Andolana originals

ಚಾ.ನಗರ ಜಿಲ್ಲೆಯಲ್ಲಿ ಹುರುಳಿ ಬೆಳೆ ‘ಇಳಿ’ವರಿ!

ಒಟ್ಟು ೧೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ; ಗುಂಡ್ಲುಪೇಟೆಯಲ್ಲೇ ಹೆಚ್ಚು 

ಚಾಮರಾಜನಗರ: ಹಿಂಗಾರು ಅವಧಿಯಲ್ಲಿ ಈ ಬಾರಿ ಹಿಂದಿಗಿಂತ ಹುರುಳಿ ಬಿತ್ತನೆ ಅಧಿಕವಾದರೂ ಅದರ ಇಳುವರಿ ಹೇಳಿ ಕೊಳ್ಳುವಂತೆ ಇಲ್ಲವಾಗಿದೆ. ಕೊಯ್ಲೇ ಮಾಡದೇ ದನ-ಕರು ಬಿಟ್ಟು ಮೇಯಿಸಿದವರೂ ಇದ್ದಾರೆ. ಒಟ್ಟಾರೆ ಈ ಬಾರಿ ಇಳುವರಿ ತರಾವರಿ ಬಂದಿದೆ!

ಕೆಲವರು ಈ ಬಾರಿ ಇಳುವರಿ ತುಂಬಾ ನಷ್ಟ ಎನ್ನುತ್ತಾರೆ. ಅನೇಕರು ಇಳುವರಿ ಸಾಮಾನ್ಯ ಅನ್ನುತ್ತಾರೆ. ಯಾರು ಬೇಗ ಬಿತ್ತನೆ ಮಾಡಿದ್ದರೋ ಅಂತಹ ರೈತರು ಈಗ ಹುರುಳಿ ಕೊಯ್ಲು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೊಯ್ಲಿಗೆ ಬರುವ ಹುರುಳಿ ಫಲವತ್ತಾಗಿದೆ ಎಂಬ ಸಮಾಧಾನದ ಮಾತುಗಳು ರೈತರಿಂದ ಕೇಳಿಬರುತ್ತಿವೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳು, ಬಹುತೇಕ ಎಲ್ಲಾ ಕಡೆ ಹುರುಳಿ ಬೆಳೆ ಚೆನ್ನಾಗಿದೆ ಎಂದು ಹೇಳುತ್ತಾರೆ.

ಎಂದಿನಂತೆ ಈ ಬಾರಿಯೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ೧೨,೯೦೦ ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬಿತ್ತನೆಯಾಗಿದ್ದು, ಕೆಲವೆಡೆ ಈಗಾಗಲೇ ಕೊಯ್ಲು ಆರಂಭವಾಗಿದೆ. ಕಬ್ಳಳ್ಳಿ, ಸೀಗೆವಾಡಿ, ಮಾದಾಪಟ್ಟಣ, ಕೊಡಗಾಪುರ, ಬೆಟ್ಟದ ಮಾದಹಳ್ಳಿ, ತಗ್ಗಲೂರು, ಹೊರೆಯಾಲ ಮೊದಲಾದ ಕಡೆ ಅಲ್ಲಲ್ಲಿ ಕೊಯ್ಲು ಶುರುವಾಗಿದೆ. ಇನ್ನು, ಚಾಮರಾಜನಗರ ತಾಲ್ಲೂಕಿನಲ್ಲಿ ೩ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮಲೆಯೂರು, ಮೂಡ್ನಾಕೂಡು, ಉಡಿಗಾಲ, ಕುಲಗಾಣ, ನಂಜೇದೇವನಪುರ, ಹಳೇಪುರ, ಬೆಟ್ಟದಪುರ ಸೇರಿದಂತೆ ವಿವಿಧ ಕಡೆ ಒಂದು ವಾರದಿಂದ ಹುರುಳಿ ಕೊಯ್ಲು ನಡೆಯುತ್ತಿದೆ.

ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕು ಗಳಲ್ಲಿ ತಲಾ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿತ್ತು. ಯಳಂದೂರು ತಾಲ್ಲೂಕಿನಲ್ಲಿ ಕೇವಲ ೨೦೦ ಹೆಕ್ಟೇರ್‌ನಷ್ಟು ಹುರುಳಿ ಬಿತ್ತನೆ ಕಂಡಿತ್ತು. ಅಲ್ಲಲ್ಲಿ ಕೊಯ್ಲು ಕಂಡುಬಂದಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನು ಓದಿ: ಮುದ್ದಿನ ಹಸುವಿಗೆ ಸೀಮಂತ ನೆರವೇರಿಸಿದ ರೈತ ಮಹಿಳೆ!

ಹಿಂಗಾರು ಮಳೆಗೆ ಹುರುಳಿ ಬಿಟ್ಟರೆ ಹಸಿಕಡಲೆ ಹಾಕಲಾಗುತ್ತದೆ. ಇವೆರಡೂ ಬೆಳೆಗಳ ಬೆಳವಣಿಗೆ ಗತಿ ಹೇಗೆಂದರೆ ಒಂದು ಹಂತದವರೆಗಷ್ಟೇ ಮಳೆಯನ್ನು ಬೇಡುತ್ತವೆ. ನಂತರದಲ್ಲಿ ಇಬ್ಬನಿ ಮತ್ತು ಚಳಿ ವಾತಾವರಣ ದಲ್ಲೇ ಬೆಳೆ ಬರುತ್ತದೆ. ಪ್ರಾರಂಭದಲ್ಲಿ ಹುರುಳಿಗೆ ಮಳೆ ಕೊರತೆಯಾಯಿತು. ಅದರಿಂದಾಗಿ ಇಳುವರಿ ಕುಂಠಿತವಾಗಿದೆ ಎನ್ನುತ್ತಾರೆ ರೈತರು.

ಕೊಯ್ಲು ಮಾಡದೇ ದನಕರು ಬಿಟ್ಟು ಮೇಯಿಸಿದ ರೈತ:  ಮೂಡ್ನಾಕೂಡು ಗ್ರಾಮದ ಚನ್ನಬಸಪ್ಪ ಅವರು ಕೊಯ್ಲು ಮಾಡಿ ಟ್ರಾಕ್ಟರ್ ನಲ್ಲಿ ತಂದಿದ್ದ ಹುರುಳಿ ಬೆಳೆ ಕಡೆ ಕೈ ಮಾಡಿ ತೋರಿಸಿದರು. ೨ ಎಕರೆಯಲ್ಲಿ ಬಿತ್ತನೆ ಮಾಡಲಾ ಗಿತ್ತು. ಇಷ್ಟು ಇಳುವರಿ ಬಂದಿದೆ ಸಾಕಲ್ವಾ? ಎಂದು ನೋವಿನಿಂದಲೇ ನುಡಿದರು. ಅದೇ ಗ್ರಾಮದ ಮಲ್ಲಪ್ಪ ಅವರು, ತಮ್ಮ ಜಮೀನಿನಲ್ಲಿ ಹುರುಳಿ ಬೆಳೆ ಕೈಗೇ ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ಬೆಳೆ ಕಮರಿಹೋಗಿದೆ. ಹಾಗಾಗಿ ಬೆಳೆಯನ್ನು ಕೊಯ್ಲು ಮಾಡದೇ ದನಕರು ಬಿಟ್ಟು ಮೇಯಿಸುತ್ತಿದ್ದೇನೆ ಎಂದು ಬೇಸರದಿಂದ ನುಡಿದರು.

” ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಹುರುಳಿ ಬಿತ್ತನೆ ಸುಮಾರು ೩ ಸಾವಿರ ಹೆಕ್ಟೇರ್ ಹೆಚ್ಚಾಗಿದ್ದು, ಒಟ್ಟಾರೆ ೧೭ ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಅಲ್ಲಿ ಇಲ್ಲಿ ಬೆಳೆ ವ್ಯತ್ಯಾಸ ಇರಬಹುದು. ಒಟ್ಟಾಗಿ ನೋಡಿದರೆ ಹುರುಳಿ ಬೆಳೆ ಚೆನ್ನಾಗಿದೆ.”

-ಸುಷ್ಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಕ 

” ಹುರುಳಿ ಇಳುವರಿ ಈ ಬಾರಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.೨೦ರಷ್ಟೂ ಇಲ್ಲ. ಮಳೆ ಸಕಾಲಕ್ಕೆ ಆಗದಿರುವುದು ಇದಕ್ಕೆ ಕಾರಣ. ಬೆಳೆ ಹೋದರೆ ದನಕರುಗಳ ಮೇವಿಗೆ ಹುರಳಿ ಕಡ್ಡಿಯಾದರೂ ಆಗುತ್ತಿತ್ತು. ಅದಕ್ಕೂ ಈ ಸಲ ತತ್ವಾರ. ಮೇವಿಗಾಗಿ ನರಸೀಪುರ ತಾಲ್ಲೂಕಿನಿಂದ ಭತ್ತದ ಹುಲ್ಲು ಖರೀದಿಸಿ ತರುವ ಪರಿಸ್ಥಿತಿ ನಿರ್ಮಾಣವಾಗಿದೆ.”

-ಮೂಡ್ನಾಕೂಡು ಮಹೇಶ್, ರೈತ ಮುಖಂಡ

ಆಂದೋಲನ ಡೆಸ್ಕ್

Recent Posts

ಹನೂರಿನಲ್ಲಿ ಮೇವು-ನೀರಿಲ್ಲದೆ ಜಾನುವಾರುಗಳ ಪರದಾಟ: ಕಸ, ಪೇಪರ್ ತಿಂದು ಜೀವ ಉಳಿಸಿಕೊಳ್ಳುತ್ತಿರುವ ಮೂಕ ಪ್ರಾಣಿಗಳು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಳೆಯ…

9 hours ago

ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್ ಡ್ಯಾಶ್ ಕ್ಯಾಮರಾ ಅಳವಡಿಕೆ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮ್‌ಗಳನ್ನು ಅಳವಡಿಸಲಾಗಿದೆ ಎಂದು…

9 hours ago

ಮೈಸೂರಿನಲ್ಲಿ ಯತೀಂದ್ರ ಮಹಾರಾಜನ ಏಕಚಕ್ರಾಧಿಪತ್ಯವಿದೆ: ಎಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸಚಿವ ಯತೀಂದ್ರ ಅವರ ಏಕಚಕ್ರಾಧಿಪತ್ಯ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ವಿಶ್ವನಾಥ್…

10 hours ago

ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ…

10 hours ago

ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ CWRC ಶಿಫಾರಸು

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್‌ ಕಾವೇರಿ…

11 hours ago

ಓದುಗರ ಪತ್ರ: ಮನವಿಗೆ ಸ್ಪಂದಿಸಿದಕ್ಕಾಗಿ ಅಭಿನಂದನೆಗಳು

ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…

19 hours ago