ಆಂದೋಲನ ಪುರವಣಿ

ಅಪರೂಪದ ಹಿರಿಯ ಜೀವ ಪ್ರಭಾವತಿ ಸಂಪತ್ ‘ಕುಮಾರಿ’

• ಕೀರ್ತಿ ಎಸ್.ಬೈಂದೂರು

ಇಳಿ ವಯಸ್ಸಿನಲ್ಲೂ ಮೌತ್ ಆರ್ಗನ್, ಹಾರ್ಮೋನಿಯಂ ನುಡಿಸುತ್ತಾ, ಬತ್ತದ ಉತ್ಸಾಹ ದೊಂದಿಗೆ ಬಾಳುತ್ತಿರುವ ಅಪರೂಪದ ಸಾಧಕಿ, ಪ್ರಭಾವತಿ ಸಂಪತ್ ‘ಕುಮಾರಿ’. ಕುತೂಹಲಕ್ಕೆ ವಯಸ್ಸು ಕೇಳಿದರೆ ‘ಸ್ವೀಟ್ 18+8’ ಎನ್ನುತ್ತಲೇ ತಾವಿನ್ನೂ ಕುಮಾರಿ ಎಂಬಂತೆ ಬದುಕನ್ನು ಆನಂದಿ ಸುವ ಮನೆ ಜನರ ಪ್ರೀತಿಯ ಅಜ್ಜಿ. ತನ್ನ ಮೂರನೇ ತಲೆಮಾರಿಗೂ ಸಂಗೀತ, ಕಲಾ ಪ್ರೀತಿಯನ್ನು ಚಿಗುರೊಡಿಸಿದವರು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬದುಕಿನ ಮೇಲೈಸುವಿಕೆಯನ್ನು ಅವರ ಜೀವನಗಾಥೆಯೇ ಹೇಳುತ್ತದೆ.

ಪ್ರಭಾವತಿ ಅವರ ತಂದೆ ಚರ್ಚ್‌ವೊಂದರಲ್ಲಿ ಹಾರ್ಮೋನಿಯಂ ಮತ್ತು ವಯಲಿನ್ ನುಡಿಸುವ ಕಲಾವಿದರು. ತಾಯಿಯೂ ಶಾಲಾ ಶಿಕ್ಷಕಿಯಾಗಿ, ಸಂಗೀತದ ಜೊತೆಗೆ ಮೌತ್ ಆರ್ಗನ್ ನುಡಿಸುತ್ತಿದ್ದರು. ಸಂಗೀತದ ವಾತಾ ವರಣ ಇದ್ದದ್ದಕ್ಕಾಗಿ ಸಹಜವಾಗಿಯೇ ಅವರಿಗೆ ಕಲೆಯ ಒಲವು ಹೆಚ್ಚಿತು. ಹತ್ತನೇ ತರಗತಿಯಲ್ಲಿ ಸಂಗೀತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂ ಡಿದ್ದರು. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ, ಜೂನಿಯರ್ ಪರೀಕ್ಷೆ ಯನ್ನು ಪಾಸ್ ಮಾಡಿಕೊಂಡಂತೆ. ಮನೆಯಲ್ಲಿಯೇ ಅವರಿಗೆ ಸಂಗೀತ ಅಭ್ಯಾಸ. ತಾಯಿಯಿಂದಲೇ ಸ್ವರ ಪರಿಚಯ ಮಾಡಿಸಿಕೊಂಡು, ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಬಿ.ಎ., ಬಿ.ಎಡ್ ಓದು ಮುಗಿದ ತಕ್ಷಣವೇ ಪ್ರೌಢಶಾಲಾ ವಿಭಾಗದ ಶಿಕ್ಷಕರಾಗಿ ನೇಮಕಗೊಂಡರು. ಹಾಸನದಲ್ಲಿ ವೃತ್ತಿ ಜೀವನ ಆರಂಭ. ಪಠ್ಯ ವಿಷಯದ ಜೊತೆಗೆ ಕಲೆಯನ್ನೂ ಹೇಳಿಕೊಡುವ ಅಪರೂಪದ ಟೀಚರ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ! ಆಗ ನಡೆಯುತ್ತಿದ್ದ ಯುವಜನೋತ್ಸವ ಕಾರ್ಯಕ್ರಮಗಳಿಗೆ ತಾವೇ ಚುಟುಕು ಬರೆದು, ರಾಗ ಸಂಯೋಜಿಸಿ, ಹಾಡಿಗೆ ಹಾರ್ಮೋ ನಿಯಂ ನುಡಿಸುತ್ತಿದ್ದರು. ಜೊತೆಗೆ ತಮ್ಮ ಶಾಲಾ ಮಕ್ಕಳಿಗೆ ತಾವೇ ಸಂಯೋ ಜಿಸಿದ ಹಾಡುಗಳನ್ನು ಹಾಡಿಸುತ್ತಾ, ಸಂಗೀತದ ಅಭಿರುಚಿಯನ್ನು ಹೆಚ್ಚಿಸಿದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್ ನಡೆಸಿದ ‘ವರ್ಲ್ಡ್ ಜಾಂಬೂರಿ’ಯ ಗೈಡ್ ನಾಯಕರಾಗಿ ಇಡೀ ತಂಡವನ್ನು ಮುನ್ನಡೆಸಿದ್ದ ಆಗಿನ ಏಕೈಕ ಮಹಿಳೆ. ಮಾತ್ರವಲ್ಲ, ಹತ್ತು ‘ಗೈಡ್ ಲಾ’ಗಳಿಗೆ ಇವರೇ ಸ್ವತಃ ರಾಗ ಸಂಯೋಜಿಸಿದ ಹಾಡು ಇಡೀ ಉತ್ಸವವನ್ನು ತುಂಬಿತ್ತು. ಭೌತಶಾಸ್ತ್ರ ವಿಷಯದ ಪ್ರಾಧ್ಯಾಪಕ ರಾಗಿದ್ದ, ತಮಿಳುನಾಡಿನ ರಾಂಚೀಸ್ ಎಂಬವರನ್ನು ತಮ್ಮ 26ನೇ ವಯಸ್ಸಿಗೆ ಮದುವೆಯಾದರು.

ಪ್ರಭಾವತಿ ಅವರ ಬದುಕಿನ ಆಶ್ಚರ್ಯಕರ ವಿಷಯವೆಂದರೆ ಮದುವೆಯಾಗಿ, ಮೂರು ಮಕ್ಕಳಾಗಿ ಹೆಚ್ಚು ಕಡಿಮೆ ಹತ್ತು ವರ್ಷಗಳೇ ಕಳೆದಿತ್ತು. ನಂತರ ಎಂ.ಎ. ಪದವಿ ಓದಬೇಕೆಂದು ಮೈಸೂರು ವಿಶ್ವವಿದ್ಯಾ ನಿಲಯವನ್ನು ಆಯ್ದುಕೊಂಡಾಗ, ಸಂದರ್ಶನದಲ್ಲಿದ್ದ ದೇ.ಜವರೇಗೌಡ ಅವರು ಕೇಳಿದ್ದ ಮಾತನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ‘ಏನು ಮೇಡಂ, ನಿಮಗೆ ಅವಕಾಶ ಕೊಟ್ರೆ ಬೇರೆಯವರಿಗೆ ಅವಕಾಶ ತಪ್ಪುತ್ತೆ. ನಿದ್ದೆ ಹೇಗೆ ಕೊಡೋದು?’ ಪ್ರಭಾವತಿಯವರು ಆತ್ಮವಿಶ್ವಾಸದಿಂದ, ‘ನೀವು ಅವಕಾಶ ಕೊಟ್ರೆ ನಾನು ಸಾಧಿಸಿ ತೋರಿಸ್ತೀನಿ ಸರ್’ ಎಂದಿದ್ದು ಮಾತ್ರವಲ್ಲ, ಅದಕ್ಕೆ ಬದ್ಧರಾಗಿ ನಡೆದುಕೊಂಡರು ಕೂಡ.

ಅಗ್ರಹಾರದಲ್ಲಿದ್ದ ತಮ್ಮ ಮನೆಯಿಂದ ಬೆಳಿಗ್ಗೆ 4 ಗಂಟೆಗೇ ಎದ್ದು, ಮನೆ ಕೆಲಸ ಮುಗಿಸಿ, ತಿಂಡಿ ಕಟ್ಟಿಕೊಂಡು, ಗಂಗೋತ್ರಿಗೆ ಹೊರಡುತ್ತಿದ್ದರು. 10 ಗಂಟೆಯವರೆಗೆ ತರಗತಿ ಕೇಳಿ, ಪಕ್ಕದಲ್ಲಿದ್ದ ಶಾಲೆಗೆ ಪಾಠಕ್ಕೆಂದು ಹೋಗು ತಿದ್ದರು. ಸ್ನಾತಕೋತ್ತರ ಪದವಿಯಲ್ಲಿ ಕುವೆಂಪು ಅವರ ಶಿಷ್ಯಯಾಗಿದ್ದರು. ‘ಶ್ರೀ ರಾಮಾಯಣ ದರ್ಶನಂ’ ಕಾವ್ಯವನ್ನು ಅವರಿಂದಲೇ ಪಾಠವಾಗಿ ಕೇಳಿದರು. ಹಾ.ಮಾ.ನಾಯಕ ಅವರ ವಿದ್ಯಾರ್ಥಿನಿಯಾಗಿ ಮುಂದೆ ಅವರ ವೃತ್ತಿ ಬದುಕಿನ ಸಹೋದ್ಯೋಗಿಯೂ ಆದರು. ಪು.ತಿ.ನರಸಿಂಹಾ ಚಾರ್, ದೇ.ಜವರೇಗೌಡ, ಎಸ್.ವಿ.ಪರಮೇಶ್ವರ ಭಟ್ಟ, ಅನಂತರಂಗಾ ಚಾರ್ ಹೀಗೆ ಸಾಹಿತ್ಯದ ದಿಗ್ಗಜರೆಲ್ಲರನ್ನೂ ಪ್ರಾಧ್ಯಾಪಕರಾಗಿ ಕಂಡವರು.

ಕೆ.ಆರ್.ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ರಾಗಿದ್ದಾಗ ವೃತ್ತಿಯಿಂದ ನಿವೃತ್ತಿ ಹೊಂದಿದರು. ಜೀವನದ ಬಗೆಗೆ ಅವರಿಗಿರುವ ಆಶಾವಾದಿತನ ಖುಷಿಯ ಕ್ಷಣಗಳಂತೇ ಅವಮಾನದ ಕ್ಷಣಗಳನ್ನೂ ಸ್ವೀಕರಿಸುವಂತೆ ಮಾಡಿತು. ಈ ಮಾತಿಗೆ ನಡೆದ ಘಟನೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ. ಮೊದಲಬಾರಿಗೆ ಪ್ರಾಂಶುಪಾಲ ರಾಗಿ ಶಾಲೆಯೊಂದಕ್ಕೆ ಹೋದಾಗ, ‘ಅಲ್ಪಸಂಖ್ಯಾತ ವರ್ಗದ ಮಹಿಳೆಗೆ ಹೇಗೆ ಪ್ರಾಂಶುಪಾಲರ ಹುದ್ದೆಯನ್ನು ನೀಡುತ್ತಾರೆ?’ ಎಂದು ಕೆಲ ಜನರೆಲ್ಲ ಗಲಾಟೆ ಮಾಡಿದ್ದರು. ಪ್ರಾಂಶುಪಾಲರ ಕಚೇರಿಯ ಒಳಗೆ ಕೂರಲೂ ಬಿಡದೆ, ವಾಪಸು ಕಳುಹಿಸಿದ ನೆನಪುಗಳೂ ಅವರ ಬದುಕಿನಲ್ಲಿವೆ!

ಕನ್ನಡ ಎಂ.ಎ ಮುಗಿಸಿದ ಆ ಕಾಲದ ಕೆಲವೇ ಕೆಲವು ಮಹಿಳೆಯರಲ್ಲಿ ಪ್ರಭಾವತಿಯವರೂ ಒಬ್ಬರು. ಅನೇಕ ಸ್ಪರ್ಧೆಗಳಿಗೆ ತೀರ್ಪುಗಾರ ರಾಗಿಯೂ ಇರುತ್ತಿದ್ದರು. ವಿದ್ವಾಂಸರಾದ ತಿಪ್ಪೇರುದ್ರಸ್ವಾಮಿ ಅವರೊಂದಿಗೆ ಚರ್ಚಾ ಸ್ಪರ್ಧೆಯ ತೀರ್ಪುಗಾರಿಕೆಯನ್ನೂ ಮಾಡಿದ ಅನುಭವವಿದೆ.

ಪ್ರಭಾವತಿಯವರ ತಾಯಿಯ ಸಂಬಂಧಿಕರೊಬ್ಬರ ಹೆಸರು ಸಂಪತ್‌ ಕುಮಾರ್ ಎಂದು ಅಪಘಾತದಲ್ಲಿ ತೀರಿದ ಸುದ್ದಿಯಲ್ಲಿ ‘ಸಂಪತ್‌ ಕುಮಾರಿ’ ಎಂದು ಕೇಳಿ, ಶಾಲೆಯಲ್ಲೂ ಸಂತಾಪ ಸೂಚಿಸಿದ್ದರು. ರಾತ್ರಿ ಮನೆಗೆ ಬರುವ ವೇಳೆಯಲ್ಲಿ, ತೀರಿದ ಮನೆಯಲ್ಲಿ ದೀಪವನ್ನು ಕಂಡು ಬರುವ ಶಾಸ್ತ್ರದ ಪ್ರಕಾರ ಆಚೀಚೆಮನೆಯ ಜನರೆಲ್ಲ ಇವರ ಮನೆಯಲ್ಲಿ ಹಾಜರ್. ಸತ್ಯ ತಿಳಿದ ಮೇಲೆ, ಇವರನ್ನು ನೋಡಿಯೇ ಹೋಗಬೇಕೆಂದು ಅಲ್ಲೇ ಕಾದು ಕೂತಿದ್ದರು. ಇದು ಅವರ ಡಬಲ್ ಆಯಸ್ಸಿನ ಜೀವನದ ಕಥೆ.

andolana

Recent Posts

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

1 hour ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

7 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

13 hours ago

ಓದುಗರ ಪತ್ರ: ವೈದ್ಯಕೀಯ ಸೀಟು ಹೆಚ್ಚಳ: ಪ್ರಶಂಸನೀಯ ನಡೆ

೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…

13 hours ago

ಓದುಗರ ಪತ್ರ: ಬಂದ್ ಮಾಡುವುದರಿಂದ ನಮಗೇ ತೊಂದರೆ ಅಲ್ಲವೇ?

ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್‌ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…

13 hours ago

ತಂಬಾಕು ನಿಯಂತ್ರಣ: ಕೇಂದ್ರ ದ್ವಂದ್ವ ನೀತಿ

ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…

13 hours ago