ಪ್ರಶಾಂತ್ ಎಸ್.
ಮೈಸೂರು: ಎಲ್ಲೆಡೆ ಬಿರು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಬಿಸಿಲ ಬೇಗೆಯಿಂದ ದಾಹ ನೀಗಿಸಿಕೊಳ್ಳಲು ಜನರು ಎಳನೀರು ಮೊರೆ ಹೋಗಿದ್ದಾರೆ. ಬೇಡಿಕೆ ಹೆಚ್ಚಾದಂತೆ ಎಳನೀರಿನ ದರ ದಿಢೀರನೆ ಗಗನಕ್ಕೇರಿದೆ. ಎರಡು ತಿಂಗಳ ಹಿಂದೆ ೩೦ರಿಂದ ೪೦ ರೂ. ಇದ್ದ ಬೆಲೆ ಇದೀಗ ಕೆಲವೆಡೆ ಸಣ್ಣ ಗಾತ್ರದ ಎಳನೀರು ೫೦ ರೂ.ಗೆ ಹಾಗೂ ಸಾಧಾರಣ ಗಾತ್ರದ ಎಳನೀರು ೬೦ ರೂ. ಗೆ ಜಿಗಿದಿದೆ. ಕಳೆದ ಎರಡು ವರ್ಷಗಳಿಂದ ಎಳನೀರಿನ ಬೆಲೆ ಏರಿಕೆಯಾಗುತ್ತಲೇ ಇದೆ.
೨೦೨೫ರ ಬಳಿಕ ಏರಿಕೆಯಾದ ದರ: ಎರಡು ವರ್ಷಗಳ ಹಿಂದೆ ೨೫ ರಿಂದ ೩೦ರೂ.ಗೆ ಸಾಧಾರಣ ಗಾತ್ರದ ಎಳನೀರು ಸಿಗುತ್ತಿತ್ತು. ಆದರೆ, ೨೦೨೫ರ ಬಳಿಕ ದರ ಏರು ಹಾದಿಯಲ್ಲಿದೆ. ತೆಂಗು ಬೆಳೆಗಾರರಿಗೆ ಕೇವಲ ೨೮ರಿಂದ ೩೦ರೂ. ಸಿಗುತ್ತಿದ್ದು, ಉಳಿದ ಹಣ ಮಧ್ಯವರ್ತಿಗಳು ಮತ್ತು ಮಾರಾಟಗಾರರ ಪಾಲಾಗುತ್ತಿದೆ. ೨೦೨೩ರಲ್ಲಿ ಸ್ವಲ್ಪ ಮಟ್ಟದ ಬರಗಾಲ ಕಾಡಿದ ಪರಿಣಾಮ ತೆಂಗಿನ ಮರಗಳು ಒಣಗಿ ಕಳೆದ ವರ್ಷ ಇಳುವರಿ ಕುಸಿದಿತ್ತು. ೨೦೨೪ರಲ್ಲಿ ಉತ್ತಮ ಮಳೆಯಾಗಿದ್ದು, ಒಣಗಿದ್ದ ಮರಗಳು ಚೇತರಿಸಿಕೊಂಡು ಮರು ಜೀವ ಪಡೆದಿದ್ದವು. ಆ ವರ್ಷ ಎಳನೀರಿಗೆ ಹೆಚ್ಚಿನ ಬೇಡಿಕೆ ಇದ್ದುದರಿಂದ ಬಹುತೇಕ ರೈತರು ಗರಿಷ್ಟ ಪ್ರಮಾಣದಲ್ಲಿ ಎಳನೀರು ಇಳಿಸಿದ್ದರು.
ಬಂಪರ್ ಬೆಲೆ: ತೆಂಗಿನಕಾಯಿಗೆ ಹೋಲಿಸಿದರೆ ಎಳನೀರಿಗೆ ಬಂಪರ್ ಬೆಲೆ ಬಂದಿದೆ. ಜನವರಿ ಅಂತ್ಯ ಭಾಗದಲ್ಲೇ ಚಳಿ ಕಡಿಮೆಯಾಗಿ ಬಿಸಿಲಿನ ಬೇಗೆ ಹೆಚ್ಚಾಗತೊಡಗಿದ್ದು, ಸಹಜವಾಗಿಯೇ ಜನರು ಎಳನೀರಿನತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಬೆಲೆ ಏಕಾಏಕಿ ಕೆಲವೆಡೆ ೫೦ ರಿಂದ ೬೦ರೂ.ಗೆ ಏರಿಕೆಯಾಗಿದೆ. ಸಣ್ಣ ಗಾತ್ರದ ಎಳನೀರಿಗೆ ೫೦ರೂ. ಸಾಧಾರಣ ಗಾತ್ರದ ಎಳನೀರಿಗೆ ೬೦ರೂ. ಬೆಲೆ ನಿಗದಿ ಮಾಡಲಾಗಿದೆ.
ವ್ಯಾಪಾರಿಗಳಿಗೆ ಹೆಚ್ಚು ಲಾಭ: ಎಳನೀರಿನ ಬೆಲೆ ಹೆಚ್ಚಾಗಿದ್ದರೂ ಅದರ ಲಾಭಾಂಶ ಮಾತ್ರ ರೈತರ ಕೈಸೇರುತ್ತಿಲ್ಲ. ವ್ಯಾಪಾರಿಗಳು ರೈತರಿಗೆ ೨೮ ರಿಂದ ೩೦ರೂ. ನೀಡಿ ತೋಟದಲ್ಲೇ ಎಳನೀರು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳೇ ತೋಟಕ್ಕೆ ಕಾರ್ಮಿಕರನ್ನು ಕರೆತಂದು ತೆಂಗಿನ ಮರಗಳಿಂದ ಎಳನೀರು ಇಳಿಸಿ ಕೊಂಡೊಯ್ಯುತ್ತಿದ್ದಾರೆ. ಮರದಿಂದ ಎಳನೀರು ಇಳಿಸುವ ಕಾರ್ಮಿಕರ ಕೂಲಿ, ವಾಹನಗಳಿಗೆ ಎಳನೀರು ತುಂಬುವುದು, ಸಾಗಣೆ ವೆಚ್ಚ ಕಳೆದರೂ ವ್ಯಾಪಾರಿಗಳಿಗೆ ೨೦ರೂ. ಲಾಭವಾಗುತ್ತಿದೆ. ಆದರೆ, ತೆಂಗು ಬೆಳೆಗಾರನಿಗೆ ೨೮ ರಿಂದ ೩೦ರೂ. ಮಾತ್ರ ಸಿಗುತ್ತಿದೆ.
” ಹಳ್ಳಿಯಿಂದ ನಗರ ಪ್ರದೇಶಗಳವರೆಗೆ ಎಲ್ಲೆಡೆ ಎಳನೀರಿನ ದರವು ಸಾಮಾನ್ಯ ಜನರ ಕೈಗೆಟುಕದ ಮಟ್ಟಕ್ಕೆ ತಲುಪುತ್ತಿದ್ದು, ಒಂದು ಎಳನೀರಿನ ಬೆಲೆ ಐವತ್ತು ರೂಪಾಯಿಗಳ ಆಸುಪಾಸಿನಲ್ಲಿದೆ. ವ್ಯಾಪಾರಿಗಳ ಪ್ರಕಾರ, ಈ ಬಾರಿ ಮಳೆ ಕೊರತೆಯಿಂದ ಇಳುವರಿ ಕಡಿಮೆ ಮತ್ತು ಸಾರಿಗೆ ವೆಚ್ಚ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.”
” ತೋಟದಲ್ಲಿ ಒಂದು ಎಳನೀರಿಗೆ ೨೮ ರಿಂದ ೩೦ ರೂ.ನಂತೆ ತೋಟದ ಮಾಲೀಕರು ನಮಗೆ ನೀಡುತ್ತಾರೆ. ನಾವು ವಾಹನದ ಬಾಡಿಗೆ ಹಾಗೂ ಮರ ಹತ್ತುವ ಕಾರ್ಮಿಕನಿಗೂ ಕೂಲಿ ನೀಡಬೇಕಿದೆ. ಹಾಗಾಗಿ ೫೦ರಿಂದ ೬೦ ರೂ.ಗೆ ಮಾರುತ್ತೇವೆ.”
ಶಿವು, ಎಳನೀರು ಅಂಗಡಿ ಮಾಲೀಕ
ಜಿಲ್ಲೆಯಲ್ಲಿ ೧೧ ಮಂದಿ ಸಾವು ಮುಂಜಾಗ್ರತೆ ಪಾಲಿಸುವುದು ಅಗತ್ಯ ಮೈಸೂರು: ಬಿರು ಬೇಸಿಗೆ ಸಂದರ್ಭದಲ್ಲಿ ನದಿ, ಕೆರೆ ಹಾಗೂ ಕಾಲುವೆಗಳಲ್ಲಿ…
ಪ್ರೊ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮೈಸೂರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಎಸ್.ಎಂ.ಕೃಷ್ಣ ಪ್ರಶಸ್ತಿ ಪುರಸ್ಕಾರ ಮಂಡ್ಯ ಜಿಲ್ಲೆಯ…
ಚಿರಂಜೀವಿ ಸಿ.ಹುಲ್ಲಹಳ್ಳಿ ೩,೭೫೦ ರೂ., ಶೇ.೧೮ರಷ್ಟು ಜಿಎಸ್ಟಿ ಸೇರಿ ಒಟ್ಟು ೪,೭೫೦ ರೂ.ಶುಲ್ಕ ಪ್ರತಿ ಶಿಬಿರಾರ್ಥಿಗೆ ನಿಗದಿ ಮೈಸೂರು: ಮಲ್ಲಿಗೆ…
ಕೆ.ಬಿ.ರಮೇಶನಾಯಕ ಬಯೋಮೆಟ್ರಿಕ್ ಹಾಜರಾತಿ ಜತೆಗೆ ಜಿಪಿಎಸ್ ವ್ಯವಸ್ಥೆ ಜಾರಿಗೆ ಚಿಂತನೆ ಹಾಜರಾತಿ ಹಾಕಿ ಬೇಕಾಬಿಟ್ಟಿ ಓಡಾಡುವ ಸಿಬ್ಬಂದಿಗಳಿಗೆ ಬ್ರೇಕ್ ಮೈಸೂರು:…
ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಸಮರದಲ್ಲಿ ಕೈ ಜಯಭೇರಿ ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ…