ಹಾಡು ಪಾಡು

ಸಿನಿಮಾ ಶೂಟಿಂಗು ಮತ್ತು ತಾಯಿಯ ಮಡಿಲು

ಸೌಮ್ಯ ಜಂಬೆ

ನನಗೆ ಹೀರೋಯಿನ್ ಆಗಬೇಕೆಂಬ ಆಸೆಯಿತ್ತು. ಬಣ್ಣದ ಲೋಕದಲ್ಲಿ ಬೆರೆಯ ಬೇಕೆಂಬ ಬಯಕೆ. ಆ ಅವಕಾಶ ಒಮ್ಮೆ ನನ್ನ ಹುಡುಕಿ ಬಂದಿತ್ತು. ಹೀರೋಯಿನ್ ಎಂದರೆ ಕೇಳಬೇಕೆ? ಐಷಾರಾಮಿ ಕಾರು, ದೊಡ್ಡ ಬಂಗಲೆ, ಭುಜದವರೆಗೂ ಇಳಿಬಿದ್ದ ಕೂದಲು, ಆ ಕಡೆ ಈ ಕಡೆ ಒಂದೆರಡು ಬಾಡಿಗಾರ್ಡ್ಸ್ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿತ್ತು ಜೀವನ.

ಬಿಡುವು ದೊರೆತ ಒಂದು ದಿನ ಸಂಜೆ ಬಿಸಿಲು ಹದವಾಗಿ ಹೂಗಳ ಮೇಲೆ ಬಿದ್ದಿತ್ತು. ಬಹುದಿನಗಳಿಂದ ಓದಲಾಗದ ಪುಸ್ತಕವನ್ನು ಓದುವುದಕ್ಕೆಂದು ಕೂತೆ. ಅಡುಗೆಯವರಿಗೆ ಹೇಳಿ ಒಂದು ಲೋಟ ಸ್ಟ್ರಾಂಗ್ ಕಾಫಿಯನ್ನೂ ಮಾಡಿಸಿಕೊಂಡೆ. ಕಿಟಕಿಯ ಕರ್ಟನ್ ಸರಿಸಿದ ತಕ್ಷಣವೇ ಮಲ್ಲಿಗೆಯ ಪರಿಮಳ ಒಳಗಡಿಯಿಟ್ಟಿತು. ಕಾಫಿ ಹೀರುತ್ತಾ ಪುಸ್ತಕವನ್ನು ಓದತೊಡಗಿದೆ. ಸಮಯ ಕಳೆದದ್ದು ತಿಳಿಯಲಿಲ್ಲ. ಕಿಟಕಿ ಕಡೆ ಕಣ್ಣು ಹಾಯಿಸಿದೆ. ದೂರದ ರಸ್ತೆಯಲ್ಲಿ ಸಂತೆ ನಡೆಯುತ್ತಿರುವುದು ಕಾಣಿಸಿತು. ಕೆದರಿದ ಕೂದಲಿಗೆ ಕೆಂಪು ರಿಬ್ಬನ್ ಸುತ್ತಿದ ಹುಡುಗಿಯೊಬ್ಬಳು ಹರಿದ ಬಟ್ಟೆಯನ್ನು ಮುಚ್ಚುವುದಕ್ಕೆಂದು ಅಲ್ಲಲ್ಲಿ ತೇಪೆ ಹಾಕಿದ ಲಂಗ ಧರಿಸಿ, ಬಣ್ಣ-ಬಣ್ಣದ ಬಲೂನ್ ಮಾರುತ್ತಾ ಅತ್ತಿತ್ತ ಓಡಾಡುತ್ತಿದ್ದಳು. ಅವಳ ಗೊಡವೆ ಯಾರಿಗೂ ಬೇಕಿರಲಿಲ್ಲ! ಹುಡುಗಿಗೆ ಹಸಿದ ಹೊಟ್ಟೆಯ ಚಿಂತೆಯಾಗಿದ್ದರೆ, ಅಲ್ಲಿರುವ ಕೆಲವರು ತಿಂದು ಉಳಿದುದನ್ನು ಎಸೆಯುವ ಗಡಿಬಿಡಿಯಲ್ಲಿದ್ದರು. ಹೆಂಗಸೊಬ್ಬಳು ಬೀದಿ ತಿರುಗುತ್ತಾ ಸೊಪ್ಪು ಮಾರುತ್ತಿದ್ದಳು. ಚಿಕ್ಕ ಹುಡುಗನೊಬ್ಬ ಅಪ್ಪನ ಭುಜದ ಮೇಲೆ ಕುಳಿತು ಐಸ್‌ಕ್ಯಾಂಡಿ ಚೀಪುತ್ತಿದ್ದ. ಕೆಲವು ಹುಡುಗರ ಗುಂಪು ಲಗೋರಿ ಆಡುತ್ತಾ ಕೇಕೆ ಹಾಕುತ್ತಿತ್ತು. ಟೀ ಮಾರುವ ಹುಡುಗನೊಬ್ಬ ಟ್ರಿಣ್ ಟ್ರಿಣ್ ಮಾಡುತ್ತಾ ಸೈಕಲ್‌ನಲ್ಲಿ ಸುಯ್ಯೆಂದು ಹಾದು ಹೋದ. ಅಲ್ಲೊಂದು ಕಡೆ ಅಂಗಡಿಯವನು ಹೊಂಬಣ್ಣದ ಜಿಲೇಬಿ ಮಾರುತ್ತಿದ್ದರೆ, ಇತ್ತ ಆಸೆ ಹೊತ್ತ ಕಂಗಳು, ಹಸಿದ ಹೊಟ್ಟೆ ತಣಿಸುವುದಕ್ಕೆ ಹಣ ಬೇಡುತ್ತಿದ್ದ ದೃಶ್ಯ ಮನ ಕರಗಿಸುವಂತಿತ್ತು.

ಎಲ್ಲವಿದ್ದೂ ಇಲ್ಲದಂತಿರುವ ನಾವು ಇಲ್ಲದಿರುವವರ ಬಗ್ಗೆ ಯೋಚಿಸುವುದಿಲ್ಲ. ಮತ್ತೂ ಗಳಿಸುವ ಬಗ್ಗೆಯೇ ಯೋಚಿಸುತ್ತೇವೆ. ಮನೆಯ ಮೇಲೊಂದು ಮನೆ, ಹೊರಗೊಂದು ಕಾರು, ಕಂತೆ ಕಂತೆ ಹಣ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಒಮ್ಮೆ ಊರಿಗೆ ಹೋಗಿದ್ದೆ. ಮನೆಯ ಬಣ್ಣ ಬದಲಾಗಿತ್ತು. ಕಳೆದ ಬೇಸಿಗೆಯಲ್ಲಿ ಹೊಡೆಸಿದ ಬಣ್ಣ ಮಾಸಲಾಗಿತ್ತು. ಮಲೆನಾಡಾದ್ದರಿಂದ ಮಳೆ ಹೆಚ್ಚು. ಸೂರಿನ ಮಸಿಯೆಲ್ಲಾ ಮಳೆಯ ನೀರಿನೊಂದಿಗೆ ಸೇರಿ, ಗೋಡೆಯ ಮೇಲೆ ಇಳಿದು ಬಣ್ಣ ಹಾಳು ಮಾಡಿತ್ತು. ಬಣ್ಣಗೆಟ್ಟ ಬದುಕಾಗಲೀ ಮನೆಯಾಗಲೀ ಯಾರಿಗೆ ಸಮಾಧಾನ ತಂದೀತು? ಬಣ್ಣವಿದ್ದಾಗ ಎಲ್ಲವೂ ಚಂದ. ಬಣ್ಣ ತೆಗೆದ ಮೇಲೆ ಎಲ್ಲರೂ ಒಂದೆ. ಎಲ್ಲರ ಸಮಸ್ಯೆಗಳೂ ಒಂದೆ. ಸಮಸ್ಯೆಗಳ ರೂಪ ಮತ್ತು ಪ್ರಮಾಣದಲ್ಲಿ ಭಿನ್ನತೆಯಿರಬಹುದಷ್ಟೆ. ಅವಕಾಶ ಇರುವಷ್ಟು ದಿನ ನಾವಾಡುವ ಆಟವಷ್ಟೆ. ಸಮಯ ಸರಿಗಟ್ಟುವವರು ಯಾರು? ಸಮಯವಷ್ಟೇ ಎಲ್ಲದಕ್ಕೂ ಉತ್ತರ ಕೊಟ್ಟಿತು. ಆಷಾಢದ ಮೇಘಗಳ ಮೇಲೂ ಆತಂಕದ ನೆರಳು ಬಿದ್ದಿರುತ್ತದೆ. ಮಾಗಿ ಮಲ್ಲಿಗೆಯ ಘಮದ ಬದಲಾಗಿ ವಸಂತದ ಚಿಗುರಿನ ನಿರೀಕ್ಷೆಯಲ್ಲಿರುತ್ತೇವೆ. ಸದಾ ಹೊಸತಿನ ನಿರೀಕ್ಷೆಯಲ್ಲೇ ನಿಂತಿರುವ ಜೀವನ ನಮ್ಮದಷ್ಟೆ.

ಅಮ್ಮನಿಗೆ ಫೋನಾಯಿಸಿದೆ. ಸುಲಭಕ್ಕೆ ಎಂದೂ ಕರೆ ಸಿಕ್ಕಿದ್ದೇ ಇಲ್ಲ. ಹಳ್ಳಿಯ ಜೀವನವೇ ಹಾಗೆ. ಯಾಕೋ ಹಳ್ಳಿಯಲ್ಲೇ ನನ್ನವರೊಂದಿಗೆ ನನ್ನತನದಿಂದ ಬದುಕಬೇಕೆನಿಸಿತು. ಆಸ್ತಿಯನ್ನೆಲ್ಲಾ ಮಾರಿ ಬಂದ ದುಡ್ಡನ್ನೆಲ್ಲ ತುಂಬಿಕೊಂಡು ಹಳ್ಳಿ ದಾರಿ ಹಿಡಿದೆ. ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿತ್ತು. ನನ್ನ ಜನರೊಂದಿಗೆ ಬದುಕುವ ಆಸೆಯದು.

ಅಟ್ಟವಿರುವ ಅಂಗಳ, ನಮ್ಮದು ಮಲೆನಾಡ ಮನೆ. ಅಂತೆಯೇ ಮಣ್ಣ ವಾಸನೆ, ಹಿತ್ತಲಲ್ಲಿ ಸೊಕ್ಕಿ ಬೆಳೆದ ಸೇವಂತಿಗೆ, ಆಲೆಮನೆಯ ಬೆಲ್ಲದ ಘಮ. ನನ್ನೂರನ್ನು ನೆನೆದ ತಕ್ಷಣ ಊರ ದೇವರ ಜಾತ್ರೆ, ನಾಗರ ಪಂಚಮಿಯ ಜೋಕಾಲಿ ಎಲ್ಲವೂ ನೆನಪಾಗುವುದು. ಬಿಕ್ಕಿ- ಬಿಕ್ಕಿ ಅಳತೊಡಗಿದೆ. ಅಮ್ಮ ಬಂದು ಎಬ್ಬಿಸಿದಾಗಲೇ ವಾಸ್ತವ ಅರಿವಾಗಿದ್ದು. ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡೆ. . .

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

8 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

8 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

8 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

8 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

8 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

8 hours ago