Andolana originals

ಆದಾಯದ ಹಳಿಗೆ ಮರಳಿದ ಮೃಗಾಲಯ

ಕೆ.ಬಿ.ರಮೇಶನಾಯಕ

ಮೈಸೂರು: ದಕ್ಷಿಣ ಭಾರತದಲ್ಲೇ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಕೋವಿಡ್ ಸಮಯದಲ್ಲಿ ಆದಾಯ ಕುಸಿತದಿಂದ ಕಂಗೆಟ್ಟರೂ ನಂತರದ ವರ್ಷಗಳಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದಾಗಿ ಆದಾಯದ ಹಳಿಗೆ ಮರಳಿದೆ.

ಕೋವಿಡ್ ಕಾಲದಲ್ಲಿ ಮೃಗಾಲಯ ಬಂದ್ ಆಗಿದ್ದರಿಂದ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿದ್ದು, ದಾನಿಗಳ ನೆರವಿನಿಂದ ನಿರ್ವಹಣೆ ಮಾಡಲಾಗಿತ್ತು. ಇದೀಗ ಚಾಮರಾಜೇಂದ್ರ ಮೃಗಾಲಯಕ್ಕೆ ೨೦೨೦ರ ಹಿಂದಿನ ದಿನಗಳಂತೆ ವೀಕ್ಷಕರು ಬರುತ್ತಿರುವುದರಿಂದ ಆದಾಯದ ಪ್ರಮಾಣದಲ್ಲೂ ಏರಿಕೆಯಾಗಿದೆ. ಚಾಮರಾಜೇಂದ್ರ ಮೃಗಾಲಯವು ದಕ್ಷಿಣ ಭಾರತದಲ್ಲೇ ಅತ್ಯಂತ ಹೆಸರುವಾಸಿಯಾದ ಮೃಗಾಲಯವಾಗಿದ್ದು, ಅಪರೂಪದ ಪ್ರಾಣಿ- ಪಕ್ಷಿಗಳನ್ನು ಹೊಂದಿದೆ. ವಿದೇಶಗಳಿಂದ ಚಿಂಪಾಜಿ, ಗೊರಿಲ್ಲಾ ಮೊದಲಾದ ಪ್ರಾಣಿಗಳನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ತಂದು ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿದೆ. ಅದೇ ರೀತಿ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡು ನಿರ್ವಹಣೆ ಮಾಡುವರೀತಿಯಲ್ಲಿ ದತ್ತು ಯೋಜನೆಯನ್ನು ಜಾರಿಗೆ ತಂದಿದ್ದರಿಂದ ಅನೇಕರು ತಮ್ಮ ಹೆಸರಿನಲ್ಲಿ ದತ್ತು ಸ್ವೀಕಾರ ಮಾಡುತ್ತಿದ್ದಾರೆ. ಒಂದು ದಿನ, ವಾರ, ತಿಂಗಳು, ವರ್ಷಕ್ಕೆ ದತ್ತು ಸ್ವೀಕಾರ ಯೋಜನೆ ಇರುವ ಕಾರಣ ಅವರವರ ಶಕ್ತ್ಯಾನುಸಾರ ದತ್ತು ಪಡೆಯುವುದರಿಂದ ಒಂದಿಷ್ಟು ಆದಾಯ ಬರುತ್ತಿದೆ. ಮೃಗಾಲಯಕ್ಕೆ ಮಂಗಳವಾರ ವಾರದ ರಜೆ ಹೊರತುಪಡಿಸಿದರೆ ಉಳಿದೆಲ್ಲಾ ದಿನಗಳೂ ವೀಕ್ಷಕರು ಭೇಟಿ ನೀಡುತ್ತಾರೆ.

ನಾಡಹಬ್ಬ ದಸರಾ ಮಹೋತ್ಸವದ ನವರಾತ್ರಿಯ ದಿನಗಳು, ಬೇಸಿಗೆ ರಜೆಯ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಭೇಟಿ ನೀಡುತ್ತಾರೆ. ಇಂತಹ ಹೆಸರು ವಾಸಿಯಾಗಿರುವ ಚಾಮರಾಜೇಂದ್ರ ಮೃಗಾಲಯಕ್ಕೆ ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಾಗಿತ್ತು. ಕೋವಿಡ್ ನಿಯಂತ್ರಣ ಮಾಡಲು ಬಂದ್ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ತೆರೆಯಲಾಯಿತು. ಈ ವೇಳೆ ವೀಕ್ಷಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿ ಆದಾಯವೂ ಇಳಿಮುಖವಾಗಿದ್ದರಿಂದ ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿರುವ ದಾನಿಗಳಿಂದ ದೇಣಿಗೆ ಕೊಡಿಸುವ ಮೂಲಕ ಗಮನ ಸೆಳೆದಿದ್ದರು.

ಪ್ರಾಣಿ, ಪಕ್ಷಿಗಳ ಆಹಾರದ ವೆಚ್ಚ ಸೇರಿದಂತೆ ಇನ್ನಿತರೆ ಖರ್ಚು ಭರಿಸುವುದಕ್ಕೆ ಉದಾರವಾಗಿ ಹಣದ ನೆರವು ಸಿಗುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ಕಾಲಕ್ರಮೇಣ ಕೋವಿಡ್ ಛಾಯೆಯು ದೂರವಾಗಿ ಪ್ರವಾಸಿಗರು ಎಂದಿನಂತೆ ಬರುವುದಕ್ಕೆ ಶುರು ಮಾಡಿದ್ದರಿಂದ ಹಳೆಯ ಲಯಕ್ಕೆ ಬಂದಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತದಿಂದ ಮೈಸೂರಿಗೆ ಬರುವ ಪ್ರವಾಸಿಗರು ಅರಮನೆ, ಚಾಮರಾಜೇಂದ್ರ ಮೃಗಾಲಯಕ್ಕೆ ತಪ್ಪದೆ ಭೇಟಿ ನೀಡಿ ವೀಕ್ಷಣೆ ಮಾಡುವುದರಿಂದ ಆದಾಯ ಹೆಚ್ಚಳವಾಗಿದೆ.

ಮೈಸೂರು ಮೃಗಾಲಯದ ಪ್ರವೇಶ ದ್ವಾರದ ಶುಲ್ಕ, ಬ್ಯಾಟರಿಚಾಲಿತ ವಾಹನಗಳ ಶುಲ್ಕ, ಪಾರ್ಕಿಂಗ್ ಶುಲ್ಕ, ಕಾರಂಜಿಕೆರೆ ಪ್ರವೇಶ ಶುಲ್ಕ, ಮಾರಾಟ ಮೊದಲಾದ ಮೂಲಗಳಿಂದ ಆದಾಯ ಬರುತ್ತಿದೆ. ಅದೇ ರೀತಿ ಆಡಳಿತ, ಪ್ರಾಣಿ, ಪಕ್ಷಿಗಳಿಗೆ ಆಹಾರ, ಆರೋಗ್ಯ ವೆಚ್ಚವಲ್ಲದೆ, ಸಿವಿಲ್ ಕಾಮಗಾರಿಗಳ ನಿರ್ವಹಣೆಗೂ ಅನುದಾನವನ್ನು ಖರ್ಚು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

೭ ಲಕ್ಷ ರೂ.ನಿಂದ ೩೪ ಲಕ್ಷ ರೂ.ಗೆ ಹೆಚ್ಚಳ:  ೨೦೨೦ರವರೆಗೆ ಪ್ರತಿವರ್ಷ ೩೦ ಲಕ್ಷದಷ್ಟು ಪ್ರವಾಸಿಗರು ವೀಕ್ಷಣೆ ಮಾಡುತ್ತಿದ್ದರು. ಆದರೆ, ಕೋವಿಡ್‌ನಿಂದಾಗಿ ವೀಕ್ಷಕರು ಕಡಿಮೆಯಾಗಿ ಆದಾಯ ಇಳಿಕೆಯಾಗಿದೆ. ಖರ್ಚು ಜಾಸ್ತಿಯಾಗಿ ದೆ. ೨೦೨೫-೨೬ರ ಅವಧಿಯಲ್ಲಿ ೩೫ ಲಕ್ಷ ಮಂದಿ ಭೇಟಿ ನೀಡಿದ್ದು, ಆದಾಯ ಮತ್ತು ಖರ್ಚಿನ ವಿವರವನ್ನು ಮಾರ್ಚ್ ಅಂತ್ಯಕ್ಕೆ ಪ್ರಕಟಿಸಲಾಗುತ್ತದೆ.

” ಮೃಗಾಲಯ ಅಭಿವೃದ್ಧಿಗೆ ೫೦ ಕೋಟಿ ರೂ. ಅನುದಾನ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾರಂಜಿಕೆರೆಯಲ್ಲಿ ಕೊಳಚೆ ನೀರನ್ನು ತಡೆದು ಬೋಟಿಂಗ್ ವ್ಯವಸ್ಥೆ ಮಾಡಿದರೆ ಒಂದಿಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. ವೀಕ್ಷಕರ ಸಂಖ್ಯೆ ಹೆಚ್ಚಾದರೆ ಮೃಗಾಲಯದ ಆದಾಯವೂ ಹೆಚ್ಚಳವಾಗಲಿದೆ.”

-ಹಾಡ್ಯ ರಂಗಸ್ವಾಮಿ, ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ

 

 

 

 

ಆಂದೋಲನ ಡೆಸ್ಕ್

Recent Posts

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

2 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

2 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

3 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

6 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

6 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

6 hours ago