್ಭಾಶಯವನ್ನು ತೆಗೆಯಲು ವೈದ್ಯಕೀಯ ಮೇಲ್ವಿಚಾರಣ ಮಂಡಳಿಯಿಂದ ಲೈಸೆನ್ಸ್ ಹೊಂದಿರುವುದು ಕಡ್ಡಾಯ.

(ಲೇಖಕರು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಕೀಲರು )

ಆಂದೋಲನ ಡೆಸ್ಕ್

Recent Posts

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

2 hours ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

2 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

3 hours ago

PGCET| MBA, MCA ಪ್ರವೇಶ ಪರೀಕ್ಷೆ ಜೂನ್.‌4ಕ್ಕೆ ಮುಂದೂಡಿದ ಕೆಇಎ

ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶ್‌ ಪರೀಕ್ಷೆಯನ್ನು ಜೂನ್.‌14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…

4 hours ago

ಹನೂರು| ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…

4 hours ago

ಮಾರ್ಟಳ್ಳಿಯಲ್ಲಿ ಮರೀಚಿಕೆಯಾದ ಸ್ವಚ್ಛತೆ: ಗ್ರಾಮಸ್ಥರ ಆಕ್ರೋಶ

ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…

4 hours ago