ಆಂದೋಲನ ಪುರವಣಿ

ಬಾಳು ಕಟ್ಟಿಕೊಂಡಾಯ್ತು, ಬಯಸಿದ್ದೀಗ ದಕ್ಕಾಯ್ತು…

ಶಿಕ್ಷಕರಾಗಿ ಆಯ್ಕೆಯಾದ ಮೂವರು ತೃತೀಯ ಲಿಂಗಿಗಳು; ಪೂಜಾ ಅಂತರಂಗದ ಅನಾವರಣ

-ಸೌಮ್ಯ ಹೆಗ್ಗಡಹಳ್ಳಿ

ಅಪಮಾನ, ಅಸಮಾನತೆಗೆ ತುತ್ತಾಗಿ ಹಿಂದೆ ಬೀಳುತ್ತಿದ್ದ ತೃತೀಯ ಲಿಂಗಿಗಳು ಈಗ ಮುನ್ನೆಲೆಗೆ ಬರುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಛಲ, ಎಲ್ಲರಂತೆಯೇ ನಾವುಗಳೂ ಎನ್ನುವ ದೃಢ ನಿಲುವು ಕಾರಣ. ಇದರ ಜೊತೆಗೆ ಸಮಾಜದ ವರ್ತನೆಯಲ್ಲಿಯೂ ತುಸು ಬದಲಾವಣೆಯಾಗುತ್ತಿದೆ. ಇದೆಲ್ಲರ ಒಟ್ಟಂದ ಎಂಬಂತೆ ಇಂದು ತೃತೀಯ ಲಿಂಗಿಗಳು ಸಾಕಷ್ಟು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದರಂತೆ ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೂವರು ತೃತೀಯ ಲಿಂಗಿಗಳು ಆಯ್ಕೆಯಾಗಿದ್ದು, ರಾಜ್ಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಈ ಬಾರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ಬರೆದವರಲ್ಲಿ ಹತ್ತು ಮಂದಿ ತೃತೀಯ ಲಿಂಗಿಗಳಿದ್ದರು. ಇವರಲ್ಲಿ ರಾಯಚೂರು ಜಿಲ್ಲೆಯ ಅಶ್ವಥ ಪೂಜಾ, ಚಿಕ್ಕಬಳ್ಳಾಪುರದ ಸುರೇಶ್ ಬಾಬು, ಮಧುಗಿರಿಯ ರವಿಕುಮಾರ್ ವೈ.ಆರ್. ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಪೂಜಾ ಅವರು, ಅಪಮಾನವೇ ಆವರಿಸಿಕೊಂಡಿದ್ದ ಹೊತ್ತಿನಲ್ಲಿ ನಾನು ದೇವರನ್ನು ಕೇಳಿಕೊಳ್ಳುತ್ತಿದ್ದದ್ದು ಎಲ್ಲವನ್ನೂ ಗೆಲ್ಲುವ ಶಕ್ತಿ ಕೊಡು ಎಂದು. ಓದಿನಿಂದಲೇ ನಾನು ಮುಂದೆ ಬರಲು ಸಾಧ್ಯ ಎಂಬುದರ ಅರಿವಾಗಿ ಓದಿನಲ್ಲಿ ತೊಡಗಿಸಿಕೊಂಡೆ. ಅದರ ಫಲವಾಗಿ ಈ ಮಟ್ಟಕ್ಕೆ ಬಂದಿದ್ದೇನೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಇನ್ನೂ ಮುಂದಿನ ಹಂತಕ್ಕೆ ಹೋಗಲು ನಾನು ಶ್ರಮಿಸುತ್ತಲೇ ಇರುತ್ತೇನೆ. ಈ ನಿಟ್ಟಿನಲ್ಲಿ ನಾನು ಸದಾ ವಿದ್ಯಾರ್ಥಿ ಎನ್ನುತ್ತಾರೆ ಪೂಜಾ.

ಮೀಸಲಾತಿ ನೀಡಿದ ಧೈರ್ಯ

ಸದಾ ಮಕ್ಕಳೊಂದಿಗೆ ಬರೆಯುತ್ತಿದ್ದ ನಾನು ಮಕ್ಕಳ ನಡುವಲ್ಲೇ ಇರಬೇಕು ಎಂದು ಬಯಸಿದ್ದೆ. ಅದಕ್ಕೆ ತಕ್ಕುದಾಗಿ ಶಿಕ್ಷಕಿಯೇ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಇದಕ್ಕೆ ಸಹಕಾರ ನೀಡಿದ್ದು ತೃತೀಯ ಲಿಂಗಿಗಳಿಗೆ ನೀಡಿದ ಮೀಸಲಾತಿ. ನಿರಂತರ ಓದಿನಲ್ಲಿ ತೊಡಗಿಸಿಕೊಂಡ ನಾನು ಗೆದ್ದರೆ ನಮ್ಮ ಸಮುದಾಯದ ಎಲ್ಲರಲ್ಲೂ ಹೊಸ ಭರವಸೆಯನ್ನು ಹುಟ್ಟಿಸಬಹುದು ಎನ್ನುವ ಆಶಾಭಾವನೆ ಇಟ್ಟುಕೊಂಡಿದ್ದೆ. ಅದು ಇಂದು ನನಸಾಗಿದೆ.

ನನಗೆ ನಾನೇ ಸ್ಫೂರ್ತಿ

ಹೆಣ್ಣಾಗಿ ಅಥವಾ ಗಂಡಾಗಿ ಸಾಧನೆ ಮಾಡುವುದು ಬೇರೆ. ಅವರಿಗೆ ಕೆಲವಷ್ಟು ಅವಕಾಶಗಳು ಇರುತ್ತವೆ. ಆದರೆ ತೃತೀಯ ಲಿಂಗಿಯಾದ ನನಗೆ ಕೆಲವಾರು ಕಡೆಗಳಲ್ಲಿ ಸೂಕ್ತ ಅವಕಾಶವೇ ಇರುತ್ತಿರಲಿಲ್ಲ. ಹೀಗಾಗಿ ನಾನು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿಲ್ಲ, ಸಿಲಬಸ್‌ಗೆ ಅನುಗುಣವಾಗಿ ಹಳೆಯ ಪ್ರಶ್ನೆ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಪುಸ್ತಕಗಳನ್ನು ಓದುತ್ತಿದ್ದೆ. ನಿತ್ಯವೂ ೬ ಗಂಟೆಗಳ ಕಾಲ ಓದಿಗೆ ಮೀಸಲಿಟ್ಟಿದ್ದೆ. ಇದೇ ನನ್ನನ್ನು ಶಿಕ್ಷಕಿಯನ್ನಾಗಿ ಮಾಡಿದೆ. ಈ ಲೆಕ್ಕದಲ್ಲಿ ನನಗೆ ನಾನೇ ಸ್ಫೂರ್ತಿ.


ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ನೀರಮಾನವಿ ಗ್ರಾಮದ ಪೂಜಾ ಬಿಎಡ್, ಎಂಎ ಮಾಡಿದ್ದಾರೆ. ಹುಟ್ಟುತ್ತಾ ಗಂಡಾಗಿ, ೫ನೇ ತರಗತಿಗೆ ಬರುವಷ್ಟರಲ್ಲಿ ಹೆಣ್ಣಿನ ಗುಣ ಲಕ್ಷಣಗಳನ್ನು ಹೊಂದಿದ ಪೂಜಾ ಎದುರಾದ ಹೀಯಾಳಿಕೆಗಳನ್ನೇ ಸವಾಲಾಗಿ ಸ್ವೀಕಾರ ಮಾಡಿ ಈ ಹಂತಕ್ಕೆ ಬಂದಿದ್ದಾರೆ. ಮೊದಲ ಬಾರಿಗೇ ಪರೀಕ್ಷೆ ಬರೆದು ಪಾಸ್ ಮಾಡಿದ್ದಾರೆ.


 ಮಂಗಳಮುಖಿಯರು ಹಲವಾರು ಸವಾಲುಗಳ ನಡುವೆ ಶಿಕ್ಷಣ ಪಡೆದು ಸಾಧನೆ ಮಾಡಿರುವುದು ಖುಷಿ ತಂದಿದೆ. ಸಮಾಜದಲ್ಲಿ ಇದು ಉತ್ತಮ ಬದಲಾವಣೆ. ತೃತಿಯ ಲಿಂಗಿಗಳ ಆಸಕ್ತಿಗೆ ಅನುಗುಣವಾಗಿ ಸಮಾಜ ಸಹಕಾರ ನೀಡಬೇಕು. ಈಗ ಶಿಕ್ಷಕರಾಗಿ ಆಯ್ಕೆಯಾಗಿರುವವರು ನಮ್ಮ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. -ಪ್ರಣತಿ ಪ್ರಕಾಶ್, ಅಧ್ಯಕ್ಷರು, ಲೈಂಗಿಕ ಅಲ್ಪಸಂಖ್ಯಾತರ ಘಟಕ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ವಿಭಾಗ

ಶಿಕ್ಷಕರಾಗಿ ಆಯ್ಕೆಯಾಗಿರುವ ತೃತೀಯ ಲಿಂಗಿಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ಮಕ್ಕಳು, ಸಹೋದ್ಯೋಗಿಗಳು, ಪೋಷಕರು ಮುಂದೆ ಇವರನ್ನು ಹೇಗೆ ನೋಡುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ. ಉತ್ತಮ ಓದಿನಿಂದ ಉತ್ತಮ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂಬುದನ್ನು ಇವರು ತೋರಿಸಿದ್ದಾರೆ. ಇದು ಇತರ ಅಲ್ಪಸಂಖ್ಯಾತರ ಮನೋಬಲ ಹೆಚ್ಚಿಸಲಿದೆ. – ಅಕ್ಕಯ್‌ ಪದ್ಮಶಾಲಿ, ಸಾವಾಜಿಕ, ರಾಜಕೀಯ ಹಕ್ಕುಗಳ ಹೋರಾಟಗಾರ್ತಿ

ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಬೇಕು ಎನ್ನುವ ಹೋರಾಟ ನಮ್ಮದಾಗಿತ್ತು. ಅದು ಈಗ ಈಡೇರುತ್ತಿದೆ. ಇದರ ಪ್ರಯೋಜನ ಪಡೆದು ಶಿಕ್ಷಕರಾಗಿರುವವರು ಉತ್ತಮ ಸಾಧನೆ ಮಾಡಬೇಕು. ಈ ಮೂಲಕ ಬೇರೆ ಬೇರೆ ಇಲಾಖೆಗಳಲ್ಲಿಯೂ ತೃತೀಯ ಲಿಂಗಿಗಳಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. – ನಿಶಾ ಗುಲೂರು, ನಿರ್ದೇಶಕರು, ಸಂಗಮ ಸಂಸ್ಥೆ

andolana

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

34 mins ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

36 mins ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

39 mins ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

41 mins ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

46 mins ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

50 mins ago