ಪ್ರಶಾಂತ್ ಎಸ್.
ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಇಬ್ಬರೇ ವೈದ್ಯರು
ವನ್ಯಜೀವಿ ವೈದ್ಯರಿಲ್ಲದೆ ಹುಲಿ ಚಿರತೆ ಕಾರ್ಯಾಚರಣೆ ವಿಳಂಬ
೨೨ ದಿನಗಳಿಂದ ಮಾನವ ಹುಲಿ ಸಂಘರ್ಷ ಹೆಚ್ಚಳ
ಮೈಸೂರು: ಮಾನವ-ವನ್ಯಜೀವಿ ಸಂಘರ್ಷ ದಿನೇದಿನೇ ಹೆಚ್ಚುತ್ತಿದ್ದು, ಒಂದೆಡೆ ಇದಕ್ಕೆ ಶಾಶ್ವತ ಪರಿಹಾರ ನೀಡಲಾಗದೆ ಅರಣ್ಯ ಇಲಾಖೆ ಹಿನ್ನೆಡೆ ಅನುಭವಿಸುತ್ತಿದೆ. ಮತ್ತೊಂದೆಡೆ ಕಾಡಂಚಿನ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಚಿರತೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಶುವೈದ್ಯರ (ವನ್ಯಜೀವಿ) ಕೊರತೆ ಎದ್ದು ಕಾಣುತ್ತಿದೆ.
ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ೮ರಿಂದ ೧೦ ಮಂದಿ ಪಶು ವೈದ್ಯರ ಅಗತ್ಯವಿದೆ. ಆದರೆ ಇಬ್ಬರೇ ಇಬ್ಬರು ವನ್ಯ ಜೀವಿ ಪಶುವೈದ್ಯರಿದ್ದಾರೆ. ಕಳೆದ ೨೨ ದಿನ ಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸರಗೂರು ಹಾಗೂ ಹೆಡಿಯಾಲ ವ್ಯಾಪ್ತಿಯಲ್ಲಿ ಹುಲಿ-ಮಾನವ ಸಂಘರ್ಷ ತಾರಕಕ್ಕೇರಿದೆ.
ಆದರೆ, ಕಾಡಂಚಿನಲ್ಲಿ ಜನತೆಗೆ ಉಪಟಳ ನೀಡುತ್ತಿರುವ ಆನೆ, ಹುಲಿ, ಚಿರತೆಗಳ ಸೆರೆ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ವನ್ಯ ಜೀವಿ ವೈದ್ಯರಿಲ್ಲದ ಪರಿಣಾಮ ಕಾರ್ಯಾಚರಣೆ ವಾರಗಟ್ಟಲೆ ನಡೆಯುವಂತಾಗಿದೆ. ಸರಗೂರು ವ್ಯಾಪ್ತಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕೆ ಬಂಡೀಪುರ, ನಾಗರಹೊಳೆಯ ಪಶುವೈದ್ಯರನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಯಾವುದಾದರೂ ವನ್ಯಜೀವಿ ಗಾಯಗೊಂಡಲ್ಲಿ ಅಥವಾ ಬೇರೆ ಪ್ರದೇಶದಲ್ಲಿ ಆನೆ ದಾಂದಲೆ ನಡೆಸಿದ್ದಲ್ಲಿ ಈ ವೈದ್ಯರನ್ನೇ ಅಲ್ಲಿಗೆ ನಿಯೋಜಿಸಲಾಗುತ್ತದೆ. ಹಾಗಾಗಿ ಉಪಟಳ ನೀಡುವ ಪ್ರಾಣಿಗಳ ಸೆರೆ ಕಾರ್ಯಾಚರಣೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಪ್ರತಿ ವಲಯಕ್ಕೂ ಬೇಕು ವನ್ಯಜೀವಿ ವೈದ್ಯರು: ಮೈಸೂರು ಜಿಲ್ಲೆಯು ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶವನ್ನು ಒಳ ಗೊಂಡಿದ್ದು ಇಲ್ಲಿ ಆಗಾಗ್ಗೆ ಸಂಭವಿಸುವ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಸಿಬ್ಬಂದಿ ಜೊತೆಗೆ ಪ್ರತಿ ವಲಯಕ್ಕೂ ನುರಿತ ಪಶುವೈದ್ಯರ ಅಗತ್ಯವಿದೆ. ನಂಜನಗೂಡು, ಸರಗೂರು, ಎಚ್.ಡಿ.ಕೋಟೆ, ಮೈಸೂರು ವಲಯಗಳಿಗೆ ಪಶುವೈದ್ಯರನ್ನು ನೇಮಿಸಿದಲ್ಲಿ ಈಗಿರುವ ವೈದ್ಯರ ಮೇಲಿನ ಒತ್ತಡ ತಗ್ಗಲಿದೆ.
ವೈದ್ಯರಿಗೂ ಪ್ರತ್ಯೇಕ ಕೇಡರ್ ಅಗತ್ಯ: ಅರಣ್ಯ ಇಲಾಖೆಯಲ್ಲಿ ಪಶುವೈದ್ಯರನ್ನು ಅವರ ಶ್ರೇಣಿಗೆ ಅನುಸಾರ ನಡೆಸಿಕೊಳ್ಳದೇ, ಡಿ ಗ್ರೂಪ್ ನೌಕರರಂತೆ ನಡೆಸಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಹಾಗಾಗಿ ಇಲಾಖೆಯ ವಶುವೈದ್ಯರಾಗಿ ಬರಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರ ತಜ್ಞ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಪ್ರತ್ಯೇಕ ಕೇಡರ್ ಮಾಡಬೇಕಿದೆ. ಜತೆಗೆ ಪ್ರತ್ಯೇಕ ಕಚೇರಿ, ವಾಹನ ವ್ಯವಸ್ಥೆಯಂತಹ ಮೂಲ ಸೌಲಭ್ಯ ಕಲ್ಪಿಸ ಬೇಕು ಎಂಬ ಕೂಗು ಕೇಳಿಬರುತ್ತಿದೆ.
” ವನ್ಯಜೀವಿ ಪಶು ವೈದ್ಯರ ಕೊರತೆ ಕುರಿತು ನಮ್ಮಇಲಾಖೆಯ ಮೇಲಧಿಕಾರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಗುವುದು, ಸದ್ಯದಲ್ಲೇ ಸೂಕ್ತ ಕ್ರಮಕೈಗೊಳ್ಳುವ ಭರವಸೆ ಇದೆ.”
-ಪರಮೇಶ್, ಎಸಿಎಫ್
” ಹುಲಿ ಮನುಷ್ಯನ ಮೇಲೆ ದಾಳಿ ಮಾಡಿದಾಗ ಅರಿವಳಿಕೆ ಚುಚ್ಚುಮದ್ದು ನೀಡಿ ಅದನ್ನು ಸೆರೆಹಿಡಿಯಲು ವನ್ಯಜೀವಿ ಪಶು ವೈದ್ಯರ ಅಗತ್ಯವಿದ್ದು ನಾಗರಹೊಳೆ ಹಾಗೂ ಬಂಡೀಪುರವ್ಯಾಪ್ತಿಯಲ್ಲಿ ಎಲ್ಲೆ ಈ ಸಮಸ್ಯೆಗಳಾದ್ದರೂ ಇಬ್ಬರೇ ವೈದ್ಯರಿದ್ದಾರೆ. ಹಾಗಾಗಿ ಹುಲಿ ಕಾರ್ಯಚರಣೆ ನಿಧಾನವಾಗುತ್ತಿದೆ.”
-ಲಿಖಿತ್ ರಾಜೇ ಅರಸ್, ವನ್ಯ ಜೀವಿ ತಜ್ಞ
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…