Andolana originals

ಮಳೆಯಿಂದ ತಗ್ಗಿದ ಚಳಿ, ಒಕ್ಕಣೆಗೆ ಪರದಾಟ!

ಚಾಮರಾಜನಗರ: ತೀವ್ರ ಚಳಿಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಕಳೆದ ೨-೩ ದಿನಗಳಿಂದ ಎದುರಾಗಿರುವ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ಆಗಿರುವ ಮಳೆ ಕಾರಣದಿಂದ ತಾಪಮಾನದಲ್ಲಿ ಬದಲಾವಣೆಯಾಗಿ ಚಳಿಯ ಪ್ರಮಾಣ ತಗ್ಗಿದೆ. ಅಲ್ಲದೇ, ದಿಢೀರ್ ಮಳೆಯಿಂದ ಬೆಳೆದ ಫಸಲು ಒಕ್ಕಣೆ ಮಾಡಲಾಗದೇ ರೈತರು ಪೇಚಿಗೆ ಸಿಲುಕಿದ್ದಾರೆ!

ಚಾ.ನಗರ, ಮರಿಯಾಲ, ಕಾಡಳ್ಳಿ, ಬಿಸಲವಾಡಿ, ಕೋಡಿಉಗನೆ ಹೀಗೆ ಜಿಲ್ಲೆಯ ಹಲವೆಡೆ ಶುಕ್ರವಾರ ಬೆಳಿಗ್ಗೆ ಮಳೆಯಾಗಿದೆ. ನಗರದಲ್ಲಿ ರಸ್ತೆಯಲ್ಲಿ ನೀರು ಹರಿದಾಡುವ ಮಟ್ಟಿಗೆ ಮಳೆ ಸುರಿದಿದೆ. ಗುರುವಾರ ಸಂಜೆಯೂ ಇದೇ ರೀತಿ ಜಿಲ್ಲೆಯ ನಾನಾ ಕಡೆ ಮಳೆ ಬಿದ್ದಿತ್ತು.

ರಾಗಿ, ಹುರುಳಿ, ಅರಿಶಿನ, ತೊಗರಿ, ಅಲಸಂದೆ, ಮೆಕ್ಕೆ ಜೋಳಗಳ ಕಟಾವು ನಡೆಯುತ್ತಿದ್ದು ಚಳಿಗಾಲದ ಈ ದಿನಗಳಲ್ಲಿ ಮಳೆ ಯಾಗುವ ಸಂಭವ ತೀರಾ ಕಡಿಮೆ. ಆದರೆ ಇದ್ದಕ್ಕಿದ್ದಂತೆ ಮಳೆಯಾಗಿ ಒಕ್ಕಣೆಯಲ್ಲಿ ತೊಡಗಿದ್ದ ರೈತರನ್ನು ಅಕ್ಷರಶಃ ಪರದಾಡುವಂತೆ ಮಾಡಿತು. ಕೊಯ್ಲು ಮಾಡಿರುವ ತೆನೆಯನ್ನು ಒಂದೆಡೆ ಪೇರಿಸಿ ಟಾರ್ಪಾಲುಗಳಿಂದ ಮುಚ್ಚಿಟ್ಟುಕೊಂಡಿದ್ದು ಮಳೆ ಮತ್ತು ಮೋಡ ಕವಿದ ವಾತಾವರಣ ಸರಿದ ಮೇಲೆ ಒಕ್ಕಣೆ ಮಾಡುವ ಆಲೋಚನೆಯಲ್ಲಿ ರೈತರು ಇದ್ದಾರೆ.

ಕಟಾವು ಮಾಡಿರುವುದರ ಮೇಲೆ ಹನಿ ಬಿದ್ದರೆ ಅಂತಹ ಬೆಳೆ ಕಪ್ಪಾಗಿ ಮಾರುಕಟ್ಟೆಯಲ್ಲಿ ಧಾರಣೆ ತೀವ್ರ ಕುಸಿತವಾಗುತ್ತದೆ. ಕಟಾವಿಗೆ ಬಂದು ಕೊಯ್ಲಾಗದ ಹುರುಳಿ ಮತ್ತು ರಾಗಿ ಬೆಳೆಗಳ ಮೇಲೆ ಹನಿ ಬಿದ್ದರೂ ರಾಗಿ ತೆನೆ ಕಪ್ಪಾಗುವ, ಹುರುಳಿ ಮೊಳಕೆ ಬರುವ ಅಪಾಯವಿದೆ. ಇನ್ನು, ಹಸಿಕಡಲೆ ಹಾಗೂ ಕೊತ್ತಂಬರಿ ಬೆಳೆಗಳಿಗೆ ಈ ಹಂತದಲ್ಲಿ ಮಳೆ ಬೇಕಿಲ್ಲ. ಈಗ ಏನಿದ್ದರೂ ಈ ಬೆಳೆಗಳು ಚಳಿ ಮತ್ತು ಇಬ್ಬನಿ ವಾತಾವರಣದಿಂದಲೇ ಬೆಳೆಯುವಂಥವು. ಈಗಿನ ಮಳೆ ಈ ಬೆಳೆಗಳಿಗೂ ಮಾರಕ ಎನ್ನುತ್ತಾರೆ ರೈತರು. ಟೊಮೆಟೊ, ಕೋಸು, ಬಾಳೆಯಂತಹ ತೋಟಗಾರಿಕೆ ಬೆಳೆಗಳಿಗೂ ಈಅಕಾಲಿಕ ಮಳೆ ರೋಗ ರುಜಿನ ತಂದೊಡ್ಡುತ್ತದೆ ಎಂಬುದು ರೈತಾಪಿಗಳ ಆತಂಕ.

ಹವಾಮಾನ ಇಲಾಖೆ ಪ್ರಕಾರ, ಶ್ರೀಲಂಕಾದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ಚಳಿಗಾಲದಲ್ಲಿ ಯಾರೂ ನಿರೀಕ್ಷೆ ಮಾಡದ ಈ ಮಳೆ ಬಿದ್ದಿದೆ. ಶುಕ್ರವಾರ ಬೆಳಿಗ್ಗೆ ೮.೩೦ರಿಂದ ಮಧ್ಯಾಹ್ನ ೨.೨೦ ನಡುವೆ ಬಂಡೀಪುರಕ್ಕೆ ೫ ಮಿ.ಮೀ. ಮಳೆಯಾಗಿದ್ದು, ಇದೇ ಅವಧಿಯಲ್ಲಿ ಬಾಗಳಿ ಗ್ರಾಮಕ್ಕೆ ೯ ಮಿ.ಮೀ., ಸಂತೇಮರಹಳ್ಳಿ ಗೆ ೮ ಮಿ.ಮೀ, ಕೂಡ್ಲೂರಿಗೆ ೬ ಮಿ.ಮೀ., ಮಂಗಲ ಗ್ರಾಮಕ್ಕೆ ೫.೫೦ ಮಿ.ಮೀ. ಮಳೆ ಬಿದ್ದಿರುವುದಾಗಿ ಕೃಷಿ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

” ಎರಡು ಎಕರೆಯಲ್ಲಿ ಮುಸುಕಿನ ಜೋಳವನ್ನು ತಾವು ಬೆಳೆದಿದ್ದು ಅದನ್ನು ಒಕ್ಕಣೆ ಮಾಡುವ ಸಂದರ್ಭದಲ್ಲಿ ಗುರುವಾರ ಮಳೆ ಬೀಳಲಾಗಿ ಬಹಳ ತೊಂದರೆ ಪಡಬೇಕಾಯಿತು. ಹವಾಮಾನ ಇಲಾಖೆಯ ಮಳೆ ಮಾಹಿತಿ ಮೇರೆಗೆ ಕೊಯ್ಲಾಗಿರುವ ಜೋಳವನ್ನು ಒಣಗಲು ಹಾಕಿರಲಿಲ್ಲ. ಒಣಗಲು ಹಾಕಿದ್ದರೆ ಶುಕ್ರವಾರ ಬೆಳಿಗ್ಗೆ ೫.೩೦ರಿಂದ ೧೦ ಗಂಟೆತನಕ ಬಿದ್ದ ಮಳೆಗೆ ಸಿಲುಕಿ ಜೋಳ ಹಾಳಾಗುವ ಅಪಾಯ ಇತ್ತು. ಕೊಯ್ಲಾಗಿರುವ ಜೋಳವನ್ನೆಲ್ಲಾ ಒಂದೆಡೆ ರಾಶಿ ಹಾಕಿ ಟಾರ್ಪಾ ಲ್‌ಗಳಿಂದ ಮುಚ್ಚಿ ಮಳೆ ಹನಿ ಬಿದ್ದರೂ ಏನೂ ಆಗದಂತೆ ರಕ್ಷಣೆ ಮಾಡಿಟ್ಟಿದ್ದೇನೆ.”

ಶಿವರುದ್ರಸ್ವಾಮಿ, ಕಾಡಳ್ಳಿ ಗ್ರಾಮ

” ಕನಿಷ್ಠ ತಾಪಮಾನ ಜಿಲ್ಲೆಯಲ್ಲಿ ಬುಧವಾರ (ಡಿ.೩೧) ಕನಿಷ್ಠ ತಾಪಮಾನ ೧೬.೬ ಡಿಗ್ರಿ ಸೆಲ್ಸಿಯಸ್ ದಾಖಲಾ ಗಿದೆ. ಅದಕ್ಕೂ ಹಿಂದೆ ೧೨ ರಿಂದ ೧೩ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಇದ್ದು, ತೀವ್ರ ಚಳಿ ತಲೆದೋರಿತ್ತು. ಮಳೆ, ಮೋಡದ ಕಾರಣ ತಾಪಮಾನದಲ್ಲಿ ಏರಿಕೆ ಕಂಡು ಬರಲಾಗಿ ಚಳಿ ಪ್ರಮಾಣ ಈಗ ತಗ್ಗಿದೆ. ಶುಕ್ರವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಹಿಂದಿನ ೨೪ ಗಂಟೆಗಳ ಅವಽಯಲ್ಲಿ ಗುಂಡ್ಲುಪೇಟೆ ತಾ.೧೮.೭, ಹನೂರು ತಾ.ನಲ್ಲಿ ೨೦.೯, ಕೊಳ್ಳೇಗಾಲ ತಾ.ನಲ್ಲಿ ೨೨, ಯಳಂದೂರು ತಾ.ನಲ್ಲಿ ೨೧.೯ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ವರದಿಯಾಗಿದೆ.”

ಒಕ್ಕಣೆ ಮುಂದೂಡಲು ಸಲಹೆ : ಜಿಲ್ಲೆಯ ಅಲ್ಲಲ್ಲಿ ಶನಿವಾರವೂ ತುಂತುರು ಹಾಗೂ ಚದುರಿದ ಮಳೆ ಆಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ರೈತರು ಒಕ್ಕಣೆ, ಬೆಳೆ ಕಟಾವನ್ನು ಮುಂದೂಡುವುದು ಒಳ್ಳೆಯದು. ಮಳೆ ಮತ್ತು ಮೋಡದ ಕಾರಣ ಹಿಂದಿಗಿಂತ ಚಳಿ ಈಗ ಕಡಿಮೆಯಾಗಿದೆ.”

ಹೆಚ್.ಪಿ.ರಜತ್,  ಕೃಷಿ ಹವಾಮಾನ ತಜ್ಞರು, ಹರದನಹಳ್ಳಿ, ಕೆವಿಕೆ

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

42 mins ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

46 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

46 mins ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

48 mins ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

58 mins ago

ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ

ಮೈಸೂರು: ಆಷಾಢ ಮಾಸದ ಎರಡನೇ ಶುಕ್ರವಾರವಾದ ಇಂದು ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.…

22 hours ago