ಮೈಸೂರು : ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕದಿಯುತ್ತಿರುವ ಬಿಜೆಪಿ, ಕೆಲವು ದಿನಗಳಿಂದ ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುವ ಮೂಲಕ ನಗೆಪಾಟಲಿಗೀಡಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಲೇವಡಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರಸರ್ಕಾರ ದೇಶದ ೧೩ ರಾಜ್ಯಗಳಲ್ಲಿ ಎಸ್ಐಆರ್ ಮಾಡಿ ೬.೫ ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು, ಆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲೂ ೧ ಕೋಟಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಿದೆ. ಆದರೆ, ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡದೇ ಪ್ರತಿ ಮತದಾರನ ಬಳಿಗೆ ಹೋಗಿ, ಅರ್ಜಿ ಭರ್ತಿ ಮಾಡಿಸುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ಕಾಂಗ್ರೆಸ್ ನೋಡಿಕೊಳ್ಳುತ್ತಿದೆ. ಇದನ್ನು ಸಹಿಸದ ಬಿಜೆಪಿ ಕಳೆದ ಎರಡು ದಿನಗಳಿಂದ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.
ಕರ್ನಾಟದಲ್ಲಿ ೫ ಕೋಟಿ ೬೦ಲಕ್ಷ ಮತದಾರರಿದ್ದು, ಎಸ್ಐಆರ್ ಮ್ಯಾಪಿಂಗ್ ವೇಳೆ ೫೦ಲಕ್ಷ ಮತದಾರರನ್ನು ಈಗಾಗಲೇ ಹೊರಗಿಟ್ಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ೬೦ ಲಕ್ಷ ಮತದಾರರನ್ನು ಕೈಬಿಡುವ ಹುನ್ನಾರವನ್ನು ಕೇಂದ್ರದ ಬಿಜೆಪಿ ಸರ್ಕಾರ ನಡೆಸಿದೆ. ಒಟ್ಟಾರೆ ರಾಜ್ಯದಲ್ಲಿ ೧ಕೋಟಿಗೂ ಅಧಿಕ ಮತದಾರರನ್ನ ಮತದಾರರ ಪಟ್ಟಿಯಿಂದ ದೂರ ಇಡುವ ಗುರಿ ಹೊಂದಿದೆ ಎಂದು ಆರೋಪಿಸಿದರು.
ಎನ್ಯುಮರೇಷನ್ ಅರ್ಜಿ ಲೋಪದಿಂದ ಕೂಡಿದೆ
ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿತ್ತು. ಈ ವೇಳೆ ಮತದಾರ ಪಟ್ಟಿಯಿಂದ ದೂರ ಉಳಿದಿದ್ದ ಅರ್ಹರನ್ನು ಪಟ್ಟಿಗೆ ಸೇರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ಬಿಜೆಪಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹರನ್ನೂ ಮತದಾರ ಪಟ್ಟಿಯಿಂದ ದೂರವಿಡುವ ಕೆಲಸ ಮಾಡುತ್ತಿದೆ. ಜತೆಗೆ ಈ ಪ್ರಕ್ರಿಯೆಗೆ ನೀಡುತ್ತಿರುವ ಎನ್ಯುಮರೇಷನ್ ಅರ್ಜಿಯೂ ಹಲವು ಲೋಪಗಳಿಂದ ಕೂಡಿದೆ. ಪದವಿ ಶಿಕ್ಷಣ ಪಡೆದವರೂ ಈ ಅರ್ಜಿಯನ್ನು ಸುಲಭವಾಗಿ ಭರ್ತಿ ಮಾಡಲಾಗುತ್ತಿಲ್ಲ. ಭರ್ತಿ ಮಾಡುವಾಗ ಸ್ವಲ್ಪ ತಪ್ಪಾದರೂ ಅವರು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಮತ್ತೆ ಅವರು ಪಟ್ಟಿಗೆ ಸೇರ್ಪಡೆಯಾಗಬೇಕಾದರೆ ಎಲ್ಲಾ ದಾಖಲೆ ನೀಡಬೇಕಿದೆ ಎಂದು ವಿವರಿಸಿದರು.
ಗುಂಪು ಗುಂಪಾಗಿ ಅಸಿಸ್ಟ್ ಮಾಡಿದರೆ ತಪ್ಪೇನು
ಈ ಭಾಗದ ಸಂಸದರು ಎನ್.ಆರ್. ಕ್ಷೇತ್ರದಲ್ಲಿ ಎನ್ಯುಮರೇಷನ್ ಅರ್ಜಿಗಳನ್ನು ಗುಂಪು ಗುಂಪಾಗಿ ವಿತರಿಸಿ, ಭರ್ತಿ ಮಾಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ನೈಜ್ಯವಾಗಿ ಸಾಕ್ಷರತೆ ಕಡಿಮೆ ಇರುವ ಆ ಭಾಗದಲ್ಲಿ ಎನ್ಯುಮರೇಷನ್ ಅರ್ಜಿ ತುಂಬಲು ಕಾಂಗ್ರೆಸ್ ಬಿಎಲ್ ಒಗಳು ಸಹಾಯ ಮಾಡುತ್ತಿದ್ದಾರೆ. ಒಬ್ಬೊಬ್ಬರಿಗೆ ನೆರವಾಗುವ ಬದಲು ಸಾಮೂಹಿಕವಾಗಿ ಎಲ್ಲರನ್ನೂ ಒಂದೆಡೆ ಸೇರಿಸಿ ಅರ್ಜಿ ಭರ್ತಿಮಾಡುವ ಬಗ್ಗೆ ತಿಳಿಸುತ್ತಿದ್ದಾರೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ಸಾರಾ ಮಹೇಶ್ ಗೆ ಸವಾಲು
ಮಾಜಿ ಸಚಿವ ಸಾರಾ ಮಹೇಶ್ ಅವರು ಕೆ.ಆರ್. ನಗರ ತಾಲೂಕಿನ ಮಿರ್ಲೆ ಗ್ರಾಮದ ಬೂತ್ ನಲ್ಲಿ ಮ್ಯಾಪಿಂಗ್ ಮಾಡುವಾಗ ೧೧೧೮ ಇದ್ದ ಮತದಾರರು ಈಗ ೧೧೩೪ ಆಗಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದು ನೈಜ್ಯವಾಗಿ ಆಗಿಯೇ ಇಲ್ಲ. ಅಂತಹ ದಾಖಲೆ ಇದ್ದರೆ ನಮಗೆ ಕೊಡಿ. ನಾನು ಈ ಬಗ್ಗೆ ಹೋರಾಟ ಮಾಡುತ್ತೇನೆ. ನಿಮಗೆ ಅನುಮಾನ ಇದ್ದರೆ ಚುನಾವಣೆ ಆಯೋಗ ಬಳಿ ಮಾಹಿತಿ ಪಡೆಯಬೇಕು. ಅದನ್ನು ಬಿಟ್ಟು ಸುಳ್ಳು ಹೇಳುವುದನ್ನು ಬಿಡಿ ಎಂದರು.
ಬಹಿರಂಗ ಚರ್ಚೆಗೆ ಅವಕಾಶ ಕೊಡಿ
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಸಂಸದ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್, ಮಾಜಿಸಚಿವ ಸಾ.ರಾ. ಮಹೇಶ್ ಅವರು ಎಸ್ಐಆರ್ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಅಕ್ರಮ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ನಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿ. ನೀವೆ ಸಮಯ ನಿಗದಿ ಮಾಡಿ ೪೮ ಗಂಟೆಯೊಳಗೆ ನಮಗೆ ಆಹ್ವಾನ ಕೊಡಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ..ಎಂ. ರಾಮು, ವಕ್ತಾರ ಕೆ. ಮಹೇಶ್ ಹಾಜರಿದ್ದರು.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯದ…
ಕಾಯ್ದಿರಿಸಿದ ಬೋಗಿಗಳು ರೈಲಿನ ಕೊನೆಗೆ ಇರಲಿ ಮೈಸೂರಿನ ಮುಖ್ಯ ರೈಲು ನಿಲ್ದಾಣದಿಂದ ಬೆಳಿಗ್ಗೆ ೮.೩೫ ಕ್ಕೆ ಹೊರಡುವ ಮಾಲ್ಗುಡಿ ಎಕ್ಸ್ಪ್ರೆಸ್…
ತಾನೊಬ್ಬ ಪ್ರಗತಿಪರ, ಜಾತ್ಯತೀತ, ಬಂಡಾಯಗಾರ ಅಂತ ತನ್ನ ನಗಾರಿಯನ್ನು ತಾನೇ ಬಾರಿಸುವಷ್ಟು ಅಸೂಕ್ಷ್ಮತೆ ಅವರಿಗಿರಲಿಲ್ಲ. ಅದನ್ನೆಲ್ಲಾ ಬದುಕಿ ತೋರಿಸಿದ್ದರು ಎಸ್.ಗಂಗಾಧರಯ್ಯ…
ಬರಹ ಮತ್ತು ರೇಖಾಚಿತ್ರ: ಎಂ ಎಸ್ ಪ್ರಕಾಶ್ ಬಾಬು ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ…
ಶೇಷಾದ್ರಿ ಗಂಜೂರು ಸರಿಯಾಗಿ ಇನ್ನೂರೈವತ್ತು ವರ್ಷಗಳ ಹಿಂದೆ, ೧೭೭೬ರ ಜುಲೈ ೪ರಂದು, ಅಮೆರಿಕದ ಫಿಲಡೆಲ್ಛಿಯಾ ನಗರದಲ್ಲಿ ಒಗ್ಗೂಡಿದ್ದ ೫೬ ಜನ…
ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ ಮಾಧ್ಯಮಗಳಲ್ಲಿ ಕೆಲವು ಬಿಎಲ್ಒಗಳು ನಿವಾಸಿಗಳ ಸ್ಥಳಕ್ಕೆ ಬಾರದೆ ಅವರಿದ್ದ ಕಡೆಗೇ ಕರೆಸಿಕೊಂಡು ಕೆಲಸ ನಿರ್ವಹಿಸುವ…