ಅಕ್ಷತಾ
ಹೆಣ್ಣಿನ ತಾಯ್ತನ ಆಕೆ ಗರ್ಭವತಿಯೆಂದು ತಿಳಿದಾಗಿನಿಂದಲೇ ಜಾಗೃತವಾಗುತ್ತದೆ. ತನಗೆ ಹುಟ್ಟಲಿರುವ ಮಗುವಿನ ಬಗ್ಗೆ ಅಂದಿನಿಂದಲೇ ಬಣ್ಣಬಣ್ಣದ ಕನಸುಗಳನ್ನು ಕಾಣಲಾರಂಭಿಸುತ್ತಾಳೆ.
ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದಂತೆ’ ಮಗುವನ್ನು ತಾನು ಹೇಗೆ ಬೆಳೆಸಬೇಕು ಎಂಬ ಲೆಕ್ಕಾ ಚಾರ ಆರಂಭವಾಗುತ್ತದೆ. ಸುಮನಳದ್ದೂ ಅಂತಹದ್ದೇ ಕನಸು. ಮಗುವಿನ ಮುಖ ಯಾವಾಗ ನೋಡು ವೆನೋ ಎಂದು ಹಪಹಪಿಸುತ್ತಿದ್ದವಳಿಗೆ ದಕ್ಕಿದ್ದು ಮಾತ್ರ! ತಾನು ಹೆತ್ತ ಮಗುವಿನ ಮುಖ ಮೊದಲ ಸಲ ಕಂಡು ಬೆಚ್ಚಿಬಿದ್ದಿದ್ದಳು. ತನಗೂ ಬಾಯಿಗೂ ಸಂಬಂಧವೇ ಇಲ್ಲದಂತಿದ್ದ ತುಟಿಗಳು ಮೂಗಿಗಂಟಿದ್ದವು. ತುಟಿಯ ಸೀಳು ಆ ಕ್ಷಣಕ್ಕೆ ಭಯ ಹುಟ್ಟಿಸುವಂತಿತ್ತು. ಆದರೂ ‘ಬಳ್ಳಿಗೆ ಕಾಯಿ ಭಾರವೇ?’ ಆ ಕ್ಷಣದಿಂದಲೇ ಚಿಕಿತ್ಸೆ ಆರಂಭಿಸಿದರೂ ಮಗು ಸ್ವಲ್ಪವಾದರೂ ಮಾತು ಕಲಿತಿದ್ದು ಮೂರನೇ ವಯಸ್ಸಿಗೆ.
ತನ್ನ ಅಂಗನ್ಯೂನತೆ ಅರಿವಿಗೆ ಬಾರದಂತೆ ಮಗನನ್ನು ಬೆಳೆಸಿದ ಅಮ್ಮನಿಗೆ ನಿಜ ಸಮಸ್ಯೆ ಆರಂಭವಾಗಿದ್ದು ಶಾಲೆಗೆ ಸೇರಿಸಿದ ನಂತರ. ತಮ್ಮಂತಿಲ್ಲದ ಹುಡುಗನನ್ನು ಕಂಡು ಓರಗೆಯವರು ಅಣಕಿಸಲು ಪ್ರಾರಂಭಿಸಿದಾಗ ಅವನಿಗೂ ವಾಸ್ತವದ ಅರಿವು ಹುಟ್ಟಿತು. ‘ಕಂಯ್ ಕೊಂಯ್ ಹುಡುಗ ಬಂದ’ ಎಂದು ನಗುವಾಗ ತಾನು ಮಾಡಿದ ತಪ್ಪೇನು? ಎಂಬ ನೋವು ಹುಡುಗನದ್ದು. ನಾನು ಎಲ್ಲರಂತಾಗಬೇಕು’ ಎಂದು ಶತಾಯಗತಾಯ ಪ್ರಯತ್ನದ ಜೊತೆಗೆ ಛಲವೂ ಹುಟ್ಟಿತು.
ಇಂಜಿನಿಯರಿಂಗ್ ಓದಿ ಉದ್ಯೋಗಕ್ಕೆ ಅಲೆದಾಟ ಆರಂಭಿಸಿದ. ಪ್ರತೀ ಇಂಟರ್ವ್ಯೂಗೆ ಹೋದಾಗಲೂ ತನ್ನ ಮಾತು ಅವನಿಗೆ ಮುಳ್ಳಾಗತೊಡಗಿತು. ಹೋದಲ್ಲೆಲ್ಲ ಮಾತಿನಲ್ಲಿ ಎಡವುತ್ತಿದ್ದಾಗ ತನ್ನ ಸಮಸ್ಯೆ ಮಾತು ಎಂಬುದನ್ನು ತಿಳಿದ. ಅಂದು ನಮ್ಮ ವಾಕ್ ಮತ್ತು ಶ್ರವಣ ಸಂಸ್ಥೆಗೆ ಬಂದ ಹುಡುಗನ ಕಣ್ಣಿನಲ್ಲೊಂದು ಧೈರ್ಯ ಇತ್ತು. ತಾನು ಸ್ಪಷ್ಟ ಮಾತುಗಾರನಾಗುವ ಅಚಲ ವಿಶ್ವಾಸವಿತ್ತು. ನಮ್ಮ ವಾಕ್- ಶ್ರವಣ ಸಂಸ್ಥೆಯಲ್ಲಿ ಸತತ ಮೂರು ವರ್ಷಗಳ ಕಾಲ ಹಠತೊಟ್ಟು ಮಾತಿನ ತರಬೇತಿ ಪಡೆದು ಇಂಟರ್ವ್ಯೂ ಎದುರಿಸಿ ಉದ್ಯೋಗ ಗಿಟ್ಟಿಸಿಕೊಂಡು ಸಾಫ್ಟ್ ವೇರ್ ಇಂಜಿನಿಯರ್ ಆದ. ಇಲ್ಲಿಗೆ ಮುಗಿಯಲಿಲ್ಲ ತೊಟ್ಟ ಹಠ. ತಾನು ನಡೆದುಬಂದ ದಾರಿಯನ್ನು ತಿರುಗಿನೋಡಿದಾಗ ಹುಟ್ಟಿದ್ದು ‘ನನ್ನಂತಹವರಿಗೆ ನಾನೇ ದುಡಿಯಬೇಕು’ ಎಂಬ ನಿರ್ಧಾರ.
ಆ ಹುಡುಗ ಬೇರೆ ಯಾರೂ ಅಲ್ಲ. ಇವತ್ತು ಖ್ಯಾತ ಮೋಟಿವೇಷನಲ್ ಸ್ಪೀಕರ್ ಎಂದು ಖ್ಯಾತಿ ಪಡೆದ ಆಕಾಶ್. ಒಂದ್ಕಾಲದಲ್ಲಿ ಮಾತನಾಡಲು ತಡವರಿಸುತ್ತಿದ್ದವನು ಈಗ ವಾಕ್ -ಶ್ರವಣ ಸಂಸ್ಥೆಯ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಲ್ಲೊಬ್ಬ. ಆಕಾಶ್ ಇವತ್ತು ನಗುತ್ತಾ ಹೆಮ್ಮೆಯಿಂದ ಹೇಳುತ್ತಾನೆ, ‘ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು’!
” ‘ಇದು ಒಬ್ಬ ಆಕಾಶನ ಕತೆಯಲ್ಲ. ಆಕಾಶ್ನಂತಹವರು ನಮ್ಮ ನಡುವೆ ಬಹಳಷ್ಟು ಮಂದಿಯಿದ್ದಾರೆ ’ ಎನ್ನುತ್ತಾರೆ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪಾವತಿಯವರು.”
ಡಾ.ಪ್ರಮೀಳಾದೇವಿ ಬಿ.ಕೆ ಖಾದಿಯಿಂದ ದೇಶವನ್ನು ಒಂದು ಗೂಡಿಸುವುದು ಸಾಧ್ಯವೇ? ಇಂದು ಸಾಮಾನ್ಯವಾಗಿ ಕೇಳಬಹುದಾದ ಪ್ರಶ್ನೆ. ಸ್ವಾತಂತ್ರ್ಯ ಬಂದು ಏಳು ದಶಕ…
ಜಹಜಿನಲ್ಲಿ ನನಗೆ ಸಮುದ್ರ ಪ್ರಯಾಣದ ಯಾವ ತೊಂದರೆಯೂ ಆಗಲಿಲ್ಲ. ದಿನಗಳು ಕಳೆದಂತೆಲ್ಲ ನನ್ನ ಮನಸ್ಸು ಸಂದಿಗ್ಧ ಪರಿಸ್ಥಿತಿಗೆ ಬೀಳತೊಡಗಿದ್ದಿತು. ಹಡಗಿನ…
ವಸಂತ್ ಕುಮಾರ್, ಮೈಸೂರು ಮಠ ಪ್ರತಿ ವರ್ಷವೂ ಪಾಲಿಕೆಯ ಬಜೆಟ್ನಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗುತ್ತದೆ. ೨೦೨೪-೨೦೨೫ರಲ್ಲಿ ಕೊಟ್ಟ…
ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು…
ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…