ಲಕ್ಷ್ಮಿಕಾಂತ್ ಕೊಮಾರಪ್ಪ
ಸಿ ಮತ್ತು ಡಿ ಭೂಮಿ ವಿವಾದ ಬಗೆಹರಿಸಲು ಒಕ್ಕೊರಲ ಒತ್ತಾಯ; ಕಾಂಗ್ರೆಸ್ ಪಕ್ಷ ಸೇರಿದಂತೆ ಸಂಘ ಸಂಸ್ಥೆಗಳಿಂದ ಬಂದ್ಗೆ ಬೆಂಬಲ
ಸೋಮವಾರಪೇಟೆ: ಮನೆ, ತೋಟ, ಗದ್ದೆಗಳಿರುವ ಜಾಗವನ್ನು ಸಿ ಮತ್ತು ಡಿ ಜಾಗವೆಂದು ಘೋಷಿಸಿ ರೈತರ ಬದುಕನ್ನು ಬೀದಿಗೆ ತರುವ ಕಾರ್ಯಕ್ಕೆ ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರ ಅಳಿವು-ಉಳಿವಿನ ಹೋರಾಟದ ಭಾಗವಾಗಿ ಆ.೧೨ರ ಮಂಗಳವಾರ ಸೋಮವಾರಪೇಟೆ ತಾಲ್ಲೂಕು ಬಂದ್ಗೆ ರೈತ ಹೋರಾಟ ಸಮಿತಿ ಕರೆ ನೀಡಿದೆ.
ಈ ಹಿಂದೆ ಸೋಮವಾರಪೇಟೆ ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಹೋರಾಟ ನಡೆಸಿ ಮುಖ್ಯಮಂತ್ರಿ, ಸಚಿವರು ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಽಕಾರಿಗಳನ್ನು ಭೇಟಿಯಾಗಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಲಾಗಿತ್ತು. ಆದರೆ, ಇಂದಿಗೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರಕದಿರುವುದರಿಂದ ರೈತರು ನಿರ್ಣಾಯಕ ಹಂತದ ಹೋರಾಟಕ್ಕೆ ಮುಂದಾಗಿದ್ದಾರೆ.
ರೈತ ಹೋರಾಟ ಸಮಿತಿಯು ರೈತರ ಅಳಿವು-ಉಳಿವಿನ ಹೋರಾಟಕ್ಕೆ ಕರೆ ನೀಡಿರುವುದರಿಂದ ಬಹುತೇಕ ಗ್ರಾಮ ಸಮಿತಿಗಳು, ಮುನ್ನೆಲೆಯಲ್ಲಿರುವ ಸಂಘ ಸಂಸ್ಥೆಗಳು ಬಂದ್ಗೆ ಬೆಂಬಲ ಘೋಷಿಸಿವೆ. ಸರ್ಕಾರಿ ಬಸ್ಗಳು, ಖಾಸಗಿ ಬಸ್ ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದ್ದು, ಈಗಾಗಲೇ ರೈತ ಹೋರಾಟ ಸಮಿತಿಯ ಪ್ರಮುಖರು ಕೆಎಸ್ಆರ್ಟಿಸಿ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘಕ್ಕೂ ಮನವಿ ಮಾಡಿದ್ದಾರೆ.
ಸೋಮವಾರಪೇಟೆ ಪಟ್ಟಣದೊಂದಿಗೆ ಮಾದಾಪುರ, ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಆಲೂರು ಸಿದ್ದಾಪುರ ಭಾಗಗಳಲ್ಲೂ ಸಂಪೂರ್ಣ ಬಂದ್ ಆಗಲಿದೆ. ವರ್ತಕರ ಸಂಘವು ಈಗಾಗಲೇ ಬೆಂಬಲ ಘೋಷಿಸಿದ್ದು, ರೈತರ ಹೋರಾಟಕ್ಕೆ ಎಲ್ಲಾ ಗ್ರಾಮ, ಪಟ್ಟಣದ ಮಂದಿಯೂ ಕೈಜೋಡಿಸುತ್ತಿದ್ದಾರೆ ಎಂದು ರೈತ ಹೋರಾಟ ಸಮಿತಿ ತಿಳಿಸಿದೆ. ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತಾಯಿಸಿ ರೈತ ಹೋರಾಟ ಸಮಿತಿ ಕರೆ ನೀಡಿರುವ ಬಂದ್ಗೆ ಸೋಮವಾರಪೇಟೆ ವರ್ತಕರ ಸಂಘ, ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ, ಕೂತಿ, ಶಾಂತಳ್ಳಿ, ಹರಗ, ಚೌಡ್ಲು ಗ್ರಾಮಾಭಿವೃದ್ಧಿ ಸಮಿತಿ ಬೆಂಬಲ ಘೋಷಿಸಿವೆ. ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಸಹಕಾರ ನೀಡಲಿದೆ.
ಜೈ ಜವಾನ್ ಮಾಜಿ ಸೈನಿಕರ ಸಂಘ ಬೆಂಬಲ ಸೂಚಿಸಿದೆ. ಕೊಡಗು ಜಿಲ್ಲಾ ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ನ ತಾಲ್ಲೂಕು ಘಟಕ ಬೆಂಬಲ ಸೂಚಿಸಿದ್ದು, ತಾಲ್ಲೂಕಿನ ಎಲ್ಲಾ ಡ್ರೈವಿಂಗ್ ಸ್ಕೂಲ್ಗಳು ಕಾರ್ಯನಿರ್ವಹಿಸದೆ ಬಂದ್ನಲ್ಲಿ ಪಾಲ್ಗೊಳ್ಳಲಿವೆ. ತಾಲ್ಲೂಕು ಸವಿತಾ ಸಮಾಜ ಬೆಂಬಲ ನೀಡಿದ್ದು, ರೈತರ ಹೋರಾಟದಲ್ಲಿ ಸದಸ್ಯರು ಭಾಗಿಯಾಗಲಿದ್ದಾರೆ.
ಆಟೋ ಚಾಲಕರು ಮತ್ತು ಮಾಲೀಕರ ಸಂಘ ಕೂಡ ಬೆಂಬಲ ಘೋಷಿಸಿದೆ. ಆರೋಗ್ಯ ಸಂಬಂಽತ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸಾರ್ವಜನಿಕರ ಸೇವೆಗೆ ಆಟೋಗಳು ಸಂಚರಿಸಲಿದ್ದು, ಉಳಿದಂತೆ ಆಟೋಗಳು ಸಂಚಾರವನ್ನು ಸ್ಥಗಿತಗೊಳಿಸಲಿವೆ.
ಏನಿರುತ್ತೆ? ಏನಿರಲ್ಲ?: ಸೋಮವಾರಪೇಟೆ ಸಂಪೂರ್ಣ ಬಂದ್ ಆಗಲಿದ್ದು, ಖಾಸಗಿ ಬಸ್, ಆಟೋ ಸಂಚಾರ ಸ್ಥಗಿತಗೊಳಿಸಲಿವೆ. ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಡಲಿವೆ. ಮೆಡಿಕಲ್ಸ್ಟೋರ್, ಆಸ್ಪತ್ರೆಗಳು, ಹಾಲಿನ ಡೇರಿ, ತಾಲ್ಲೂಕು ಕಚೇರಿ, ಸರ್ಕಾರಿ ಕಚೇರಿಗಳು, ಕೆಎಸ್ಆರ್ಟಿಸಿಬಸ್ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
” ಬಂದ್ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದೇವೆ. ಶಾಸಕರು ಮಂಗಳವಾರ ನಡೆಯುವ ವಿಧಾನಸಭಾ ಅಧಿವೇಶನದಲ್ಲಿಯೂ ಬಂದ್ ವಿಚಾರ ಪ್ರಸ್ತಾಪಿಸಿ ಸದನದ ಗಮನ ಸೆಳೆಯಬೇಕು. ಬಂದ್ ಮೂಲಕ ರೈತರ ಸಮಸ್ಯೆಯನ್ನು ಸರ್ಕಾರಕ್ಕೆ ಶಾಸಕರ ಮುಖಾಂತರ ತಲುಪಿಸಲಾಗುತ್ತಿದೆ.”
-ಕೆ.ಬಿ.ಸುರೇಶ್, ಅಧ್ಯಕ್ಷರು, ರೈತ ಹೋರಾಟ ಸಮಿತಿ, ಸೋಮವಾರಪೇಟೆ
” ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತಾಯಿಸಿ ರೈತ ಹೋರಾಟ ಸಮಿತಿ ಕರೆ ನೀಡಿರುವ ಬಂದ್ಗೆ ಸೋಮವಾರಪೇಟೆ ವರ್ತಕರ ಸಂಘ ಸಂಪೂರ್ಣ ಬೆಂಬಲ ನೀಡಿದೆ. ಸ್ಥಳೀಯ ವರ್ತಕರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರೈತರ ಹೋರಾಟಕ್ಕೆ ಕೈಜೋಡಿಸಲಿದ್ದಾರೆ.”
-ಬಿ.ಕೆ.ಧನುರಾಜ್, ಅಧ್ಯಕ್ಷರು, ಸೋಮವಾರಪೇಟೆ ಚೇಂಬರ್ ಅಫ್ ಕಾಮರ್ಸ್,
“ ರೈತ ಹೋರಾಟ ಸಮಿತಿ ಕರೆ ನೀಡಿರುವ ಸೋಮವಾರಪೇಟೆ ತಾಲ್ಲೂಕು ಬಂದ್ಗೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಬೆಂಬಲ ಘೋಷಿಸಿದೆ. ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸಾರ್ವಜನಿ ಕರ ಸೇವೆಗೆ ಆಟೋಗಳು ಸಂಚರಿಸಲಿದ್ದು, ಉಳಿದಂತೆ ಆಟೋ ಚಾಲಕರು ಸಂಚಾರ ಸ್ಥಗಿತಗೊಳಿಸಿ ರೈತರ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ.”
-ಉಮೇಶ್, ಅಧ್ಯಕ್ಷರು, ಆಟೋ ಚಾಲಕರ ಸಂಘ ಸೋಮವಾರಪೇಟೆ
” ರೈತ ನೆಲೆಗೆ ಸಂಕಟ ತಂದೊಡ್ಡಿರುವ ಸಿ ಮತ್ತು ಡಿ ಭೂಮಿ ವಿವಾದ ಬಗೆಹರಿಯಬೇಕು. ಆ ನಿಟ್ಟಿನಲ್ಲಿ ರೈತ ಪರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯು ಸಂಪೂರ್ಣ ಬೆಂಬಲ ನೀಡಲಿದೆ.ಸರ್ವ ಸದಸ್ಯರು ಬಂದ್ನಲ್ಲಿ ಭಾಗವಹಿಸಲಿದ್ದಾರೆ.”
-ಕೆ.ಎನ್.ದೀಪಕ್, ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…
ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…