Andolana originals

ಆದಾಯದ ಹಳಿಗೆ ಮರಳಿದ ಮೃಗಾಲಯ

ಕೆ.ಬಿ.ರಮೇಶನಾಯಕ

ಮೈಸೂರು: ದಕ್ಷಿಣ ಭಾರತದಲ್ಲೇ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಕೋವಿಡ್ ಸಮಯದಲ್ಲಿ ಆದಾಯ ಕುಸಿತದಿಂದ ಕಂಗೆಟ್ಟರೂ ನಂತರದ ವರ್ಷಗಳಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದಾಗಿ ಆದಾಯದ ಹಳಿಗೆ ಮರಳಿದೆ.

ಕೋವಿಡ್ ಕಾಲದಲ್ಲಿ ಮೃಗಾಲಯ ಬಂದ್ ಆಗಿದ್ದರಿಂದ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿದ್ದು, ದಾನಿಗಳ ನೆರವಿನಿಂದ ನಿರ್ವಹಣೆ ಮಾಡಲಾಗಿತ್ತು. ಇದೀಗ ಚಾಮರಾಜೇಂದ್ರ ಮೃಗಾಲಯಕ್ಕೆ ೨೦೨೦ರ ಹಿಂದಿನ ದಿನಗಳಂತೆ ವೀಕ್ಷಕರು ಬರುತ್ತಿರುವುದರಿಂದ ಆದಾಯದ ಪ್ರಮಾಣದಲ್ಲೂ ಏರಿಕೆಯಾಗಿದೆ. ಚಾಮರಾಜೇಂದ್ರ ಮೃಗಾಲಯವು ದಕ್ಷಿಣ ಭಾರತದಲ್ಲೇ ಅತ್ಯಂತ ಹೆಸರುವಾಸಿಯಾದ ಮೃಗಾಲಯವಾಗಿದ್ದು, ಅಪರೂಪದ ಪ್ರಾಣಿ- ಪಕ್ಷಿಗಳನ್ನು ಹೊಂದಿದೆ. ವಿದೇಶಗಳಿಂದ ಚಿಂಪಾಜಿ, ಗೊರಿಲ್ಲಾ ಮೊದಲಾದ ಪ್ರಾಣಿಗಳನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ತಂದು ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿದೆ. ಅದೇ ರೀತಿ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡು ನಿರ್ವಹಣೆ ಮಾಡುವರೀತಿಯಲ್ಲಿ ದತ್ತು ಯೋಜನೆಯನ್ನು ಜಾರಿಗೆ ತಂದಿದ್ದರಿಂದ ಅನೇಕರು ತಮ್ಮ ಹೆಸರಿನಲ್ಲಿ ದತ್ತು ಸ್ವೀಕಾರ ಮಾಡುತ್ತಿದ್ದಾರೆ. ಒಂದು ದಿನ, ವಾರ, ತಿಂಗಳು, ವರ್ಷಕ್ಕೆ ದತ್ತು ಸ್ವೀಕಾರ ಯೋಜನೆ ಇರುವ ಕಾರಣ ಅವರವರ ಶಕ್ತ್ಯಾನುಸಾರ ದತ್ತು ಪಡೆಯುವುದರಿಂದ ಒಂದಿಷ್ಟು ಆದಾಯ ಬರುತ್ತಿದೆ. ಮೃಗಾಲಯಕ್ಕೆ ಮಂಗಳವಾರ ವಾರದ ರಜೆ ಹೊರತುಪಡಿಸಿದರೆ ಉಳಿದೆಲ್ಲಾ ದಿನಗಳೂ ವೀಕ್ಷಕರು ಭೇಟಿ ನೀಡುತ್ತಾರೆ.

ನಾಡಹಬ್ಬ ದಸರಾ ಮಹೋತ್ಸವದ ನವರಾತ್ರಿಯ ದಿನಗಳು, ಬೇಸಿಗೆ ರಜೆಯ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಭೇಟಿ ನೀಡುತ್ತಾರೆ. ಇಂತಹ ಹೆಸರು ವಾಸಿಯಾಗಿರುವ ಚಾಮರಾಜೇಂದ್ರ ಮೃಗಾಲಯಕ್ಕೆ ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಾಗಿತ್ತು. ಕೋವಿಡ್ ನಿಯಂತ್ರಣ ಮಾಡಲು ಬಂದ್ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ತೆರೆಯಲಾಯಿತು. ಈ ವೇಳೆ ವೀಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿ ಆದಾಯವೂ ಇಳಿಮುಖವಾಗಿದ್ದರಿಂದ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿರುವ ದಾನಿಗಳಿಂದ ದೇಣಿಗೆ ಕೊಡಿಸುವ ಮೂಲಕ ಗಮನ ಸೆಳೆದಿದ್ದರು.

ಪ್ರಾಣಿ, ಪಕ್ಷಿಗಳ ಆಹಾರದ ವೆಚ್ಚ ಸೇರಿದಂತೆ ಇನ್ನಿತರೆ ಖರ್ಚು ಭರಿಸುವುದಕ್ಕೆ ಉದಾರವಾಗಿ ಹಣದ ನೆರವು ಸಿಗುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ಕಾಲಕ್ರಮೇಣ ಕೋವಿಡ್ ಛಾಯೆಯು ದೂರವಾಗಿ ಪ್ರವಾಸಿಗರು ಎಂದಿನಂತೆ ಬರುವುದಕ್ಕೆ ಶುರು ಮಾಡಿದ್ದರಿಂದ ಹಳೆಯ ಲಯಕ್ಕೆ ಬಂದಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತದಿಂದ ಮೈಸೂರಿಗೆ ಬರುವ ಪ್ರವಾಸಿಗರು ಅರಮನೆ, ಚಾಮರಾಜೇಂದ್ರ ಮೃಗಾಲಯಕ್ಕೆ ತಪ್ಪದೆ ಭೇಟಿ ನೀಡಿ ವೀಕ್ಷಣೆ ಮಾಡುವುದರಿಂದ ಆದಾಯ ಹೆಚ್ಚಳವಾಗಿದೆ.

ಮೈಸೂರು ಮೃಗಾಲಯದ ಪ್ರವೇಶ ದ್ವಾರದ ಶುಲ್ಕ, ಬ್ಯಾಟರಿಚಾಲಿತ ವಾಹನಗಳ ಶುಲ್ಕ, ಪಾರ್ಕಿಂಗ್ ಶುಲ್ಕ, ಕಾರಂಜಿಕೆರೆ ಪ್ರವೇಶ ಶುಲ್ಕ, ಮಾರಾಟ ಮೊದಲಾದ ಮೂಲಗಳಿಂದ ಆದಾಯ ಬರುತ್ತಿದೆ. ಅದೇ ರೀತಿ ಆಡಳಿತ, ಪ್ರಾಣಿ, ಪಕ್ಷಿಗಳಿಗೆ ಆಹಾರ, ಆರೋಗ್ಯ ವೆಚ್ಚವಲ್ಲದೆ, ಸಿವಿಲ್ ಕಾಮಗಾರಿಗಳ ನಿರ್ವಹಣೆಗೂ ಅನುದಾನವನ್ನು ಖರ್ಚು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

೭ ಲಕ್ಷ ರೂ.ನಿಂದ ೩೪ ಲಕ್ಷ ರೂ.ಗೆ ಹೆಚ್ಚಳ:  ೨೦೨೦ರವರೆಗೆ ಪ್ರತಿವರ್ಷ ೩೦ ಲಕ್ಷದಷ್ಟು ಪ್ರವಾಸಿಗರು ವೀಕ್ಷಣೆ ಮಾಡುತ್ತಿದ್ದರು. ಆದರೆ, ಕೋವಿಡ್‌ನಿಂದಾಗಿ ವೀಕ್ಷಕರು ಕಡಿಮೆಯಾಗಿ ಆದಾಯ ಇಳಿಕೆಯಾಗಿದೆ. ಖರ್ಚು ಜಾಸ್ತಿಯಾಗಿ ದೆ. ೨೦೨೫-೨೬ರ ಅವಧಿಯಲ್ಲಿ ೩೫ ಲಕ್ಷ ಮಂದಿ ಭೇಟಿ ನೀಡಿದ್ದು, ಆದಾಯ ಮತ್ತು ಖರ್ಚಿನ ವಿವರವನ್ನು ಮಾರ್ಚ್ ಅಂತ್ಯಕ್ಕೆ ಪ್ರಕಟಿಸಲಾಗುತ್ತದೆ.

” ಮೃಗಾಲಯ ಅಭಿವೃದ್ಧಿಗೆ ೫೦ ಕೋಟಿ ರೂ. ಅನುದಾನ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರಂಜಿಕೆರೆಯಲ್ಲಿ ಕೊಳಚೆ ನೀರನ್ನು ತಡೆದು ಬೋಟಿಂಗ್ ವ್ಯವಸ್ಥೆ ಮಾಡಿದರೆ ಒಂದಿಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. ವೀಕ್ಷಕರ ಸಂಖ್ಯೆ ಹೆಚ್ಚಾದರೆ ಮೃಗಾಲಯದ ಆದಾಯವೂ ಹೆಚ್ಚಳವಾಗಲಿದೆ.”

-ಹಾಡ್ಯ ರಂಗಸ್ವಾಮಿ, ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ

 

 

 

 

ಆಂದೋಲನ ಡೆಸ್ಕ್

Recent Posts

ಮೈಸೂರು ಕರಗ ಮಹೋತ್ಸವ: ನಗರದಲ್ಲಿ ಅದ್ಧೂರಿ ಮೆರವಣಿಗೆ

ಮೈಸೂರು: ನಗರದ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾದ 102 ನೇ ವರ್ಷದ ಮೈಸೂರು ಕರಗ ಮಹೋತ್ಸವದ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ.…

4 hours ago

ಮದ್ಯಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ: ಮೇ.1ರಿಂದ ಮದ್ಯದ ಬೆಲೆ ಏರಿಕೆ

ಬೆಂಗಳೂರು: ಒಂದೆಡೆ ಗ್ಯಾರಂಟಿ ಯೋಜನೆಗಳನ್ನು ನೀಡುವ ರಾಜ್ಯ ಸರ್ಕಾರ ಇನ್ನೊಂದೆಡೆ ಬೆಲೆ ಏರಿಕೆಯನ್ನು ಮಾಡುತ್ತಲೇ ಬಂದಿದೆ ಎಂಬ ಸಾರ್ವಜನಿಕರ ಆರೋಪ…

7 hours ago

ಹೆಚ್ಚಿದ ಬಿಸಿಲಿನ ತಾಪಮಾನ: ಹೀಟ್ ವೇವ್, ಹೀಟ್ ಸ್ಟ್ರೋಕ್ ಅಪಾಯ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಏಪ್ರಿಲ್ 2026ರ ಅಂತ್ಯದ ವೇಳೆಗೆ ಬಿಸಿಲಿನ ತಾಪಮಾನ ತೀವ್ರವಾಗಿ ಹೆಚ್ಚಾಗಿದೆ. ಇದು ಜನಜೀವನದ ಮೇಲೆ…

7 hours ago

ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಟ ಚೇತನ್‌ ಅಹಿಂಸಾ

ಬೆಂಗಳೂರು: ನಟ ರಾಜ್‌ ಕುಮಾರ್‌ ಸಮಾಧಿ ವಿಚಾರವಾಗಿ ಹೇಳಿಕೆ ನೀಡಿದ್ದ ನಟ ಚೇತನ್‌ ಅಹಿಂಸಾ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಡಾ.ರಾಜ್‌ಕುಮಾರ್‌…

7 hours ago

ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ: ಸಚಿವ ವೆಂಕಟೇಶ್‌

ಬೆಳಗಾವಿ: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲಲ್.‌ ಅಧಿಕಾರ ಹಂಚಿಕೆ ವಿಚಾರವಾಗಿ ಏನೆಲ್ಲಾ ಮಾತುಕತೆ ಆಗಿದೆ ಎಂಬುದೂ ಗೊತ್ತಿಲ್ಲ ಎಂದು…

8 hours ago

ಬೆಂಗಳೂರಿನಲ್ಲಿ ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿಯಾಗಿದ್ದು, ಕೆಂಗೇರಿ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ…

8 hours ago